ಈ ಒಂದೇ ಲಿಂಕ್ ನಲ್ಲಿದೆ ದಿನದ ಮಹತ್ವದ ಸುದ್ದಿಗಳ ಸಾರಾಂಶ!
ರಾಷ್ಟ್ರೀಯ ಸುದ್ದಿಗಳು
ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಗೆ ಸಮನ್ಸ್ ಜಾರಿ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಗೆಹ್ಲೋಟ್ ಅವರಿಗೆ ಸಮನ್ಸ್ ನೀಡಲಾಗಿದೆ.
ಸಂಜೀವಿನಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯಿಂದ ಸಾವಿರಾರು ಹೂಡಿಕೆದಾರರು 900 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ನೀಡಿದ ಹೇಳಿಕೆಗಳ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಶೇಖಾವತ್ ಅವರು ದೂರು ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಆಗಸ್ಟ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಗೆಹ್ಲೋಟ್ ಅವರಿಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಪ್ರೀತ್ ಸಿಂಗ್ ಸೂಚಿಸಿದ್ದಾರೆ.
ಜುಲೈ 14ಕ್ಕೆ ಚಂದ್ರನತ್ತ ಜಿಗಿಯಲಿದೆ ಚಂದ್ರಯಾನ-3
ಜುಲೈ 14 ರಂದು ಬಾಹ್ಯಾಕಾಶ ನೌಕೆ ಮೂಲಕ ಚಂದ್ರಯಾನ-3 ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧಿಕೃತ ಮಾಹಿತಿ ನೀಡಿದೆ.
ಚಂದ್ರಯಾನ – 3ರ ಎಲ್ಲಾ ಭಾಗಗಳನ್ನು ಜೋಡಿಸಲಾಗಿದ್ದು, ಈ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ.
ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿವೆ. 2019ರಲ್ಲಿ ಇಸ್ರೋ ಚಂದ್ರಯಾನ -2 ಯೋಜನೆಯನ್ನು ಉಡಾವಣೆ ಮಾಡಿತ್ತು. ಅದು ಫಲಿಸದ ಕಾರಣ ಈಗ 4 ವರ್ಷಗಳ ಬಳಿಕ ಚಂದ್ರಯಾನ -3 ಉಡಾವಣೆಗೆ ಇಸ್ರೋ ಸಜ್ಜಾಗಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಇಸ್ರೋ, ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಬಾಹ್ಯಾಕಾಶ ನೌಕೆ ಉಡಾವಣೆಗೊಳ್ಳಲಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ 784 ಕೋಟಿ ರೂ. ವೆಚ್ಚದಲ್ಲಿ ರೈಲು ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ
ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯ ಸೇತುಬಂಧನ ಯೋಜನೆ ಅಡಿಯಲ್ಲಿ ಕರ್ನಾಟಕಲ್ಲಿ 22 ರೈಲು ಮೇಲು ಸೇತುವೆಗಳನ್ನು 784 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
ರಾಜ್ಯದಲ್ಲಿ 997 ಕೋಟಿ ವೆಚ್ಚದಲ್ಲಿ 26 ಮೇಲು ಸೇತುವೆಗಳನ್ನು ನಿರ್ಮಿಸಲು ಅನುಮತಿ ಕೋರಿ ಲೋಕೋಪಯೋಗಿ ಇಲಾಖೆಯು ಸಚಿವಾಲಯಕ್ಕೆ ಜನವರಿ 2023ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು.
ಈಗ ಇದನ್ನು ಸಚಿವಾಲಯ 22 ಮೇಲ್ಸೇತಯವೆಯನ್ನು 784 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅನುಮೋದನೆ ನೀಡಿದೆ.
ರೈಲು ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸುವ ಅಪಘಾತಗಳನ್ನು ತಡೆಯಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳಲು ಈ ಮೇಲು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳು
ವಿದೇಶದಲ್ಲಿ ಸ್ಥಾಪನೆಗೊಳ್ಳಲಿದೆ ಭಾರತದ ಮೊದಲ ಐಐಟಿ ಕ್ಯಾಂಪಸ್!
ಭಾರತದ ಐಐಟಿ ಕ್ಯಾಂಪಸ್ ಇದೆ ಮೊದಲ ಬಾರಿಗೆ ವಿದೇಶದಲ್ಲಿ ನಿರ್ಮಾಣವಾಗುತ್ತಿದೆ. ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್ ನಲ್ಲಿ ಈ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪೂರ್ವ ಆಫ್ರಿಕಾದ ಕರಾವಳಿಯಲ್ಲಿನ ತಾಂಜೇನಿಯಾದಲ್ಲಿ ಐಐಟಿ ಮದ್ರಾಸ್ ನ ಕ್ಯಾಂಪಸ್ ಸ್ಥಾಪನೆಗೆ ಎಂಒಯು ಸಹಿ ಮಾಡಲಾಗಿದೆ.
ವಿದೇಶಾಂಗ ಸಚಿವ ಎಸ್. ಜಯಶಂಕರ್ ಮತ್ತು ಜಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಉನ್ನತ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳನ್ನು ಇತರ ದೇಶಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ.
