ಸುಪ್ರಭಾತಂ ಅಮ್ಮುಣು,
ಇವತ್ತು ಅಜ್ಜ ಬೇಗ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿದರು.ನನ್ನನ್ನು ಮಾತ್ರ 5-30ಕ್ಕೆ ಎಬ್ಬಿಸಿದರು. ಎದ್ದು ಬ್ರಶ್ ಮಾಡಿ ಚಹಾ ಕುಡಿದಾಗುವಾಗ 6-00 ಗಂಟೆಯಾಯಿತು.
7-15 ಕ್ಕೆ ಮುಂಬಯಿ ಲೋಕಮಾನ್ಯ ತಿಲಕ್ ಸ್ಟೇಶನ್ ತಲುಪಿದೆವು. ಇಲ್ಲಿ ಇಡ್ಲಿ ಸಾಂಬಾರ್ ತಿಂದು waiting room ಲ್ಲಿ ಕಾಯುತ್ತಾ ಕುಳಿತುಕೊಳ್ಳಲೇ ಬೇಕಿತ್ತು….ಮುಂದಿನ ಟ್ರೈನ್ ಬರುವವರೆಗೆ !!!
ಸ್ನಾನ ಮಾಡುವವರು ಸ್ನಾನ ಮಾಡಿದರು. ಕೈಕಾಲು ಮುಖ ತೊಳೆದರು. ಇನ್ನು ಕೆಲವರು ಇಲ್ಲಿಂದ ಸುಮಾರು 2 ಕಿಮೀ ದೂರ ಇರುವ ಒಂದು ಬಾಲಾಜಿ(ವೆಂಕಟರಮಣ) ಮಂದಿರಕ್ಕೆ ಹೋದರು.ಅಲ್ಲಿ ಸ್ನಾನಮಾಡಿ 10-30ಕ್ಕೆ ಬಂದರು. 11.30ಕ್ಕೆ ನಿನ್ನ ಅಜ್ಜ ಸಹಪ್ರಯಾಣಿಕರನ್ನೆಲ್ಲಾ waiting room ಹೊರಗಡೆ ಇರುವ ಪ್ಯಾಸೇಜ್ಲ್ಲಿ ಎರಡು ಸಾಲಲ್ಲಿ ಕೂರಿಸಿದರು. ನಿನ್ನೆಯಿಂದ ಇವತ್ತಿನ ವರೆಗಿನ ವರದಿಯನ್ನು ಹೇಳಿದರು. ಇದು ಪ್ರವಾಸದಲ್ಲಿ ಪ್ರತಿದಿನ ಬೆಳಿಗ್ಗೆ ನಡೆಯುವ ಒಂದು ಕಾರ್ಯಕ್ರಮವಾಯಿತು ಮತ್ತು ಎಲ್ಲರೂ ಸ್ವಪರಿಚಯವನ್ನು ಕುಟುಂಬದವರ ಸಹಿತ ಮಾಡಬೇಕೆಂದು ವಿನಂತಿಸಿದರು. ಮತ್ತೊಮ್ಮೆ ಸರಿಯಾಗಿ ಎಲ್ಲರೂ ಪರಿಚಯ ಹೇಳಿಕೊಂಡರು.
11-45 ಕ್ಕೆ ಮುಂಬಯಿಯಲ್ಲೇ ವಾಸವಾಗಿರುವ ಪರಿಚಿತ ಕುಟುಂಬದವರು ಬಿಸಿಬಿಸಿ ಊಟ ತಂದರು. ಆ ಪ್ಯಾಸೇಜಲ್ಲಿ ಹೇಗೂ ಸಾಲಾಗಿ ಕುಳಿತುಕೊಂಡಿದ್ದೆವು. ಅಲ್ಲೇ ತಟ್ಟೆಗಳನ್ನು ಹಾಕಿ ಬಡಿಸಿದರು. ದಾಳಿತೊವ್ವೆ,ಉಪ್ಪಿನಕಾಯಿ, ಕಡಲೆ ಗಶಿ, ಅಲಸಂಡೆ ಉಪ್ಕರಿ(ಪಲ್ಯ)..
ವಾವ್
ಮನೆಯ ಊಟ ಅದ್ಭುತವಾಗಿತ್ತು…ಅಷ್ಟೇ ಅಲ್ಲ ಮನೆಯ ಊಟ ಸಧ್ಯಕ್ಕೆ ಇದೇ ಕೊನೆಯದಾಗಿತ್ತು ಮತ್ತೆರಡು ದಿನಗಳ ವರೆಗೆ ಊರಿನ ಊಟ ಇರಲಿಲ್ಲ.
12-15ಕ್ಕೆ ಟ್ರೈನ್ ಬಂತು…ಹತ್ತಿದೆವು.12-40ಕ್ಕೆ ಚಾಲೂ ಆಯ್ತು.
