ಹುಬ್ಬಳ್ಳಿ: ಕಾಂಗ್ರೆಸ್ ಪ್ರಣಾಳಿಕೆ ಇದೊಂದು ಮೋಸದ ಪ್ರಣಾಳಿಕೆ. ಜನರನ್ನ ಮರಳು ಮಾಡುವ ಪ್ರಣಾಳಿಕೆ. ಜನರು ಇದನ್ನು ಧಿಕ್ಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಬಿಜೆಪಿ ಈಗಾಗಲೇ ಮಾಡಿದ ಕೆಲಸಗಳನ್ನು ತಾವು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಸುಳ್ಳುನ್ನು ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಮಾಡಲು 6 ಲಕ್ಷ ಕೋಟಿ ಅನುದಾನ ಬೇಕು ಎಂದರು.
ಈಗಾಗಲೇ ಬಿಜೆಪಿ ಜಾರಿಗೆ ತಂದ ಯೋಜನೆಗಳನ್ನು, ಪುನಃ ಜಾರಿ ಮಾಡುವುದಾಗಿ ಹೇಳಿದ್ದಾರೆ. ಜಲಜೀವನ ಮಿಷನ್ ಮೂಲಕ ಮನೆ ಮನೆಗೆ ನಲ್ಲಿನೀರು ಕೊಡುವ ಕೆಲಸ ಈಗಾಗಲೇ ಆರಂಭಿಸಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನಾವು ಮೊದಲೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ಮೀಸಲಾತಿ ಪ್ರಮಾಣ ಶೇಕಡ 75% ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಹೇಗೆ ಮಾಡುತ್ತಾರೆ? ಕೇಂದ್ರದಲ್ಲಿ ಇವರ ಸರ್ಕಾರ ಇದೇಯಾ? ಹಿಂದುಳಿದ ಜನಾಂಗ ನಿಗಮಗಳನ್ನು ಸ್ಥಾಪಿಸುವುದಾಗಿ ಹೇಳಿದೆ. ನಾನು ಈಗಾಗಲೇ ಘೋಷಣೆ ಮಾಡಿ, ಅದೇಶ ಮಾಡಿದ್ದೇನೆ. ಕಾಂಗ್ರೆಸ್ ಅದನ್ನೇ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಸಿಎಂ ಬೊಮ್ಮಾಯಿ ವ್ಯಂಗವಾಡಿದರು.
ಬಜರಂಗದಳ ನಿಷೇಧ ಅಸಾಧ್ಯ:
ಬಜರಂಗದಳ ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಜರಂಗದಳ ನಿಷೇದಿಸಲು ಸಾಧ್ಯವಿಲ್ಲ. ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಬಜರಂಗದಳ ಇಡೀ ದೇಶದಲ್ಲಿ ಇರುವ ಸಂಘಟನೆ. ಇವರಿಗೆ ದೇಶದಲ್ಲಿ ಅಧಿಕಾರವೇ ಇಲ್ಲ, ಅದನ್ನು ಹೇಗೆ ನಿಷೇಧಿಸಲು ಸಾಧ್ಯ? ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಭಜರಂಗದಳ ನಿಷೇಧಿಸುವ ಬಗ್ಗೆ ಮಾತನಾಡಿದ್ದಾರೆ ಎಂದರು.