6-10-2015 ಮಂಗಳವಾರದ ಪತ್ರ ಮುಂದುವರಿದಿದೆ…
ಅಮ್ಮುಣ್ಣಕ್ಕಾ…
ಗಂಗೆಯನ್ನು ವೀಕ್ಷಿಸುತ್ತಾ ಕುಳಿತಾಗ..ಮಧ್ಯಾಹ್ನ ಬೋಟಲ್ಲಿ ಬರುವಾಗ ಸೂರ್ಯ ನೂರಾರು.. ಸಾವಿರಾರು..ಅಗಣಿತ ಸೂರ್ಯಬಿಂಬಗಳಾಗಿ ಹೊಳೆಯುತ್ತಿದ್ದವ ಈಗ ಸಂಜೆಯಾಗುತ್ತಿದ್ದಂತೆ ಪ್ರಕಾಶ ಕಡಿಮೆಯಾಗಿ ಅಗಣಿತ ಇದ್ದವನು ಒಬ್ಬನೇ ಆಗಿ ಕೆಂಬಣ್ಣದ ಶಾಂತಸ್ವರೂಪ ಸೂರ್ಯನಾಗಿ ಕಾಣತೊಡಗಿದ. ನನಗೆ ಅವನನ್ನು ನೋಡುವಾಗ ಯಾಕೋ ಎಲ್ಲರೂ ,ಎಲ್ಲವೂ ಇದ್ದು ಏನೂ ಇಲ್ಲದಂತೆ ಅನಾಥ ಭಾವದಿಂದ ತೊಳಲಾಡುವ ಕರ್ಣನ ಮತ್ತು ಭೀಷ್ಮಜ್ಜನ ನೆನಪು ಎಂದೂ ಇಲ್ಲದಂತೆ ಕಾಡಿತು ಕಣೇ ಪುಟ್ಟ.. ಎಲ್ಲರೂ ಇದ್ದು ಯಾರೂ ಇಲ್ಲದವರಂತೆ ಇವರು..😌
ಹುಟ್ಟಿದಂದಿನಿಂದಲೇ ಗಂಗೆಯ ಮಡಿಲಿಗೆ ಬಿದ್ದವರು..😔 ನನಗರಿವಿಲ್ಲದೇ ಕಣ್ಣಲ್ಲಿ ನೀರು ಬಂತು..ಲಕ್ಷ್ಮಿ , ಅವರತ್ತೆ,ಅವರ ಅತ್ತಿಗೆ ಎಲ್ಲರೂ ಯಾಕೆ ಕಣ್ಣಲ್ಲಿ ನೀರು…!
ಹಸಿವಾಗುತ್ತಾ,ತಲೆ ನೋಯುತ್ತಾ,ಕಾಲು ನೋವಾ ಎಂದು ವಿಧವಿಧ ಪ್ರಶ್ನೆಗಳನ್ನು ಕೇಳುವಾಗ ಮತ್ತೆ ವಾಸ್ತವಕ್ಕೆ ಮರಳಿ..ಏನಿಲ್ಲ..ಒಂದೇ ಕಡೆ ದಿಟ್ಟಿಸಿ ನೋಡಿದ್ದಕ್ಕೆ ಕಣ್ಣಲ್ಲಿ ನೀರು ಬಂದಿರಬೇಕು ಅಂದು.. ನಗುವಂತೆ ಹಲ್ಲು ತೋರಿಸಿದೆ..
ಇಷ್ಟೆಲ್ಲಾ ಆಗುವಾಗ ಆರು ಗಂಟೆ ಆಯ್ತು.ಶ್ರಾದ್ಧ ಮಾಡಲಿಕ್ಕೆ ಹೋದವರೂ ಗಂಗೆಯಲ್ಲಿ ಪಿಂಡ ವಿಸರ್ಜನೆ ಮಾಡಲು ಕಾರ್ಯ ಮುಗಿಸಿ ಬಂದರು. ವಿಸರ್ಜನೆ ಮಾಡಿ ಗಂಗೆಯಲ್ಲಿ ಮುಳುಗು ಹಾಕಿ ಬಂದರು. ಎಲ್ಲರಿಗೂ ತಮ್ಮನ್ನು ಕರೆದುಕೊಂಡು ಹೋಗದ ಸಿಟ್ಟು,ಹೊಟ್ಟೆ ಹಸಿವೂ ಎರಡೂ ಸೇರಿತ್ತು. ಆದರೆ ಏನಾದರೂ ಹೇಳುವಾ.. ಎಂದರೆ ಪಾಪ..ಅವರಿಗೂ ಹಸಿವಾಗಿತ್ತು. ಅವರೆಲ್ಲರಿಗೂ ಇಷ್ಟು ಹೊತ್ತು ಆಗುವುದಾದರೆ…ನಮ್ಮನ್ನೂ ಕರೆದೊಯ್ಯಬಹುದಿತ್ತು ಎಂದೆನಿಸಿತಂತೆ..ಅಲ್ಲಿ ಬೇರೆಬೇರೆ ಗುಂಪಿನವರು ಬಂದಿದ್ದರಿಂದ ಇಷ್ಟು ತಡವಾಗಿತ್ತಂತೆ..ಹೋಗಲಿ ಬಿಡಿ ಈಗ ಅದನ್ನೆಲ್ಲಾ ಯೋಚಿಸಿ ಫಲವಿಲ್ಲವಲ್ಲಾ ಅಂದು ಕೊಂಡು ಕಾಶೀಮಠದಲ್ಲಿ ಅಚ್ಚುಕಟ್ಟಾಗಿ ಮಧ್ಯಾಹ್ನದ ಊಟವನ್ನು ಸಂಜೆ ಆರು ಗಂಟೆಗೆ ಮಾಡಿದೆವು. ಅದೂ ಮನೆ ಊಟದಂತೆ ಇದ್ದು..ಬೇಸರ ಸಿಟ್ಟು ಎಲ್ಲಾ ಮಾಯವಾಯಿತು. ಕಾಶಿ ಮಠ ತುಂಬಾ ದೊಡ್ಡದಾಗಿ..ವಿಶಾಲವಾಗಿದ್ದು ಇದನ್ನು ಸುತ್ತಾಡಲು ಸಾಕಷ್ಟು ಸಮಯವಿಲ್ಲದೆ..ಅಲ್ಲಲ್ಲಿ ಸ್ವಲ್ಪ ನೋಡಿದೆವು. ಅಲ್ಲಿ ಮಠದ ಮೇಲುಸ್ತುವಾರಿ ನೋಡಿ,ಪೂಜೆಯನ್ನೂ ಮಾಡಿ,ಬರುವ ಅತಿಥಿಗಳ ಬೇಕಾದ ವ್ಯವಸ್ಥೆಯನ್ನು ನೋಡಿಕೊಳ್ಳಲಿರುವವರು ಇಲ್ಲಿ ಕಾಶೀಮಠ ಸ್ಥಾಪನೆಯಾದ ಬಗ್ಗೆ ವಿವರಣೆ ನೀಡಿದರು. ಅದನ್ನೇ ನಿನಗೂ ಹೇಳ್ತೇನೆ…ಕಂದಾ.ಕೇಳಿಸ್ಕೋ..(ಓದ್ಕೋ..😍)..
