ಇಂದಿನ ದಿನಗಳಲ್ಲಿ ಅಕ್ಷರವನ್ನು ಕಲಿಸುವ ಸಂಸ್ಥೆಗಳು ಜಾಗತೀಕರಣದ ಬೆನ್ನಿಗೆ ಬಿದ್ದು ತನ್ನ ಆಂತರಿಕ ಮೌಲ್ಯವನ್ನು ಕಳೆದುಕೊಂಡು ಕೇವಲ ಯಾಂತ್ರಿಕ ರೀತಿಯಲ್ಲಿ ವರ್ತಿಸುತ್ತಾ ತನ್ನ ಅಂತಃಸತ್ವವನ್ನು ಕಡೆಗಣಿಸುತ್ತಿವೆ.
ಇಂದಿನ ವಿದ್ಯಾಸಂಸ್ಥೆಗಳನ್ನು ಗಮನಿಸಿದರೆ; ಅವು ಮುಖ್ಯವಾಗಿ ತನ್ನಲ್ಲಿರುವ ವಿದ್ಯಾರ್ಥಿಗಳನ್ನು ಸಮಾಜದ ಆಸ್ಥಿಯನ್ನಾಗಿ ಪರಿವರ್ತಿಸುವ ಬದಲಾಗಿ ವಿದ್ಯಾರ್ಥಿಗಳಿಂದಲೇ ತಮ್ಮ ಸಂಸ್ಥೆಯ ಆಸ್ಥಿಯನ್ನು ಭರಿಸಿಕೊಳ್ಳುವ ಕಾರ್ಯಕ್ಕೆ ಎದೆಯೊಡ್ಡಿ ನಿಂತಿವೆ.
ಕಳೆದ ಎರಡು ದಶಕಗಳನ್ನು ಅವಲೋಕಿಸಿದರೆ ಇದು ಕೇವಲ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳೇ ಪಾರಮ್ಯವನ್ನು ಮೆರೆದವು ಎಂದು ಸ್ಪಷ್ಟವಾಗಿ ತಿಳಿಯಬಹುದು. ಎಷ್ಟೇ ಲಕ್ಷ ಡೊನೇಷನ್ ನೀಡಿದರು ಅಡ್ಡಿಯಿಲ್ಲ ಆದರೆ ನಮ್ಮ ಮಕ್ಕಳು ಇಂಜಿನೀಯರ್/ ಡಾಕ್ಟರ್ ಆಗಬೇಕೆಂಬ ಬಯಕೆ ಎಲ್ಲ ಪಾಲಕರಲ್ಲಿತ್ತು. ಈ ಪರಿಸ್ಥಿತಿ ಯಾವ ಮಟ್ಟದಲ್ಲಿತೆಂದರೆ ಇಂಜಿನೀಯರಿಂಗ ಅಥವಾ ಡಾಕ್ಟರ್ ಆದರಷ್ಟೇ ಶಿಕ್ಷಣವನ್ನು ಪಡೆದಂತೆ ಇಲ್ಲವಾದಲ್ಲಿ ಬಾಕಿ ಕಲಾ, ಮತ್ತು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡವರು ಅನಕ್ಷರಸ್ಥರು ಎಂದು ಮೂಗು ಮುರಿಯುವಷ್ಟರ ಮಟ್ಟಿಗೆ ತಾತ್ರಿಂಕ ಶಿಕ್ಷಣ ಎಲ್ಲ ಕಡೆ ಮನ್ನಣೆಯನ್ನು ಪಡೆದಿತ್ತು. ಹಲವಾರು ಕಡೆ ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಮುಚ್ಚುವಂತಹ ಪರಿಸ್ಥಿತಿಯನ್ನು ಎದುರು ನೋಡುತ್ತಿವೆ. ಯಾವ ವಿದ್ಯಾರ್ಥಿಯು ಕಡಿಮೆ ಅಂಕಗಳನ್ನು ಸಂಪಾದಿತ್ತಾನೋ ಆತ ಮಾತ್ರ ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶಿಕ್ಷಣವನ್ನು ಪಡೆಯುತ್ತಾನೆ ಎಂಬ ಭ್ರಮೆಯಲ್ಲಿ ಪಾಲಕರು ಮತ್ತು ಸಮಾಜ ಬದುಕುತ್ತಿತ್ತು. ತಾಂತ್ರಿಕ ಶಿಕ್ಷಣವನ್ನು ಪಡೆದರಷ್ಟೇ ನಮ್ಮ ಮಕ್ಕಳು ಉನ್ನತ ಜೀವನವನ್ನು ನಡೆಸಬಹುದು ಎಂಬ ಪರಿಕಲ್ಪನೆಯಲ್ಲಿ ಬದುಕುತ್ತಿದ್ದವರು. ತಮ್ಮ ಮಕ್ಕಳಿಗೆ ವೃತ್ತಿಪರ ಕೋರ್ಸ್ ಶಿಕ್ಷಣವನ್ನು ಧಾರೆ ಎರೆದು ಇಂದು ಅವರ ಮಕ್ಕಳೆ ಅವರನ್ನು ಬಿಟ್ಟು ವಿದೇಶದಲ್ಲಿ ವಾಸವಾಗಿ ತಮ್ಮ ಪಾಲಕರನ್ನು ವೃದ್ಧಾಶ್ರಮದ ಬಾಲಿಗೆ ತಂದು ನಿಲ್ಲಿಸುತ್ತಿದ್ದಾರೆ.
