ಇಂದು ಬೆಳಗ್ಗೆ 7 ಗಂಟೆಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಈ ಬಾರಿ ಸಂಜೆ 5 ಗಂಟೆವರೆಗೆ ಶೇ.65.69ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಲೆ ನಿಂತಿರುವ ದೃಶ್ಯ ಕಂಡುಬಂದಿದೆ. ಮತದಾನ ಅಂತ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದರೂ ಮತದಾರರ ಸಂಖ್ಯೆ ಮಾತ್ರ ಹೆಚ್ಚಾಗಿತ್ತು.
ಬೆಂಗಳೂರು ದಕ್ಷಿಣ- ಶೇ.48.63ರಷ್ಟು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ನಲ್ಲಿ ಶೇ 50.10, ಬೆಂಗಳೂರು ಉತ್ತರದಲ್ಲಿ ಶೇ 50.02ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ 79.10ರಷ್ಟು, ಬೆಂಗಳೂರು ನಗರದಲ್ಲಿ ಶೇ 52.19, ಚಾಮರಾಜನಗರದಲ್ಲಿ ಶೇ 69.31, ಚಿಕ್ಕಬಳ್ಳಾಪುರ ಶೇ 76.64, ಚಿಕ್ಕಮಗಳೂರು ಶೇ 72.06, ಚಿತ್ರದುರ್ಗ ಶೇ 70.74, ದಕ್ಷಿಣ ಕನ್ನಡ ಶೇ 69.88, ದಾವಣಗೆರೆ ಶೇ 70.71, ಧಾರವಾಡ ಶೇ 62.98 ಮತ್ತು ಗದಗದಲ್ಲಿ ಶೇ 68.30 ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 70.04ರಷ್ಟು, ಬೆಳಗಾವಿಯಲ್ಲಿ ಶೇ 67.44, ಬಳ್ಳಾರಿಯಲ್ಲಿ ಶೇ 67.68, ಬೀದರ್ನಲ್ಲಿ ಶೇ 61.93, ವಿಜಯಪುರದಲ್ಲಿ ಶೇ 62.54ರಷ್ಟು, , ರಾಯಚೂರಿನಲ್ಲಿ ಶೇ 63.87, ಶಿವಮೊಗ್ಗದಲ್ಲಿ ಶೇ 70.43, ತುಮಕೂರಿನಲ್ಲಿ ಶೇ 75.24, ಉಡುಪಿಯಲ್ಲಿ ಶೇ 73.80, ಉತ್ತರ ಕನ್ನಡದಲ್ಲಿ ಶೇ 68.06, ವಿಜಯನಗರ ಜಿಲ್ಲೆಯಲ್ಲಿ ಶೇ 71.70 ಮತ್ತು ಯಾದಗಿರಿಯಲ್ಲಿ ಶೇ 59.25ರಷ್ಟು, ಕಲಬುರಗಿಯಲ್ಲಿ ಶೇ 57.99ರಷ್ಟು, ಹಾಸನದಲ್ಲಿ ಶೇ 74.67ರಷ್ಟು, ಹಾವೇರಿಯಲ್ಲಿ ಶೇ 73.25ರಷ್ಟು, ಕೊಡಗಿನಲ್ಲಿ ಶೇ 70.46, ಕೋಲಾರದಲ್ಲಿ ಶೇ 72.23, ಕೊಪ್ಪಳದಲ್ಲಿ ಶೇ 70.49, ಮಂಡ್ಯದಲ್ಲಿ ಶೇ 75.90, ಮೈಸೂರಿನಲ್ಲಿ ಶೇ 67.99 ಮತದಾನವಾಗಿದೆ.
ಇನ್ನು ವಿಧಾನಸಭಾ ಚುನಾವಣೆ ವೇಳೆ ಹಿಂಸಾತ್ಮಕ ಘಟನೆಗಳು ನಡೆದಿರುವುದು ವರದಿಯಾಗಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಅಧಿಕಾರಿಗಳು ಇವಿಎಂ ಬದಲಾಯಿಸುತ್ತಿದ್ದಾರೆ, ಮತದಾನ ಮುಕ್ತಾಯವಾಗಿದೆ ಎಂಬ ವದಂತಿಗೆ ಗ್ರಾಮಸ್ಥರು ಎಲೆಕ್ಟ್ರಾನಿಕ್ ಮತಯಂತ್ರ, ವಿವಿಪ್ಯಾಟ್ ಯಂತ್ರಗಳನ್ನು ಗ್ರಾಮಸ್ಥರು ಧ್ವಂಸಗೊಳಿಸಿದ್ದಾರೆ. ಜೊತೆಗೆ ಮತಗಟ್ಟೆಯಲ್ಲಿನ ಅಧಿಕಾರಿಗಳ ವಾಹನಗಳಿಗೆ ಹಾನಿ ಮಾಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಂತೆ ಜೆಡಿಎಸ್ ಹಣ ಹರಿಸಿಲ್ಲ, ನಮ್ಮ ಅಭ್ಯರ್ಥಿಗಳಿಗೆ ಹಣ ನೀಡದಿರುವುದಕ್ಕೆ ಬೇಸರವಿದೆ. ಆದರೂ ರಾಜ್ಯದಲ್ಲಿ ಜೆಡಿಎಸ್ ಬಹುಮತ ಪಡೆಯಲಿದೆ ಎಂದು ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವಷ್ಟು ಸಮರ್ಥರಿದ್ದರು. ಆದರೆ ಹಣದ ಕೊರತೆಯಿಂದಾಗಿ ಕನಿಷ್ಠ 25 ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗಿದೆ. ನಾವು ಕೊನೆಯ ಹಂತದಲ್ಲೂ ಪಾರ್ಟಿ ಫಂಡ್ ವಿಚಾರದಲ್ಲಿ ಅಭ್ಯರ್ಥಿಗಳ ನಿರೀಕ್ಷೆಗೆ ತಲುಪಲು ಸಾಧ್ಯವಾಗಲಿಲ್ಲ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಬಳ್ಳಾರಿ ಜಿಲ್ಲೆಯ ಕೊರ್ಲಗುಂಡಿ ಎಂಬಲ್ಲಿ ಗರ್ಭಿಣಿ ಮತಗಟ್ಟೆಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಮತಚಲಾಯಿಸಲು ಮತಗಟ್ಟೆಗೆ ಬಂದಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಇತರೆ ಮತದಾರರು ಆಕೆಯ ನೆರವಿಗೆ ಬಂದಿದ್ದು, ಆಕೆಗೆ ಸುಖ ಪ್ರಸವ ಮಾಡಿಸಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿ ತಿಳಿಸಿದೆ.