ಬಂಗಾಳಿ ಸಾಹಿತ್ಯದ ಪ್ರಭಾವ ಭಾರತದ ಎಲ್ಲ ಸಾಹಿತ್ಯಗಳ ಮೇಲೂ ಆಗಿದೆ ಎಂದರೆ ತಪ್ಪಾಗಲಾರದು. ಐರೋಪ್ಯ ಭಾಷಾ ಸಾಹಿತ್ಯಗಳಿಂದ ಅತ್ಯಂತ ಬೇಗ ಪ್ರಭಾವಗೊಂಡ ಭಾರತೀಯ ಸಾಹಿತ್ಯಗಳಲ್ಲಿ ಬಂಗಾಳಿ ಸಾಹಿತ್ಯವೇ ಮೊತ್ತ ಮೊದಲನೆಯದು. ಕಳೆದ ಒಂದು ಶತಮಾನದಲ್ಲಿ ಭಾರತೀಯ ಪ್ರತಿಭಾಲಕ್ಷ್ಮಿ ವಂಗ ದೇಶದಲ್ಲಿ ಅಭಿವ್ಯಕ್ತಿಯಾದಂತೆ ಬಹುರೂಪಿಣಿಯಾಗಿ ಮತ್ತಾವ ದೇಶಭಾಷಾ ಸೀಮೆಯಲ್ಲೂ ಆಗಿರುವಂತೆ ತೋರುವುದಿಲ್ಲ ಎಂಬುದು ಕುವೆಂಪು ಅವರ ಅಭಿಪ್ರಾಯ. ಎಲಿಯಂ ಕೇರಿ ಬಂಗಾಳಿ ವ್ಯಾಕರಣವನ್ನೂ ಬಂಗಾಳಿ – ಇಂಗ್ಲಿಷ್ ನಿಘಂಟನ್ನೂ ಹೊರತಂದ ಮೇಲೆ ಇತರ ಭಾಷಾ ಸಾಹಿತ್ಯಗಳ ಮೇಲೆ ಬಂಗಾಳಿ ಪ್ರಭಾವ ದಟ್ಟವಾಯಿತು. ದೇಜಗೌರವರ ಮಾತಿನಲ್ಲಿ ಹೇಳುವುದಾದರೆ, “ಗತ ಶತಮಾನದ ನಡುವೆಯ ಹೊತ್ತಿಗೆ ಕನ್ನಡ ಸಾಹಿತ್ಯ ವಾಹಿನಿ ಮಡುಗಟ್ಟಿ ನಿಂತಿತ್ತು. ಸ್ವತಂತ್ರ ಕಾವ್ಯಗಳ ಕಾಲ ಗತಿಸಿ ಹಲವಾರು ವರ್ಷಗಳಾಗಿದ್ದವು. ದಿನಕರನ ಮುಳುಗಿನೊಡನೆ ಕತ್ತಲೆಯಲ್ಲಿ ಮುಳುಗಿಹೋದ ಪಕ್ಷಿ ಸಂಕುಲ ಮುಂಬೆಳಗಿನಲ್ಲಿ ರವಗೈವಂತೆ ಸಾಹಿತ್ಯಪಿಕವೂ ಸುಸಮಯವನ್ನು ನಿರೀಕ್ಷಿಸುತ್ತಿತ್ತು. ವಂಗಸಾಹಿತ್ಯದ ಚೆಲುವಾದ ಹೆಬ್ಬಾಗಿಲಿನ ಮೂಲಕ ಅಂಗ್ಲ ಸಾಹಿತ್ಯ ಸೂರ್ಯನ ದರ್ಶನವಾದ ಕೂಡಲೇ ಕನ್ನಡ ಕೋಗಿಲೆಗಳ ಮಧುರವಾದ ಆರಂಭವಾಯಿತು” . ಭಾರತದಲ್ಲಿ ರಾಷ್ಟ್ರೀಯ ಹಾಗೂ ಅಧ್ಯಾತ್ಮಿಕ ಮನೋಭಾವ ಬೆಳೆಯಲು ಸೆಲೆಗಟ್ಟನ್ನು ಒದಗಿಸಿದ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಂಕಿಮಚಂದ್ರ ಚಟರ್ಜಿ, ರವೀಂದ್ರನಾಥ ಠಾಕೂರ್ ಮೊದಲಾದವರ ಪ್ರಭಾವ, ಯಾವ ಪ್ರಾದೇಶಿಕ ಸಾಹಿತ್ಯವನ್ನು ಆವರಿಸದೆ ಬಿಡಲಿಲ್ಲ. ‘ವಂದೇ ಮಾತರಂ ‘ಮತ್ತು ‘ಜನಗಣಮನ’ ಗೀತೆಗಳು ರಾಷ್ಟ್ರಧರ್ಮದ ಉಜ್ವಲ ಜ್ಯೋತಿಯನ್ನು ಬೆಳಸಿದ್ದನ್ನು ಯಾರು ತಾನೆ ಮರೆಯಲು ಸಾಧ್ಯ
ಕನ್ನಡಿಗರ ಹಿರಿಮೆ ವಾಸ್ತವವಾಗಿ ರಾಷ್ಟ್ರವ್ಯಾಪ್ತಿಯಾಗಿದ್ದು ಕದಂಬರ ಕಾಲದಲ್ಲಿ, ಕದಂಬರ ಕಾಲದಲ್ಲೇ ಕರ್ಣಾಟಕ ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಮನ್ನಣೆ ಗಳಿಸಿಕೊಂಡಿತು. ತಾಳಗುಂದ ಶಾಸನದಲ್ಲಿ ಬರುವ ಪಠ್ಯವೊಂದರಿಂದ ಕದಂಬ ಕಾಕುತ್ಸವರ್ಮ ಗುಪ್ತ ಸಾಮ್ರಾಜ್ಯದ ಅರಸರೊಡನೆ ವೈವಾಹಿಕ ಸಂಬಂಧವನ್ನು ಬೆಳೆಸಿದುದು ವಿಧಿತವಾಗುತ್ತದೆ. ಅನಂತರ ಬಾದಾಮಿಯ ಚಾಲುಕ್ಯವಂಶದ ಇಮ್ಮಡಿಪುಲಿಕೇಶಿ, ಲಾಟ (ದಕ್ಷಿಣ ಗುಜರಾತ್), ಗುರ್ಜರ (ಗುಜರಾತ್), ಮಾಳವ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡು ಚಕ್ರಾಧಿಪತಿ ಹರ್ಷವರ್ಧನನನ್ನು ಸೋಲಿಸಿದನೆಂದು ರವಿಕೀರ್ತಿಯ ಐಹೊಳೆ ಶಾಸನದಿಂದ ತಿಳಿದುಬರುತ್ತದೆ. ಬಂಗಾಳದೊಡನೆ ಕರ್ಕಾಟಕದ ಪ್ರತ್ಯಕ್ಷ ಸಂಬಂಧ ರಾಷ್ಟ್ರಕೂಟರ ಕಾಲದಲ್ಲಿ ಇನ್ನೂ ವಿಶೇಷವಾಗಿ ಪ್ರತಿಷ್ಠಿತಗೊಂಡಿತು. ಈ ವಂಶದ ನಾಲ್ಕನೆಯ ಅರಸ ಧಾರಾವರ್ಷಧ್ರುವ ಉತ್ತರಭಾರತದಲ್ಲಿ ಎಡೆಬಿಡದೆ ಜೈತಯಾತ್ರೆ ಕೈಗೊಂಡನು. ಧ್ರುವರಾಜ ವಂಗಭೂಪತಿಯಾಗಿದ್ದ ಧರ್ಮಪಾಲನನ್ನು ಸೋಲಿಸಿ ಸದೆಬಡಿದ ಬಗ್ಗೆ ದಾಖಲೆಗಳಿವೆ.
