ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ರೂಪಾಂತರಗೊಂಡಾಗ ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ. ಈ ಕಲ್ಲುಗಳು ಹರಳುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ತಡೆದಾಗ ನೋವು ಆಗಲು ಶುರುವಾಗುತ್ತದೆ. ಹೆಂಗಸರಿಗಿಂತ ಗಂಡಸರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುವುದು.
ಮೂತ್ರಕೋಶದಲ್ಲಿ ಕಲ್ಲು ಉಂಟಾದ ಬಳಿಕ ಒತ್ತಡದ ಕಾರಣದಿಂದಾಗಿ ನೋವು ಕಾಣಿಸಿಕೊಳ್ಳುವುದು. ಬೆನ್ನು, ಕೆಳಹೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ನೋವು ಕಂಡುಬರುವುದು. ಕಲ್ಲು ದೊಡ್ಡದಾಗಿದ್ದರೆ ಆಗ ಭಾಗ ಊದಿಕೊಳ್ಳುತ್ತದೆ. ಮೂತ್ರ ವಿಸರ್ಜಿಸುವಾಗ ನೋವಾಗುತ್ತಿರುತ್ತದೆ. ಆಗಾಗ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ನೋವಾಗುತ್ತದೆ. ಕೆಲವೊಮ್ಮೆ ಮೂತ್ರದಿಂದ ದುರ್ವಾಸನೆ ಬರುತ್ತದೆ. ಆ ಸಮಯದಲ್ಲಿ ವಾಂತಿ/ವಾಕರಿಕೆಯೂ ಉಂಟಾಗಬಹುದು. ಕಲ್ಲುಗಳು ದೊಡ್ಡದಾದರೆ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಪ್ರತಿದಿನ ನಾವು ಸರಿಯಾಗಿ ನೀರನ್ನು ಕುಡಿಯುವುದು ಅತ್ಯಂತ ಮುಖ್ಯ. ನಾವು ನೀರನ್ನು ಬೇಕಾದಷ್ಟು ಕುಡಿಯದೇ ಇರುವುದು ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣವಾಗಿದೆ. ಜೊತೆಗೆ ಮಸಾಲೆ ಆಹಾರದ ಅತಿಯಾದ ಬಳಕೆ ಈ ಸಮಸ್ಯೆಯನ್ನು ಉಂಟುಮಾಡುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಲವಣಾಂಶಗಳ ಶೇಖರಣೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಲು ದಿನನಿತ್ಯ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಲವಣಾಂಶಗಳು ಮೂತ್ರದ ರೂಪದಲ್ಲಿ ದೇಹದಿಂದ ಹೊರಹೋಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸುಲಭವಾಗಿ ಪಾರಾಗುವ ಸಾಧ್ಯತೆ ಇದೆ.
ನಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗುವ ಸಾಧ್ಯತೆ ಅತಿ ಹೆಚ್ಚು. ಆಹಾರದಲ್ಲಿ ಹೆಚ್ಚು ಉಪ್ಪು ಇದ್ದರೆ ಕಿಡ್ನಿ ಕಲ್ಲುಗಳ ಅಪಾಯ ಕಂಡುಬರುತ್ತದೆ. ಏಕೆಂದರೆ ಇದು ಮೂತ್ರದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಮ್ಮನ್ನು ಮೂತ್ರದಿಂದ ರಕ್ತ ಹೀರಿಕೊಳ್ಳದಂತೆ ತಡೆಯುತ್ತದೆ. ಇದು ಮೂತ್ರದಲ್ಲಿ ಕ್ಯಾಲ್ಸಿಯಂ ಸೇರಿಕೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಅತಿಯಾದ ಉಪ್ಪಿನ ಬಳಕೆ ಕಿಡ್ನಿ ಸ್ಟೋನಿಗೆ ಕಾರಣವಾಗಬಹುದು.
ಕಿಡ್ನಿಯಲ್ಲಿ ಕಲ್ಲು ಸಮಸ್ಯೆಯನ್ನು ತಡೆಯಲು ದಿನಕ್ಕೆ ಕನಿಷ್ಠ ಮೂರು/ನಾಲ್ಕು ಲೀಟರಿನಷ್ಟು ನೀರನ್ನು ಕುಡಿಯಬೇಕು. ಸಿಟ್ರಿಕ್ ಆಮ್ಲ (ಹುಳಿ) ಇರುವ ಆಹಾರವನ್ನು ಹೇರಳವಾಗಿ ಸೇವಿಸುತ್ತಿರಬೇಕು. (ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ ಇತ್ಯಾದಿ). ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಅನಾನಸು ಮತ್ತು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು. ಹೆಚ್ಚಿನ ಹಣ್ಣು, ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಹೆಚ್ಚಾಗಿರಲಿ ಬಾಳೆದಿಂಡು ಮತ್ತು ಅದರ ರಸದ ಸೇವನೆ ಉಪಯುಕ್ತ. ಬಾರ್ಲಿ ನೀರು ಮತ್ತು ಹುರುಳಿ ಕಾಳು/ಹೆಸರು ಕಾಳು ಬೇಯಿಸಿದ ನೀರನ್ನು ಸೇವಿಸುವುದು ಕೂಡ ಈ ಕಾಯಿಲೆಗೆ ಉತ್ತಮ.
ಮೂತ್ರಕೋಶದಲ್ಲಿ ಕಲ್ಲುಗಳು ಇರುವವರು ಆಹಾರದಲ್ಲಿ ಪಥ್ಯ ಮಾಡುವುದು ಉತ್ತಮ. ಎಲೆಕೋಸು, ಹೂಕೋಸುಗಳ ಸೇವನೆ ಮಾಡಬಾರದು. ಜೊತೆಗೆ ಈಗಾಗಲೇ ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಇರುವವರು ಬೀಜಗಳಿರುವ ತರಕಾರಿಗಳು ಅಂದರೆ ಟೊಮ್ಯಾಟೋ, ದೊಣ್ಣಮೆಣಸಿನಕಾಯಿಗಳನ್ನು ಸೇವಿಸಬಾರದು. ಮಸಾಲೆಯುಕ್ತ ಮಾಂಸಾಹಾರದ ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಅಗತ್ಯಕ್ಕಿಂತ ಕಾಫಿ, ಚಹಾ, ಹಸಿರು ಚಹಾ, ಚಾಕಲೇಟ್, ಕೂಲ್ ಡ್ರಿಂಕ್ಸ್, ಸೋಡಾ, ಮದ್ಯಪಾನದ ಸೇವನೆ ಮಾಡದೆ ಇರುವುದು ಒಳ್ಳೆಯದು.