ಮಧ್ಯಪ್ರದೇಶ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯ ಮೇಲೆ ವಿಕೃತನೊಬ್ಬ ಮೂತ್ರ ವಿಸರ್ಜನೆ ಮಾಡಿ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಅಮಾನವೀಯ ಘಟನೆ ನಡೆದಿತ್ತು. ಈ ಪ್ರಕರಣ ಸಂತ್ರಸ್ತನ ಕಾಲುಗಳನ್ನು ತೊಳೆಯುವ ಮೂಲಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿಶಿಷ್ಟ ನಡೆ ಅನುಸರಿಸಿದ್ದಾರೆ.
ಬಿಜೆಪಿ ಶಾಸಕನ ಬೆಂಬಲಿಗ ಪ್ರವೇಶ್ ಶುಕ್ಲಾ ಎಂಬುವವನು ಮದ್ಯದ ನಶೆಯಲ್ಲಿ ಆದಿವಾಸಿ ವ್ಯಕ್ತಿ ದಶ್ಮತ್ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ವೈರಲ್ ಆಗಿ ದೇಶದೆಲ್ಲೆಡೆ ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು.
ತಲೆಮರೆಸಿಕೊಂಡು ಓಡಾಡುತ್ತಿದ್ದ ಶುಕ್ಲಾನನ್ನು ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದರು. ಶುಕ್ಲಾ ವಿರುದ್ಧ ಐಪಿಸಿ ಸೆಕ್ಷನ್ 294, 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲು ಮಾಡಲಾಗಿದೆ.
ಆದಿವಾಸಿ ವ್ಯಕ್ತಿಯನ್ನು ತಮ್ಮ ನಿವಾಸಕ್ಕೆ ಕರೆದಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕುರ್ಚಿಯ ಮೇಲೆ ಕೂರಿಸಿ ಅವರ ಪಾದಗಳನ್ನು ತೊಳೆದಿದ್ದಾರೆ. ಬಿಳಿ ಬಟ್ಟೆಯನ್ನು ಸುತ್ತಿ ಅವರಿಗೆ ಮಾಲಾರ್ಪಣೆ ಮಾಡಿದ್ದಾರೆ. ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ ಸಿಎಂ, ಅದಕ್ಕಾಗಿ ರಾವತ್ ಕ್ಷಮೆಯಾಚಿಸಿದ್ದಾರೆ. ಬಳಿಕ ಸ್ಮಾರ್ಟ್ ಸಿಟಿ ಪಾರ್ಕ್ಗೆ ರಾವತ್ನನ್ನು ಕರೆದುಕೊಂಡು ಹೋದ ಚೌಹಾಣ್, ಆತನೊಂದಿಗೆ ಗಿಡ ನೆಟ್ಟಿದ್ದಾರೆ.
ಕಾರ್ಮಿಕನನ್ನು ಭೇಟಿಯಾಗುವುದಕ್ಕೂ ಮುನ್ನ ಬುಧವಾರ ಮಾತನಾಡಿದ್ದ ಚೌಹಾಣ್, ವಿಡಿಯೋ ವೀಕ್ಷಿಸಿದ ಬಳಿಕ ತಮ್ಮ ಮನಸ್ಸಿಗೆ ಬಹಳ ಆಘಾತವಾಗಿದ್ದು, ನೋವಾಗಿದೆ. ಸಂತ್ರಸ್ತ ಹಾಗೂ ಆತನ ಕುಟುಂಬವನ್ನು ಭೋಪಾಲ್ನಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದರು.
ಹಳೆಯ ವಿಡಿಯೋ ಎಂದ ಕುಟುಂಬದವರು:
ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾ ಅವರ ಮನೆಯನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕೆಡವಲಾಗಿದೆ. ಒಂದು ಜೆಸಿಬಿ ಯಂತ್ರ, ಹಲವಾರು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಪ್ರವೇಶ್ ಶುಕ್ಲಾನ ನಿವಾಸಕ್ಕೆ ತೆರಳಿ, ಅಕ್ರಮ ಒತ್ತುವರಿ ಸ್ಥಳದಲ್ಲಿ ಕಟ್ಟಲಾಗಿದ್ದ ಕಟ್ಟಡದ ಭಾಗಗಳನ್ನು ಉರುಳಿಸಿದ್ದಾರೆ.
ಅಧಿಕಾರಿಗಳು ಬುಲ್ಡೋಜರ್ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರೋಪಿಯನ್ನು ವೈರಲ್ ಆಗಿರುವ ವೀಡಿಯೊ ಹಳೆಯದು ಎಂದು ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಕಾರಣದಿಂದ ಇದನ್ನು ಬಿಡುಗಡೆ ಮಾಡಲಾಗಿದೆ ಎಂದು ಶುಕ್ಲಾನ ಕುಟುಂಬದವರು ಆರೋಪಿಸಿದ್ದಾರೆ. “ನನ್ನ ಮಗ ಈ ರೀತಿ ಮಾಡಿರಲು ಸಾಧ್ಯವೇ ಇಲ್ಲ. ಇದು ಆತನನ್ನು ಸಿಲುಕಿಸಲು ಮಾಡಿರುವ ಸಂಚು. ವಿಡಿಯೋ ನೋಡಿದ ಬಳಿಕ ನಮಗೂ ಬಹಳ ದುಃಖವಾಗಿದೆ” ಎಂದು ಆತನ ತಂದೆ ಹೇಳಿದ್ದಾರೆ. . ಶುಕ್ಲಾನ ಅಕ್ರಮ ಕಟ್ಟಡವನ್ನು ತೆರವುಗೊಳಿಸುವ ವೇಳೆ ಆಘಾತಗೊಂಡ ಆತನ ತಾಯಿ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು.