ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಚಿಕ್ಕಮಗಳೂರು ಜಿಲ್ಲೆ ದಿನೇ ದಿನೇ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಾರಾಂತ್ಯಗಳಲ್ಲಿ ಇತರೆಡೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜಿಲ್ಲೆಯಲ್ಲಿರುವ ಸಾವಿರಾರು ಹೋಟೆಲ್ ಗಳು, ಹೋಂ ಸ್ಟೇ ಗಳು ಹೌಸ್ ಫುಲ್ ಅಗುತ್ತಿದ್ದು ಪ್ರವಾಸೋದ್ಯಮವು ಸಾವಿರಾರು ಜನರ ಜೀವನಕ್ಕೂ ದಾರಿ ಆಗಿದೆ. ಆದರೆ ದುರಾಸೆಗೆ ಬಲಿ ಬಿದ್ದ ಕೆಲವು ಹೋಟೆಲ್ ಮಾಲೀಕರು ಜನರಿಗೆ ಕುರಿ ಮಾಂಸ ಎಂದು ಗೋಮಾಂಸ ತಿನ್ನಿಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇಲ್ಲಿನ ಬೆಂಗಳೂರು ಹೋಟೆಲ್, ಎವರೆಸ್ಟ್ ಹೋಟೆಲ್ ಮತ್ತು ನ್ಯಾಮತ್ ಹೋಟೆಲ್ ಗಳಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದುದು ಪತ್ತೆ ಆಗಿದೆ.
ಈ ಹೋಟೆಲ್ ಗಳಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಗುಮಾನಿ ಮೊದಲಿನಿಂದಲೂ ಇತ್ತು. ಬುಧವಾರ ಹಠಾತ್ ಧಾಳಿ ನಡೆಸಿದ ಪೋಲೀಸರಿಗೆ ಮೂರೂ ಹೋಟೆಲ್ ಗಳಲ್ಲಿ ಗೋಮಾಂಸದ ಖಾದ್ಯ ಪತ್ತೆ ಆಗಿದೆ. ಈ ದುಷ್ಕರ್ಮಿಗಳು ಎಳೆಗರುವಿನ ಮಾಂಸವನ್ನು ಕುರಿ ಮಾಂಸದೊಳಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರು ಹೋಟೆಲ್ ಮಾಲೀಕ ಶಿವರಾಜ್, ನ್ಯಾಮತ್ ಹೋಟೆಲ್ ಮಾಲೀಕ ಇರ್ಷಾದ್ ಅಹಮದ್ ರ ಹೆಡೆಮುರಿ ಕಟ್ಟಿದ್ದಾರೆ.
ಈ ಮೂರೂ ಹೋಟೆಲ್ಗಳು ಅಪಾರ ಪ್ರಮಾಣದ ಗ್ರಾಹಕರ ಮೆಚ್ಚುಗೆ ಪಡೆದಿದ್ದವು. ಕುರಿ ಮಾಂಸದೊಂದಿಗೆ ಗೋಮಾಂಸ ಬೆರೆಸಿದರೆ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಇಲ್ಲಿನ ಅಂಬೇಡ್ಕರ್ ರಸ್ತೆಯಲ್ಲಿರುವ ನ್ಯಾಮತ್ ಹೋಟೆಲ್ನಲ್ಲಿ ಸಂಗ್ರಹಿಸಲಾಗಿದ್ದ 20 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಕುರಿ ಮಾಂಸ ಪ್ರಿಯರು ಶಾಕ್ ಆಗಿದ್ದಾರೆ. ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಪ್ರಕಾರ (ಹಸು, ಎತ್ತು, ಎತ್ತು) ಸಾಗಣೆ, ವಧೆ ಮತ್ತು ವ್ಯಾಪಾರವು ಕಾನೂನುಬಾಹಿರವಾಗಿದೆ. ಆದರೆ ರಾಜ್ಯದ ಅನೇಕ ಕಡೆಗಳಲ್ಲಿ ಇಂದಿಗೂ ಕದ್ದು ಮುಚ್ಚಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಕಳೆದ ಜೂನ್ನಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಾಸನದಿಂದ ಚಿಕ್ಕಮಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 140 ಕೆಜಿ ಗೋಮಾಂಸವನ್ನು ಚಿಕ್ಕಮಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು. ಹಾಸನ ನಿವಾಸಿಗಳಾದ ಜಾಫರ್ ಉಮರ್ ಮತ್ತು ಮೊಹಮ್ಮದ್ ಮೊಹಲ್ಲಾ ಎಂಬುವರನ್ನು ಪೊಲೀಸರು ಬಂಧಿಸಿ, ಮಾಂಸದೊಂದಿಗೆ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದರು.