ಚುನಾವಣೆ ಪೂರ್ವ ಕಾಂಗ್ರೆಸ್ ಗ್ಯಾರಂಟಿ ಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜೂನ್ 18 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 15 ರಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ತಮ್ಮ ಹೆಸರು ನೋಂದಾಯಿಸಬಹುದು. ಈ ತಂತ್ರಾಂಶವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಗಳ ಮೂಲಕ ಕೂಡ ಬಳಸಬಹುದಾಗಿದೆ.
ಫಲಾನುಭವಿಗಳ ಆಧಾರ್ ಕಾರ್ಡ್, ಗ್ರಾಹಕರ ಐಡಿಗಳ ಮಾಹಿತಿಯನ್ನು ನೋಂದಣಿ ಸಮಯದಲ್ಲಿ ನೀಡಬೇಕು. ಬೆಂಗಳೂರು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಚೇರಿಗಳಲ್ಲಿಯೂ ನೋಂದಾಯಿಸಬಹುದು.
ಗೃಹಜ್ಯೋತಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ಗಳ ವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿತ್ತಾರೆ.
ಈ ಯೋಜನೆಯು 2023ರ ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಅರ್ಹ ಫಲಾನುಭವಿಗಳು ಆಗಸ್ಟ್ 1ರಿಂದ ಶೂನ್ಯ ಬಿಲ್ಲು ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗೆ ವಿದ್ಯುತ್ ಶಕ್ತಿ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ: 1912 ಅನ್ನು ಸಂಪರ್ಕಿಸಬಹುದು ಎಂದು ಇಂಧನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬಾಡಿಗೆದಾರರು ಹಾಗೂ ಇತರೆ ಗ್ರಾಹಕರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟ್ಲ್ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ತಿಳಿಸಿದೆ.
ಗೃಹಜ್ಯೋತಿ ಯೋಜನೆಯ ಪ್ರಮುಖ ಷರತ್ತುಗಳು:
* ಪ್ರತಿ ತಿಂಗಳೂ ಮೀಟರ್ ರೀಡಿಂಗ್ ನಡೆಯುತ್ತೆ. ನಿಗದಿತ ಉಚಿತ ವಿದ್ಯುತ್ಗಿಂತ ಹೆಚ್ಚು ಬಳಸಿದ್ದರೆ ಹೆಚ್ಚುವರಿ ಮೊತ್ತಕ್ಕೆ ಬಿಲ್ ನೀಡಲಾಗುತ್ತದೆ. ಉಚಿತ ವಿದ್ಯುತ್ ಪ್ರಮಾಣಕ್ಕಿಂತ ಕಡಿಮೆ ಬಳಸಿದ್ದರೆ ಬಿಲ್ ಇಲ್ಲ.
*ಗೃಹಲಕ್ಷ್ಮೀ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವದಿಲ್ಲ.
*ಮನೆಯ ವಿದ್ಯುತ್ ಸಂಪರ್ಕದ ಗ್ರಾಹಕ ಗುರುತಿನ ಸಂಖ್ಯೆ (ಕಸ್ಟಮರ್ ಐಡಿ) ಮತ್ತು ಖಾತೆಯ ಗುರುತಿನ ಸಂಖ್ಯೆ (ಅಕೌಂಟ್ ಐಡಿ) ಆಧಾರ್ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.
*ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯುತ್ ಸಂಪರ್ಕ ಇದ್ದರೆ ಒಂದಕ್ಕೆ ಮಾತ್ರ ಉಚಿತ ಯೋಜನೆ ಅನ್ವಯ.
*ಅರ್ಹ ಮೊತ್ತಕ್ಕಿಂತ ಕಡಿಮೆ ಪ್ರಮಾಣದ ವಿದ್ಯುತ್ ಬಳಕೆಯಾಗಿದ್ದರೆ ಗ್ರಾಹಕರಿಗೆ ಶೂನ್ಯ ಮೊತ್ತಕ್ಕೆ ಬಿಲ್ ನೀಡಲಾಗುವುದು.
*ಗೃಹಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮೀಟರ್ ಅಳವಡಿಕೆ ಮತ್ತು ಮೀಟರ್ ಓದುವುದು ಕಡ್ಡಾಯವಾಗಿದೆ.