ದಾಸಶ್ರೇಷ್ಠ , ದಾಸ ಹಾಗೂ ವ್ಯಾಸ ಸಾಹಿತ್ಯಗಳನ್ನು ಅಭ್ಯಸಿಸಿ ಎರಡರಲ್ಲೂ ಭಗವಂತನ ಗುಣಗಳನ್ನು ಕೊಂಡಾಡಿ ಅವನ ಪ್ರೀತಿಗೆ ಪಾತ್ರರಾದ ಶ್ರೀ ಜಗನ್ನಾಥದಾಸರ ಜೀವನ ಚರಿತ್ರೆಯನ್ನು ಆಧರಿಸಿ ಮಾತಾಂಬುಜಾ ಮೂವಿಸ್ರವರ ಡಾ. ಮಧುಸೂಧನ ಹವಾಲ್ದಾರ ರವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಜಗನ್ನಾಥದಾಸ ಚಲನಚಿತ್ರ ಅತ್ಯಂತ ಮನೋಹರವಾಗಿ ಮೂಡಿ ಬಂದಿದೆ.
ದಾಸರ ಜೀವನದ ಏರುಪೇರುಗಳು ಇದರಲ್ಲಿ ಕಾಣಸಿಗುತ್ತದೆ. ಚಿನ್ನವನ್ನು ಬೆಂಕಿಗೆ ಹಿಡಿದಷ್ಟು ಅದು ಶುದ್ಧವಾಗುವಂತೆ, ದೇವರು ದಾಸರನ್ನು ಹಲವಾರು ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದನ್ನು ಇದರಲ್ಲಿ ಕಾಣಬಹುದಾಗಿದೆ. ಮುಖ್ಯಪಾತ್ರದಲ್ಲಿ ಕಂಡುಬರುವ ಜಗನ್ನಾಥದಾಸ ಪಾತ್ರಧಾರಿ ಶ್ರೀನಾಥ ಜೋಶಿ ಹಾಗೂ ಗೋಪಾಲದಾಸರ ಪಾತ್ರಧಾರಿ ಪ್ರಭಂಜನ ದೇಶಪಾಂಡೆಯವರ ನಟನೆಯು ದಾಸರ ವ್ಯಕ್ತಿತ್ವಕ್ಕೆ ಸಂಪೂರ್ಣ ನ್ಯಾಯವನ್ನು ಒದಗಿಸಿದೆ ಎಂದರೆ ತಪ್ಪಾಗಲಾರದು. ವಿಜಯದಾಸರ ಪಾತ್ರಧಾರಿಗಳಾದ ಶ್ರೀತಿವಿಕ್ರಮ ಜೋಶಿಯವರು ತಮ್ಮ ಪಾತ್ರದ ಗಾಂಭಿರ್ಯಕ್ಕೆ ಪರಿಪೂರ್ಣತೆಯನ್ನು ಒದಗಿಸಿದ್ದಾರೆ.
ಹುಟ್ಟಿನಿಂದ ಶ್ರೀನಿವಾಸನ ಕೃಪೆಗೆ ಪಾತ್ರರಾಗಿ ಮಂತ್ರಾಲಯದಲ್ಲಿ ಸುಧಾದಿ ಗ್ರಂಥಗಳನ್ನು ಅಭ್ಯಾಸ ಮಾಡಿ ಶ್ರೀನಿವಾಸಾಚಾರ್ಯರು ಮಾನ್ವಿಯಲ್ಲಿ ದೇಸಾಯಿಯವರ ಮನೆಯಲ್ಲಿರುವ ಪ್ರೇತ ಬಾಧೆಯನ್ನು ಕಳೆದು ಅಲ್ಲೇ ವಿದ್ಯಾಪೀಠವನ್ನು ಪ್ರಾರಂಭಿಸುತ್ತಾರೆ.
ಎಲ್ಲವೂ ಉತ್ತಮ ರೀತಿಯಲ್ಲಿ ನಡೆಯುತ್ತಿರುವಾಗ ವಿಜಯದಾಸರು ಹಾಗೂ ಗೋಪಾಲದಾಸರು ಮಾನ್ವಿ ಕ್ಷೇತ್ರಕ್ಕೆ ಬಂದಾಗ ಶ್ರೀನಿವಾಸಾಚಾರ್ಯರು ದಾಸರಿಗೆ ಅಗೌರವವನ್ನು ತೊರಿಸುತ್ತಾರೆ. ಶ್ರೀನಿವಾಸಾಚಾರ್ಯರ ಉದರಬಾಧೆ ಮತ್ತು ಅದನ್ನು ನಿವಾರಿಸಿ ಕೊಳ್ಳಲು ಅವರು ಪಟ್ಟ ಶ್ರಮ ಎಂಥವರ ಮನಸ್ಸನ್ನು ಕರಗಿಸುತ್ತದೆ. ಭಕ್ತ ಜನ ಮುಂದೆ, ನೀ ಅವರ ಹಿಂದೆ ಎಂಬಂತೆ ಶ್ರೀಹರಿ ತನ್ನಷ್ಟೇ ಭಕ್ತರು ಸಹ ಕರುಣಾಮಯಿಗಳು ಎಂಬುದನ್ನು ತೊರಿಸುವಂತೆ; ಕಡೆಗೆ ಗೋಪಾಲದಾಸರೇ ಶ್ರೀನಿವಾಸಾಚಾರ್ಯರ ಉದರ ಬೇನೆಯನ್ನು ಪರಿಹರಿಸುತ್ತಾರೆ. “ಧನ್ವಂತ್ರಿ ದಯಮಾಡೋ ಸಣ್ಣವ ನೀವ ಕೇವಲ” ಎಂಬ ಹಾಡು ಅತ್ಯಂತ ಸುಂದರವಾಗಿ ಮೂಡಿಬಂದಿದೆ.
ತಿರುಪತಿಯ ಬ್ರಹ್ಮೋತ್ಸವದಲ್ಲಿ ಶ್ರೀನಿವಾಸಾಚಾರ್ಯರ ಮೇಲೆ ಆ ಸಪ್ತಗಿರಿವಾಸ ತೋರಿಸಿದ ಕರುಣೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಶ್ರೀನಿವಾಸನೇ ತನ್ನ ಭಕ್ತನ ಕನಸಿನಲ್ಲಿ ಬಂದು ದಾಸನಾಗು ಎನ್ನುತ್ತಾನೆ. ಅಂತೆಯೇ ಶ್ರೀನಿವಾಸಾಚಾರ್ಯರು ಗೋಪಾಲದಾಸರ ಆದೇಶದಂತೆ ಪಾಂಡುರಂಗನ ದರುಶನಕ್ಕೆ ಪಂಢರಪುರಕ್ಕೆ ಪಯಣವನ್ನು ಬೆಳೆಸಿದಾಗ ದಾರಿಯಲ್ಲಿ ವೀರಭದ್ರನ ಮನಃ ಪರಿವರ್ತನೆಯನ್ನು ಮಾಡಿ ಪಂಢರಪುರವನ್ನು ತಲುಪುತ್ತಾರೆ. ಚಂದ್ರಭಾಗದಲ್ಲಿ ಸ್ನಾನ ಮಾಡುವಾಗ ಜಗನ್ನಾಥದಾಸ ಎಂಬ ಅಂಕಿತವನ್ನು ಪಡೆಯುತ್ತಾರೆ. ಈ ಸನ್ನಿವೇಶದಲ್ಲಿ ಪಾತ್ರಧಾರಿಯ ನಟನೆ ಅತ್ಯಂತ ಮನೋಜ್ಞವಾಗಿದೆ.
ಒಟ್ಟಾರೆಯಾಗಿ ಹೇಳುವುದಾರೆ, ಹಿಂದೆಂದೂ ಕಂಡರಿಯದಂತೆ ಈ ಚಿತ್ರವು ಮೂಡಿ ಬಂದಿದ್ದು; ದಾಸರ ಪದಗಳನ್ನು ಚಿತ್ರದಲ್ಲಿ ಬಳಿಸಿಕೊಂಡಿದ್ದರೂ ಅವುಗಳ ಭಾವಕ್ಕೆ, ರಾಗಕ್ಕೆ ಚೂರು ಧಕ್ಕೆ ತಂದಿಲ್ಲ. ಹೊಸ ಸಂಯೋಜನೆಯಲ್ಲಿ ಹಾಡುಗಳನ್ನು ಕೇಳಿ ನೋಡುಗ ತಾನು ಹಾಡಲೂ ಪ್ರಾರಂಭಿಸುತ್ತಾನೆ.
ಸಂಸ್ಕೃತ ಭಾಷೆಯ ಪಾರಮ್ಯ ಮತ್ತು ಕನ್ನಡ ಭಾಷೆಯ ಹಿರಿಮೆ ಎರಡೂ ಈ ಚಿತ್ರದಲ್ಲಿ ಕಾಣುತ್ತದೆ. ಅಲ್ಲಲ್ಲಿ ವಸ್ತ್ರಾಲಂಕಾರ ಹಾಗೂ ಪಾತ್ರಗಳ ಅಲಂಕಾರದಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳ ಅವಶ್ಯಕತೆಯಿದ್ದರೂ ಅವನ್ನೆಲ್ಲವನ್ನು ಬದಿಗಿಟ್ಟು ಚಿತ್ರವು ಅತ್ಯಂತ ಸುಂದರವಾಗಿ ಮೂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದು ಕೇವಲ ಭಾಗ – ೧ ಮಾತ್ರವಾಗಿದ್ದು, ಎರಡನೇ ಭಾಗಕ್ಕೆ ವೀಕ್ಷಕನನ್ನು ಕಾಯುವಂತೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಆದಷ್ಟು ಬೇಗ ತಮ್ಮ ಸಮೀಪದ ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ನೋಡಿ. ಮತ್ತು ಇಂತಹ ಚಿತ್ರಗಳಿಗೆ ತಮ್ಮ ಪ್ರೋತ್ಸಾಹವನ್ನು ನೀಡಿ.