5
ಸಪ್ಪೆ ಬಾಳುವೆಗಿಂತ ಉಪ್ಪು ನೀರೂ ಲೇಸು
ಬಿಚ್ಚು ಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ ಮುತ್ತಿನ
ತವರ್ಮನೆ ಮುಟ್ಟನು ಮುಳುಗೋಣ ಬಾ
ಆತಂಕಗಳಿಲ್ಲದ, ಸುರಕ್ಷಿತ, ಸುಭದ್ರ ಬಾಳುವೆಗಿಂತ ರಿಸ್ಕು ತೆಗೆದುಕೊಳ್ಳುವ, ಆ ರಿಸ್ಕು ಉಪ್ಪುನೀರಿನಷ್ಟು ಅರುಚಿಯಾಗಿದ್ದರೂ, ಬಾಳು ವಾಸಿ ಅನ್ನಿಸುತ್ತಿದೆ. ಹೇಗಿದ್ದರೂ ಎಲ್ಲ ಆಗಿ ಹೋಗಿದೆಯಲ್ಲ. ಈಗ ನೆನಪುಗಳನ್ನು ಬಿಚ್ಚಿಕೊಳ್ಳಬೇಕು. ಬಿಚ್ಚಿಕೊಂಡ ನೆನಪುಗಳೇ ದೋಣಿಯನ್ನು ಮುಂದೆಸಾಗಿಸುವ ಹಾಯಿಪಟ. ಬಿಚ್ಚುವುದೆಂದರೆ ಎಷ್ಟೋ ಅಷ್ಟೂ ಹರಡಿಕೊಳ್ಳುವುದು. ಹಾಯಿಯನ್ನು ಬಿಚ್ಚುವುದು ನಾವಿಕರಿಗೆ ಸುಲಭವಿರುವಹಾಗೆ ನೆನಪುಗಳನ್ನು ಬಿಚ್ಚಿಕೊಳ್ಳುವುದು ವ್ಯಕ್ತಿ ಮನಸಿಗೆ ಸುಲಭವಲ್ಲ. ಮನಸಿನ ತುಂಬ ಬಿಗಿಯಾಗಿ ಕಟ್ಟಿಟ್ಟ ನೆನಪುಗಳೇ. ಧೈರ್ಯಮಾಡಿ ಕಟ್ಟುಗಳನ್ನೆಲ್ಲ ಬಿಚ್ಚಿದರೆ ಹಾಯಿ, ಹಾಯಿಸುವ ಹಾಯಿ, ಹಾಯ್ ಅನ್ನಿಸುವ ನಿರಾಳ. ಹಾಗೆ ಇನ್ನಷ್ಟು ಆಳದ ತಾವಿಗೆ ಹೋಗಿ ಮುತ್ತಿನ ತವರ್ಮನೆಯನ್ನು ಮುಟ್ಟಲು ಸಾಗರ ತಳಕ್ಕೆ ಮುಳುಗಿ ನೋಡಬೇಕು.
6
ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!
ವ್ಯಕ್ತಿಯಾಗಿ ನನ್ನ ಬಾಳು ಎಷ್ಟೇ ಸಮೃದ್ಧವೆಂದುಕೊಂಡರೂ, ನೆನಪುಗಳು ಎಷ್ಟೇ ಶ್ರೀಮಂತವೆಂದುಕೊಂಡರೂ, ಮನುಷ್ಯರಾಗಿ ನಾವು ಕಾಲನ ಕಾಲ ಗೆಜ್ಜೆಯ ಯಃಕಶ್ಚಿತ್ ಮಣಿಗಳು. ಕಾಲ ನಡೆಸಿರುವುದು ಬರಿಯ ಲಾಸ್ಯ ಭರಿತ ನರ್ತನವಲ್ಲ ತಾಂಡವ. ಅದೋ ಝಂಝಾವಾತದ ಆರ್ಭಟ. ಈ ಕಾಲ ತಾಂಡವದ ಆರ್ಭಟದಲ್ಲಿ ಗೆಜ್ಜೆಯ ಸದ್ದು ಕೇಳಿತು ಹೇಗೆ? ಅದಕ್ಕೇ ಅದು ಹುಲು ಗೆಜ್ಜೆ. (ಕೊಂಚ ತಪ್ಪಾಗಿ ಓದಿಕೊಂಡರೂ ಝಂಝಾವಾತಕ್ಕೆ ಸಿಕ್ಕಿ ಹಾರಿ ಹೋಗುವ ಹುಲ್ಲು ಗೆಜ್ಜೆ ಆದರೂ ಆದೀತು!) ಆದರೂ ಕಾಲಪುರುಷನಿಗೆ ಕುಣಿಯಲು ಗೆಜ್ಜೆ ಬೇಕು. ವ್ಯಕ್ತಿ ಇಲ್ಲದೆ ಕಾಲಕ್ಕೆಲ್ಲಿ ಅಸ್ತಿತ್ವ? ವ್ಯಕ್ತಿಯ, ಸಮೂಹದ ನೆನಪುಗಳಿಲ್ಲದೆ ಕಾಲ ಎಂಬುದಕ್ಕೇನು ಅರ್ಥ? ಹೇಗೊ ಒಂದಾದೆವು. ಅಂಟಿನ ನಂಟು. ನೀನು ಕಾಮಾಕ್ಷಿ. ಕಾಮನೆ ಹುಟ್ಟಿಸುವಂಥ ಕಣ್ಣವಳು. ಕಾಮನೆಯ ನೋಟ ಕೊಟ್ಟವಳು. ಕಾಮಾಕ್ಷಿ ದೇವಿ. ಒಟ್ಟಿಗೆ ಒಂದಷ್ಟು ದೂರ ಸಾಗಿ, ಸಾಗುವಾಗ ಆಗಿದ್ದೆಲ್ಲ ಹೇಳಿಕೊಂಡರೂ ಹಾಗೆ ಹೇಳಿಕೊಂಡಷ್ಟಕ್ಕೇ ಈ ನಂಟು ಮುಗಿಯದು. ಕಡಲ ಆಳಕ್ಕೆ ಧುಮುಕಿ ಮುತ್ತು ಅಕಸ್ಮಾತ್ ಸಿಕ್ಕರೂ ಮತ್ತೆ ನೆಲ ಮುಟ್ಟಿ ದಿನ ದಿನದ ಬದುಕು ಸಾಗಿಸಬೇಕಲ್ಲ. ಅಂಟಿದ ನಂಟು ಹೇಗೆ ಕೊನೆಗಂಡೀತೋ ಬಲ್ಲವರು ಯಾರು? ನಾನಗೂ ತಿಳಿಯದು, ನಿನಗೂ ತಿಳಿಯದು. ಕಾಲ ಎಂಬಾತನಿದ್ದರೆ ಅವನಿಗೆ ತಿಳಿದಿರಬಹುದೊ? ಗೆಜ್ಜೆ ಬಿಚ್ಚಿ ಎಸೆದಾನೋ ಎಂದು?
ಮುಂದುವರೆಯುತ್ತದೆ…