ಬೆಂಗಳೂರು: ಈ ವರ್ಷವೇ ಪಠ್ಯ ಪರಿಕ್ಷರಣೆ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ ಬಳಿಕ ಪಠ್ಯದಲ್ಲಿ ಏನು ಇರಬೇಕು, ಯಾವುದು ಬೇಡ ಎಂದು ನಿರ್ಧರಿಸಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ. ಮಕ್ಕಳ ಭವಿಷ್ಯಕ್ಕೆ ಅಗತ್ಯವಿರುವ ಒಳ್ಳೆಯ ಅಂಶಗಳನ್ನು ಉಳಿಸಲಾಗುತ್ತದೆ ಎಂದರು.
ಪಠ್ಯ ಪರಿಷ್ಕರಣೆಯಾಗಬೇಕೆಂದು ಸಾಹಿತಿಗಳು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರು ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಲಿದ್ದಾರೆ ಎಂದರು.
ತಜ್ಞರು ಪಕ್ಷಕ್ಕೆ ಸೀಮಿತವಾಗಿರಲ್ಲ. ಅವರು ಕೊಡುವ ಸಲಹೆ ಪರಿಗಣಿಸಲಾಗುತ್ತದೆ. ತಪ್ಪು ತಿಳುವಳಿಕೆ ತಕ್ಷಣ ತಡೆ ಹಿಡಿಯಬೇಕಾಗುತ್ತದೆ. ಯಾವ ಪಠ್ಯ ಬೇಡ ಎಂದು ತಜ್ಞರು ಸೂಚಿಸುತ್ತಾರೋ ಅದನ್ನು ಬೋಧಿಸದಂತೆ ತಿಳಿಸಲು ಅವಕಾಶವಿದೆ ಎಂದರು.