ವೃತ್ತಿಪರ ಕೋರ್ಸಗಳಿಗೆ ನೀಡುವ ಶುಲ್ಕ ಡೋನೆಷನ್ ಸದ್ಯದ ಪರಿಸ್ಥಿತಿಯಲ್ಲಿ ಆಕಾಶದೆತ್ತರಕ್ಕೆ ಏರಿ ನಿಂತಿದೆ. ಆದರೂ ಪ್ರತಿ ಜಿಲ್ಲೆಯಲ್ಲಿ ಸಮೀಕ್ಷಿಸಿದರೆ ಕನಿಷ್ಟ 5ರಿಂದ 10 ಇಂಜಿನೀಯರಿಂಗ ಮತ್ತು ವೈದ್ಯಕೀಯ ಕಾಲೇಜುಗಳನ್ನು ಕಾಣುತ್ತೇವೆ. ಪ್ರತಿ ಗಲ್ಲಿಯಲ್ಲಿ ಒಬ್ಬರಿಂದ ಇಬ್ಬರು ವೈದ್ಯರು ಹಾಗೂ ಅಭಿಯಂತರರು ಸಿಗುತ್ತಾರೆ ಇಷ್ಟಾದರೂ ಮನೆಯಲ್ಲಿ ಕೆಲಸವಿಲ್ಲದೆ ಕುಳಿತರೂ ಅಡ್ಡಿಯಿಲ್ಲ ಆದರೂ ಇಂಜಿನೀಯರಿಂಗ್, ವೃತಿಪರ ಕೋರ್ಸಗಳನ್ನೇ ಮಾಡುತ್ತೇನೆ ಎಂಬ ಪಣತೊಟ್ಟ ವಿದ್ಯಾರ್ಥಿಗಳು ವೃತ್ತಿಪರ ಕಾಲೇಜಿನ ಕದ ತಟ್ಟುತ್ತಿದ್ದಾರೆ. ಇದರಿಂದ ಕಲಾ/ ವಾಣಿಜ್ಯ ವಿಭಾಗದ ಕಾಲೇಜುಗಳು ಕದ ಮುಚ್ಚುವಂತಾಗಿದೆ. ಇದು ಇದೇ ರೀತಿ ಮುಂದುವರೆದರೆ ಶೈಕ್ಷಣಿಕ ಅಸಮತೋಲನವನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ಇಂಜಿನೀಯರ್, ಡಾಕ್ಟರ್ ಆದರೆ ಕಲೆ, ಸಾಹಿತ್ಯ, ತತ್ವಶಾಸ್ತ್ರ ಹಾಗೂ ಮಾನವಿಕ ಮೌಲ್ಯಗಳನ್ನು ಕಲಿಯುವ ,ಕಲಿಸುವ ಪ್ರಮೇಯವೇ ಉಳಿಯುವದಿಲ್ಲ. ಶಿಕ್ಷಣವೆಂದರೆ ಯಾಂತ್ರಿಕ ಹಾಗೂ ತಾಂತ್ರಿಕಯನ್ನು ತಿಳಿಯುವದಲ್ಲ ಜೀವನವನ್ನು ಬದುಕುವ ನೀತಿಯನ್ನು ರೀತಿಯನ್ನು ಕಲಿಸುವುದೇ ಶಿಕ್ಷಣದ ಉದ್ದೇಶವಾಗಬೇಕು. ಕೇವಲ ಅಂಕಗಳನ್ನು ಸಂಪಾದಿಸುವುದೇ ಶಿಕ್ಷಣದ ಗುರಿಯಲ್ಲ ಜ್ಞಾನ ಸಂಪಾದನೆಯೇ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಪಠ್ಯ ಪುಸ್ತಕವನ್ನು ಓದಿದ ಎಲ್ಲರೂ ಅಂಕವನ್ನು ಗಳಿಸಬಹುದು ಆದರೆ,ಹೊರ ಜಗತ್ತಿನಿಂದ ಜ್ಞಾನವನ್ನು