ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ಶ್ರೀನಿವಾಸ ರಾಜು ಕಾಂಬಿನೇಶನ್ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ಜುಲೈ 2ರಂದು ಗಣೇಶ್ಗೆ ಹುಟ್ಟುಹಬ್ಬದ ಸಂಭ್ರಮವಿದ್ದರಿಂದ ಆ ಹಿನ್ನೆಲೆಯಲ್ಲಿ ಚಿತ್ರತಂಡವು ಅವರ ಹೊಸ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಈ ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಈ ಸಿನಿಮಾದಲ್ಲಿ ಗಣೇಶ್ಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಸದ್ಯ ಮಲಯಾಳಂ ನಟಿ ಮಾಳವಿಕಾ ನಾಯರ್ ಆಯ್ಕೆಯಾಗಿದ್ದಾರೆ. ಇನ್ನೋರ್ವ ನಾಯಕಿಯ ಹುಡುಕಾಟವನ್ನು ಚಿತ್ರತಂಡ ನಡೆಸುತ್ತಿದ್ದು, ಅದು ಫೈನಲ್ ಆದ ಮೇಲೆ ಅನೌನ್ಸ್ ಮಾಡಲಿದ್ದಾರೆ. ದಂಡುಪಾಳ್ಯ ಸಿನಿಮಾ ಖ್ಯಾತಿಯ ಶ್ರೀನಿವಾಸ ರಾಜು ಮತ್ತು ನಟ ಗಣೇಶ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಜನರು ಇದೊಂದು ವೈಶಿಷ್ಟ್ಯದಿಂದ ಕೂಡಿದ ಕಾಂಬಿನೇಶನ್ ಎಂದಿದ್ದಾರೆ.
ಈ ಚಿತ್ರದ ಈ ಬಗ್ಗೆ ಲವಲವಿಕೆಯಿಂದ ಮಾತನಾಡಿರುವ ನಿರ್ದೇಶಕ ಶ್ರೀನಿವಾಸ ರಾಜು, ‘ಕೋವಿಡ್ ನಂತರ ಒಟಿಟಿಯಲ್ಲಿ ಕ್ರೌರ್ಯ ಮತ್ತು ವಯಸ್ಕರ ಕಂಟೆಂಟ್ಗಳೇ ಹೆಚ್ಚಾದವು. ಜನರು ಕೂಡ ಅಂಥವುಗಳನ್ನು ಇಷ್ಟಪಟ್ಟರು. ಸದ್ಯಕ್ಕೆ ಉತ್ತಮ ಲವ್ ಸ್ಟೋರಿ, ಫ್ಯಾಮಿಲಿ ಎಂಟರ್ಟೇನರ್ಗಳ ಕೊರತೆಯಿದೆ. ಈ ವಿಷಯ ತಿಳಿದ ನಾನು ಹೊಸ ರೀತಿಯ ಪ್ರೇಮಕಥೆ ಹೇಳಲು ಇದೇ ಸರಿಯಾದ ಸಮಯ ಎಂದು ಯೋಚಿಸಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಆರಂಭಿಸಿದ್ದೆನೆ ಎಂದಿದ್ದಾರೆ
ಕೃಷ್ಣಂ ಪ್ರಣಯ ಸಖಿ ಎಂಬ ಹೆಸರೇ ಫೀಲ್ ಗುಡ್ ಲವ್ ಸ್ಟೋರಿ ಎಂದು ತಿಳಿಸುತ್ತದೆ. ಇದು ಪರಿಶುದ್ಧ ಪ್ರೀತಿಯ ಸಿನಿಮಾ. ಈ ರೀತಿಯ ನಿರೂಪಣೆ ಇರುವಂಥ ಸಿನಿಮಾವನ್ನು ಈ ಹಿಂದೆ ಎಲ್ಲೂ ನೋಡಿರಲು ಸಾಧ್ಯವಿಲ್ಲ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಏಳು ವರ್ಷದ ಮಕ್ಕಳಿಂದ ಹಿಡಿದು 70 ವರ್ಷದವರಿಗೂ ಅರ್ಥವಾಗುವ ಮತ್ತು ಇಷ್ಟವಾಗುವಂಥ ಪ್ರೇಮಕಥೆ. ಇದರಲ್ಲಿಗಣೇಶ್ ಲುಕ್ ಮತ್ತು ಈ ಸಿನಿಮಾದ ಚಿತ್ರಕಥೆ, ನಿರೂಪಣೆ ವಿಶೇಷವಾಗಿರುತ್ತವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಕ್ಕೆ ವಿಜಯ್ ಈಶ್ವರ್ ಸಂಭಾಷಣೆ ಬರೆಯುತ್ತಿದ್ದು, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ನಟಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿದ್ದು, ಅರ್ಜುನ್ ಜನ್ಯ ಇದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಒಟ್ಟಿನಲ್ಲಿ ಸಿನಿಮಾ ಇಂಟರೆಸ್ಟಿಂಗ್ ಆಗಿರೋದಂತೂ ಸತ್ಯ.