ವಸೂಲಾಗದೆ ಇರುವ ಸಾಲಗಳನ್ನು ಗರಿಷ್ಠ ಪ್ರಮಾಣದಲ್ಲಿ ವಸೂಲು ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಉದ್ದೇಶಪೂರ್ವಕ ಸುಸ್ತಿದಾರರು ಬಾಕಿ ಇರಿಸಕೊಂಡಿರುವ ಮೊತ್ತವನ್ನು ಬ್ಯಾಂಕ್ ಗಳು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಆರ್ ಬಿಐ ಅವಕಾಶ ಕಲ್ಪಿಸಿದೆ.
ಆರ್ ಬಿಐ ನಿಯಂತ್ರಣದಲ್ಲಿರುವ ಎಲ್ಲಾ ಬ್ಯಾಂಕಿಂಗ್ ಸಂಸ್ಥೆಗಳು ಮಾತುಕತೆ, ಹೊಂದಾಣಿಕೆ ಮೂಲಕ ಸಾಲದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಆರ್ ಬಿಐ ಸೂಚನೆ ನೀಡಿದೆ.
ಇನ್ನು ಈ ರಾಜೀ ಸಂಧಾನಕ್ಕೆ ಅನುವು ಮಾಡಿಕೊಟ್ಟಿರುವ ಆರ್ ಬಿಐ ಸೂಚನೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಈ ಹಿಂದೆ ಕೇಂದ್ರ ಸರ್ಕಾರದ ಒತ್ತಡವಿದೆಯಾ ಎಂದು ಸ್ಪಷ್ಟಪಡಿಸುವಂತೆ ಆರ್ ಬಿಐಗೆ ಒತ್ತಾಯಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ಅವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಏಕೆ ಬದಲಾಯಿಸಲಾಗಿದೆ.
ದೊಡ್ಡ ಉದ್ಯಮ ಸಮೂಹಗಳನ್ನು ಸ್ನೇಹಿತರು ಪ್ರಧಾನಿ ನರೇಂದ್ರ ಮೋದಿಗೆ ಹತ್ತಿರವಾಗಿದ್ದು, ಅವರಿಗೆ ಅನುಕೂಲ ಕಲ್ಪಿಸಲು ನಿಯಮಗಳನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದರು.
ಈವರೆಗಿನ ವರದಿ ಪ್ರಕಾರ 2022ರ ಡಿಸೆಂಬರ್ ವರೆಗೆ ಸಾಲದ ಮೊತ್ತವನ್ನು ಮರುಪಾವತಿ ಮಾಡಲು ಸಾಮರ್ಥ್ಯವಿದ್ದರೂ ಪಾವತಿ ಮಾಡದೆ ಇರುವ 16,044 ಸಾಲಗಾರರು ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದು, ಇವರುಗಳ ಒಟ್ಟು ಮೊತ್ತ 3,46,479 ಕೋಟಿ ರೂ. ಸಾಲ ಇದೆ ಎಂದು ಬ್ಯಾಂಕ್ ಗಳು ವರದಿ ತಿಳಿಸಿದೆ.
ಕ್ರೆಡಿಟ್ ಮಾಹಿತಿ ಕಂಪನಿಯಾದ ಟ್ರಾನ್ಸ್ ಯೂನಿಯನ್ ಸಿಬಿಲ್ ಸಂಗ್ರಹಿಸಿದ ಮಾಹಿತಿ ಪ್ರಕಾರ, ಉದ್ದೇಶಪೂರ್ವಕ ಸುಸ್ತಿದಾರರು ಕಳೆದ ಎರಡು ವರ್ಷಗಳಲ್ಲಿ ಅಂದರೆ 2020ರ ಡಿಸೆಂಬರ್ ನಿಂದ 2022ರ ಡಿಸೆಂಬರ್ ನವರೆಗೆ ಶೇ.41ರಷ್ಟು ಅಂದರೆ 2,45,767 ಕೋಟಿ ರೂ. ಎಂದು ತಿಳಿಸಿದೆ. ಸುಮಾರು 16,000ಕ್ಕೂ ಹೆಚ್ಚು ಸುಸ್ತಿದಾರರು ರಾಜೀ ಮಾಡಿಕೊಳ್ಳಲು ಅರ್ಹರಿಲ್ಲ ಎಂದಿದೆ.
ಡಿಸೆಂಬರ್ 2021ರ ವೇಳೆಗೆ 14,202 ಉದ್ದೇಶಪೂರ್ವಕ ಸುಸ್ತಿದಾರರ ಖಾತೆಗಳ ಮೂಲಕ 2,85,474 ಕೋಟಿ ರೂ. ಗಳು ಸಾಲ ಬಾಕಿ ಇದೆ. ಎಸ್ ಬಿಐ ಬ್ಯಾಂಕ್ ನಲ್ಲಿ ಡಿ.2022ರ ವೇಳೆಗೆ 1,881 ಖಾತೆದಾರರಿಂದ 79,227 ಕೋಟಿ ರೂ. ಬಾಕಿ ಇದೆ. ಪಂಜಾಬ್ ನ್ಯಾಷನ್ ಬ್ಯಾಂಕ್ನಲ್ಲಿ 2143 ಖಾತೆಗಳಿಂದ 38,333 ಕೋಟಿ ರೂ., ಯೂನಿಯನ್ ಬ್ಯಾಂಕ್ ನಲ್ಲಿ 1747 ಖಾತೆಯಿಂದ 35,561 ಕೋಟಿ ರೂ. ಇದೆ. ಐಡಿಬಿಐ ಬ್ಯಾಂಕ್ ನಲ್ಲಿ 335 ಖಾತೆಯಿಂದ 23,601 ಕೋಟಿ ರೂ. ಬ್ಯಾಂಕ್ ಆಫ್ ಬರೋಡದ 2203 ಖಾತೆಯಿಂದ 23,879 ಕೋಟಿ ರೂ. ಬಾಕಿ ಇದೆ ಎಂದು ವರದಿ ತಿಳಿಸಿದೆ.
ಒಟ್ಟು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಶೇ. 85ರಷ್ಟು ಪಾಲು ಅಂದರೆ 2,92,865 ಕೋಟಿ ರೂ. ಗಳ ಸಾಲ ಬಾಕಿ ಇದೆ.
ಪ್ರೈವೇಟ್ ಬ್ಯಾಂಕ್ ಗಳ ಪೈಕಿ ಆಕ್ಸಿಸ್ ಬ್ಯಾಂಕ್ 607 ಖಾತೆಗಳಿಂದ 2005.9 ಕೋಟಿ ರೂ., ಐಸಿಐಸಿಐ ಬ್ಯಾಂಕ್ 59 ಖಾತೆಗಳಿಂದ 2136.5 ಕೋಟಿ ರೂ. ಮೊತ್ತ ಬಾಕಿ ಇದೆ ಎಂದು ವರದಿ ತಿಳಿಸಿದೆ.