ಬಾಗಲಕೋಟೆ: ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪದ ಹೊಡೆತಕ್ಕೆ ನಲುಗಿ ಹೋಗಿರುವ ಜಿಲ್ಲೆಯ ಅನ್ನದಾತರು ಆರ್ಥಿಕವಾಗಿ ಸುಧಾರಿಸಿಕೊಂಡಿಲ್ಲ. ಉತ್ತಮ ಬೆಳೆಗೆ ಸೂಕ್ತ ಬೆಳೆಯು ಸಿಗದೇ ಒದ್ದಾಡಿದ್ದರು. ಪ್ರಕಸ್ತ ವರ್ಷ ಉತ್ತಮ ನಿರೀಕ್ಷೆಯೊಂದಿಗೆ ಕೋಟೆನಾಡಿನ ರೈತರು ರೆಂಟಿ ಹೊರಲು ಸಜ್ಜಾಗಿದ್ದು, ಭೂಮಿ ಹದಗೊಳಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅನ್ನದಾತರು ಹೊಸ ಭರವಸೆಯೊಂದಿಗೆ ಕೃಷಿ ಕಾಯಕಕ್ಕೆ ಮರಳುತ್ತಿದ್ದಾರೆ. ಮುಂಗಾರು ಹಂಗಾಮಿಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಹಲವು ಕಷ್ಟ-ಸಂಕಷ್ಟ ನಡುವೆ ಜಗತ್ತಿನ ಅನ್ನದ ಬಟ್ಟಿಲು ಭರ್ತಿ ಮಾಡಲು ಅನ್ನದಾತರು ಅಣಿಯಾಗಿದ್ದಾರೆ.
* 2,65,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
ರೈತರ ಬೇಡಿಕೆ ತಕ್ಕಂತೆ ಕೃಷಿ, ತೋಟಗಾರಿಕಾ ಇಲಾಖೆ ಬೀಜ, ಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. 1,60,000 ಹೆಕ್ಟೇರ್ ಪ್ರದೇಶದಲ್ಲಿ ಜೋಳ, ತೊಗರಿ, ಹೆಸರು ಇತ್ಯಾದಿ ಬೆಳೆ, 1 ಲಕ್ಷ 5 ಸಾವಿರ ಹೆಕ್ಟೇರ್ ಆಸು ಪಾಸು ಕಬ್ಬು ಸೇರಿದಂತೆ ಪ್ರಸಕ್ತ ಮುಂಗಾರಿನಲ್ಲಿ ಒಟ್ಟು 2,65,000 ಪ್ರದೇಶದಲ್ಲಿ ಬಿತ್ತನೆಗೆ ಗುರಿಹೊಂದಲಾಗಿದೆ. ಬಾದಾಮಿ ತಾಲೂಕಿನಲ್ಲಿ 45700 ಹೆಕ್ಟೇರ್, ಗುಳೇದಗುಡ್ಡ ತಾಲೂಕಿನಲ್ಲಿ 12900 ಹೆಕ್ಟೇರ್, ಬಾಗಲಕೋಟೆ 25000 ಹೆಕ್ಟೇರ್, ಬೀಳಗಿ 24425 ಹೆಕ್ಟೇರ, ಹುನಗುಂದ 41750 ಹೆಕ್ಟೇರ್, ಜಮಖಂಡಿ 41750 ಹೆಕ್ಟೇರ್, ರಬಕವಿ-ಬನಹಟ್ಟಿ 22250 ಹಾಗೂ ಮುಧೋಳ 40600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಕದಳ ಧಾನ್ಯಗಳಲ್ಲಿ ಗೋವಿನ ಜೋಳ 42000 ಹೆಕ್ಟೇರ್ ಕ್ಷೇತ್ರದಲ್ಲಿ ಹಾಗೂ ಸಜ್ಜೆ 30250 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದ್ದು, ದ್ವಿದಳ ಧಾನ್ಯಗಳಲ್ಲಿ ತೊಗರಿ 36300 ಹೆಕ್ಟೇರ್ ಹಾಗೂ ಹೆಸರು 20250 ಹೆಕ್ಟೇರ್, ಎಣ್ಣಿ ಕಾಳುಗಳಲ್ಲಿ ಸೂರ್ಯಕಾಂತಿ ಬೆಳೆಯು ಅಂದಾಜು 24550 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ.
