ಬಾಗಲಕೋಟೆ: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ನಾಣ್ನುಡಿಯಂತೆ ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಇದೀಗ ಮತದಾರರಿಗೆ ಭಾರಿ ಡಿಮ್ಯಾಂಡ್ ಬಂದಿದೆ. ನಮ್ಮ ಕಡೆ ಬನ್ನೀ ಬನ್ನೀ ಎಂದು ಎಲ್ಲ ಪಕ್ಷಗಳು ರತ್ನ ಕಂಬಳಿ ಹಾಸುತ್ತಿವೆ.
ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುವುದು ಸಾಮಾನ್ಯ. ಇದೀಗ ಹೊಸ ವರಸೆ ಆರಂಭಿಸಿವೆ. ಶಾಲೆಗೋಗು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನು ಪಕ್ಷಕ್ಕೆ ಕರೆತಂದು ಹೂವಿನ ಹಾರಹಾಕುತ್ತಿವೆ. ಇಂಥವರನ್ನು ಒಂದು ಪಕ್ಷದವರು ಭೇಟಿ ಮಾಡಿ ಹೋಗಿದ್ದಾರೆಂದು ಗೊತ್ತಾದರೆ ಸಾಕು ಬೆನ್ನಹಿಂದೆಯೇ ಮತ್ತೊಬ್ಬರು ದೌಡಾಹಿಸಿ ಅವರನ್ನು ತಮ್ಮ ಕಡೆಗೆ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಗಲ್ಲಿಗಲ್ಲಿಯಲ್ಲಿ ನಡೆಯುತ್ತಿದೆ.
ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಭಾರಿ ಬೆಂಬಲವಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ಧೇಶಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾಂತರಿಗಳ ಎದುರು ಮಂಡಿಯೂರುತ್ತಿದ್ದಾರೆ. ನಿತ್ಯ ಹೋದ ಕಡೆಗೆಲ್ಲ ಒಂದಿಷ್ಟು ಹಿರಿ-ಕಿರಿ ಜನರನ್ನು ಪಕ್ಷಕ್ಕೆ ಬರಮಾಡಿಕೊಂಡರೆ ಮಾತ್ರ ಅಭ್ಯರ್ಥಿಗಳಿಗೆ ಸಮಾಧಾನ ಎನ್ನುವಂತಾಗಿದೆ. ಇದನ್ನು ಅರ್ಥೈಸಿಕೊಂಡಿರುವ ಆಯಾ ಪಕ್ಷದ ಮುಖಂಡರು ಅಭ್ಯರ್ಥಿಗಳು ಬರುತ್ತಾರೆ ಎಂದು ತಿಳಿಯುತ್ತಿದ್ದಂತೆ ಒಂದಿಷ್ಟು ಜನರನ್ನು ಸೇರಿಸಿ, ಹಾರ ತಯಾರು ಮಾಡಿಕೊಂಡಿರುತ್ತಾರೆ! ಹೂಂ ಅಂದರೇ ಸಾಕು ಹೂವಿನ ಕೊರಳಿಗೆ ಹಾರ ಬೀಳೋದು ಗ್ಯಾರಂಟಿ.
ವಿದ್ಯಾರ್ಥಿಗಳಿಗೂ ಬೇಡಿಕೆ !
ಪಕ್ಷಾಂತರಿಗಳ ಪರ್ವ ಹೇಗಿದೆ ಎಂದರೆ ಅನೇಕ ಕಡೆ ಇನ್ನು 18 ವಯಸ್ಸು ಆಗದಿದ್ದವರು ಇವತ್ತೊಂದು ಪಕ್ಷ, ನಾಳೆ ಮತ್ತೊಂದು ಪಕ್ಷ ಎಂದು ಎಲ್ಲ ಪಕ್ಷಗಳ ಹಾರವನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಬಂದವರೆಲ್ಲರಿಗೂ ಜೈ ಜೈ ಎನ್ನುತ್ತಾ ಅಭ್ಯರ್ಥಿ ಮನ ತಣಿಸುತ್ತಿದ್ದಾರೆ. ಪರೀಕ್ಷೆ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳ ಕೈಗೊಂಡು ಧ್ವಜ ಕೊಟ್ಟು ಇವರು ನಮ್ಮ ಬೆಂಬಲಿಗರು ಎಂದು ಬೀಗುತ್ತಿದ್ದಾರೆ.
