ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 5 ಯೋಜನೆಗಳನ್ನು ಜಾರಿಗೆ ತರಲು ಸಚಿವ ಸಂಪುಟದಿಂದ ಅನುಮೋದನೆ ಪಡೆದಿದೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಜೋಡೆತ್ತುಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ವಿಶ್ವಾಸದಲ್ಲಿದೆ. ಈ ಯೋಜನೆಗಳು 2024ರ ಸಾರ್ವತ್ರಿಕ ಚುನಾವಣೆ ವರೆಗೆಯಾದರೂ ಜಾರಿಯಲ್ಲಿರುವ ಸಾಧ್ಯತೆ ಇದೆ. ಬಹುಶಃ ಇದೇ ವಿಷಯವನ್ನು ಇಬ್ಬರು ನಾಯಕರು ಹೈ ಕಮಾಂಡ್ ಜೊತೆ ಚರ್ಚೆ ನಡೆಸಿರಬಹುದು.
ಈಗಾಗಲೇ ಸಾಲದಲ್ಲಿ ಮುಳುಗಿರುವ ರಾಜ್ಯದಲ್ಲಿ ಇಂತಹ ಉಚಿತ ಗ್ಯಾರಂಟಿಗಲನ್ನು ತರುವುದಕ್ಕೆ ಸಾಕಷ್ಟು ಹಣಕಾಸಿನ ಯೋಜನೆಯಾಗಿರಬೇಕು.
ಮುಖ್ಯವಾಗಿ, ಜಿಎಸ್ ಟಿ ಸಂಗ್ರಹಿಸುವಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿರುವುದು ಕರ್ನಾಟಕ.
ಹಿಂದಿನ ಬಿಜೆಪಿ ಸರ್ಕಾರ ಕೇಂದ್ರದೊಂದಿಗೆ ಸರಿಯಾಗಿ ವ್ಯವಹರಿಸದೇ ರಾಜ್ಯದ ಜಿಎಸ್ ಟಿ ಪಾಲನ್ನು ಪಡೆದುಕೊಂಡಿಲ್ಲ ಎಂದು ದೂಷಿಸುವ ಸಿದ್ದರಾಮಯ್ಯನವರು ಈಗ ಹೇಗೆ ಶೇ.100ರಷ್ಟು ಹಣವನ್ನು ಪಡೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಇಷ್ಟು ಮಾತ್ರವಲ್ಲ, ಈಗಷ್ಟೆ ರಚನೆಗೊಂಡಿರುವ ಸರ್ಕಾರ ತನ್ನ ಕ್ಯಾಬಿನೆಟ್ ಮಂತ್ರಿಗಳಿಗೆ ಸೂಕ್ತ ಖಾತೆ ನೀಡುವಲ್ಲಿ ಮತ್ತು ಇತರ ಸ್ಥಾನಗಳನ್ನು ಅಂತಿಮಗೊಳಿಸಲು ಮತ್ತಷ್ಟು ಕಿತ್ತಾಟ ನಡೆಸಲಿದೆ.
ರಾಜ್ಯದಲ್ಲಿ ಸಿದ್ದು, ಡಿಕೆಶಿ ಹಾಗೂ ಖರ್ಗೆ ನೇತೃತ್ವದ ಹೈಕಮಾಂಡ್ ಇರಲಿದ್ದು, ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂದು ಮುಂದಿನ ದಿನಗಳ ಪ್ರಮುಖ ಚರ್ಚೆಯಾಗಲಿದೆ.
ಇನ್ನು ಆಡಳಿತಕ್ಕೆ ಬಂದಿರುವ ಸರ್ಕಾರ ರಾಜ್ಯದಲ್ಲಿನ ಬರಗಾಲದ ಸಮಸ್ಯೆಗಳಿಗೆ ಪ್ರಮುಖ ಆದ್ಯತೆ ನೀಡಬೇಕಿದೆ ಮತ್ತು ಮುಂಗಾರು ವಿಪತ್ತುಗಳು ಮತ್ತು ಕೃಷಿ ಸಿದ್ದತೆ ಕುರಿತು ಚರ್ಚೆ ನಡೆಸಬೇಕಿದೆ.
ರಾಜ್ಯದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ, ಕಳೆದ 3 ತಿಂಗಳು ಎಲ್ಲಾ ಟ್ಯಾಂಕರ್ ಗಳು, ಯಂತ್ರೋಪಕರಣಗಳನ್ನು ಚುನಾವಣೆ ಕೆಲಸಗಳಿಗೆ ಬಳಸಲಾಗಿದೆ.
ಕೇವಲ ಗ್ಯಾರಂಟಿ ಘೋಷಿಸುವುದು ಮಾತ್ರವಲ್ಲದೇ ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಉಚಿತ ಯೋಜನೆಗಳನ್ನು ವರ್ಷಗಳವರೆಗೆ ನಡೆಸಲಾಗುವುದಿಲ್ಲ, ಬದಲಿಗೆ ಸರ್ಕಾರವು ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕಾಗಿದೆ.
ವೃತ್ತಿಪರ ತರಬೇತಿ, ಸ್ವಯಂ-ಉದ್ಯೋಗ, ಬಡ್ಡಿ ರಹಿತ ಸುಲಭ ಸಾಲದ ಬೆಂಬಲ, ಸಣ್ಣ ಹಾಗೂ ಮಧ್ಯಮ ಮಟ್ಟದ ಸ್ಟಾರ್ಟ್ ಅಪ್ ಗಳಿಗೆ ಮಾರುಕಟ್ಟೆ ಮತ್ತು ಉದ್ಯೋಗ ಸೇರಿದಂತೆ ಆರ್ಧಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಸರ್ಕಾರದ ಆದ್ಯತೆ ಆಗಬೇಕು.
ಹೇಗೋ ಈ ಜೋಡೆತ್ತುಗಳ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ಉಲ್ಲೇಖದಂತೆ ಸರ್ವ ಜನಾಂಗದ ಶಾಂತಿಯ ತೋಟ ಅನ್ನುವುದನ್ನು ನೆನಪಿನಲ್ಲಿಡಲಿ.