ಪಶ್ಚಿಮ ಘಟ್ಟಗಳ ಬದಿಯಿಂದಲೇ ನಾವು ಸಾಗುತ್ತಿದ್ದೆವು. ಸಣ್ಣಸಣ್ಣ ಕಣಿವೆಗಳು, ಪುಟ್ಟಪುಟ್ಟ ಜಲಪಾತಗಳು.. ಹರಿಯುವ ನೀರಿನ ಝರಿ…ವಾವ್ ನೋಡಲಿಕ್ಕೆ ಎಷ್ಟು ಚಂದ ಗೊತ್ತಾ ಪುಟ್ಟಾ…
ಆ ದೊಡ್ಡದೊಡ್ಡ ಬೆಟ್ಟಗಳು..ಅದರ ಮೇಲೆ ಅಲ್ಲಲ್ಲಿ ಕೋಟೆಕೊತ್ತಳಗಳ ಪಳೆಯುಳಿಕೆಗಳು, ಕೆಲವು ಬಿಳಿ,ಕೆಂಪು ಬಣ್ಣದಗುಡಿಗಳೋ, ಗೋಪುರಗಳೋ..ಕಾಣುತ್ತಿದ್ದವು. ಏನು ಕಂಡರೂ ನನಗೆ ಮರಾಠರ ಮನೆಗಳು, ಕೋಟೆಗಳು, ಮಂದಿರಗಳು ಅವರ ಸಾಹಸದ ಕಥೆಗಳು ಕಣ್ಮುಂದೆ ಬರುತ್ತಿದ್ದವು.. ಎಲ್ಲಾ ಮಂದಿರಗಳು ಅಂಬಾಭವಾನಿಯ ಮಂದಿರವೆನಿಸುತ್ತಿತ್ತು. ಜೀಜಾಮಾತೆ,ಶಿವಾಜಿ ಮಹಾರಾಜರು ಮತ್ತು ಅವರ ಸಂಗಾತಿಗಳಾಗಿದ್ದ ಮಾವಳಿಗಳೇ ಕಾಣುತ್ತಿದ್ದರು..
ಅದು ಆ ಗಢವಿರಬಹುದೇ, ಈ ಗಢವಿರಬಹುದೇ ಎಂದು ಯೋಚಿಸುತ್ತಿದ್ದೆ. ಕೇಳಿದರೆ ಹೇಳುವವರೂ ಇರಲಿಲ್ಲ.
ನಿಮಗೆ ಬಹುಶಃ ಪಠ್ಯ ಪುಸ್ತಕದಲ್ಲಿ ಶಿವಾಜಿ,ಅವರ ಸ್ನೇಹಿತರಾದ ಮಾವಳಿಗಳು, ಅವರ ಗೆರಿಲ್ಲಾ ಯುದ್ಧ…ಇವೆಲ್ಲಾ ಇಲ್ಲವೆಂದು ಅನಿಸುತ್ತದೆ. ಔರಂಗಜೇಬನ ಬಲಿಷ್ಠ ಸೇನೆಯ ವಿರುದ್ಧ ಬೆಟ್ಟದ ಬಂಡೆ, ಮರಗಳ ಮರೆಯಲ್ಲಿ ಅವಿತು ಕುಳಿತು ಒಮ್ಮೆಗೆ ದಾಳಿ ಮಾಡುವ ತಂತ್ರವನ್ನು ಅನುಸರಿಸುತ್ತಿದ್ದರು. ಇದನ್ನು ಗೆರಿಲ್ಲಾ ಯುದ್ಧ ತಂತ್ರ ಎಂದು ಕರೆಯುತ್ತಾರೆ. ಶಿವಾಜಿಯ ಸೈನಿಕರು….ಇದೇ ಗೆರಿಲ್ಲಾ ಯುದ್ಧತಂತ್ರದಿಂದ ಗೆಲ್ಲುತ್ತಿದ್ದರು..ಶತ್ರು ಸೈನ್ಯವನ್ನು ಮಣ್ಣು ಮುಕ್ಕಿಸುತ್ತಿತ್ತು. ಇದನ್ನೆಲ್ಲ ಶಾಲೆಯಲ್ಲಿ ಓದಿದ ನನಗೆ ಈಗ ಮತ್ತೊಮ್ಮೆ ಮರುಕಳಿಸಿತು. ಈಗಿನ ಪಠ್ಯಪುಸ್ತಕವೂ ಕಣ್ಮುಂದೆ ಬಂತು. ಇತಿಹಾಸವನ್ನು ತಿರುಚಿದರೆ ನಮ್ಮ ಮಕ್ಕಳಿಗೆ ನಮ್ಮತನದ ಬಗ್ಗೆ ಅರಿವು ಮೂಡುವುದಾದರೂ ಹೇಗೆ…!? ಎಂದು ಖೇದವಾಯಿತು. ಶಿವಾಜಿ ಮಹಾರಾಜರನ್ನು” ಬೆಟ್ಟದ ಇಲಿ ” ಎಂದು ಶತ್ರುಗಳು ಅಣಕಿಸುತ್ತಿದ್ದರಂತೆ.. ಇದೇ ಬೆಟ್ಟಗಳಲ್ಲಿ ಆ ಇಲಿಯು ಇತ್ತು . ಮತ್ತು ಎಲ್ಲರನ್ನೂ ಸೋಲಿಸುತ್ತಿತ್ತು..ಎಂದು ಅಂದಿನ ಬೇರೆಬೇರೆ ಯುದ್ಧಗಳು ಘಟನೆಗಳು, ಕಥೆಗಳು ಎಲ್ಲವೂ ನನ್ನನ್ನು ಆ ಕಾಲಕ್ಕೇ ಕರೆದೊಯ್ಯುತ್ತಿದ್ದವು. ನಾನೂ ಗತಕಾಲದಲ್ಲಿ ಕಳೆದು ಹೋಗಿದ್ದೆ. ನಡುನಡುವೆ ಅಜ್ಜನನ್ನೂ ಕರೆದೊಯ್ಯುತ್ತಿದ್ದೆ. ಇಲಿಯಂತೆ ಅವರ ತಲೆ ಕೊರೆಯುತ್ತಿದ್ದೆ..ಹೀಗೆ ಬೆಟ್ಟಗುಡ್ಡಗಳು ಕಳೆದು ನಿಧಾನಕ್ಕೆ ಇಳಿಜಾರು ಪ್ರದೇಶ ಬಂದಾಗ ಮತ್ತೆ ಪೂರ್ಣವಾಗಿ ಎಚ್ಚರವಾಯಿತು..ಆ ಇಳಿಜಾರಿನಲ್ಲಿ ಕೃಷಿ ಮಾಡಿದ್ದರು ಅಲ್ಲಿಯ ಜನರು..ಎಂದು ಹೆಮ್ಮೆ ಪಡುವಷ್ಟರಲ್ಲಿ ಅಲ್ಲಿಯ ಗಲೀಜು ಕಾಣಿಸಿತು. ಅಲ್ಲಿ ಮೊದಲು ಕಂಡ ಶುಭ್ರವಾದ ಝರಿ ನೀರು ಇಲ್ಲ …ಅದರ ಬದಲಿಗೆ ಕಚಡಾ ಎಸೆದು ಕೊಳಕಾದ ಝರಿ ಇತ್ತು. ನಮ್ಮ ಅದ್ಭುತವಾದ ಪ್ರಕೃತಿಯನ್ನು ಜನರು ಬುದ್ಧಿಭ್ರಷ್ಟರಾದಂತೆ ಹಾಳು ಮಾಡುತ್ತಿರುವುದನ್ನು ನೋಡಿ ಬೇಸರವಾಯಿತು. ಹಾಗೇ ನೋಡುತ್ತಾ ನೋಡುತ್ತಾ ಇಳಿಜಾರು ಬಯಲಾಯಿತು.ದ್ರಾಕ್ಷಿ, ಭತ್ತ, ಕಬ್ಬು, ನೆಲಕಡಲೆ, ಹೂಕೋಸು, ಎಲೆಕೋಸು ಎಲ್ಲವೂ ಎಷ್ಟು ಚಂದ ಕಾಣುತ್ತಿತ್ತು…ಗೊತ್ತಾ…?
ಮೊದಲು ಚಂದ ಕಂಡದ್ದು ಮತ್ತೆಮತ್ತೆ ಅದನ್ನೇ ನೋಡಿ ಬೋರಾಯ್ತು. ನಮ್ಮ ಬೋಗಿಯಲ್ಲಿ ನಮ್ಮ ಗುಂಪಿನವರು ಯಾರೂ ಇರಲಿಲ್ಲ…ಹಾಗಾಗಿ ಹರಟೆ ಹೊಡೆಯಲು ಯಾರೂ ಸಿಕ್ಕಲಿಲ್ಲ..ಎಂದಿನಂತೆ ಸಂಜೆಯಾಯ್ತು..ನಾನೇ ಉಳಿದವರಿರುವ ಬೋಗಿಗೆ ಹೋಗಿ ಭಜನೆ ಮಾಡಿ, ಊಟ ಮುಗಿಸಿ ನಮ್ಮ ಬೋಗಿಗೆ ಬಂದು ಮಲಗುವ ಸಿದ್ದತೆ ಮಾಡಿದೆ…
ಶುಭರಾತ್ರಿ…
Goodnight…ಕಂದಾ..