ಈಗ ಕಾಶೀಮಠ ಇರುವ ಕಡೆ (ಸ್ಥಳದಲ್ಲಿ) ಶ್ರೀ ಶ್ರೀ ಶ್ರೀ ಉಪೇಂದ್ರತೀರ್ಥರು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರಂತೆ. ಒಂದು ದಿನ ಕಾಶೀರಾಜನ ಮಗಳು ಎಂದಿನಂತೆ ಗಂಗಾ ಸ್ನಾನಕ್ಕೆ ಬರುತ್ತಾಳೆ. ಸ್ನಾನ ಮಾಡಿಯಾದ ನಂತರ ಮೇಲೆ ಬಂದು ನೋಡುತ್ತಾಳೆ. ದಡದ ಮೇಲಿಟ್ಟ ಅವಳ ಆಭರಣಗಳಲ್ಲಿ ಬೆಲೆಬಾಳುವ ಕೈ ಕಡಗ ಕಾಣುತ್ತಿಲ್ಲ. ಎಲ್ಲಾ ಕಡೆ ಹುಡುಕುತ್ತಾರೆ. ಬಳೆಯ ಸುಳಿವಲ್ಲ.ಆ ಪ್ರದೇಶದಲ್ಲಿ ಈ ಧ್ಯಾನಸ್ಥ ಸನ್ಯಾಸಿ ಬಿಟ್ಟರೆ ಅನ್ಯರಿಲ್ಲ. ಸರಿ ಇವನೇ ಕಳ್ಳ ಸನ್ಯಾಸಿ ತನ್ನ ಬಳೆಯನ್ನು ಕದ್ದಿರಬೇಕು…ಎನ್ನುವ ಸಂಶಯ ಸಹಜವಾಗಿ ಬರುತ್ತದೆ.. ರಾಜನ ವರೆಗೂ ವಿಷಯ ತಲುಪಿ ಸ್ವತಃ ರಾಜನೇ ಅಲ್ಲಿಗೆ ಬರುತ್ತಾನೆ. ವಿಚಾರಣೆಯಾಗುತ್ತದೆ. ಸನ್ಯಾಸಿ ಎಷ್ಟು ಮಾತ್ರಕ್ಕೂ ಒಪ್ಪುವುದಿಲ್ಲ… ತನ್ನ ವಾದ ರಾಜನ ಮುಂದೆ ಮಂಡಿಸುತ್ತಾನೆ. ರಾಜನೂ ಇವನನ್ನು ನಂಬುವುದಿಲ್ಲ… ಕೊನೆಗೆ ಸನ್ಯಾಸಿ “ಗಂಗೆಗೆ ಆ ಬಳೆ ತುಂಬಾ ಇಷ್ಟವಾಗಿದೆ.ಅದಕ್ಕೆ ಅವಳೇ ತೆಗೆದಿಟ್ಟುಕೊಂಡಿದ್ದಾಳೆ. ಬೇಕಾದರೆ ನೋಡಿ..” ಎನ್ನಲು ಎಲ್ಲರೂ ಗಂಗೆಯತ್ತ ತಿರುಗಿದರೆ ಆಶ್ಚರ್ಯದಿಂದ ಎಲ್ಲರೂ ಸ್ತಬ್ಧರಾಗುತ್ತಾರೆ.
ಆ ಭಾರವಾದ ದಪ್ಪ ಬಳೆ ಗಂಗೆಯಲ್ಲಿ ತೇಲುತ್ತಾ ಇದೆಯಂತೆ. ರಾಜನಿಗೆ ಅದನ್ನು ಕಂಡು ಪಶ್ಚಾತ್ತಾಪವಾಗುತ್ತದೆ. ಕ್ಷಮೆ ಕೇಳುವುದಷ್ಟೇ ಅಲ್ಲ..ಸನ್ಯಾಸಿಗೆ ಏನು ಬೇಕಾದರೂ ಕೊಡುಗೆಯಾಗಿ ಕೊಡುವೆನೆಂದು ಹೇಳುತ್ತಾನೆ. ಸರ್ವಸಂಗ ಪರಿತ್ಯಾಗಿಗೆ ಯಾವ ಅಪೇಕ್ಷೆ ಇರಬಹುದು. ಸನ್ಯಾಸಿ “ಏನೂ ಬೇಡ” ಎಂದರೂ ರಾಜ ತನ್ನ ತಪ್ಪಿಗೆ ತಪ್ಪು ಕಾಣಿಕೆಯಾಗಿ ಏನನ್ನಾದರೂ ಕೊಡದಿದ್ದರೆ ಸಮಾಧಾನವಾಗುವುದಿಲ್ಲವೆಂದು..ಯೋಚಿಸಿದ ಮತ್ತು ತನ್ನ ಸಮಾಧಾನಕ್ಕಾಗಿ ಈ ದೊಡ್ಡ ಅರಮನೆಯಂತಹ ಕಟ್ಟಡವನ್ನು ಕಟ್ಟಿ ಕೊಟ್ಟು ಬಿಟ್ಟ. ಇದೇ ಮೊದಲ ಕಾಶೀ ಮಠ. ಈಗ ಭಾರತದಾದ್ಯಂತ ಎಲ್ಲೆಡೆಯೂ ಕಾಶೀ ಮಠದ ಶಾಖೆಗಳಿವೆ. ಗೌಡಸಾರಸ್ವತ ಬ್ರಾಹ್ಮಣರು ಕಾಶಿಗೆ ಬಂದಾಗ ಇಲ್ಲಿಯೇ ಉಳಿದುಕೊಳುತ್ತಾರೆ. ಅದ್ಭುತವಾದ ವ್ಯವಸ್ಥೆ ಇದೆ.