ರಾಷ್ಟ್ರಕೂಟದ ತರುವಾಯ ಕರ್ನಾಟಕದಲ್ಲಿ ಆಳಿದ ಕಲ್ಯಾಣ ಚಾಳುಕ್ಯರು ಸಹ ಉತ್ತರ ಭಾರತದೊಡನೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರು, ಮೊದಲನೇ ಸೋಮೇಶ್ವರ, ಎರಡನೇ ಸೋಮೇಶ್ವರ, ಆರನೇ ವಿಕ್ರಮಾಂಕ ಮುಂತಾದ ಅರಸರು ಉತ್ತರಕ್ಕೆ ಜೈತಯಾತ್ರೆ ಮಾಡಿ ಬಂಗಾಳ, ಬಿಹಾರ, ನೇಪಾಳ, ಆಸ್ಸಾರಿ ಮೊದಲಾದ ಪ್ರದೇಶಗಳ ಮೇಲೆ ಕರ್ಣಾಟಕದ ಪ್ರಭಾವ ಮುದ್ರೆಯನ್ನು ಒತ್ತಿದರು. ಅಲ್ಲದೆ ಕರ್ನಾಟಕದ ರಾಷ್ಟ್ರಕೂಟರಾಜರ ಹಾಗೂ ಬಂಗಾಳದ ಪಾಲರಾಜರ ತರುವಾಯ ಬ೦ಗಾಳದಲ್ಲಿ ಸಿಂಹಾಸನವೇರಿದ ಸೇನರಿಗೂ ಕರ್ನಾಟಕದ ಚಾಲುಕ್ಯರಿಗೂ ಇದೇ ವಿಧವಾದ ನಂಟು ಬೆಳೆದು ಬಂಗಾಳ ಕರ್ಣಾಟಕಗಳ ನಡುವೆ ಬೆಸುಗೆ ಬಲಗೊಂಡಿತು. ಹಾಗೆಯೆ ಬಂಗಾಳದಲ್ಲಿ ರಾಜ್ಯವಾಳಿದ ಎರಡು ಅರಸು ಮನೆತನಗಳು-ನೇಪಾಳ ಮತ್ತು ವಿಥಿಲೆಗಳಲ್ಲಿ ಆಳಿದ ನಾನ್ಯದೇವನ ವಂಶ ಹಾಗೂ ಬಂಗಾಳದಲ್ಲಿ ರಾಜ್ಯವಾಳಿದ ಹೆಸರಾಂತ ಸೇನವಂಶ-ತಮ್ಮನ್ನು ಕರ್ಣಾಟಕ ಕುಲದವರೆಂದು ಹೆಮ್ಮೆಯಿಂದ ಹೇಳಿಕೊಂಡಿವೆ. ನಾನ್ಯದೇವನಿಗೆ ಕರ್ನಾಟಕ ಸಂಗೀತದ ಬಗ್ಗೆ ಅಪಾರ ಒಲವಿತ್ತು. ಸೇನರಾಜರು ಒಂದುವರೆ ಶತಮಾನಗಳ ಕಾಲ ಬಂಗಾಳದಲ್ಲಿ ರಾಜ್ಯವಾಳಿದರು.
13ನೇ ಶತಮಾನದ ಸುಮಾರಿನಲ್ಲಿ ಭಾರತದ ರಾಜಕೀಯ ಸ್ಥಿತಿಗತಿಗಳು ಆಲ್ಲೋಲಕಲ್ಲೋಲವಾಗಿದ್ದು ಜನತೆ ಒಂದು ಬಗೆಯ ಧಾರ್ಮಿಕ ಶರಣಾಗತಿಯನ್ನು ಬಯಸುವ ಹಂತಕ್ಕೆ ಬಂದಿತ್ತು. ಆ ಸಮಯದಲ್ಲಿ ದೈತಮತ ಸಂಸ್ಥಾಪಕರಾದ ಮಧ್ವಾಚಾರ್ಯರು ಉತ್ತರ ಭಾರತಾದ್ಯಂತ ಎರಡು ಬಾರಿ ಜ್ಞಾನಯಾತ್ರೆಯನ್ನು ಕೈಗೊಂಡಿದ್ದರು. ಅವರಿಗೆ ಬಂಗಾಳದಲ್ಲಿಯೂ ಒಳ್ಳೆಯ ಸತ್ಕಾರ ದೊರೆತಿತ್ತು, ಬಂಗಾಳ ಬಿಹಾರಗಳಲ್ಲಿ ಪ್ರಚಲಿತವಾಗಿದ್ದ ಚೈತನ್ಯ ಪಂಥದ ಮೇಲೆ ಮಧ್ವಾಚಾರ್ಯರ ಸಿದ್ಧಾಂತದ ಪ್ರಭಾವ ಅಪಾರವಾಗಿ ಇದೆಯೆನ್ನಲಾಗಿದೆ. ಚೈತನ್ಯರಿಗೆ ದೀಕ್ಷೆ ನೀಡಿದ ಯತಿವರ್ಯರು ಮಾಧ್ವ ಸಂಪ್ರದಾಯದವರು. ಸುಮಾರು ೧೫ನೇ ಶತಮಾನದ ವೇಳೆಗೆ ಮಧ್ಯಾಚಾರ್ಯರಿಂದ ಪುರಸ್ಕೃತವಾಗಿದ್ದ ವೈಷ್ಣವ ಭಕ್ತಿ ಹಾಗೂ ಭಾಗವತಧರ್ಮ ಬಂಗಾಳವೂ ಸೇರಿದಂತೆ ಇಡೀ ಉತ್ತರಭಾರತದಲ್ಲೆಲ್ಲ ಜನಪ್ರಿಯವಾಯಿತು. ಕೃಷ್ಣ ಚೈತನ್ಯರ ಮತವನ್ನು ಬಂಗಾಳ, ಬಿಹಾರ ಮುಂತಾದ ಗಡಿಗಳಲ್ಲಿ ಹರಡಿದ ಆರು ಜನ ಗೋಸ್ವಾಮಿಗಳ ಪೈಕಿ ಮೂವರು ಕರ್ನಾಟಕ ಕುಲಕ್ಕೆ ಸೇರಿದವರು. ಗಂಗೆ, ಯಮುನ, ಬ್ರಹ್ಮಪತ್ರ ಮುಂತಾದ ನದಿಗಳು ಉತ್ತರದಿಂದ ದಕ್ಷಿಣಕ್ಕೆ ಹರಿದು ಬರುವಂತೆ ಭಾರತೀಯ ಪ್ರಪಂಚದಲ್ಲಿ ಭಕ್ತಿಯ ಗಂಗೆ, ಅನುಭವದ ಯಮುನೆ, ಸಿದ್ಧಾಂತದ ಸರಸ್ವತಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವುದು ಸೋಜಿಗದ ಸಂಗತಿಯೆಂಬುದು ವಿದ್ವಾಂಸರೊಬ್ಬರ ಅಭಿಪ್ರಾಯ.
