ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ದಿನದಿಂದಲೇ ಸಿಎಂ ಪಟ್ಟಕ್ಕಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಸಿಎಂ ಬಿಕ್ಕಟ್ಟಿಗೆ ತೆರೆ ಎಳೆದಿದೆ.
ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ನಾಲ್ಕುದಿನಗಳ ಕಾಲ ದಿಲ್ಲಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನಾ ಕಸರತ್ತುಗಳನ್ನು ಮಾಡಿದ್ದರು. ಡಿಕೆಶಿ ಮುಖ್ಯಮಂತ್ರಿ ಸ್ಥಾನವಲ್ಲದೇ ಬೇರೆ ಯಾವುದೇ ಹುದ್ದೆ ಬೇಡ ಎಂದು ಪಟ್ಟು ಹಿಡಿದು ಕೂತರೂ ಕೂಡ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಹೈಕಮಾಂಡ್ ಡಿಕೆಶಿಗೆ ಬಿಟ್ಟು ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಿದ್ದು ಯಾಕೆ? ಇದರ ಹಿಂದಿರುವ ಸಿಕ್ರೇಟ್ ಏನು? ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ರಾಜಕೀಯ ಅನುಭವ:
ಸುಮಾರು 75 ವರ್ಷ ವಯಸ್ಸಿನ ಸಿದ್ದರಾಮಯ್ಯ 40 ವರ್ಷಗಳ ಕಾಲ ರಾಜಕೀಯದಲ್ಲಿ ಪಳಗಿದ್ದಾರೆ. 1983ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಸೇವೆ ಆರಂಭಿಸಿ, 2013ರಲ್ಲಿ ಸಿಎಂ ಗದ್ದುಗೆ ಏರುವವರೆಗೂ ಹಲವಾರು ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಿಎಂ ಆದ ನಂತರವೂ ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಸ್ಥಾನವನ್ನು ನಿರ್ವಹಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರಿಗೆ ಆಡಳಿತದ ಅನುಭವ ಹೆಚ್ಚು. ಅಲ್ಲದೆ, ಜಾತಿ ಮತ್ತು ವರ್ಗಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ.
ಪೂರ್ಣಾವಧಿಯ ಮುಖ್ಯಮಂತ್ರಿ:
ಸಿದ್ದರಾಮಯ್ಯ 2013ರಿಂದ 2018ರ ವರೆಗೆ ಅಧಿಕಾರ ನಡೆಸಿ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಆಡಳಿತ ಪೂರೈಸಿದ ಮೂವರು ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೂ 13 ಬಾರಿ ರಾಜ್ಯದಲ್ಲಿ ಬಜೆಟ್ ಮಂಡಿಸಿದ ಅನುಭವವನ್ನು ಹೊಂದಿದ್ದಾರೆ.
ಬಹುಪಾಲು ಕಾಂಗ್ರೆಸ್ ಶಾಸಕರ ಬೆಂಬಲ:
ಸಿದ್ದರಾಮಯ್ಯ ಬೆಂಬಲಿಗರ ದೊಡ್ಡ ಬಣವೇ ಇದ್ದು, ಅವರೆಲ್ಲದೂ ಸಿದ್ದರಾಮಯ್ಯನವರೇ ಸಿಎಂ ಆಗಬೇಕೆಂದು ಆಸೆಯನ್ನು ಹೊಂದಿದ್ದರು. ಹಾಗೂ ಒಂದು ವೇಳೆ ಸಿದ್ದರಾಮಯ್ಯಗೆ ಸಿಎಂ ಪಟ್ಟ ಕೈ ತಪ್ಪಿದ್ದರೆ ಅವರೆಲ್ಲರೂ ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿ ಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವುದು ಹೈಕಮಾಂಡ್ಗೆ ಅನಿವಾರ್ಯವಾಗಿತ್ತು.
ಅಹಿಂದ್ ತತ್ವ:
ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಪ್ರತಿನಿಧಿಸುವ ಸಾಮಾಜಿಕ-ರಾಜಕೀಯ ಪರಿಕಲ್ಪನೆಯಾದ ಅಹಿಂದ್ ತತ್ವದ ವಿಚಾರದಿಂದಲೇ ಸಿದ್ದರಾಮಯ್ಯನವರು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಮತ್ತು ದಲಿತರ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.
ಸಿಎಂ ಆಗುವ ಕೊನೆಯ ಅವಕಾಶ:
ಸಿದ್ದರಾಮಯ್ಯ ಅವರಿಗೆ 75 ವರ್ಷ ವಯಸ್ಸಾಗಿದ್ದು ಇದು ಕೊನೆಯ ಚುನಾವಣೆ ಮತ್ತು ಸಿಎಂ ಆಗುವ ಕೊನೆಯ ಅವಕಾಶವಾಗಿದ್ದು ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯ ಅವರು ಅವಕಾಶ ವಂಚಿರತಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಪಟ್ಟವನ್ನು ಹೈಕಮಾಂಡ್ ನೀಡಿದೆ.
ಮುಂಬರಲಿರುವ ಲೋಕಸಭೆ ಚುನಾವಣೆ:
2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿದ್ದು, ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಇದು ನೆರವಾಗುತ್ತದೆ.