ಮಳೆ, ರಾಜಕೀಯ, ಸಿನಿಮಾ- ಇಲ್ಲಿದೆ ಎಲ್ಲಾ ಸುದ್ದಿಗಳ ರೌಂಡ್ ಅಪ್
ನಿರಂತರ ಮಳೆ: ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ
ಕರಾವಳಿ ಭಾಗದಲ್ಲಿ ತೀವ್ರತೆಯ ಮಳೆಯಾಗುವ ಸಾಧ್ಯತೆಯಿರುವುದರಿಂದ ಜು.4 ರ ಇಂದು ಮಧ್ಯಾಹ್ನದಿಂದ ಜು.5 ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಕೆಲವು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.4ರ ಮಧ್ಯಾಹ್ನ ಬಳಿಕ ಮುಂದಿನ ಕೆಲವು ಗಂಟೆಗಳ ಕಾಲ ಬಲವಾದ ಮೇಲ್ಮೈ ಮಾರುತಗಳು ಬೀಸಲಿದ್ದು, ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಾಸಿಗಾಗಿ ಪೋಸ್ಟಿಂಗ್ ದಾಖಲೆ ಕೊಡಿ ಎಂದವರಿಗೆ ಚಳಿ ಬಿಡಿಸಿದ ಹೆಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಸರಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರಕಾರಕ್ಕೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು; ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳಿದ್ದಾರೆ. ಅದಕ್ಕೆ ಇದೇ ನನ್ನ ಉತ್ತರ. ನನ್ನ ಹತ್ತಿರ ದಾಖಲೆಗಳೂ ಇವೆ ಎಂದರು.
ದಾಖಲೆ ಕೊಡುವ ದಮ್ಮು, ತಾಕತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಕತ್ತು ಇವರಿಗೆ ಇದೆಯಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈ ಸರಕಾರ ಇನ್ನೂ ಹನಿಮೂನ್ ಪೀರಿಯಡ್ ನಲ್ಲಿ ಇದೆ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ನವರು. ಸರಕಾರಕ್ಕೆ ಐದು ಆರು ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್ ಪೀರಿಯಡ್ ನಲ್ಲಿದ್ದರೆ ಈಗೆಲ್ಲಾ ಮಾಡುತ್ತಾರೆಯೇ? ಹನಿಮೂನ್ ಪಿರಿಯಡ್ ನಲ್ಲೇ ಹೀಗಾದರೆ ಮುಂದಿರುವ ಪೀರಿಯಡ್ ಗಳ ಕಥೆ ಏನು? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ನನ್ನ ಅವಧಿಯಲ್ಲಿ ನಡೆದ ವರ್ಗಾವಣೆಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಐದು ವರ್ಷ ಕಾಂಗ್ರೆಸ್ ಪಕ್ಷದ ಪೂರ್ಣ ಸರಕಾರ ಇತ್ತಲ್ಲ, ಆ ಸರಕಾರದ ಅವಧಿಯಲ್ಲಿ ನಡೆದ ವರ್ಗಾವಣೆಗಳ ಕುರಿತು ತನಿಖೆ ನಡೆಸಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕಾಂಗ್ರೆಸ್ ನವರು ಹಗಲು ದರೋಡೆ ಗೆ ಇಳಿದಿದ್ದಾರೆ. ವರ್ಗವಣೆ ದಂಧೆಗೆ ಹಣ ನಿಗದಿ ಮಾಡಿದ್ದಾರೆ ಅಂತ ಗೊತ್ತು. ಪ್ರತಿ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ಸಮಯ ಬಂದಾಗ ದಾಖಲೆ ಕೊಟ್ಟೆ ಕೊಡುತ್ತೇನೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದರು.
ವಿಧಾನಮಂಡಲದ ಅಧಿವೇಶನವು ಜುಲೈ 21ರವರೆಗೆ ಮುಂದುವರಿಕೆ – ಸಭಾಧ್ಯಕ್ಷ ಯು.ಟಿ.ಖಾದರ್
ವಿಮಾನ ಮಂಡಲದ ಅಧಿವೇಶನವು 21ನೇ ಜುಲೈ 2023ರವರೆಗೆ ಮುಂದುವರಿಸಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ಮಧ್ಯೆ ಸಭಾಧ್ಯಕ್ಷರು ಜುಲೈ 5 ರಂದು ಈಗಾಗಲೆ ಸ್ವೀಕರಿಸಿದ ವಿಧೇಯಕಗಳ ಮಂಡನೆ ಮಂಡಿಸುವುದು, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ, ಜುಲೈ 6ರಂದು ಬೆಳಿಗ್ಗೆ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಲಿದ್ದಾರೆ. ಜುಲೈ 7ರಂದು ಮುಖ್ಯಮಂತ್ರಿಗಳು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಜುಲೈ 10ರಿಂದ 19ರವೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದು ತಿಳಿಸಿದರು.