“ಭಾರತೀಯ ಕಾವ್ಯ ಆರಳಿ ಘಮಘಮಿಸುವ ಹೂವಾಗಿದ್ದು, ಅತ್ಯುನ್ನತಿಯ ಶಿಬಿರವನ್ನು ಸ್ಪರ್ಶಿಸಿದ್ದು ಮೂರು ಸಲ, ಮೊತ್ತ ಮೊದಲು ಆದಿಕವಿ ವಾಲ್ಮೀಕಿಯ ತಪೋ ಸನ್ನಿಧಿಯಲ್ಲಿ, ಎರಡನೆಯದಾಗಿ ಕವಿಕುಲ ಗುರು-ಕಾಳಿದಾಸನ ಕಲಾಜಾಲದಲ್ಲಿ ಆಮೇಲೆ ಈಚೆಗೆ ಗುರುದೇವ ರವೀಂದ್ರನಾಥ ಠಾಕೂರರ ಕಾವ್ಯ ಸಿದ್ದಿಯಲ್ಲಿ, ರವೀಂದ್ರನಾಥರು ಸರೋವರ ರೂಪದಲ್ಲಿ ಬಂಗಾಳಿ ಸಾಹಿತ್ಯಕ್ಕೆ ಆಳವನ್ನೂ ವಿಸ್ತಾರವನ್ನೂ ದೊರಕಿಸಿಕೊಟ್ಟರು.”
ಕನ್ನಡ-ಬಂಗಾಳಿ ನಂಟು ಹಾಗೆಯ ಕ್ರಮವಾಗಿ ಬೆಳೆಯುತ್ತ ಬಂತು, ವಿಶ್ವಕವಿ ರವೀಂದ್ರರು ತಮ್ಮ ಬಾಲ್ಯದ ಕೆಲವು ದಿನಗಳನ್ನು ಕನ್ನಡ ನೆಲದ ಕಾರವಾರದಲ್ಲಿ ಕಳೆದಿದ್ದುಂಟು, ಸಾಶನ ಧರ್ಮವನ್ನು ವಿಶ್ವವ್ಯಾಪ್ತಿಗೊಳಿಸುವಂತೆ ಧರ್ಮ ಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರನ್ನು ಅಮೆರಿಕೆಗೆ ಕಳಿಸಿದವರು ಮೈಸೂರಿನ ದೊರೆ ಚಾಮರಾಜ ಒಡೆಯರ್ ಅವರು. ಬಂಗಾಳದ ಡಾ. ಬ್ರಜೇಂದ್ರನಾಥ ಸೀಲ್, ಸರ್ ಆಲ್ವಿಯನ್ ಬ್ಯಾನರ್ಜಿ, ನ್ಯಾಯಮೂರ್ತಿ ದಾಸಗುಪ್ತ ಮೊದಲಾದವರು ಕನ್ನಡ ಜನತೆಯ ಸೇವೆ ಸಲ್ಲಿಸಿ ಎರಡೂ ನಾಡುಗಳ ನಡುವೆ ಬಾಂಧವ್ಯಕ್ಕೆ ಸ್ನೇಹ ಸೇತುಗಳಾಗಿದ್ದಾರೆ. ಇಷ್ಟಲ್ಲದೆ. ಮೂವತೈದನೇ ಬಂಗಾಳಿ ಸಾಹಿತ್ಯ ಸಮ್ಮೇಳನ 1959ರ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದುದು ಈ ಮಧುರ ಬಾಂಧವ್ಯಕ್ಕೆ ಇನ್ನೊಂದು ಗುರುತಾಗಿದೆ.