ಬೆಂಗಳೂರು: ಪುರುಷರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದಲ್ಲಿ ನೆಲೆಸಿರುವ ನಿವೃತ್ತ ಸರ್ಕಾರಿ ನೌಕರನಾಗಿರುವ ಸುಧೀಂದ್ರ ಎಂಬುವವರಿಗೆ ಆರೋಪಿಗಳು ಬರೋಬ್ಬರಿ 82 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಸುಧೀಂದ್ರ ನೀಡಿದ ದೂರಿನ ಮೇರೆಗೆ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರಲ್ಲಿ ಮುಖ್ಯ ಆರೋಪಿ ಅಣ್ಣಮ್ಮ ಸುಂಟಿಕೊಪ್ಪದವಳಾಗಿದ್ದು ಲೋಕೇಶ್ ಬೆಟಗೇರಿಯವನಾಗಿದ್ದಾನೆ. ಸ್ನೇಹಾ ಎಂಬುವವಳು ಬೆಂಗಳೂರಿನವಳಾಗಿದ್ದಾಳೆ. ಈ ಎಲ್ಲ ಆರೋಪಿಗಳೂ ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಪ್ರಕರಣ ಪ್ರಮುಖ ಆರೋಪಿ ಅಣ್ಣಮ್ಮ ತನ್ನ 5 ವರ್ಷದ ಮಗನಿಗೆ ಕ್ಯಾನ್ಸರ್ ಇದೆ. ಹಣಕಾಸಿನ ನೆರವು ನೀಡುವಂತೆ ಪರಿಚಯಸ್ಥರಾಗಿದ್ದ ಸುಧೀಂದ್ರ ಅವರನ್ನ ಕೋರಿಕೊಂಡಿದ್ದಳು. ಇವಳ ಕಷ್ಟಕ್ಕೆ ಮರುಗಿದ ಸುಧೀಂದ್ರ ಈಕೆಗೆ ಐದು ಸಾವಿರ ರೂಪಾಯಿ ಸಹಾಯ ಮಾಡಿದ್ದರು. ನಂತರ ಇಬ್ಬರ ನಡುವಿನ ಪರಿಚಯ ಸಲುಗೆಗೆ ತಿರುಗಿತ್ತು. ಮೇ ತಿಂಗಳ ಮೊದಲ ವಾರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೂಸೂರು ಗೇಟ್ ಬಳಿ ಹೋಟೆಲ್ ಒಂದರ ರೂಮ್ ಗೆ ಬರಲು ಹೇಳಿದ ಅಣ್ಣಮ್ಮ ಸುಧೀಂದ್ರನೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಳು. ಅಲ್ಲದೇ, ಈ ಮೊದಲೇ ರಹಸ್ಯವಾಗಿ ಕ್ಯಾಮೆರಾ ಅಳವಡಿಸಿ ವಿಡಿಯೋ ಮಾಡಿಕೊಂಡಿದ್ದಳು. ಇದೇ ರೀತಿ ಎರಡು ಬಾರಿ ಬೇರೆ ಬೇರೆ ಕಡೆಗೆ ಕರೆಯಿಸಿಕೊಂಡು ಬಲವಂತದಿಂದ ಲೈಂಗಿಕ ಸಂಪರ್ಕ ಮಾಡಿದ್ದಳು ಎನ್ನಲಾಗಿದೆ.
ಇದಾದ ಬಳಿಕ ತನ್ನ ಅಸಲಿ ಬುದ್ದಿ ತೋರಿಸಿದ ಅಣ್ಣಮ್ಮ ಅಶ್ಲೀಲ ವೀಡಿಯೋಗಳನ್ನು ಸುಧೀಂದ್ರ ಅವರಿಗೆ ಕಳಿಸಿ ಹಣಕ್ಕಾಗಿ ಒತ್ತಾಯಿಸಿದ್ದಾಳೆ. ಬಳಿಕ ಹಣ ನೀಡದಿದ್ದರೆ ಏಕಾಂತದ ಫೋಟೋ ಹಾಗೂ ವಿಡಿಯೋಗಳನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೇ ಸ್ನೇಹ ಎಂಬಾಕೆಗೂ ಕಳುಹಿಸಿ ಆಕೆಯಿಂದಲೂ ಬ್ಲ್ಯಾಕ್ ಮೇಲ್ ಮಾಡಿಸಿದ್ದಳು. ಮರ್ಯಾದೆಗೆ ಅಂಜಿ ಅವರು ಹಂತ-ಹಂತವಾಗಿ ರೂ. 82 ಲಕ್ಷದವರೆಗೂ ನೀಡಿದ್ದಾರೆ. ಈ ಕೃತ್ಯಕ್ಕೆ ಸ್ನೇಹ ಪತಿ ಲೋಕೇಶ್ ಸಾಥ್ ನೀಡಿದ್ದ. ಆದರೆ ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತೆ ರೂ. 42 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇವರ ಕಾಟ ಮಿತಿ ಮೀರಿದಾಗ ಸುಧೀಂದ್ರ ಅವರು ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೋಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ದ ವಿವಿಧ ಸೆಕ್ಷನ್ ಅನ್ವಯ ಮೊಕದ್ದಮೆ ದಾಖಲಾಗಿದ್ದು 37 ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಸಲಾಗಿದೆ. ಬೆಂಗಳುರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಮಾಹಿತಿ ನೀಡಿ ಫಿರ್ಯಾದುದಾರರಿಗೆ ಮೂರು ಜನ ಸೇರಿಕೊಂಡು ಮೋಸ ಮಾಡಿದ್ದಾರೆ . ಐಪಿಸಿ ಸೆಕ್ಷನ್ 420, 384, 504, 506, ಅಡಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಇದರಲ್ಲಿ ಫಿರ್ಯಾದುದಾರರಿಗೆ ಮಹಿಳೆಯು ಅವರು ತನ್ನ ಮಗನಿಗೆ ಹುಷಾರಿಲ್ಲ, ಹಾಸ್ಪಿಟಲ್ನಲ್ಲಿ ಅಡ್ಮಿಟ್ ಮಾಡಿದ್ದೇವೆ, ಎಂದು ಹೇಳಿ, ದಯವಿಟ್ಟು ಹಣ ಕೊಡಿ ಎಂದು ಕೇಳಿದ್ದಾರೆ. ಹೀಗೆ ಪರಿಚಯ ಬೆಳೆಸಿಕೊಳ್ಳುತ್ತಾರೆ. ಅದಾದ ನಂತರ ಅವರಿಬ್ಬರ ಮಧ್ಯೆ ಸಂಬಂಧ ಬೆಳೆಯುತ್ತೆ. ನಂತರ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಇನ್ನೊಬ್ಬ ದಂಪತಿಗೆ ಕಳುಹಿಸಿ ಫಿರ್ಯಾದುದಾರರನ್ನು ಅವರ ಮೂಲಕ ಬೆದರಿಸುತ್ತಾರೆ. ಇವರು ಮೂವರ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ. ಇವರು ಇದೇ ರೀತಿ ಮತ್ತಷ್ಟು ಜನರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿರುವ ಸಾದ್ಯತೆ ಇದ್ದು ಕೂಲಂಕುಷ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದರು.
ಈ ಬಂಧಿತರಿಂದ ಲೂಟಿ ಮಾಡಿರುವ ಹಣದಲ್ಲಿ ಶೇಕಡಾ30 ರಷ್ಟು ಹಣ ವಸೂಲಿ ಮಾಡಲಾಗಿದ್ದು ಉಳಿದ ಹಣ ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.