ಆಫ್ರಿಕಾದ ಸುಡಾನ್ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ನಡೆಯುತ್ತಿರುವ ಭೀಕರ ಸಂಘರ್ಷದಲ್ಲಿ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಇನ್ನೂ ಕರ್ನಾಟಕದಿಂದ ಆರ್ಯುವೇದ ಗಿಡಮೂಲಿಕೆಗಳ ಮಾರಾಟಕ್ಕೆಂದು 31ಕ್ಕೂ ಹೆಚ್ಚು ಮಂದಿ ಸುಡಾನ್ ಹೋಗಿ ತವರಿಗೆ ಮರುಳಾಗದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಈ ಘರ್ಷಣೆಯಿಂದಾಗಿ ಎರಡು ಪಡೆಗಳು ಸರ್ಕಾರಿ ಕಟ್ಟಡ, ಖಾಸಗಿ ಕಟ್ಟಡ, ವಿಮಾನ ನಿಲ್ದಾಣ, ಬಸ್ಸು ನಿಲ್ದಾಣ, ವಿಮಾನಗಳು, ಸಾರ್ವಜನಿಕ ಸಾರಿಗೆ ಹೀಗೆ ಎಲ್ಲವನ್ನು ನಾಶಪಡಿಸುತ್ತಿವೆ. ಈಗಾಗಲೇ ಸುಡಾನ್ನ ರಾಜಧಾನಿ ಖಾರ್ಟೋಮ್ ದಾಳಿಯಿಂದಾಗಿ ಸಂಪೂರ್ಣ ನಾಶವಾಗಿದೆ, ಜನವಸತಿ ಪ್ರದೇಶಗಳ ಮೇಲೆ ಬಾಂಬ್, ಗುಂಡು, ಕ್ಷೀಪಣಿಗಳ ಮೂಲಕ ದಾಳಿಗಳಾಗುತ್ತಿದ್ದು, ಹಲವಾರು ಮಂದಿ ಇದಕ್ಕೆ ಬಲಿಯಾಗಿದ್ದಾರೆ ಇನ್ನೂ ಉಳಿದವರು ಜೀವ ಕೈಯಲ್ಲಿ ಹಿಡಿದು ಭಯದಿಂದ ದಿನ ದೂಡುತ್ತಿದ್ದಾರೆ.
ಹಲವಾರು ವರ್ಷಗಳಿಂದ ಕರ್ನಾಟಕದ ಮೂಲಕ ಹಕ್ಕಿ ಪಿಕ್ಕಿ ಜನಾಂಗದ ಕೆಲ ಕುಟುಂಬಗಳು ಆಯುರ್ವೇದ, ಗಿಡಮೂಲಿಕೆ, ನಾಟಿ ಔಷಧಿ ಮಾರಾಟಕ್ಕೆಂದು ವರ್ಷದಲ್ಲಿ ಒಂದಿಷ್ಟು ತಿಂಗಳ ಕಾಲ ಆಫ್ರಿಕಾದ ವಿವಿಧ ದೇಶಗಳಿಗೆ ಹೋಗಿ ಬರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೋಗಿ ಅಲ್ಲಿ ಸಿಲುಕಿಕೊಂಡಿದ್ದಾರೆ.
ಸುಡಾನ್ನ ಅಲ್ಬಶೇರ್ ನಗರದ ಮನೆಯೊಂದರಲ್ಲಿ ಕರ್ನಾಟಕ ಮೂಲದ ಹಕ್ಕಿ ಪಿಕ್ಕಿ ಜನಾಂಗದ 31 ಕ್ಕೂ ಅಧಿಕ ಜನ ಕಳೆದ 10 ದಿನಗಳಿಂದ ವಾಸಿಸುತ್ತಿದ್ದಾರೆ. ಈ ಪೈಕಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಗೋಪಾಲ ಗ್ರಾಮದ ಐವರು, ಶಿವಮೊಗ್ಗ ಜಿಲ್ಲೆಯ 7 ಮಂದಿ, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ 19 ಮಂದಿ ಸೇರಿ ಅನೇಕರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಘರ್ಷಣೆ ಪ್ರಾರಂಭವಾದಗಿನಿಂದಲೂ ಹಕ್ಕಿಪಿಕ್ಕಿ ಜನಾಂಗದವರು ಅನ್ನಾಹಾರ, ನೀರು ಇಲ್ಲದೇ ಪರದಾಡುತ್ತಿದ್ದಾರೆ. ಹಾಗೂ ತಮ್ಮನ್ನು ರಕ್ಷಿಸಿ ತಾಯಿ ನಾಡಿಗೆ ಕರೆತರುವಂತೆ ಬೇಡಿಕೊಳ್ಳುತ್ತಿದ್ದಾರೆ.