ಮೆಕ್ಸಿಕೋ: ಕಂದಕಕ್ಕೆ ಉರುಳಿದ ಬಸ್: 27 ಜನ ಸಾವು
ಮೆಕ್ಸಿಕೋದಲ್ಲಿ ಪ್ರಯಾಣಿಕರಿದ್ದ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಮೆಕ್ಸಿಕೋ ನಗರದಿಂದ ಸ್ಯಾಂಟಿಯಾಗೊ ಡಿ ಯೊಸೊಂಡುವಾಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಈ ಸಂದರ್ಭದಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು, ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ 27 ಮಂದಿ ಸಾವನ್ನಪ್ಪಿ, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಮಂದಿಯ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಸುದ್ದಿಗಳು
ವಿಧಾನ ಪರಿಷತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್- ಸದಸ್ಯರ ನಡುವೆ ನಡೆದ ಪ್ರಶ್ನೋತ್ತರ
ವಿಧಾನಪರಿಷತ್ ನಲ್ಲಿ ಇಂದು ನಡೆದ ಕಲಾಪದಲ್ಲಿ ಹಲವು ಸದಸ್ಯರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಈ ಮೂಲಕ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಮಾಹಿತಿ ಪಡೆದುಕೊಂಡರು.
ಮಧು ಮಾದೇಗೌಡ ಅವರು ಕೇಳಿದ ಪ್ರಶ್ನೆ; ಕೆಆರ್ಎಸ್ ಆಣೆಕಟ್ಟಿಗೆ ಯಾವುದೇ ರೀತಿ ಹಾನಿ ಆಗದಂತೆ ಡಿಸ್ನಿ ಲ್ಯಾಂಡ್ ಮಾದರಿ ಉದ್ಯಾನವನ ಮಾಡುವಂತೆ ಕೋರಿಕೆ
ಡಿಸಿಎಂ ಉತ್ತರ: ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆಯಲ್ಲೇ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನವನ ಯೋಜನೆ ಬಜೆಟ್ನಲ್ಲಿಯೂ ಆಗಿತ್ತುಆದರೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಯಾವುದೇ ಮನರಂಜನಾತ್ಮಕ ಪಾರ್ಕ್ಗಳಿಲ್ಲ, ಗುಂಡುರಾವ್ ಅವರ ಕಾಲದಲ್ಲಿ ಒಳ್ಳೆ ಉದ್ಯಾನವನ ಆಯಿತು. ಸರ್ಕಾರದ 198 ಎಕರೆ ಜಮೀನು ಏರಿಯ ಕೆಳಗೆ ಇದೆ, PPP ಮಾದರಿಯಲ್ಲಿ ಉದ್ಯಾನವನ ಮಾಡಬಹುದೇ ಎಂಬುದರ ಕುರಿತು ಆಲೋಚನೆ ಮಾಡಲಾಗುವುದು.
ಕೆ.ಆರ್ಎಸ್ ಅಣೆಕಟ್ಟಿಗೆ ಯಾವುದೇ ತೊಂದರೆ ಆಗುವುದಿಲ್ಲ, ಅದರಿಂದ ಸ್ವಲ್ಪ ದೂರದಲ್ಲೆ ಉದ್ಯಾನವನ ನಿರ್ಮಾಣ ಮಾಡಲಾಗುವುದು.
ಇದು ಮಧು ಮಾದೇಗೌಡ ಅವರ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಈ ಯೋಜನೆಯಿಂದ ಸ್ಥಳೀಯ ಉದ್ಯೋಗ ಸೃಷ್ಟಿಯಾಗಬೇಕು, ಹಾಗೂ ಜನರಿಗೆ ಒಳ್ಳೆಯದಾಗಬೇಕು ಎಂದರು.
ಯು.ಬಿ.ವೆಂಕಟೇಶ್ ಅವರು ಕೇಳಿದ ಪ್ರಶ್ನೆ: ಬಸವನಗುಡಿಯಲ್ಲಿ ಇರುವ ಸ್ಕೇಟಿಂಗ್ ಟ್ರಾಕ್ನಲ್ಲಿ ಖಾಸಗಿಯವರು ಹಣ ಪಡೆದು ವ್ಯವಹಾರ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಉಪಯೋಗವಾಗುತ್ತಿಲ್ಲ. ಇದನ್ನ ಬಿಬಿಎಂಪಿಯಿಂದ ತೆಗೆದು ಕ್ರೀಡಾ ಇಲಾಖೆಗೆ ನೀಡಬೇಕಾಗಿ ಮನವಿ
ಡಿಸಿಎಂ ಉತ್ತರ: ಸುಮಾರು 5.5 ಕೋಟಿ ಖರ್ಚು ಮಾಡಿ ಸ್ಕೇಟಿಂಗ್ ರಿಗ್ ನಿರ್ಮಾಣ ಮಾಡಲಾಗಿದೆ. 1,510 ಚದರ ಮೀ ಇದೆ. ಯಾವುದೇ ಕಾರಣಕ್ಕೂ ಈ ಟ್ರಾಕ್ ಅನ್ನ ಯಾರಿಗೂ ಗುತ್ತಿಗೆ ನೀಡಿಲ್ಲ. ಬಿಬಿಎಂಪಿಯಿಂದ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಯೋಚಿಸಲಾಗುವುದು.”