ಹುಬ್ಬಳ್ಳಿಯಾಂವಾ ಬೇಂದ್ರೆಯವರ ಪ್ರಸಿದ್ಧ ಕವಿತೆಗಳಲ್ಲಿ ಒಂದು ಇದು ಮೇಲ್ನೋಟಕ್ಕೆ ಒಂದು ಅರ್ಥವನ್ನು ಕೊಡುತ್ತಿದ್ದರು ಅಂತರಂಗದಲ್ಲಿ ಇದರ ಅರ್ಥ ಭಿನ್ನವಾಗಿದೆ.
ವೇಶ್ಯೆಯೋರ್ವಳ ಹಂಬಲದಗೀತೆಯಿದು. ಆದರೆ ಇದು ವೇಶ್ಯೆಯ ಕಾಮಗೀತೆಯಲ್ಲ, ಆಕೆಯ ಬದುಕಿನ ಗೀತೆ. ಈ ಗೀತೆ ವೇಶ್ಯಾವೃತ್ತಿಯಲ್ಲಿರುವ ಹೆಣ್ಣಿನ ತಳಮಳ, ಕಾಮವಾಂಚನೆಯ ಆಚೆಗಿನ ಬದುಕನ್ನು ತಿಳಿಸುತ್ತದೆ. ಬರುತ್ತೇನೆಂದು ಹೇಳಿ ಹೋದವನಿಗಾಗಿ ಕಾಯುತ್ತಿರುವಂತಹ ಹಾಡು ಇದು. ಆಕೆ ಆತನ ರೂಪಗುಣಗಳನ್ನು ವರ್ಣಿಸುತ್ತಾ ಆತನನ್ನು ನೆನೆಯುತ್ತಲೇ ತನ್ನ ಆಸೆಗಳನ್ನು ವಿವರಿಸುತ್ತಾಳೆ.
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರ ಸರತಿ ಬಂದು ಹೋದಾಂವಾ
ವಾರದಾಗ ಮೂರುಸಲಾ ಬಂದು ಹೋಗುತ್ತಿದ್ದಾವ ಇನ್ನೂ ಬಂದಿಲ್ಲ. ಆದರೆ ಈಕೆ ಆತನ ಸವಿಯನ್ನು ಉಂಡ ಕಾರಣದಿಂದ, ಮತ್ತೆ ಬರುತ್ತೇನೆಂದು ಹೇಳಿ ಹೋದ ಕಾರಣದಿಂದ, ಆಸೆ ಆಕಾಂಕ್ಷೆಗಳನ್ನು ಹುಟ್ಟಿಸಿದ ಕಾರಣದಿಂದ ಆಕೆ ಇನ್ನೂ ಯಾಕ ಬರಲಿಲ್ಲ ಎಂದು ಆತನ ಗುಣಗಳನ್ನ ವರ್ಣನೆ ಮಾಡುತ್ತಾಳೆ.
ಭಾರಿ ಜರದ | ವಾರಿರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು ಮಿಸಿ ತೀಡಿಕೋತ | ಹುಬ್ಬು ಹಾರಸಾಂವಾ
ಮಾತುಮಾತಿಗೆ | ನಕ್ಕು ನಗಿಸಿ | ಆಡಿಸ್ಯಾಡಾಂವಾ
ಏನೊ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಆತನ ವ್ಯಕ್ತಿ ಲಕ್ಷಣ ವಿವರಿಸುತ್ತಾ ದೊಡ್ಡದಾದ ರೂಮಾಲು ತಲಿಗೆ ಸುತ್ತಗೊಂಡಿದ್ದಾ, ದಪ್ಪ ಮೀಸಿ ಬಿಟ್ಟಿದ್ದಾ ಆಗಾಗ ತೀಡುತ್ತಿದ್ದವನು. ಮಾತು ಮಾತಿಗೆ ನಗಿಸಿ ಗೇಲಿ ಮಾಡುತ್ತಾ ತಾನೂ ಆಡಿ ಆಕೆಯನ್ನು ಆಡಿಸುತ್ತಿದ್ದವನು. ಯಾವುದಾದರೂ ಒಂದು ಮಾತು ಹೇಳಿದರೆ ಆ ಮಾತಿಗೆ ಮತ್ತೊಂದು ಪ್ರಣಯದ ಅರ್ಥ ಕಲ್ಪಿಸಿ ಚೇಷ್ಟೆ ಮಾಡುತ್ತಾ ಆಡುತ್ತಿದ್ದವನು, ಬರಿ ಇಷ್ಟೇ ಆಗಿದ್ದರೆ ಆಕೆ ನೆನೆಯುತ್ತಿರಲಿಲ್ಲ. ಅನೇಕರಂತೆ ಇವನು ಒಬ್ಬನಾಗಿ ಹೋಗುತ್ತಿದ್ದನು. ಆತನ ರೂಪಕ್ಕಿಂತ ಆತ ಆಡಿದ ಮಾತುಗಳು ಆತನನ್ನು ಈಕೆ ನೆನೆಯುವಂತೆ ಮಾಡಿದೆ. ಕೇವಲ ಆಸೆ ತೀರಿಸಿಕೊಂಡು ಹೋದವನಲ್ಲ, ಆತ ಬದುಕನ್ನು ಕೊಡುತ್ತೇನೆಂದು ಆಸೆ ಹುಟ್ಟಿಸಿದವನು ಭರವಸೆ ಹುಟ್ಟಿಸಿದವನು;
ತಾಳೀಮಣಿಗೆ ಬ್ಯಾಳೀಮಣಿ ನಿನಗ | ಬೇಕೇನಂದಾಂವಾ
ಬಂಗಾರ-ಹುಡೀಲೇ | ಭಂಡಾರಾನ | ಬೆಳೆಸೇನಂದಾಂವಾ
ಕಸಬೇರ ಕಳೆದು | ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ / ಮೂಗುತಿ ಅಂತ | ನನಗ ಅಂದಾಂವಾ
ಈಕೆ ಸಾಮಾನ್ಯ ವೇಶೈಯಲ್ಲ, ಜೋಗತಿಯವಳು, ಜೋಗತಿಯರಿಗೆ ತಾಳಿ ಕಟ್ಟಿರುತ್ತಾರೆ. ಆದರೆ ಅದಕ್ಕೆ ಮಣಿ ಇರುವುದಿಲ್ಲ. ಈತ ಆ ತಾಳಿಗೆ ಹೇಳಿ ಮಣಿ ಬೇಕಾಗಿದೆ ಕೊಡುತ್ತೇನೆಂದವನು. ಅಂದರೆ ಮಾಂಗಲ್ಯದ ಬದುಕನ್ನು ಕೊಡುತ್ತೇನೆಂದವನು. ಜೋಗತಿಯನ್ನು ಗರತಿ ಮಾಡಿಸುತ್ತೇನೆಂಬ ಭರವಸೆ ಕೊಟ್ಟವನು. ಹಣೆಗೆ ಕೇವಲ ಅರಿಸಿನ ಕುಂಕುಮ ಹಾಕಿ ಕೊಳ್ಳುವುದಷ್ಟೇ ಅಲ್ಲದೆ ಬಂಗಾರವನ್ನು ತಂದು ಕೊಡುತ್ತೇನೆಂದವನು. ಈತ ಸಾಮಾನ್ಯರನ್ನು ಒಪ್ಪದೆ ಬಂದವನು, ವಿಟನೇ ಇರಬಹುದು. ಆದರೆ ಆತ ಇದೇ ಕಸುಬನ್ನು ಮಾಡಿಕೊಂಡಿರುವ ಸ್ತ್ರೀಯರು ಬೇಡವೆಂದು, ಬಸವಿಯಾಗಿರುವ ಹೆಣ್ಣುಗಳು ಬೇಡವೆಂದು, ಅದಕ್ಕೂ ಮಿಗಿಲಾದ ಜೋಗತಿಯರೇ ಬೇಕೆಂದು ಹುಡುಕಿಕೊಂಡು ಬಂದು, ಈಕೆಯನ್ನು ಕಂಡು ನೀನು ಜೋಗತಿಯರಿಗೆ ಮೂಗುತಿಯಂತಿರುವವಳೆಂದು ಹೇಳಿ ಹೊಗಳಿದವನು, ಇರು ಎಂದರೆ ಬರುತ್ತೀನಿ ಅಂತ ಹೇಳಿ ಎದ್ದು ಹೊರಡಲನುವಾಗುತ್ತಿದ್ದನು. ಈಕೆ ಆತನು ಹೋಗಿ ಬಿಡುತ್ತಾನಲ್ಲ ಎಂದುಕೊಂಡು ಮುಖ ಸಪ್ಪಗೆ ಮಾಡಿಕೊಂಡರೆ ಅದಕ್ಕೆ ಸೋತು ಅಲ್ಲೇ ಇದ್ದು ಬಿಡುತ್ತಿದ್ದ. ಕೈಯ್ಯಲ್ಲಿ ಹಿಡಿ ಹಿಡಿ ಹಣವನ್ನು ಹಿಡಿದು ತೆಗೆದುಕೋ ಎನ್ನುವವನು. ಈಕೆ ಜೋಗತಿ ಹಣಕ್ಕಾಗಿಯೇ ಮೈಮಾರಿಕೊಳ್ಳುವವಳು. ಈಕೆ ನಿಜವೆಂದು ಹಣಕ್ಕೆ ಕೈ ಚಾಚಿದರೆ ಆತ ಈಕೆಯ ಕೈಯ್ಯನ್ನು ಹಿಡಿದು ಬಿಡುತ್ತಿದ್ದ. ಚಹಾದ ಜೊತೆಗೆ ಚೂಡಾ ತಿಂದಂತೆ ನನ್ನ ನಿನ್ನ ಜೊತೆ ಎಂದು ಹೇಳುತ್ತಿದ್ದ. ನೀನು ಚೌಡಿಯಲ್ಲಿ ಚೂಡಾಮಣಿ ಎಂದು ಹೊಗಳುತ್ತಿದ್ದನು. ರಮಿಸುತ್ತಿದ್ದವನು. ಉಂಗುರ, ಮೂಗುತಿ ಬಟ್ಟು ಕೊಟ್ಟವನು. ಇವಳ ಎದೆಯಲ್ಲಿ ಗೊಂಬೆಯ ರೀತಿ ಉಳಿದುಕೊಂಡವನು. ಇವನು ಸಾಮಾನ್ಯನಲ್ಲ ಈತನಿಗೆ ಹೆಣ್ಣುಗಳನ್ನು ಒಲಿಸಿಕೊಳ್ಳುವ ಕಲೆ ಚೆನ್ನಾಗಿ ಗೊತ್ತಿದೆ. ಈಕೆಗೆ ಅದು ಅರ್ಥವಾಗಿಲ್ಲ. ಹೊಗಳಿ ಮಾತನಾಡಿ ಆಸೆ ಹುಟ್ಟಿಸಿ ಹಣ ಖರ್ಚುಮಾಡಿ ಭೋಗಿಸಿ ಆಸೆ ತೀರಿಸಿಕೊಂಡು ಹೋಗುವ ಬುದ್ಧಿಯವನು ಆತ. ಆಕೆಯೇ ಹೇಳುತ್ತಾಳೆ ಆತನ ನಡವಳಿಕೆ ಹೇಗಿದೆ ಎಂದು:
ಹುಟ್ಟಾ ಯಾಂವಾ । ನಗೀಕ್ಯಾದಿಗೆ | ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೇ | ಪ್ರೀತೀ ವೀಳ್ಯ ಮಡಿಚಿಕೊಂಡಾಂವಾ
ಜನ್ಮಜನ್ಮಕ | ಗಣ್ಯಾ ಆಗಿ | ಬರತೇನಂದಾಂವಾ
ಎದಿ ಮ್ಯಾಗಿನ | ಗೆಣತಿನ ಮಾಡಿ ಇಟ್ಟಕೊಂಡಾಂವಾ
