ಈ ದಿನದ ಪ್ರಮುಖ ಸುದ್ದಿಗಳ ಹೂರಣ: ಇಲ್ಲಿದೆ ಕ್ವಿಕ್ ರೌಂಡ್ ಅಪ್
ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಬೇರೆ ರಾಜ್ಯಗಳ ಮೊರೆ ಹೋದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಗ್ಯಾರೆಂಟಿಗಳು ಯಾವಾಗ ಜಾರಿಗೆ ಬರುತ್ತದೆ ಎಂಬುದರ ಬಗ್ಗೆ ಜನರು ಕಾತುರದಿಂದಿದ್ದಾರೆ.
ಅಂತೆಯೇ 5 ಗ್ಯಾರೆಂಟಿಗಳಲ್ಲಿ ಒಂದು ಗ್ಯಾರಂಟಿ ಈಗಾಗಲೇ ಜಾರಿಗೆ ಬಂದಿದ್ದು, ಎರಡನೇ ಯೋಜನೆ ಜಾರಿಗೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದೆ.
ತಿಂಗಳಿಗೆ ಪ್ರತಿ ಮನೆಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಸದ್ಯಕ್ಕೆ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುತ್ತಿದೆ.
ಇದೀಗ ಕರ್ನಾಟಕ ಸರ್ಕಾರ ಇತರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗಿದ್ದು, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಬೇಡಿಕೆ ಇಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಅಕ್ಕಿಯ ದರ, ಟ್ರಾನ್ಸ್ ಪೋರ್ಟೇಷನ್ ಮೊತ್ತ ಮತ್ತು ಅಕ್ಕಿಯ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲಾಗಿದೆ.
ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಇಲ್ಲ, ಹೀಗಾಗಿ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ಇನ್ನು ಛತ್ತೀಸ್ ಗಢ ಸರ್ಕಾರ 1.5 ಲಕ್ಷ ಟನ್ ಅಕ್ಕಿ ಕೊಡಲು ಅಲ್ಲಿನ ಸರ್ಕಾರ ಸಮ್ಮತಿ ನೀಡಿದೆ.
ಬೆಂಗಳೂರಿನ 22 ಬಾಲಕಾರ್ಮಿಕರನ್ನು ಬಚಾವ್ ಮಾಡಿದ ಅಧಿಕಾರಿಗಳು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ಅನೇಕ ಹೋಟೆಲ್ ಗಳಲ್ಲಿ ಬಾಲ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡುತ್ತಿದ್ದಂತೆ ಮಾಲೀಕರಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದ 22 ಬಾಲ ಕಾರ್ಮಿಕರನ್ನು ರಕ್ಷಿಸಿ, ಬಾಲ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಬೆಂಗಳೂರಿನ ಜಿಲ್ಲಾ ಕಾರ್ಮಿಕ ಸಮಿತಿಯ ಅಧಿಕಾರಿ ಆಶಾ ಅವರ ನೇತೃತ್ವದಲ್ಲಿ ಕಳೆದ 15 ದಿನಗಳಿಂದ ಹೋಟೆಲ್ ಗಳ ಮೇಲೆ ದಾಳಿಯನ್ನು ನಡೆಸಲಾಗಿತ್ತು.
ಶ್ರೀಜಗನ್ನಾಥ ರಥಯಾತ್ರೆ ಉತ್ಸವ ದಿನಾಂಕ ನಿಗದಿ: 25 ಲಕ್ಷ ಭಕ್ತರು ಭೇಟಿ ನಿರೀಕ್ಷೆ
ಒಡಿಶಾದ ಪ್ರಸಿದ್ದ ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕಗ್ರಮಗಳು ಜೂನ್ 20 ರಂದು ಆರಂಭವಾಗಲಿದ್ದು, ಈ ಬಾರಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಬಹುದು ಎಂದು ದೇಗುಲ ಆಡಳಿತ ಮಂಡಳಿ ನಿರೀಕ್ಷಿಸಿದೆ.
ದೇಗುಲದ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರಂಜನ್ ಕುಮಾರ್ ದಾಸ್ ಅವರು, ರಥಯಾತ್ರೆ ಉತ್ಸವ ಕಾರ್ಯಕ್ರಮಗಳನ್ನು ಸುಗಮ ಮತ್ತು ಸುವ್ಯವಸ್ಥಿತವಾಗಿ ಆಯೋಜಿಸಲಾಗಿದೆ.
ಜೂನ್ 20 ರಂದು ಪುರಿಯಲ್ಲಿ ಶ್ರೀ ಗುಂಡಿಚಾ ದಿನ ಕಾರ್ಯಕ್ರಮ ನಡೆಯಲಿದೆ. ಅಂದು ಸುಮಾರು 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಅಂದು ಭಕ್ತರು ಕೂಡಾ ರಥ ಎಳೆಯುವ ಕಾರ್ಯಕ್ಕೆ ಕೈಜೋಡಿಸುವರು ಎಂದರು.
