ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಜನರ ಜೀವ ಉಳಿಸುವ ವೈದ್ಯರು ಭಗವಂತನ ಸ್ವರೂಪವೆಂದೇ ಪರಿಗಣಿಸಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಹೊಸ ಹೊಸ ಥೀಮ್ನೊಂದಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. “ಸ್ಥಿತಿಸ್ಥಾಪಕತ್ವವನ್ನು ಮತ್ತು ಗುಣಪಡಿಸುವ ಕೈಗಳನ್ನು ಗೌರವಿಸುವುದು” ಎಂಬ ಥೀಮ್ನೊಂದಿಗೆ ಈ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ:
ವೈದ್ಯರ ದಿನವನ್ನು ಭಾರತದಲ್ಲಿ 1991 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಡಾ. ಬಿಧನ್ ಚಂದ್ರ ರಾಯ್ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ, ಹಾಗೂ ಶೇಷ್ಠ ವೈದ್ಯರು. ಡಾ. ಬಿಧನ್ ಚಂದ್ರ ರಾಯ್ ಅವರ ಜ್ಞಾಪಕಾರ್ಥವಾಗಿವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು. ಬಿಧನ್ ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆಯನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು.
ವೈದ್ಯರ ರಕ್ಷಣೆಗೆ ಬೇಕಿದೆ ಕಾನೂನಿನ ಬಲ :
ಹಿಂದೆ ವೈದ್ಯರನ್ನು ದೇವರೆಂದು ಆರಾಧಿಸುತ್ತಿದ್ದರು ಆದರೆ ಇಂದು ವೈದ್ಯರನ್ನು ಮಾನವೀಯತೆಯಿಲ್ಲದ ವ್ಯಾಪಾರಿ ಮನೋಭಾವದವನು ಎಂದು ಬಿತ್ತರಿಸಲಾಗುತ್ತಿದೆ. ವೈದ್ಯರ ನಿಯಂತ್ರಣಕ್ಕೆ ಸಿಗದೇ ರೋಗಿಯು ಸಾವನ್ನಪ್ಪಿದ್ದರು ಕೂಡ ಅದಕ್ಕೂ ವೈದ್ಯರ ನಿರ್ಲಕ್ಷ್ಯ ತನವೇ ಹೊಣೆ ಎಂದು ಅರ್ಥೈ ಸಲಾಗುತ್ತಿದೆ. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಪ್ರಾಣಕ್ಕೆ ಹಾನಿಯಾದರೆ, ಹಿಂದು ಮುಂದು ಯೋಚಿಸದೇ ವೈದ್ಯರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಆಸ್ಪತ್ರೆಗಳ ಪರಿಕರಗಳನ್ನು ಧ್ವಂ ಸ ಮಾಡಲಾಗುತ್ತಿದೆ.
ಜನರ ಜೀವ ರಕ್ಷಿಸುವ ವೈದ್ಯರು, ರೋಗಿಗಳ ಸಂಬಂಧಿಕರು ಅಥವಾ ಸ್ನೇಹಿತರಿಂದ ಹಲ್ಲೆಗೊಳಗಾದ ಸಾಕಷ್ಟು ನಿದರ್ಶನಗಳಿವೆ. ರಕ್ಷಣೆಗಾಗಿ ಆಗ್ರಹಿಸಿ ಬೀದಿಗಿಳಿದು ವೈದ್ಯರು ಹೋರಾಟಗಳನ್ನು ನಡೆಸಿರುವ ಮತ್ತು ನಡೆಸುತ್ತಿರುವ ಉದಾಹರಣೆಗಳು ಇವೆ. ವೈದ್ಯರಿಗೆ ರಕ್ಷಣೆ ನೀಡುವಂತ ಕಾನೂನು ಇಲ್ಲ ಎಂದಲ್ಲ. ಕೇಂದ್ರ ಸರ್ಕಾರ ವೈದ್ಯರ ರಕ್ಷಣೆಗಾಗಿ ಕಾಯಿದೆಯನ್ನೇ ತಂದಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ವೈದ್ಯರ ಮೇಲೆ ಹಲ್ಲೆ ನಡೆಸುವುದು ಜಾಮೀನು ರಹಿತ ಅಪರಾಧ :
ಹೊಸ ಕಾನೂನಿನ ಪ್ರಕಾರ, ವೈದ್ಯರ ಮೇಲೆ ಹಲ್ಲೆ ನಡೆಸುವುದು ಜಾಮೀನು ರಹಿತ ಅಪರಾಧ. ದೂರು ದಾಖಲಾಗಿ ಮೂವತ್ತು ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳು ಜೈಲು ಹಾಗೂ ಗರಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 50 ಸಾವಿರ ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಒಂದು ವೇಳೆ ವೈದ್ಯರಿಗೆ ಗಂಭೀರ ಸ್ವರೂಪದ ಗಾಯಗಳಾ ದರೆ, ಅಪರಾಧಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸುವ ಅವಕಾಶವೂ ಇದೆ. ಆಸ್ತಿಗೆ ಹಾನಿ ಉಂಟು ಮಾಡಿದರೆ ಅದರ ಮಾರುಕಟ್ಟೆ ಮೌಲ್ಯದ ಎರಡರಷ್ಟು ದಂಡ ವಿಧಿಸಬಹುದು.