ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಇಂದಿನಿಂದ ಮೇ 24 ರ ವರೆಗೆ ಜಿ20 ಶೃಂಗಸಭೆ ನಡೆಯಲಿದ್ದು, ವಿವಿಧ ದೇಶಗಳ ನಾಯಕರುಗಳು ಭಾಗವಹಿಸಲಿದ್ದಾರೆ.
ಜಿ20 ರಾಷ್ಟ್ರಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುವ ಮೂರನೇ ಸಭೆಯಾಗಿದ್ದು, ಸದಸ್ಯ ರಾಷ್ಟ್ರಗಳ 60 ಸದಸ್ಯರು ಭಾಗವಹಿಸಲಿದ್ದಾರೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಸಭೆಗಳು ನಡೆಯಲಿದ್ದು ಈಗಾಗಲೇ ಗುಜರಾತ್ ಕಛ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಲಿಗುರಿಯಲ್ಲಿ ಎರಡು ಸಭೆಗಳು ನಡೆದಿವೆ ಇನ್ನು ಕೊನೆಯ ಸಭೆಯು ಗೋವಾದಲ್ಲಿ ಜೂನ್ ತಿಂಗಳಲ್ಲಿ ನಡೆಯಲಿದೆ.
2019ರಲ್ಲಿ370 ನೇ ವಿಧಿ ರದ್ದುಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಅಂತರಾಷ್ಟ್ರೀಯ ಕಾರ್ಯಕ್ರಮ ಇದಾಗಿದ್ದು, ಭದ್ರತೆಯ ದೃಷ್ಠಿಯಿಂದ ಜಮ್ಮುಕಾಶ್ಮೀರದ ಪೊಲೀಸರಲ್ಲದೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಮಾವೇಶವು ಶೇರ್-ಎ-ಕಾಶ್ಮೀರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದ್ದು, ಸಮಾವೇಶಕ್ಕೆ ಬೇಕಾದ ಭದ್ರತೆಗ ಮೆರೈನ್ ಕಮಾಂಡೋಗಳಿಂದ ಹಿಡಿದು ಪ್ರಮುಖ ಪಡೆಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಶ್ರೀ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್ಗಳ ಕಣ್ಗಾವಲು ಇರಿಸಲಾಗಿದೆ.
ಕಾಶ್ಮೀರದಲ್ಲಿ ಈ ಸಭೆ ನಡೆಯುವುದನ್ನು ಪಾಕಿಸ್ತಾನ ವಿರೋಧಿಸಿದೆ. ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಇದಕ್ಕೆ ಭಾರತ ತಕ್ಕ ಉತ್ತರವನ್ನು ನೀಡಿದೆ. ಕಾಶ್ಮೀರ ನಮ್ಮ ಭಾಗವಾಗಿದೆ ಮತ್ತು ಭಾರತವು ಎಲ್ಲಿ ಬೇಕಾದರೂ ಸಭೆ ನಡೆಸಬಹುದು ಈ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಭಾರತ ಪಾಕ್ಗೆ ತಿರುಗೇಟು ನೀಡಿದೆ.