ಬೇಸಿಗೆ, ಬಿಸಿಯ ವಾತಾವರಣದ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯುವ ನೀರು ಸೌಲಭ್ಯ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಪೊಲೀಸರ ತಲಾ 30 ಸಿಬ್ಬಂದಿ ಇರುವ 180 ತುಕಡಿಗಳನ್ನು ಭದ್ರತೆ ನಿಯೋಜಿಸಲಾಗುತ್ತದೆ.
ಹವಾಮಾನ ಸಮಾಚಾರ: ಜೂ.21ರ ವರೆಗೆ ರಾಜ್ಯದಲ್ಲಿ ಮಳೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಇಂದಿನಿಂದ ಜೂ.21 ರವರೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಜೂನ್ 18ರ ಬಳಿಕ ಮುಂಗಾರು ಪ್ರಬಲವಾಗಲಿದ್ದು, ಜೂನ್ 21ರ ವರೆಗೆ ಮಳೆಯಾಗಲಿದೆ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಮಳೆಯಾರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಹಾಗೂ ಜೂನ್ 19 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರಿನಲ್ಲಿ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ಮೀನುಗಾರರು ಮೀನುಗಾರಿಕೆಗೆ ಇಳಿಯಬಾರದು. ಪ್ರವಾಸಿಗರು ಸಮುದ್ರ ತೀರಕ್ಕೆ ತೆರಳಬಾರದು ಎಂದು ಸೂಚನೆ ನೀಡಲಾಗಿದೆ.
ಕೆಲವು ಭಾಗದಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಗುಜರಾತ್ ಗೆ ಅಪ್ಪಳಿಸಿ ದುರ್ಬಲಗೊಂಡ ಬಿಪರ್ ಜಾಯ್: ರಾಜಸ್ಥಾನ, ಸೌರಾಷ್ಟ್ರದಲ್ಲಿ ಭಾರೀ ಮಳೆ
ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಬಿಪರ್ ಜಾಯ್ ಚಂಡಮಾರುತದಿಂದಾಗಿ ಸೌರಾಷ್ಟ್ರ, ಕಚ್ ಮತ್ತು ಉತ್ತರ ಗುಜರಾತ್ ನ ಪಕ್ಕದ ಪ್ರದೇಶಗಳು ಪ್ರಸ್ತುತದಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಈ ಸೈಕ್ಲೋನ್ ಚಂಡಮಾರುತವು ಸಂಜೆಯಿಂದ ರಾಜಸ್ಥಾನದ ಪಕ್ಕದ ಭಾಗಗಳತ್ತ ಸಾಗಲಿದೆ.
ಗುರುವಾರ ರಾತ್ರಿ ಗುಜರಾತ್ ಗೆ ಅಪ್ಪಳಿಸಿದ ‘ಅತ್ಯಂತ ತೀವ್ರ’ ಚಂಡಮಾರುತ ಬಿಪರ್ ಜಾಯ್ ಈಗ ‘ಸೈಕ್ಲೋನಿಕ್’ ಚಂಡಮಾರುತವಾಗಿ ದುರ್ಬಲಗೊಂಡಿದೆ. ಇಲ್ಲಿನ ಕರಾವಳಿ ಭಾಗದ ಭುಜ್ನಿಂದ ಪಶ್ಚಿಮ-ವಾಯುವ್ಯಕ್ಕೆ 30 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಐಎಂಡಿ ನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ ವಿವರಿಸಿದ್ದಾರೆ.
ಸದ್ಯ ಕಳೆದ 24 ಗಂಟೆಗಳಲ್ಲಿ ಗುಜರಾತ್ ಕರಾವಳಿ, ಸೌರಾಷ್ಟ್ರದ ಉತ್ತರ ಭಾಗಗಳು, ಕಚ್ ಮತ್ತು ಉತ್ತರ ಗುಜರಾತ್ ನ ಪಕ್ಕದ ಪ್ರದೇಶಗಳು ಪ್ರಸ್ತುತ ಭಾರಿ ಮಳೆ-ಗಾಳಿಯಿಂದ ಸಾಕಷ್ಟು ಹಾನಿ ಉಂಟಾಗಿದೆ. ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಸರ್ಕಾರ ಅಗತ್ಯ ಮುಂಜಾಗೃತೆ ವಹಿಸಿದೆ.
ಗುಜರಾತ್ ಕರಾವಳಿ ಭಾಗದಲ್ಲಿ ಬಿಪರ್ ಜಾಯ್ ಅಬ್ಬರಕ್ಕೆ ಜನಜೀವನ ಅಸ್ತವೆಸ್ತವಾಗಿದೆ. ಇಲ್ಲಿ ಮೊರ್ಬಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬ ಹಾನಿಗೀಡಾಗಿವೆ. ಸುಮಾರು 45 ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗಾಳಿಗೆ ಮನೆ ಮೇಲಿನ ಶೀಟುಗಳು ಕಿತ್ತು ಹೋಗಿವೆ.