ಕಲೆತವ ಜೀವನದಲ್ಲಿ ಯಶಸ್ಸನ್ನುಗಳಿಸುತ್ತಾನೆ; ಅಧ್ಯಾಪಕರಾದವರೂ ವಿದ್ಯಾರ್ಥಿಗಳನ್ನು ಅಂಕದಿಂದಲೇ ಅವರ ಜ್ಞಾನದ ಮಟ್ಟವನ್ನು ಅಳೆಯುವ ಕ್ರಮವನ್ನು ತೆಗೆದು ಹಾಕಬೇಕು. ನಮ್ಮ ಪೂರ್ವಜರೆಲ್ಲರೂ ಎಂದು ವಿಶ್ವ ವಿದ್ಯಾಲಯದ ಮುಖನೋಡಿದ್ದೇಯಿಲ್ಲ ಆದರೂ ತಮ್ಮ ಜೀವನವನ್ನು ಎದುರಿಸಿದ ರೀತಿ ಅವರ ಜ್ಞಾನದ ಮಟ್ಟ ಅವರ ಜೀವನ ಶೈಲಿ ಇಂದಿಗೂ ನಮಗೆ ಅನುಕರಣೀಯವಾಗಿದೆ. ಆದರೆ ಇಂದಿನ ನಮ್ಮ ವಿದ್ಯಾರ್ಥಿಗಳಲ್ಲಿ ಕೇವಲ ಕಡಿಮೆ ಅಂಕಗಳಿಸಿದೆ ಎಂಬ ಕಾರಣಕ್ಕೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಸಣ್ಣ ಮನಸ್ಥಿತಿಯನ್ನು ಹೊಂದಿದ ವಿದ್ಯಾರ್ಥಿಗಳನ್ನು ಕಾಣುತ್ತಿದ್ದೇವೆ.
ಇದಕ್ಕೆ ಪ್ರಮುಖ ಕಾರಣವೆಂದರೆ ವಿದ್ಯಾರ್ಥಿಗಳಲ್ಲಿ ಅಂಕವೇ ಎಲ್ಲವನ್ನು ತಂದು ಕೊಡುತ್ತದೆ ಎಂಬ ಭಾವನೆ ನಖಶಿಖಾಂತವಾಗಿ ತುಂಬಿಕೊಂಡಿದೆ. ಇದಕ್ಕೆ ನೀರೆದಂತೆ ಪಾಲಕರು ಸಹ ತಮ್ಮ ಮಕ್ಕಳಿಗೆ ಅಂಕವೇ ಪ್ರಮುಖ ಎಂಬ ಮನಸ್ಥಿತಿಯಲ್ಲಿಯೇ ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸುವದು ಇದು ಮೊದಲು ಕಡಿಮೆಯಾಗಬೇಕು. ಅಂಕಗಳು ಕೇವಲ ಅಂಕಪಟ್ಟಿಯಲ್ಲೇ ಚಂದ ಹೊರತು ನಿಜ ಜೀವನದಲ್ಲಿ ಅಲ್ಲ Out of the box ಎಂಬ ಕಲ್ಪನೆ ಎಲ್ಲರಲ್ಲೂ ಬರಬೇಕು. ಕೇವಲ ಹಣ ಸಂಪಾದನೆಯೊಂದೆ ಶಿಕ್ಷಣದ ಗುರಿಯಾಗಬಾರದು ಸಮಾಜಕ್ಕೆ ನೀವು ಪಡೆದ ಜ್ಞಾನದ ಉಪಯೋಗವಾಗಬೇಕು. ಪಡೆದ ಜ್ಞಾನ ನಾಲ್ಕು ಜನರಿಗೆ ಉಪಯೋಗವಾಗದಿದ್ದರೆ ಅದು ನಾಯಿಯ ಮೊಲೆಯ ಹಾಲಿಗೆ ಸಮ ಅದು ಇದ್ದು ವ್ಯರ್ಥ.