ಹುಟ್ಟುತ್ತಲೇ ನಗೆಯ ಕೇದಿಗೆ ಹೂವನ್ನು ಮುಡಿಸಿಕೊಂಡು ಬಂದವನ ರೀತಿ ಸದಾ ನಗುತ್ತಾ ಇರುವನು. ಆ ನಗುವಿನಲ್ಲಿಯೇ ಹೆಣ್ಣುಗಳನ್ನು ಸೆಳೆಯುತ್ತಿದ್ದನು. ಯಾವ ಹೆಣ್ಣು ಕಂಡರೂ ಸಾಕು ಆ ಹೆಣ್ಣು ಪ್ರೀತಿಯ ವೀಳ್ಯವನ್ನು ಕೊಡುವಂತಹ ರಸಿಕ ಅವನು. ಈಕೆಗೆ ಆತ ಎಷ್ಟೇ ಜನ್ಮವೆತ್ತಿದರೂ ನಾನು ನಿನ್ನ ಗೆಳೆಯನಾಗಿ ಬರುತ್ತೇನೆಂದು ಭರವಸೆ ಕೊಟ್ಟಿದ್ದಾನೆ. ಅಂತೆಯೇ ತನ್ನ ಎದೆಯ ಗೆಳತಿಯಾಗಿ ಅಂದರೆ ಪ್ರಿಯತಮೆಯಾಗಿ ಇಟ್ಟುಕೊಂಡಿರುತ್ತೇನೆಂದು ಹೇಳಿದ್ದಾನೆ. ಆದರೆ ಇಷ್ಟೆಲ್ಲ ಪ್ರೀತಿ, ಕಾಮ, ಹಣ ಮಾತು ಸುರಿಸಿದ ಆತ ಬರುತ್ತೇನೆಂದು ಹೇಳಿ ಹೋದವನು ಬಂದಿಲ್ಲ. ಈಕೆಯೋ ಜೋಗತಿ, ಒಳ್ಳೆಯ ವ್ಯಕ್ತಿ ಸಿಕ್ಕಿದ್ದಾನೆ. ತನ್ನನ್ನು ಬಿಡದೆ ಪ್ರೀತಿಸುತ್ತಿದ್ದಾನೆ. ತಾನು ಕೇಳಿದ್ದ ಕೊಡುತ್ತಿದ್ದಾನೆ. ನಾನು ಹೇಳಿದಂತೆ ಕೇಳುತ್ತಿದ್ದಾನೆ. ಬದುಕಿಗೆ ಆಸರೆಯಾಗುತ್ತಾನೆ ಎಂದು ಕೇಳುತ್ತಿರುವಾಗಲೇ ಆತ ಬಿಟ್ಟು ಹೋಗಿದ್ದಾನೆ. ಬರುತ್ತೇನೆಂದವನು ಬಂದಿಲ್ಲ. ಅದಕ್ಕೆ ಆಕೆ ಕನವರಿಸುತ್ತಿದ್ದಾಳೆ. ಒಳ್ಳೆಯ ಶೆಟ್ಟರ ಹುಡುಗ, ಹಣ ಇದ್ದವನು, ಜೊತೆಗೊಂದಿಷ್ಟು ಗುಣ ಇದ್ದವನು. ಏಕೋ ಕೋಪಿಸಿಕೊಂಡು ಹೊರಟು ಹೋಗಿದ್ದಾನೆ. ಎಲ್ಲಿ ಹೊರಟು ಹೋದ? ನನ್ನ ಬಿಟ್ಟು ಬೇರೆಯವಳಿಗೆ ಒಲಿದು ಹೊರಟು ಹೋದನೇ? ಎಂದು ಹಾದಿ ಬೀದಿ ಹುಡುಕುತ್ತಾಳೆ. ‘ಯಲ್ಲೇ ! ಮಲ್ಲಿ ! ಪಾರೀ ! ತಾರೀ ! ನಿಂಗೀ! ಸಾವಂತರೀ’ ಎಂದು ಕಂಡ ಕಂಡವರನ್ನು ಕೇಳುತ್ತಿದ್ದಾಳೆ. ಆದರೆ ಆತ ಮಾತ್ರ ಸಿಗುತ್ತಿಲ್ಲ. ಈಕೆಗೆ ಕಾಮದ ಜೊತೆಗೆ ಪ್ರೇಮ ಬೆಳೆದು ಅದಕ್ಕಾಗಿ ಹಂಬಲಿಸುತ್ತಿದ್ದಾಳೆ. ಆದರೆ ಆತ ಉಂಡು ಹೋದವನು ಈಕೆಯನ್ನು ಮರೆತಂತೆ ಕಾಣುತ್ತದೆ. ಮರುಳು ಮಾಡುವ ವಿಟರು ಪ್ರೀತಿಗಾಗಿ ಹಂಬಲಿಸುವ ವೇಶ್ಯಯ ಚಿತ್ರಣ ಈ ಕವಿತೆಯಲ್ಲಿ ವ್ಯಕ್ತವಾಗಿದೆ.