ಲೈಂಗಿಕ ಕಿರುಕುಳ ಸೇರಿ ಹಲವು ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಬ್ರಿಜ್ ಭೂಷಣ್ ನ ಬಂಧನವಾಗುವವರೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕುಸ್ತಿಪಟುಗಳು ಪಣತೊಟ್ಟಿದ್ದಾರೆ.
ಪ್ರತಿಭಟನೆಯಲ್ಲಿ ನಿರತರಾಗಿರುವ ಭಜರಂಗ್ ಪುನೀಯಾ, ವಿನೇಶ್ ಪೋಘತ್ ಮತ್ತು ಸಾಕ್ಷಿ ಮಲಿಕ್ ಅವರಿಗೆ ಒದಗಿಸಿದ ಭದ್ರತಾ ಸೌಕರ್ಯವನ್ನು ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕುಸ್ತಿಪಟು ಭಜರಂಗ್ ಪುನಿಯಾ, ನಮಗೆ ಒದಗಿಸಿದ ಭದ್ರತಾ ಸೌಕರ್ಯವನ್ನು ನಾವು ನಿರಾಕರಿಸಿದ್ದೇವೆ. ಜಂತರ್ ಮಂತರ್ ನಲ್ಲೇ ನಮಗೆ ರಕ್ಷಣೆ ಇಲ್ಲವಾದರೆ ಇನ್ನೆಲ್ಲಿಯೂ ನಮಗೆ ರಕ್ಷಣೆ ಇರಲಾಗದು. ನಾವು ನಮ್ಮ ಕುಸ್ತಿಪಟುಗಳ ತಂಡದೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ಯಾವುದೇ ರೀತಿಯ ಭದ್ರತಾ ಸೌಕರ್ಯದ ಅಗತ್ಯವಿಲ್ಲ ಎಂದಿದ್ದಾರೆ.
ನಮಗೆ ಕುಸ್ತಿ ಪಂದ್ಯಾವಳಿಗಿಂತ ಈ ಪ್ರತಿಭಟನೆಯೇ ಮುಖ್ಯವಾಗಿದೆ. ನಮ್ಮ ಅಗತ್ಯ ಈ ಪ್ರತಿಭಟನೆಗೆ ಇದೆ, ಕುಸ್ತಿ ಅಖಾಡದಲ್ಲಿ ಅಲ್ಲ. ಇನ್ನು ಬ್ರಿಜ್ ಭೂಷಣ್ ಬಂಧನಕ್ಕೊಳಗಾಗದೆ ಇರುವುದರಿಂದ ಈ ಬಾರಿಯಾ ರ್ಯಾಕಿಂಗ್ ಸೀರೀಸ್ ಗೆ ನಮ್ಮ ಹೆಸರನ್ನು ನೋಂದಾಯಿಸುವುದಿಲ್ಲ ಎಂದು ಭಜರಂಗ್ ಪುನಿಯಾ ಆಕ್ರೋಶ ವ್ಯಕ್ತಪಡಿಸಿದರು.
ಭಜರಂಗ್, ವಿನೇಶ್ ಮತ್ತು ಸಾಕ್ಷಿ ಅವರು ಈ ಬಾರಿಯ ಮತ್ತೊಂದು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ಹಿಂದುಳಿದಿದ್ದಾರೆ. ಫೆ. 1-5ರವರೆಗೆ ಜಾಗ್ರೆಬ್ ನಲ್ಲಿ ನಡೆದ ಪಂದ್ಯ ಹಾಗೂ ಫೆ. 23-26ರವರೆಗೆ ಕೈರೋದಲ್ಲಿ ನಡೆದ ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. ಈ ಹಿಂದೆ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಜರಂಗ್ ಹಾಗೂ ವಿನೇಶ್ ಇಬ್ಬರೂ ಕಂಚಿನ ಪದಕ ಗಳಿಸಿದ್ದರು.