ಕವಲುದಾರಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ್ದ ನಟ ರಿಷಿ ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ತೆಲುಗಿನ ಹೆಸರಾಂತ ನಿರ್ದೇಶಕರಾದ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ಶೈತಾನ್ ಮೂಲಕ ರಿಷಿ ತೆಲುಗು ವೆಬ್ ಸೀರಿಸ್ನ ಮೂಲಕ ಒಟಿಟಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ಇವನು ಇರೋದೆ ಹೀಗೆ ಪ್ರತಿ ಸಿನಿಮಾದಲ್ಲಿಯೂ ಹೊಸ ಬಗೆಯ ಕಂಟೆಂಟ್, ಕ್ಯಾರೆಕ್ಟರ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ತಾವೊಬ್ಬ ಪ್ರತಿಭಾನ್ವಿತ ನಟನಾಗಿ ಗುರುತಿಸಿಕೊಂಡಿದ್ದ ರಿಷಿ ಈಗ ತೆಲುಗು ಸಿನಿಮಾಲೋಕಕ್ಕೂ ಪಾರ್ದಾಪಣೆ ಮಾಡಿದ್ದಾರೆ.
ಜೂನ್ 15ರಂದು ಶೈತಾನ್ ಪ್ರಸಾರ ಆಗಲಿದೆ. ತೆಲುಗು ಭಾಷೆ ಜೊತೆಗೆ ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿಯೂ ವೆಬ್ ಸರಣಿ ಮೂಡಿ ಬರಲಿದೆ. ರವಿಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂದನ್ ಮುಂತಾದವರು ಶೈತಾನ್ ಸಿರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕ ಹಾಗೂ ಖಳನಾಯಕ ಎರಡು ಶೇಡ್ನಲ್ಲಿರುವ ಬಾಲಿ ಪಾತ್ರದ ಸಣ್ಣ ಝಲಕ್ ರಿಲೀಸ್ ಆಗಿದ್ದು, ಕಂಪ್ಲೀಟ್ ಮಾಸ್ ಅವತರಾದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ. ಶೈತಾನ್ ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥೆ ಇದೆ ಅನ್ನೋದು ಪೋಸ್ಟರ್ ಹೇಳುತ್ತದೆ. ವೆಬ್ ಸಿರೀಸ್ನ ಪೋಸ್ಟ್ ನೋಡಿದ್ರೆ, ಎಲ್ಲೋ ಇದು ದಂಡುಪಾಳ್ಯ ಗ್ಯಾಂಗ್ನ ಹೊಸ ಕಥೇನಾ ಅನ್ನುವ ಅನುಮಾನ ಕೂಡ ಮೂಡುತ್ತದೆ.
ಸದ್ಯ ರಿಷಿ ನಟನೆಯ “ರಾಮನ ಅವತಾರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ರಾಮ ಈಸ್ ಜಂಟಲ್ ಮ್ಯಾನ್ ಎಂಬ ಹಾಡನ್ನು ನಾಗಾರ್ಜುನ ಶರ್ಮ ರಚಿಸಿದ್ದಾರೆ.