ಸೂಡಾನ್ ನಲ್ಲಿ ಸಿಲುಕಿರುವವರನ್ನು ಭಾರತಕ್ಕೆ ಕರೆತರಲು ಅಪರೇಶನ್ ಕಾವೇರಿ ಪ್ರಾರಂಭವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಸುಮಾರ್ ೫೦೦ ಭಾರತೀಯರು ಈಗಾಗಲೇ ಸುಡಾನ್ ಪೋರ್ಟ್ ತಲುಪಿದ್ದಾರೆ ಅವರನ್ನು ಕರೆತರಲು ಹಡಗು ಮತ್ತು ಏರ್ಕ್ರಾಪ್ಟ್ಗಳು ಸಿದ್ದವಾಗಿದೆ ಎಂದು ಹೇಳಿದ್ದಾರೆ.
ಯಾರು ಈ ಹಕ್ಕಿಪಿಕ್ಕಿ ಜನಾಂಗ:
ಕನ್ನಡದಲ್ಲಿ ‘ಹಕ್ಕಿ’ ಎಂದರೆ ‘ಹಕ್ಕಿ’ ಮತ್ತು ‘ಪಿಕ್ಕಿ’ ಎಂದರೆ ‘ಹಿಡಿಯುವುದು’ ಎಂಬ ಕ್ರಿಯಾಪದ. ಆದ್ದರಿಂದ, ಈ ಸಮುದಾಯವನ್ನು ‘ಪಕ್ಷಿ ಹಿಡಿಯುವವರು’ ಎಂದು ಕರೆಯಲಾಗುತ್ತದೆ, ಇದು ಅವರ ಸಾಂಪ್ರದಾಯಿಕ ಉದ್ಯೋಗವಾಗಿದೆ.
ಹಕ್ಕಿ-ಪಿಕ್ಕಿ ಸಮುದಾಯವು ಉತ್ತರ ಭಾರತದಿಂದ ವಲಸೆ ಬಂದು ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳಲ್ಲಿ ನೆಲೆನಿಂತಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲಿ ಅಥವಾ ಕಾಡಿನ ಪಕ್ಕದಲ್ಲಿ ವಾಸಿಸುವ ಇವರು ಪ್ರಾಣಿ ಪಕ್ಷಿ ಭೇಟೆಯ ನಿಷೇಧದ ನಂತರ ಸ್ಥಳಿಯ ಗಿಡಮೂಲಿಕೆಗಳಿಂದ ಔಷಧಿ ಮಾಡಿ ಮಾರಾಟ ಮಾಡುವುದು ಇವರ ಕಸುಬಾಗಿದೆ.
ಕರ್ನಾಟಕದ ಶಿವಮೊಗ್ಗ, ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಹಕ್ಕಿಪಿಕ್ಕಿ ಜನಾಂಗ ನೆಲೆಸಿರುವುದು ಕಂಡುಬರುತ್ತದೆ. ಇವರು ಇಂಡೋ-ಆರ್ಯನ್ ಭಾಷೆಯನ್ನು ಮಾತನಾಡುತ್ತಾರೆ. ಅವರ ಮಾತೃಭಾಷೆಯನ್ನು ವಿದ್ವಾಂಸರು ‘ವಾಗ್ರಿ’ ಎಂದು ಗುರುತಿಸಿದ್ದಾರೆ. ಅವರು ಮನೆಯಲ್ಲಿ ‘ವಾಗ್ರಿ’ಯಲ್ಲಿ ಭಾಷೆ ಮಾತನಾಡುತ್ತಾರೆ ಆದರೆ ದೈನಂದಿನ ವ್ಯವಹಾರವನ್ನು ನಡೆಸುವಾಗ ಕನ್ನಡದಲ್ಲಿ ಮಾತನಾಡುತ್ತಾರೆ.