ನಾವು ಪೂರ್ತಿ ಮಠವನ್ನು ನೋಡಲು ಆಸೆ ಪಟ್ಟರೆ ಗಂಗಾ ಆರತಿಯನ್ನು ನೋಡುವ ಭಾಗ್ಯದಿಂದ ವಂಚಿತರಾಗಬೇಕಾಗಬಹುದು.. ಎಂದು ಬೇಗಬೇಗ ಮೆಟ್ಟಲುಗಳನ್ನು ಇಳಿದು ಬೋಟ್ ಹತ್ತಿರ ಬಂದೆವು. ಎಷ್ಟು ಬೇಗ ಬೇಗ ಎಂದರೂ ಎಂದಿನಂತೆ ನಾನೇ ಎಲ್ಲರಿಗಿಂತಲೂ ಹಿಂದಿದ್ದೆ.
ಮೆಟ್ಟಲುಗಳನ್ನು ಇಳಿಯುವಾಗ ನನಗೆ ಅನಿಸಿತು. ಇಲ್ಲಿಯ ಜನರಿಗೆ ಪ್ರತಿದಿನ ಗಂಗೆಯ ದಡದಲ್ಲಿರುವ ಈ ಮೆಟ್ಟಲುಗಳನ್ನು ಇಳಿದು ಹತ್ತಿ ..ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಅಭ್ಯಾಸವಾಗಿತ್ತು. ಎಲ್ಲರ ಮನೆಮಠ,ಕೊಟ್ಟಿಗೆ,ಅಂಗಡಿ ಮುಂಗಟ್ಟುಗಳೆಲ್ಲಾ ಗಂಗೆಯ ನೆರೆಗೆ ತುತ್ತಾಗದಷ್ಟು ಎತ್ತರದ ಭಾಗದಲ್ಲಿ ಕಟ್ಟಿದ್ದರು. ಆದರೆ ಗಂಗೆಯನ್ನೇ ಎಲ್ಲರೂ ಅವಲಂಬಿಸಿದ್ದರು. ಬಟ್ಟೆ,ಸ್ನಾನ,ದನ ಎಮ್ಮೆಕರುಗಳನ್ನು ತೊಳೆಯಲು,ಪಾತ್ರೆಗಳನ್ನು ಕೂಡಾ ಕೆಳಗೆ ತಂದು ತೊಳೆದುಕೊಂಡು ಹೋಗುತ್ತಿದ್ದರು. ಹೋಗುವಾಗ ಸೊಂಟದಲ್ಲಿ ಪಾತ್ರೆ ಅಥವಾ ತೊಳೆದ ಬಟ್ಟೆಯ ಗಂಟು..ತಲೆಯ ಮೇಲೆ ನೀರು ತುಂಬಿದ ದೊಡ್ಡ ದೊಡ್ಡ ಕೊಡಪಾನ…ಹೊತ್ತುಕೊಂಡು ಹೋಗುತ್ತಿದ್ದರು.
ಏಳು ಗಂಟೆಗೆ ಗಂಗಾ ಆರತಿ ಪ್ರಾರಂಭವಾಗುತ್ತಿತ್ತು.ಅಷ್ಟರಲ್ಲಿ ನಾವು ಗಂಗಾ ಆರತಿ ನಡೆಯುವ ದಶಾಶ್ವಮೇಧ ಘಾಟ್ ಗೆ ತಲುಪಬೇಕಿತ್ತು.
ಹೋಗೋಣ್ವಾ…ಚಿನ್ನಕ್ಕಾ..ಗಂಗಾ ಆರತಿಗೆ…😍
ವೀಣಾ ಶ್ಯಾನಭೋಗ್**
6-10-2015/ಮಂಗಳವಾರ
ವಾರಣಾಸಿ
ಮತ್ತೆ ಮುಂದುವರಿಯುವುದೀ ಪತ್ರ…👍✋😍