2014ರಲ್ಲಿ ಅಸ್ಥಿತ್ವಕ್ಕೆ ಬಂದ ನರೇಂದ್ರ ಮೋದಿಯವರ ನೇತೃತ್ವದ ಭಾಜಪಾ ಸರ್ಕಾರ ಅಘಟಿತ ಘಟನೆಗಳನ್ನು ಮಾಡುತ್ತ ಬಂದಿದೆ. ಅದರಲ್ಲಿ ಪ್ರಮುಖವಾದದ್ದನ್ನು ಮೆಲಕು ಹಾಕಿ ನೋಡುವುದಾದರೆ ನೋಟು ಅಮಾನ್ಯೀಕರಣ, CAA , ಮತ್ತು ವಿರೋಧ ಪಕ್ಷಗಳು ಹೇಳುತ್ತಿದ್ದ” ಇಂತಹ ನೂರು ಮೋದಿಗಳು ಬಂದರು 370 ತೆಗೆಯಲು ಸಾಧ್ಯವಿಲ್ಲ “ ಅಂತಹ ಆರ್ಟಿಕಲ್ 370 ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದದ್ದು, “ಮಂದಿರ ವಹೀ ಬನಾಯೇಂಗೆ ಲೇಕಿನ ಕಬ್ ಪತಾ ನಹೀ “ಎನ್ನುತ್ತಿದ್ದವರು ಇಂದು ಭವ್ಯ ರಾಮ ಮಂದಿರದ ಉದ್ಘಾಟನೆ ಮತ್ತು ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನಾಂಕವನ್ನು ಎದುರು ನೋಡುತ್ತಿದ್ದಾರೆ. ಇದಲ್ಲದೆ ರಸ್ತೆಗಳ ಉನ್ನತೀಕರಣ , ಆರ್ಥಿಕ ಪ್ರಗತಿ, ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಂತರಿಕ ಭದ್ರತೆ, ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸಹ ಭಾರತದ ಗೌರವವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಭಾರತ ಎಂದರೆ ಮೂಗು ಮುರಿಯುತ್ತಿದ್ದ ದೇಶಗಳು ಇಂದು ಭಾರತ ನಮ್ಮ ಪರಮಮಿತ್ರ ಎಂದು ಹೇಳುತ್ತಿವೆ ಎಂದರೆ ಭಾರತವು ತನ್ನ ಗತವೈಭವವನ್ನು ಪುನಃ ಸ್ಥಾಪಿಸುತ್ತಿದೆ ಎಂದರೆ ತಪ್ಪಾಗಲಾರದು. “ಮೋದಿ ಹೇ ತೋ ಮುಮಕೀನ್ ಹೇ “ಎಂದು ಜನರು ಹೇಳುತ್ತಿರುವಾಗ ಭಾರತೀಯ ಜನತಾ ಪಾರ್ಟಿ ತನ್ನ ಪ್ರಮುಖ ಉದ್ದೇಶಗಳಲ್ಲಿ ಒಂದಾದ ಏಕರೂಪದ ನಾಗರಿಕ ಸಂಹಿತೆಯನ್ನು ಯಾವಾಗ ಅನುಷ್ಠಾನಕ್ಕೆ ತರುತ್ತಾರೆ ಮತ್ತು ಅದರ ಪರಿಣಾಮಗಳೇನು ? ಅದನ್ನು ವಿರೋಧ ಪಕ್ಷಗಳು ಯಾವ ರೀತಿ ಜನರಿಗೆ ತಪ್ಪು ಮಾರ್ಗದರ್ಶನ ನೀಡಿ ದೇಶದಲ್ಲಿ ಆಂತರಿಕ ಗಲಭೆಯನ್ನು ಎಬ್ಬಿಸಿ ಮತೀಯ ಕಲಹವನ್ನು ಎಬ್ಬಿಸಬಹುದು ಎಂಬ ಮುಂದಾಲೋಚನೆಯನ್ನು ಮಾಡುತ್ತಿರುವ ಮೋದಿ ಸರ್ಕಾರದ ಜಾಣ ನಡೆಯನ್ನು ದೇಶವೇ ಎದುರು ನೋಡುತ್ತದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಮುಂದಿನ ಸಂಸತ್ತಿನ ಕಲಾಪದಲ್ಲಿ ಎಕ ರೂಪದ ನಾಗರಿಕ ಸಂಹಿತೆಯನ್ನು ಬಿಜೆಪಿ ಶತಾಯ ಗತಾಯ ಅನುಷ್ಠನಕ್ಕೆ ತರಲಿದೆ ಎಂದು ಹೇಳುತ್ತಿದ್ದಾರೆ.
ಅಷ್ಟಕ್ಕೂ ಈ ನಾಗರಿಕ ಸಂಹಿತೆ ಎಂದರೇನು ? ಭಾರತದಲ್ಲಿ ಎಲ್ಲರಿಗೂ ಒಂದೇ ರೀತಿಯಾದ ಕಾನೂನು ಇಲ್ಲವೇ ? ಇದ್ದರೆ ಅದನ್ನು ಪುನಃ ಅನುಷ್ಠಾನಕ್ಕೆ ತರುವ ಅವಶ್ಯಕತೆಯಾದರೂ ಎನು ? ಈ ಕಾಯ್ದೆಯ ಪರವಾಗಿರುವ ಪಕ್ಷಗಳು ಯಾವವು ? ವಿರೋಧಿಗಳು ಯಾರು ? ಇದರಿಂದ ವಿರೋಧ ಪಕ್ಷಗಳಿಗಿರುವ ತೊಂದರೆಯಾದರೂ ಎನು? ಎನ್ನುವುದನ್ನು ಈ ಲೇಖನದ ಮುಖಾಂತರ ತಿಳಿಯಲಿದ್ದೇವೆ.
ಸಮಾನ ನಾಗರಿಕ ಸಂಹಿತೆಯ ಕಥೆ
ಸಮಾನ ನಾಗರಿಕ ಸಂಹಿತೆ (Uniform Civil Code) ಜಾರಿಯ ಬಗ್ಗೆ ಅಧ್ಯಯನ ನಡೆಸುವಂತೆ ಕಾನೂನು ಆಯೋಗಕ್ಕೆ ಮೋದಿ ಸರಕಾರ ಕೇಳಿಕೊಂಡಿದೆ. ಆ ಮೂಲಕ ಮತ್ತೆ ಏಕರೂಪ ಕಾನೂನು ಜಾರಿ ರಾಜಕೀಯ ಮುನ್ನೆಲೆಗೆ ಬಂದಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ ಎಂದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರದ ಮಧ್ಯೆಯೇ. ವಿವಿಧ ಆಯಾಮಗಳಿಂದ ಈ ಸಂಹಿತೆಯ ಬಗ್ಗೆ ತಿಳಿಯಲಿದ್ದೆವೆ.
ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದರೂ ಪ್ರಸ್ತುತದಲ್ಲಿ ಕೆಲವು ಧರ್ಮಗಳ ಆಚರಣೆ ಮತ್ತು ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿತವಾದಂತೆ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿವೆ. ಇವನ್ನು ಬದಲಿಗೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆಂಬ ಕೂಗು ಸಂವಿಧಾನ ಅಸ್ಥಿತ್ವ ಬಂದಾಗಿನಿಂದಲೂ ಇದೆ. ಅಲ್ಲದೇ ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಸಮಾನ ನಾಗರಿಕ ಸಂಹಿತೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ.
ವೈಯಕ್ತಿಕ ಕಾನೂನು ಮತ್ತು ಸಾರ್ವಜನಿಕ ಕಾನೂನು ಎರಡೂ ಬೇರೆ ಬೇರೆಯಾದದ್ದು ಈ ವೈಯಕ್ತಿಕ ಕಾನೂನಿನ ಅಧೀನದಲ್ಲಿ ಕೆಲವೊಂದು ಧರ್ಮಗಳ ಆಚರಣೆಗಳಾದ ಮತ್ತು ಇನ್ನಿತರ ಧರ್ಮದಲ್ಲಿ ಅದಕ್ಕೆ ಅವಕಾಶವಿಲ್ಲದಂತಹ ಅಂಶಗಳಾದ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ಜೀವನಾಂಶ ನಿರ್ವಹಣೆ ಸೇರಿದಂತೆ ಇನ್ನಿತರ ಕೌಟುಂಬಿಕ ವ್ಯಾಜ್ಯಗಳನ್ನು ಸೇರಿಸಲಾಗಿದೆ.
ದೇಶದಲ್ಲಿ ಕ್ರಮಿನಲ್ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿದೆ ಆದರೆ ಸಿವಿಲ್ ಕಾನೂನುಗಳನ್ನು ಮಾತ್ರ ಧರ್ಮದ ಆಧಾರದ ಮೇಲೆ ನ್ಯಾಯಾಲಯದಲ್ಲಿ ತೀರ್ಪಿಗೆ ಒಳಪಡುತ್ತದೆ.
ಸಂವಿಧಾನ 44ನೇ ವಿಧಿಯು ಸಮಾನ ನಾಗರಿಕ ಸಂಹಿತೆ ಜಾರಿಯನ್ನು ರಾಜ್ಯ ನಿರ್ದೇಶಿತ ತತ್ವಗಳ ಪಟ್ಟಿಗೆ ಸೇರಿಸಿದೆ.
ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು 1985ರ ಶಾ ಬಾನು ಪ್ರಕರಣದಲ್ಲಿ; ಗಂಡನಿಂದ ವಿಚ್ಛೇದನ ಪಡೆದ ಶಾ ಬಾನು ಗಂಡನಿಂದ ಜೀವನಾಂಶವನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲನ್ನೇರಿದಳು ಅದನ್ನು ಪುರಸ್ಕರಿಸಿದ ನ್ಯಾಯಾಲಯವು ಅವಳಿಗೆ ಜೀವನಾಂಶವನ್ನು ನೀಡಬೇಕೆಂದು ತೀರ್ಪು ನೀಡಿತು. ಆದರೆ ಕೆಲ ಮುಸ್ಲಿಂ ನಾಯಕರು ಅದನ್ನು ವಿರೋಧಿಸಿದರು ಆಗ ಕೇಂದ್ರದಲ್ಲಿ ಅಸ್ಥಿತ್ವದಲ್ಲಿದ್ದ ರಾಜೀವ ಗಾಂಧಿ ನೇತೃತ್ವದ ಸರ್ಕಾರ ನ್ಯಾಯಾಲಯದ ಈ ತೀರ್ಪನ್ನು ಒಪ್ಪಲಿಲ್ಲ.
ಭಾರತದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನುಗಳು 1937ರಿಂದಲೂ ಜಾರಿಯಲ್ಲಿವೆ. ಷರಿಯಾ ಕಾನೂನಿನ ಭಾಗಶಃ ಅಂಶಗಳನ್ನು ಈ ಕಾನೂನುಗಳು ಹೊಂದಿದೆ ಎಂದು ಅಂದಿನ ಜನರ ವಾದವಾಗಿತ್ತು. ಇದರಿಂದಾಗಿ ಸಮಾನ ನಾಗರಿಕ ಸಂಹಿತೆಯು ರಾಜಕೀಯ ಬಣ್ಣವನ್ನು ಪಡೆದುಕೊಂಡಿತು ಎಂದು ಹೇಳಬಹುದು. ನಿರ್ದಿಷ್ಟ ಸಮುದಾಯಕ್ಕೆ ಮಾತ್ರವೇ ಈ ರೀತಿಯ ವಿಶೇಷ ಸವಲತ್ತುಗಳನ್ನು ನೀಡಬಾರದು ಎಂದು ಕೆಲವು ರಾಜಕೀಯ ಪಕ್ಷಗಳ ಧೋರಣೆಯಾದರೆ, ಪುರಾತನ ಕಾಲದಿಂದ ಅಸ್ಥಿತ್ವದಲ್ಲಿರುವ ಧಾರ್ಮಿಕ ನಿಯಮಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಮೂಲಭೂತ ಹಕ್ಕಿನ ಉಲ್ಲಂಘನೆಯನ್ನು ಮಾಡುತ್ತದೆ ಎಂದು ಕೆಲವರ ವಾದ.
