ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಹಾಗೂ ಎಂಟು ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸದ ಬೆನ್ನಲ್ಲೇ ಇಂದಿನಿಂದ ಮೊದಲ ಅಧಿವೇಶನ ಪ್ರಾರಂಭಗೊಂಡಿದೆ.
ಹಂಗಾಮಿ ಸ್ಪೀಕರ್ ಆಗಿ ಆರ್. ವಿ. ದೇಶಪಾಂಡೆ ಕಲಾಪ ನಡೆಸುತ್ತಿದ್ದು, ಶಾಸಕರ ಪ್ರಮಾಣ ವಚನ, ಹೊಸ ಸ್ಪೀಕರ್ ಆಯ್ಕೆ, ಬಹುಮತ ಸಾಬೀತು ಮಾಡಲು ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ.
ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ನ 135, ಬಿಜೆಪಿಯ 66, ಜೆಡಿಎಸ್ನ 19, ನಾಲ್ವರು ಪಕ್ಷೇತರ ಶಾಸಕರು ಹಂಗಾಮಿ ಸ್ಪೀಕರ್ ಆರ್. ವಿ. ದೇಶಪಾಂಡೆ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಳಿಕ ಆಡಳಿತ ಪಕ್ಷವಾದ ಕಾಂಗ್ರೆಸ್ ನೂತನ ಸ್ಪೀಕರ್ ಆಯ್ಕೆ ಮಾಡಲಿದೆ. ಸ್ವೀಕರ್ ಸ್ಥಾನಕ್ಕೆ ಹಿರಿಯ ನಾಯಕರಾದ ಆರ್ ವಿ ದೇಶಪಾಂಡೆ, ಎಚ್ ಕೆ ಪಾಟೀಲ್ ಹಾಗೂ ಟಿ ಬಿ ಜಯಚಂದ್ರ ಅವರು ಹೆಸರು ಕೇಳಿಬರುತ್ತಿದ್ದು, ಇಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮೂರು ದಿನ ವಿಧಾನಸೌಧದಲ್ಲಿ ವಿಶೇಷ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಅಧಿವೇಶನದ ಕಾರ್ಯ ಕಲಾಪಗಳಿಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಕಟ್ಟಡದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.