ಈ ರೌಂಡ್ ಅಪ್ ನಲ್ಲಿದೆ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು
ಜೂನ್ 24 ಮಣಿಪುರ ಹಿಂಸಾಚಾರ ಕುರಿತು ಸರ್ವಪಕ್ಷ ಸಭೆ: ಪ್ರಧಾನಿ ಮೋದಿ ಗೈರು
ಮಣಿಪುರ ಹಿಂಸಾಚಾರದ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ ಜೂನ್ 24ಕ್ಕೆ ಸರ್ವಪಕ್ಷಗಳ ಸಭೆ ಕರೆದಿದೆ.
ಇತ್ತೀಚಿಗಷ್ಟೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆದಿಲ್ಲ ಎಂದಿದ್ದರು. ಈಗ ಅಮಿತ್ ಶಾ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಆದರೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿರುವ ಕಾರಣ ಸಭೆಗೆ ಪ್ರಧಾನಿ ಮೋದಿ ಗೈರಾಗಲಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ 50 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ ಪ್ರಧಾನ ಮಂತ್ರಿ ಮೌನವಾಗಿದ್ದಾರೆ. ಪ್ರಧಾನಿ ದೇಶದಲ್ಲಿ ಇಲ್ಲದಿದ್ದಾಗ ಸರ್ವಪಕ್ಷ ಸಭೆ ಕರೆಯಲಾಗಿದೆ. ಈ ಸಭೆ ಪ್ರಧಾನಿಗೆ ಮುಖ್ಯವಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಭಾರತದ ಫೈಟರ್ ಜೆಟ್ ಗಳಿಗೆ ಸಿಕ್ಕಿತು ಇಂಜಿನ್ ಉತ್ಪಾದನೆಯ ಒಪ್ಪಂದ
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಿವಿಧ ಸಂಸ್ಥೆಗಳು, ಪ್ರತಿನಿಧಿಗಳ ಜೊತೆ ಮಾತುಕತೆ ನೆಡೆಸುತ್ತಿದ್ದಾರೆ. ಈ ವೇಳೆ ಭಾರತದ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. ಹಾಗೂ ಅಮೆರಿಕದ ಏರ್ ಸ್ಪೇಸ್ ದೈತ್ಯ ಜನರಲ್ ಎಲೆಕ್ಟ್ರಿಕ್ ನಡುವೆ ಐತಿಹಾಸಿಕ ಒಪ್ಪಂದವಾಗಿದೆ.
ಈ ಬಗ್ಗೆ ಅಮೆರಿಕದ ಜನರಲ್ ಎಲೆಕ್ಟ್ರಿಕ್ ನ ಏರೋಸ್ಪೇಸ್ ಘಟಕ ಇಂದು ಪ್ರಕಟಿಸಿದ್ದು, ಭಾರತೀಯ ವಾಯುಸೇನೆಯ ಫೈಟರ್ ಜೆಟ್ ಗಳಿಗೆ ಇಂಜಿನ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಹೆಚ್ ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿದೆ.
ವಾಯುಪಡೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಮೂಲಕ ತೇಜಸ್ ಯುದ್ಧ ವಿಮಾನಕ್ಕೆ ಎಫ್404 ಎಂಜಿನ್ ಅನ್ನು ಪೂರೈಸಲಿದೆ. ಇದು 83 ತೇಜಸ್ ವಿಮಾನಗಳಲ್ಲಿ ಬಳಸಲಾಗುತ್ತದೆ.
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ 2027-28ರ ವೇಳೆಗೆ ಜಂಟಿಯಾಗಿ ತೇಜಸ್ ಮಾರ್ಕ್-2 ಫೈಟರ್ ಜೆಟ್ ಅನ್ನು ಅಭಿವೃದ್ಧಿಗೊಳಿಸಿತ್ತು. 2024ರ ಅಂತ್ಯದ ವೇಳೆ ಜಿಇ414 ಇಂಜಿನ್ ಹೊಂದಿರುವ ತೇಜಸ್ ಮಾರ್ಕ್-2 ವಿಮಾನದ ಮಾದರಿ ಬಿಡುಗಡೆಗೊಳ್ಳಲಿದೆ. ಇನ್ನು ಈ ಒಪ್ಪಂದದ ಪ್ರಕಾರ ಜಿಇ 414 ಇಂಜಿನ್ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾಗಲಿದೆ.
ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ನಲ್ಲಿ 50 ಪದಕ ಗಳಿಸಿದ ಭಾರತ!
ಬರ್ಲಿನ್ ನಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ನಲ್ಲಿ ಭಾರತ 50 ಪದಕಗಳ ಗಡಿ ದಾಟಿದೆ.