ಶಿಕ್ಷಣದಿಂದ ಗಳಿಸಿದ ಹಣ ಅದು ಕೇವಲ ಸ್ವಾರ್ಥಕ್ಕೆ ಬಳಕೆಯಾಗದೆ ಸಮಜಕ್ಕಾಗಿಯು ಸ್ವಲ್ಪ ಪ್ರಮಾಣದ ಹಣವನ್ನು ಮೀಸಲಾಗಿಡುವುದು ಪ್ರತಿಯೊಬ್ಬ ವಿದ್ಯಾವಂತನ ಗುರಿಯಾಗ ಬೇಕು ಅಂದಾಗ ಮಾತ್ರ ಸಮಾಜದಲ್ಲಿ ಹೊಸ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ. ವಿದ್ಯಾಲಯಗಳು ವಿದ್ಯಾಥರ್ಿಗಳಿಗೆ ಜ್ಞಾನದ ಜೋತೆಗೆ ಸಂಸ್ಕಾರವನ್ನು ಕೊಡುವ ಮಂದಿರಗಳಾಗಬೇಕೆ ಹೊರತು ತಮ್ಮ ಕಿಸೆಯನ್ನು ತುಂಬಿಕೊಂಡು ವಿದ್ಯಾರ್ಥಿಗಳಲ್ಲಿ ವಿಷದ ಬೀಜವನ್ನು ಬಿತ್ತುವ ಆಲಯಗಳಾಗಬಾರದು ದೇಶದ ಅಖಂಡತೆ, ನಾಡು ನುಡಿ ಅದರ ಸಾರ್ವಭೌಮತ್ವದ ಪರಿಕಲ್ಪನೆ ಬಾಲ್ಯದಿಂದಲೇ ಮಕ್ಕಳಿಗೆ ನೀಡಿದ್ದರೆ ಇಂದು ದೇಶದ ಅನ್ನವನ್ನೇ ಉಂಡು ದೇಶದ ಜನರ ದುಡ್ಡಿನಲ್ಲೇ ಶಿಕ್ಷಣವನ್ನು ಪಡೆದು ಅದೇ ದೇಶದ ವಿರುದ್ಧ ಮಾತನಾಡುವ ಮಾತುಗಳು ಕೇಳಿ ಬರುತ್ತಿರಲಿಲ್ಲ . ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು ತಪ್ಪಾಗಲಾರದು. ಸಮಾಜವನ್ನು ಒಟ್ಟುಗುಡಿಸುವುದೇ ವಿದ್ಯೆಯ ಉದ್ದೇಶವಾಗಬೇಕಾದಾಗ ಇಂದಿನ ಶಿಕ್ಷಣವು ಸಮಾಜ ಮತ್ತು ದೇಶವನ್ನು ಒಡೆಯುವ ಕೃತ್ಯಕ್ಕೆ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತದೆ ಎಂದರೆ ಇಂದಿನ ಶಿಕ್ಷಣದ ಪ್ರಯೋಜನವಾದರು ಎನು? ವಿಜ್ಞಾನ ತಂತ್ರಜ್ಞಾನದ ಮೂಲಕ ಇಷ್ಟೊಂದು ಮುಂದುವರೆಯುತ್ತಿರುವ ಈ ಸಮಾಜದಲ್ಲಿ ಹಳೆಯ ಕಟ್ಟುಪಾಡುಗಳನ್ನು ಮೈ ತುಂಬಿಕೊಂಡು ಬದುಕುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ವಿಚಾರವಂತ ವಿದ್ಯಾರ್ಥಿಗಳು ಶಿಕ್ಷಕರು, ಹಾಗೂ ಶಿಕ್ಷಣ ಸಂಸ್ಥೆಗಳು ತಮ್ಮ ಆತ್ಮಾವಲೋಕವನ್ನು ಮಾಡುವ ಕಾರ್ಯಕ್ಕೆ ಇಂದೇ ಮುಂದಾಗಬೇಕಾಗಿದೆ.