ಪ್ರಾಥಮಿಕ ಸದಸ್ಯತ್ವವೇ ಇರಲ್ಲ
ಜಿಲ್ಲಾದ್ಯಂತ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಪ್ರಮುಖವಾಗಿ ಈ ಪಕ್ಷಾಂತರಿಗಳ ಬೆನ್ನು ಬಿದ್ದಿದ್ದಾರೆ. ಜೆಡಿಎಸ್, ಎಎಪಿ ಕೂಡಾ ಹೊರತಾಗಿಲ್ಲ. ತಮ್ಮ ಪಕ್ಷದ ತತ್ವ ಸಿದ್ದಾಂತ ಹಾಗೂ ಹಿಂದೆಂದು ಕಾಣದಿದ್ದ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಬಿಜೆಪಿಗೆ ಬಂದಿದ್ದಾರೆಂದು ಕಮಲದವರು . ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್ ಬಂದಿದ್ದಾರೆಂದು ಕೈ ಮುಖಂಡರು ಹಾಗೂ ಕುಮಾರಣ್ಣನ ಜನಪರ ಕಾಳಜಿ ಮೆಚ್ಚಿ ಜೆಡಿಎಸ್ಗೆ ಬಂದಿದ್ದಾರೆಂದು ಹೊರೆಹೊತ್ತವರು ಹೇಳೋದೆ ಹೇಳೋದು ಸಾಮಾನ್ಯವಾಗಿ ಬಿಟ್ಟಿದೆ. ವಾಸ್ತವವಾಗಿ ಅತ್ತಿಂದಿತ್ತ, ಇತ್ತಿಂದತ್ತ ಜಿಗಿದಾಡುವ ಪಕ್ಷಾಂತರಿಗಳು ಯಾವೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಹೊಂದಿರಲ್ಲ. ಆದರೂ ಆ ಪಕ್ಷದ ಪ್ರಮುಖ ಈ ಪಕ್ಷ ಪ್ರಮುಖ ಎಂದು ಕೊಚ್ಚಿಕೊಳ್ಳುತ್ತಾರೆ.
ಒಂದೇ ದಿನದಲ್ಲಿ ಅದಲು ಬದಲು
ವಿಚಿತ್ರವೆಂದರೆ ಅನೇಕ ಕಡೆಗೆ ಕೆಲವರು ನಿನ್ನೆ ಒಂದು ಪಕ್ಷಕ್ಕೆ ಸೇರ್ಪಡೆಗೊಂಡಿರುತ್ತಾರೆ. ಇವತ್ತು ಬೇರೊಂದು ಪಕ್ಷದವರು ಊರಿಗೆ ಬರುತ್ತಾರೆ ಎಂದರೆ ಸಾಕು ಇಂದು ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಮತ್ತೆ ನಾಳೆ ಮಗದೊಂದು ಪಕ್ಷಕ್ಕೆ ಜೈಕಾರ ಹಾಕಲು ಸಿದ್ಧರಾಗುತ್ತಾರೆ.
ಬಂದ ಅಭ್ಯರ್ಥಿಗಳಿಗೆಲ್ಲ ತಮ್ಮ ಊರಲ್ಲಿ ಭಾರಿ ಬೆಂಬಲ ಇದೆ ಎನ್ನುವುದನ್ನು ಮೇಲ್ನೋಟಕ್ಕೆ ತೋರಿಸಿದಂತೆ ಮಾಡಿ ಸಿಕ್ಕಷ್ಟು ಸೀರುಂಡೆ ಎಂದು ಬಾಚಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಆ ಪಕ್ಷಕ್ಕೆ ಹೋಗಿದ್ರಲ್ಲಾ ಎಂದು ಕೇಳಿದರೆ, ಇಲ್ಲಾರೀ ಸುಮ್ಮನೆ ಹೋಗಿದ್ವಿ. ಅದು, ಇದು ಕೊಡ್ತೇವಿ ಅಂದಾರ ಅದಕ್ಕೆ ಹೋಗೇವಿ. ಇವರು ಅವರಿಗಿಂತ ಜಾಸ್ತಿ ಕೊಡ್ತೇವಿ ಅಂದ್ರು ಅದಕ್ಕೆ ಇಲ್ಲಿಗೆ ಬಂದೇವಿ ಎಂದು ಯಾವುದೇ ಅಳಕು ಇಲ್ಲವೇ ಹೇಳುತ್ತಾರೆ.
ಒಟ್ಟಾರೆ, ಜಿಲ್ಲಾದ್ಯಂತ ಈ ಪಕ್ಷಾಂತರಿಗಳಿಗೆ ಭಾರಿ ಬೇಡಿಕೆ ಬಂದಿದೆ. ಎಲ್ಲ ಪಕ್ಷಗಳು ಪೈಪೋಟಿಯ ಮೇಲೆ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದುಕೊಳ್ಳುತ್ತಾರೆ. ಬಂದೋರೆಲ್ಲ ಅವರಿಗೆ ವೋಟು ಹಾಕುತ್ತಾರಾ? ಸದ್ಯಕ್ಕೆ ಅಭ್ಯರ್ಥಿಗಳಿಗೂ ಗೊತ್ತಿಲ್ಲ… ಸೇರಿದವರಿಗೂ ಗೊತ್ತಿಲ್ಲ…!