ಕೊನೆಯ ದಿನದ ಪಂದ್ಯದ ವೇಳೆ ಭಾರತ 15 ಚಿನ್ನ, 27 ಬೆಳ್ಳಿ, 13 ಕಂಚು ಸೇರಿದಂತೆ ವಿವಿಧ ಕ್ರೀಡೆಗಳಲ್ಲೊ 55 ಪದಕಗಳನ್ನು ಗಳಿಸಿಕೊಂಡಿದೆ.
ಅಥ್ಲೆಟಿಕ್ಸ್, ಸೈಕ್ಲಿಂಗ್, ಪವರ್ಲಿಫ್ಟಿಂಗ್, ರೋಲರ್ ಸ್ಕೇಟಿಂಗ್ ಮತ್ತು ಈಜು ಕ್ರೀಡೆಗಳಲ್ಲಿ ಭಾರತ 55 ಪದಕಗಳನ್ನು ಗಳಿಸಿದೆ.
ಈಜಿನಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಸೇರಿ ಐದು ಪದಕಗಳು ಮತ್ತು ಸೈಕ್ಲಿಂಗ್ ಕೋರ್ಸ್ನಲ್ಲಿ 3 ಚಿನ್ನ, 2 ಬೆಳ್ಳಿ, ಒಂದು ಕಂಚು ಸೇರಿ ಆರು ಪದಕ ದಾಖಲಿಸಿದೆ.
ಫ್ರೀಸ್ಟೈಲ್ ಈಜುಪಟುಗಳು ಚಿನ್ನ ಗೆದ್ದುಕೊಂಡಿದ್ದರಿಂದ ಭಾರತದ ಪದಕಗಳು ಸುಮಾರು ದ್ವಿಗುಣಗೊಂಡವು. ಇನ್ನುಳಿದಂತೆ ಮಿನಿ ಜಾವೆಲಿನ್ ಬಿ ಲೆವೆಲ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
ನಾಪತ್ತೆಯಾದ ಸಬ್ ಮೆರಿನ್ ಪತ್ತೆಗೆ ಮುಗಿದ ಗಡುವು: ಐವರು ಜೀವಂತ ಸಿಗುವುದು ಅನುಮಾನ
ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ನೌಕೆ ಇನ್ನು ಪತ್ತೆಯಾಗಿಲ್ಲವಾದ್ದರಿಂದ ನಾಪತ್ತೆಯಾಗಿದ್ದ ಐವರು ಜೀವನಂತ ಸಿಗುವ ನಂಬಿಕೆಯೂ ಕ್ಷೀಣಿಸುತ್ತಿದೆ.
ಐವರು ಸಿಬ್ಬಂದಿಯೊಂದಿಗೆ ಟೈಟಾನಿಕ್ ವೀಕ್ಷಣಾ ಪ್ರವಾಸಕ್ಕೆ ಅಟ್ಲಾಂಟಿಕ್ ಸಮುದ್ರದ ಅಡಿಗೆ ತೆರಳಿರುವ ಸಬ್ಮೆರಿನ್ 96 ಗಂಟೆಗಳ ಕಾಲ ಗಾಳಿ ಒದಗಿಸಬಲ್ಲದು. ತೀವ್ರ ಶೋಧದ ಬಳಿಕವೂ ಈವರೆಗೂ ಸಬ್ ಮೆರಿನ್ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಈ ಐವರನ್ನೂ ರಕ್ಷಿಸುವ ಕಾರ್ಯ ಅಂತಿಮ ಹಂತ ತಲುಪುವಂತಾಗಿದೆ.
ಭಾನುವಾರ ಬೆಳಿಗ್ಗೆ ಟೈಟಾನಿಕ್ ಅವಶೇಷ ವೀಕ್ಷಿಸಲು ಪ್ರಯಾಣಿಸುತ್ತಿದ್ದ ಟೈಟಾನ್ ಸಬ್ಮರೀನ್ ನಾಲ್ಕು ದಿನಗಳಿಗೆ ಸಾಲುವಷ್ಟು ಗಾಳಿ ಹೊಂದಿರುತ್ತದೆ. ಸಬ್ಮೆರಿನ್ ಹುಡುಕಾಟಕ್ಕೆ ಇದ್ದ ನಿರ್ಣಾಯಕ ಕ್ಷಣಗಳು ಮುಗಿದುಹೋಗಿವೆ.
ಆದರೂ ಕೊನೆಯ ಕ್ಷಣದವರೆಗೂ ಹುಡುಕಾಟ ಹಾಗೂ ಅವರೆಲ್ಲರನ್ನು ಜೀವಂತವಾಗಿ ಪತ್ತೆ ಮಾಡುವ ಆಶಾಭಾವ ಇನ್ನೂ ಉಳಿದಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.