ಏನಿದು ಸಮಾನ ನಾಗರಿಕ ಸಂಹಿತೆ?
ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ಜೀವನಾಂಶ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನಾನಾ ತರಹದ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳು ಆಯಾ ಧರ್ಮಾಚರಣೆಗಳಿಂದ ಪ್ರೇರೇಪಿತವಾಗಿದ್ದು, ಇಲ್ಲೆಲ್ಲೂ ಮಹಿಳಾ ಹಕ್ಕುಗಳ ಸಂರಕ್ಷ ಣೆಯಾಗುತ್ತಿಲ್ಲ. ಇದರ ಬದಲಾಗಿ, ದೇಶದಲ್ಲಿ ಒಂದೇ ತೆರನಾದ ವೈಯಕ್ತಿಕ ಕಾನೂನು ಜಾರಿ ಮಾಡುವುದರಿಂದ ಲಿಂಗ ತಾರತಮ್ಯವನ್ನು ತೊಡೆದು ಹಾಕಬಹುದು. ಈ ಏಕರೂಪ ಕಾನೂನು ರೂಪಿಸುವುದನ್ನೇ ಸಮಾನ ನಾಗರಿಕ ಸಂಹಿತೆಯೆನ್ನಬಹುದು. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗಲಿದೆ.
ಯಾಕೆ ಬೇಕು ಸಮಾನ ನಾಗರಿಕ ಸಂಹಿತೆ?
• ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತೆ ಎಂಬ ಕಲ್ಪನೆ ಇದೆ. ಆದರೆ, ವಾಸ್ತವದಲ್ಲಿ ಹಾಗೆ ಆಗಲ್ಲ. ಈ ಕಾನೂನು ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುತ್ತದೆ.
• ಈಗಿರುವ ಬಹುತೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸುವುದಿಲ್ಲ. ಮುಸ್ಲಿಮರಲ್ಲಿ ಏಕಪಕ್ಷೀಯವಾಗಿ ಮೌಖಿಕವಾಗಿ ನೀಡುವ ತಲಾಖ್ ಪದ್ಧತಿ, ಹಿಂದೂಗಳಲ್ಲಿನ ವೈವಾಹಿಕ ನಿರ್ಬಂಧನಾ ಕಾನೂನುಗಳು, ಕ್ರೈಸ್ತರ ಆಸ್ತಿ ಹಕ್ಕುಗಳಲ್ಲಿನ ಅಸಮಾನತೆ ಪೋಷಿಸುವ ಕಾನೂನುಗಳಿವೆ. ಈ ತಾರತಮ್ಯ ಕೇವಲ ಮಹಿಳೆಯರ ವಿರುದ್ಧ ಮಾತ್ರವಲ್ಲದೆ ಪುರುಷರಿಗೆ ಅನ್ವಯವಾಗುತ್ತವೆ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ.
• ವಿಶೇಷ ವಿವಾಹ, ವಿದೇಶಿ ವಿವಾಹ ಕಾಯ್ದೆಗಳು ಕೂಡ ಹೆಂಡತಿಯಿಂದ ಗಂಡನಿಗೆ ಜೀವನಾಂಶ ನೀಡುವ ಬಗ್ಗೆ ಹೇಳುವುದಿಲ್ಲ. ಅದೇ ರೀತಿ, ಈಗಿರುವ ವೈಯಕ್ತಿಕ ಕಾನೂನುಗಳು ಅಂತರ್ಧರ್ಮೀಯ ವಿವಾಹವನ್ನು ಪ್ರೇರೇಪಿಸುವುದಿಲ್ಲ. ಇಂಥ ಎಲ್ಲ ಅಪಸವ್ಯಗಳನ್ನು ತೊಡೆದು ಹಾಕಬೇಕಿದ್ದರೆ ಸಮಾನ ನಾಗರಿಕ ಸಂಹಿತೆ ಜಾರಿ ಅಗತ್ಯ ಎಂದು ವಾದಿಸುತ್ತಾರೆ. ಅದೇ ರೀತಿ, ಇದಕ್ಕೆ ವಿರೋಧವೂ ಇದೆ.
ನಮ್ಮ ಎಲ್ಲ ರಾಜ್ಯಗಳ ಪೈಕಿ ಗೋವಾದಲ್ಲಿ ಮಾತ್ರ ಸಮಾನ ನಾಗರಿಕ ಸಂಹಿತೆ ಭಾಗಶಃವಾಗಿ ಜಾರಿಯಲ್ಲಿದೆ. 1954ರ ವಿಶೇಷ ವಿವಾಹ ಕಾಯ್ದೆ ಯಾವುದೇ ವ್ಯಕ್ತಿ ಯಾವುದೇ ಧರ್ಮದ ವೈಯಕ್ತಿಕ ಕಾನೂನಿನಾಚೆಗೂ ವಿವಾಹವಾಗಬಹುದು. ಗೋವಾದಲ್ಲಿರುವ ಕೌಟುಂಬಿಕ ಕಾಯ್ದೆ ಕಟ್ಟುನಿಟ್ಟಾಗಿ ಸಮಾನ ನಾಗರಿಕ ಸಂಹಿತೆಯನ್ನು ಪ್ರತಿನಿಧಿಸುವುದಿಲ್ಲ.
ಈ ಕಾನೂನು ಅಸ್ಥಿತ್ವಕ್ಕೆ ಬರಲು ಅಡ್ಡಿಗಳೇನು ?
ಸಮಾನ ನಾಗರಿಕ ಸಂಹಿತೆ ಜಾರಿ ಸಂಬಂಧ 1840ರಿಂದಲೂ ಪರ-ವಿರೋಧ ವಾದಗಳಿವೆ. ಬಿಜೆಪಿ ಮತ್ತು ಆರ್ಎಸ್ಎಸ್ ಏಕರೂಪ ಕಾನೂನಿಗೆ ಪ್ರಬಲವಾಗಿ ಬೆಂಬಲ ವ್ಯಕ್ತಪಡಿಸುತ್ತಿವೆ.
ಕಾಂಗ್ರೆಸ್ ಹಾಗೂ ಕೆಲವು ಮುಸ್ಲಿಮ್ ಸಂಘಟನೆಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇವೆ.
ಇದೇ ವೇಳೆ, ಸಂವಿಧಾನ 25ನೇ ವಿಧಿಯ ಪ್ರಕಾರ ನೀಡಿರುವ ಧಾರ್ಮಿಕ ಹಕ್ಕಿಗೆ ಏಕರೂಪ ನಾಗರಿಕ ಸಂಹಿತೆಯಿಂದ ಭಂಗವಾಗುತ್ತದೆ ಎಂಬ ವಾದವೂ ಇದೆ.
– ಸಂವಿಧಾನ ಏನು ಹೇಳುತ್ತದೆ?
ಸಮಾನ ನಾಗರಿಕ ಸಂಹಿತೆ ಪ್ರಸ್ತಾಪ ಇರುವುದು ಸಂವಿಧಾನದ 44ನೇ ವಿಧಿಯಲ್ಲಿ. ಆದರೆ, ಇದು ಕಡ್ಡಾಯವಲ್ಲ.
ಭಾರತದ ಎಲ್ಲ ಪ್ರದೇಶಗಳಲ್ಲಿ ತನ್ನೆಲ್ಲ ಜನರಿಗೆ ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಲು ಸರಕಾರ ಪ್ರಯತ್ನಿಸಬೇಕು.
ಇದೇ ವೇಳೆ, ಸಂವಿಧಾನದ 37ನೇ ವಿಧಿಯು ರಾಜ್ಯ ನಿರ್ದೇಶಿತ ತತ್ವಗಳ ಬಗ್ಗೆಯೂ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದೆ; ರಾಜ್ಯ ನಿರ್ದೇಶಿತ ತತ್ವಗಳನ್ನು ಕೋರ್ಟ್ ಮೂಲಕ ಜಾರಿ ಮಾಡಲು ಅವಕಾಶವಿಲ್ಲ.
ಹಾಗಾಗಿ, ಈ ವಿಷಯದಲ್ಲಿ ಸಂಸತ್ತೇ ಒಮ್ಮತ ನಿರ್ಣಯಕ್ಕೆ ಬಂದು ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಆದರೆ ಜವಾಹರ್ ಲಾಲ್ ನೆಹರೂ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಇಂದಿರಾ ಗಾಂಧಿ ಅವರು ಏಕರೂಪ ಕಾನೂನು ಜಾರಿಗೆ ಬೆಂಬಲಿಸಿದ್ದರು. ಆದರೆ, ಆಂತರಿಕ ಒತ್ತಡಗಳಿಂದಾಗಿ ಅವರು ಆ ಕೆಲಸ ಮಾಡಲು ಸಾಧ್ಯವಾಗಲಿಲ್ಲ.
ಕೊನೆಯ ಮಾತು
• ಈ ಕಾನೂನು ಜಾರಿಗೆ ಬಂದರೆ ಜಾತಿ, ಧರ್ಮ ಬದಿಗಿಟ್ಟು ದೇಶದ ಎಲ್ಲ ಪ್ರಜೆಗಳೂ ಒಂದೇ ಕಾನೂನಿನ ಚೌಕಟ್ಟಿಗೆ ಬರುತ್ತಾರೆ.
• ಧರ್ಮಾಧಾರಿತ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಕ್ತಿ ಸಿಗುತ್ತೆ
• ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯ ಎಂಬಂತೆ ಇರುವ ವೈಯಕ್ತಿಕ ಕಾನೂನುಗಳು ಇಲ್ಲವಾಗುತ್ತವೆ
• ಕೆಲವು ಧರ್ಮಗಳಲ್ಲಿ ಅಸಮಾನತೆಯಿದ್ದು ಈ ಕಾನೂನಿನಿಂದ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ಸಿಗುತ್ತದೆ .
ಮುಂದಿನ ವರ್ಷವೇ ಲೋಕಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ ಬಿಜೆಪಿಗೆ ಈ ಕಾನೂನು ಜಾರಿ ತರುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಸಿಎಎ, ಎನ್ಆರ್ಸಿ ವಿಚಾರಗಳಲ್ಲಿ ದೇಶಾದ್ಯಂತ ಸಾಕಷ್ಟು ವಾದ ವಿವಾದ ನಡೆಯುತ್ತಿರುವಾಗ ಮೋದಿ ನೇತೃತ್ವದ ಸರ್ಕಾರವು ಹೇಗೆ ತನ್ನ ಪ್ರನಾಳಿಕೆಯನ್ನು ಕಾರ್ಯರೂಪಕ್ಕೆ ತರುತ್ತದೆ ಎಂಬುದು ಕಾದು ನೋಡುವಂತಿದೆ.