ಈಗಾಗಲೇ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳ ಬಿತ್ತನೆ ಬೀಜ ದಾಸ್ತಾನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಲಾಗಿದೆ. ಹೆಸರು 250 ಕ್ವಿಂಟಲ್, ಉದ್ದು 140 ಕ್ವಿಂಟಲ್, ತೊಗರಿ 300 ಕ್ವಿಂಟಲ್, ಸೋಯಾ ಅವರೆ 1050 ಕ್ವಿಂಟಲ್ ದಾಸ್ತಾನು ಇದ್ದು, ಗೋವಿನಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸದ್ಯದಲ್ಲಿಯೇ ದಾಸ್ತಾನು ಮಾಡಿಕೊಂಡು ಸರಬರಾಜು ಮಾಡಲಾಗುತ್ತದೆ ಕೃಷಿ ಇಲಾಖೆ ತಿಳಿಸಿದೆ.
ಜಿಲ್ಲೆಯ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಲ್ಲದೆ ಹೆಚ್ಚುವರಿಯಾಗಿ ಬಿತ್ತನೆ ಬೀಜ ಕೇಂದ್ರಗಳ ಮುಖಾಂತರ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಜಿಲ್ಲೆಗೆ ಅವಶ್ಯಕತೆ ಇರುವ ಹೆಚ್ಚುವರಿ ಬಿತ್ತನೆ ಬೀಜದ ಬೆಡಿಕೆಯನ್ನು ಈಗಾಗಲೇ ಕೇಂದ್ರ ಕಚೇಗೆ ಸಲ್ಲಿಸಲಾಗಿದೆ. ದಾಸ್ತಾನು ಮಾಡಲಾದ ಬಿತ್ತನೆ ಬೀಜಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ. ಮುಂಗಾರು ಹಂಗಾಮಿನ ಬಿತ್ತನೆ ಬೆಡಿಕೆ ಅನುಸಾರ ಬೀಜಗಳನ್ನು ಸರಬರಾಜು ಮಾಡಿಸಿಕೊಂಡು ವಿತರಣೆ ಮಾಡಲಾಗುವುದು. ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಯ, ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ತಿಳಿಸಿದೆ.
ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಒಟ್ಟು 16.2 ಮಿ.ಮೀ ಮಳೆ ಆಗಬೇಕಾಗಿದ್ದು, ವಾಸ್ತವಿಕವಾಗಿ 24.7 ಮಿ.ಮೀ ಮಳೆ ಆಗಿರುತ್ತದೆ. ತಾಲೂಕುವಾರು ಬಾದಾಮಿ 36.4 ಮಿ.ಮೀ, ಬಾಗಲಕೋಟೆ 11.9 ಮಿ.ಮೀ, ಬೀಳಗಿ 10.4 ಮಿ.ಮೀ, ಹುನಗುಂದ 17.9 ಮಿ.ಮೀ, ಜಮಖಂಡಿ 51.1 ಮಿ.ಮೀ, ಮುಧೋಳ 22.1 ಮಿ.ಮೀ, ಗುಳೇದಗುಡ್ಡ 18.8 ಮಿ.ಮೀ, ರಬಕವಿ-ಬನಹಟ್ಟಿ 38.4 ಮಿ.ಮೀ, ಇಳಕಲ್ಲ 12.7 ಮಿ.ಮೀ ನಷ್ಟು ಮಳೆ ಆಗಿದೆ.
ಜಿಲ್ಲೆಯಲ್ಲಿ ಬಿತ್ತನೆ ತಕ್ಕಂತೆ ಬೀಜ, ಗೊಬ್ಬರ ಸರಬರಾಜು ಮಾಡಲಾಗುತ್ತದೆ. ಯೂರಿಯಾ 23480 ಮೆಟ್ರಿಕ್ ಟನ್, ಡಿಎಪಿ 8764, ಕಾಂಪ್ಲೇಕ್ 26198, ಎಂಒಪಿ 982, ಎಸ್ಎಸ್ಪಿ 1968 ಸೇರಿದಂತೆ ಒಟ್ಟು 61392 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇದ್ದು, ಈಗಾಲೇ ಪೂರೈಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಸಕ್ತ ಸಾಲಿನ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲಾಗುವ ಪ್ರಮಾಣಿತ ಸ್ವ-ಪರಾಗಸ್ಪರ್ಶಿ ಬೆಳೆಗಳಲ್ಲಿ ಬೀಜ ಬದಲಿಕೆ ಅನುಪಾತದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಮುಂಬರುವ ವರ್ಷದಲ್ಲಿ ಅಂತಹ ರೈತರಿಗೆ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದಿಲ್ಲ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಖರೀದಿ ಮಾಡಬೇಕು. ಸರ್ಕಾರ ನಿಗಪಡಿಸಿದ ಸಮಯದಲ್ಲಿಯೆ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.