ಮೊದಲ ದಿನವೇ ಸರ್ಕಾರದಿಂದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಸವರಾಜ ಬೊಮ್ಮಾಯಿಬೆಂಗಳೂರು: ಹೊಸ ಕಾಂಗ್ರೆಸ್ ಸರ್ಕಾರ ಮೊದಲ ದಿನವೇ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದೆ. ಜನರಿಗೆ ಯಾವ ಗ್ಯಾರೆಂಟಿ ಹೇಳಿದ್ದರೊ ಅದನ್ನು ಅನುಷ್ಠಾನ ಮಾಡುವಲ್ಲಿ ಮೋಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮಿ ಮನೆಯಲ್ಲಿ ಯಾರು ಯಜಮಾನಿ ಅಂತ ಹೇಳಿ ಮನೆಗಳಲ್ಲಿ ಗಲಾಟೆ ಶುರುವಾಗುವಂತೆ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆ ಘೋಷಿಸಿ ಮೂರು ಪಟ್ಟು ಬಿಲ್ ಏರಿಸಿ ಜನರಿಗೆ ಭಾರ ಮಾಡಿದ್ದಾರೆ. ಬಸ್ ಗಳಲ್ಲಿ ಗೊಂದಲ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ. ಕಿಟಕಿಯಲ್ಲಿ ಬಸ್ ಹತ್ತುವಂತಾಗಿದೆ.
ಯುವ ನಿಧಿ ಏನಾಗಿದೆ ಗೊತ್ತಿಲ್ಲ. ಅಕ್ಕಿಯಲ್ಲಿ ದೊಡ್ಡ ಗೊಲ್ ಮಾಲ್ ನಡೆಯುತ್ತಿದೆ. ಎಷ್ಟು ಅಕ್ಕಿ ಕೊಡುತ್ತಾರೆ ಗೊತ್ತಿಲ್ಲ. ಈ ಸರ್ಕಾರದ ಮುಖವಾಡ ಬಯಲಾಗಿದೆ. ಇವರ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾರೆಂಟಿ ಯೋಜನೆಗಳ ಗೊಂದಲಗಳ ಕುರಿತು ಚರ್ಚಿಸಲು ನಾವು ಅವಕಾಶ ಕೇಳಿದ್ದೇವೆ. ಅದಕ್ಕೆ ಅವಾಕಶ ಕೊಡದೇ ಸರ್ಕಾರ ಹಠಮಾರಿತನ, ಮೊಂಡತನ ಮಾಡುತ್ತಿದೆ. ಸಭಾಧ್ಯಕ್ಷರ ಮೇಲೆ ಒತ್ತಡ ತಂದು ಅವಕಾಶ ಕೊಡದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕಿದೆ. ಸರ್ಕಾರ ಮೊದಲ ದಿನವೇ ವಿರೋಧ ಪಕ್ಷವನ್ನು ಬಾವಿಗೆ ತಳ್ಳುವ ಕೆಲಸ ಮಾಡಿದೆ ಎಂದರು.
ಆನ್ ಲೈನ್ ಗೇಮಿಂಗ್ ನಿಷೇಧಿಸಿದ ತಮಿಳುನಾಡು ಸರ್ಕಾರ: ಮಧ್ಯಂತರ ತಡೆ ನಿರಾಕರಿಸಿದ ಹೈಕೋರ್ಟ್
ತಮಿಳುನಾಡು ಸರ್ಕಾರ ಆನ್ ಲೈನ್ ಗೇಮಿಂಗ್ ಆಪ್ ಗಳನ್ನುನಿಷೇಧಿಸುವ ಬಗ್ಗೆ ಜಾರಿಗೆ ತಂದಿದ್ದ ಕಾನೂನನ್ನು ಪ್ರಶ್ಮಿಸಿ ಗೇಮಿಂಗ್ ಸಂಸ್ಥೆಗಳು ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಮದ್ರಾಸ್ ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿದೆ.
ಮುಖ್ಯ ನ್ಯಾ. ಎಸ್.ವಿ ಗಂಗಾಪುರವಾಲಾ ಮತ್ತು ನ್ಯಾ. ಪಿ.ಡಿ ಆದಿಕೇಶವಲು ಅವರ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಈ ವೇಲೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.
ಜು.13ರಂದು ಅಂತಿಮ ವಾದವನ್ನು ಆಲಿಸುವುದಾಗಿ ಕೋರ್ಟ್ ತಿಳಿಸಿದೆ.
ಶೂಟಿಂಗ್ ವೇಳೆ ಅವಘಡ: ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು
ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿ ನಟ ಶಾರುಖ್ ಖಾನ್ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿದೆ.
ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಮುಂದಿನ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಆದರೆ, ಈ ವೇಳೆ ಮೂಗಿಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದೃಷ್ಟವಶಾತ್ ಹೆದರುವ ಅವಶ್ಯಕತೆ ಇಲ್ಲ ಎಂದು ಬ್ಯಾಂಡೇಜ್ ಹಾಕಲಾಗಿದೆ. ಸದ್ಯ ಶಾರುಖ್ ಅಲ್ಲಿಂದ ವಾಪಾಸ್ ಆಗಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.