ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ. ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸ್ಥಳೀಯ ಸ್ವರೂಪವನ್ನು ಮೀರಿ ನಿಂತಿದ್ದು, ರಾಷ್ಟ್ರೀಯ ಭದ್ರತೆಯ ಆಯಾಮಗಳಲ್ಲಿ ಇದನ್ನು ನೋಡುವುದು ಇಂದಿನ ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾಗಿದೆ. ಅಕ್ರಮ ವಲಸೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಸೇರಿದಂತೆ ಸಮಗ್ರ ರಾಷ್ಟ್ರೀಯ ಭದ್ರತಾ ದೃಷ್ಟಿಕೋನಗಳಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕಿದೆ.
ಮಣಿಪುರದಲ್ಲಿನ ಘರ್ಷಣೆಗಳು ಕೇವಲ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಯ ಮಾತ್ರವಲ್ಲದೇ, ಮ್ಯಾನ್ಮಾರ್ ಹಾಗೂ ವಿಶೇಷವಾಗಿ ಚೀನಾದ ವಲಸಿಗರ ಒಳಹರಿವು ಪ್ರದೇಶದ ಜನಸಂಖ್ಯಾ ಸಂಯೋಜನೆಯ ಮೇಲೆ ಪರಿಣಾಮ ಬೀರಿದೆ. ಕಾನೂನುಬಾಹಿರ ವಲಸಿಗರನ್ನು ಗುರುತಿಸುವಲ್ಲಿ ಮತ್ತು ಗಡೀಪಾರು ಮಾಡುವಲ್ಲಿ ರಾಜ್ಯ ಸರ್ಕಾರವು ಹಲವಾರು ಅಡೆತಡೆಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ ಅಕ್ರಮ ವಲಸಿಗರು ಹೆಚ್ಚಾಗಿ ಕುಕಿ ಸಮುದಾಯಗಳ ಜೊತೆ ವಾಸಿಸುತ್ತಿದ್ದಾರೆ. ಈ ಸಮಸ್ಯೆಯು ಮಣಿಪುರ-ಮ್ಯಾನ್ಮಾರ್ ಗಡಿಯ ಭದ್ರತೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯ ಗಡಿ ನಿಯಂತ್ರಣ ಕ್ರಮಗಳ ಕೈಗೊಳ್ಳುವ ಅನಿವಾರ್ಯತೆಯನ್ನು ತಿಳಿಸುತ್ತದೆ.
ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷ ಅಕ್ರಮ ಮಾದಕವಸ್ತುಗಳ ವ್ಯಾಪಾರದೊಂದಿಗೆ ಸಂಬಂಧ ಹೊಂದಿದ್ದು, ಮಾದಕ ವಸ್ತು ಜಾಲವು ದಂಗೆಕೋರ ಗುಂಪುಗಳಿಗೆ ಹಣದ ಪ್ರಮುಖ ಮೂಲವೂ ಕೂಡಾ ಆಗಿದೆ. ಚೀನೀ ಕ್ರಿಮಿನಲ್ ಉದ್ಯಮಿಗಳಿಗೆ ಈ ಹಿಂಸಾಚಾರವು ಮಾದಕವಸ್ತು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಹಾದಿಯನ್ನು ಸುಗಮಗೊಳಿಸಿದೆ. ಮಣಿಪುರದಲ್ಲಿ ನಡೆಯುತ್ತಿರುವ ದಂಗೆಯ ಮೂಲ ಕಾರಣವಾಗಿರುವ ಮಾದಕವಸ್ತು ಕಳ್ಳಸಾಗಣೆಯನ್ನು ನಿಯಂತ್ರಿಸುವುದು ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹಿಂಸಾಚಾರದಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಮ್ಯಾನ್ಮಾರ್ ಮೂಲಕ ಕಳ್ಳಸಾಗಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಬಂಡುಕೋರ ಗುಂಪುಗಳ ಶಸ್ತ್ರಾಸ್ತ್ರ ಸಂಗ್ರಹಣೆಯು ಮಣಿಪುರದಲ್ಲಿ ಭದ್ರತೆ ವಿಚಾರವಾಗಿ ಎದುರಿಸಬೇಕಾಗಿರುವ ಅಪಾಯವನ್ನು ಅಂದಾಜಿಸುವುದು ಸವಾಲಾಗಿದೆ. ಮಾದಕವಸ್ತು, ಹಣ, ಶಸ್ತ್ರಾಸ್ತ್ರ ಕಳ್ಳಸಾಗಣೆಯು ರಾಜ್ಯವು ಎದುರಿಸುತ್ತಿರುವ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಈ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಧಿಕಾರಿಗಳು ಗಡಿ ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕಾದ ಮತ್ತು ಗುಪ್ತಚರ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಬೇಕಾದ ಅಗತ್ಯವಿದೆ.
ಮಣಿಪುರ ಬಿಕ್ಕಟ್ಟು ದೇಶದ ಭದ್ರಯ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಯೋಚಿಸುವ ಅಗತ್ಯವಿದೆ. ಮಣಿಪುರ ಸೇರಿದಂತೆ ಈಶಾನ್ಯದಲ್ಲಿ ದಂಗೆಕೋರ ಸಂಘಟನೆಗಳಿಗೆ ಚೀನಾದ ಬೆಂಬಲ ಮತ್ತು ಅರಕನ್ ನ್ಯಾಷನಲ್ ಆರ್ಮಿ ಮತ್ತು ಯುನೈಟೆಡ್ ವಾ ಸ್ಟೇಟ್ ಆರ್ಮಿಯಂತಹ ಸಂಘಟನೆಗಳನ್ನು ಸಜ್ಜುಗೊಳಿಸುತ್ತಿರುವುದು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ದೊಡ್ಡ ಮಟ್ಟದ ಸಮಸ್ಯೆಯನ್ನು ತರುವ ಮುನ್ಸೂಚನೆಯಾಗಿದೆ. ಸುಮಾರು 1700 ಕಿಮೀ ವ್ಯಾಪಿಸಿರುವ ಇಂಡೋ-ಮ್ಯಾನ್ಮಾರ್ ಗಡಿಯು, ಗಡಿಯಾಚೆಗಿನ ಭದ್ರತಾ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಮ್ಯಾನ್ಮಾರ್ ನಲ್ಲಿ ತನ್ನ ಗುಪ್ತಚರ ಬಲವನ್ನು ಹೆಚ್ಚುಮಾಡಬೇಕಿದೆ.
ಮಣಿಪುರದಲ್ಲಿ ಭದ್ರತಾ ಸವಾಲುಗಳನ್ನು ಎದುರಿಸಲು ಅಕ್ರಮ ವಲಸೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಬಗ್ಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ, ಗಡಿ ನಿರ್ವಹಣೆ, ಗುಪ್ತಚರ ಸಹಕಾರ ಮತ್ತು ಬಂಡಾಯ ನಿಗ್ರಹ ಕ್ರಮಗಳ ಮೇಲೆ ಕೇಂದ್ರೀಕರಿಸುವುದರ ಮೂಲಕ ಮಣಿಪುರದ ಸುರಕ್ಷಿತ ಮತ್ತು ಶಾಂತಿಯುತ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಾಗಿದೆ.