ನೀನು ನಿನಗೆ ಇಷ್ಟವಾಗಿದ್ದನ್ನು ಓದು, ಇಷ್ಟವಾಗಿದ್ದನ್ನು ಮಾಡು ಎಂದು ಹೇಳುವ ಪೋಷಕರು ತುಂಬಾನೇ ಕಡಿಮೆ, ಬಹುತೇಕ ಪೋಷಕರು ತಮ್ಮ ಮಕ್ಕಳು ಏನು ಓದಬೇಕು, ಏನು ಮಾಡಬೇಕು ಎಂಬುವುದನ್ನು ತಾವೇ ನಿರ್ಧಾರ ಮಾಡುತ್ತಾರೆ, ಹಾಗಂತ ಹಾಗೆ ಮಾಡುವ ಪೋಷಕರನ್ನು ದೂರಲು ಸಾಧ್ಯವಿಲ್ಲ, ಮಕ್ಕಳ ಮೇಲಿರುವ ಅತಿಯಾದ ಕಾಳಜಿಯಿಂದ ಆ ರೀತಿ ಮಾಡುತ್ತಾರೆ.
ಕಾಳಜಿ ಒಕೆ, ಆದರೆ ಅತಿಯಾದ ಕಾಳಜಿ ಇದೆಯೆಲ್ಲಾ ಅದು ನಾಟ್ ಒಕೆ, ಏಕೆಂದರೆ ನಾವು ಹೀಗೆ ಮಾಡುವುದರಿಂದ ನಮ್ಮ ಮಕ್ಕಳನ್ನು ರೆಕ್ಕೆ ಬಿಚ್ಚಿ ಹಾರಾಡಲು ಬಿಡುವ ಬದಲಿಗೆ ಪಂಜರದಲ್ಲಿ ಕೂಡಿ ಹಾಕಿದಂತಾಗುವುದು, ಎಷ್ಟೋ ಬಾರಿ ನಮ್ಮ ಅತಿಯಾದ ಒತ್ತಡದಿಂದಾಗಿ ಅವರು ಅವರ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಾರೆ.
ಪೋಷಕರಿಗೆ ಒಂದು ಅದ್ಭುತವಾದ ಸಲಹೆ ಎಂದರೆ ತಂದೆ-ತಾಯಿ ಮಕ್ಕಳಿಗೆ ಓದಿ-ಓದಿ ಅಂತ ಒತ್ತಡ ಹಾಕಬಾರದು. ನಮ್ಮ ಮಕ್ಕಳಿಗಾಗಿ ಸುಂದರವಾದ ಮನೆ ಮಾಡಿದ್ದೇವೆ, ಅವರಿಗೆ ಬೇಕಾಗಿರುವುದೆಲ್ಲಾ ಮಾಡುತ್ತಿದ್ದೇವೆ, ನೀವು ಓದಬೇಕು ಎಂದು ಮಕ್ಕಳಿಗೆ ಒತ್ತಡ ಹಾಕಬೇಡಿ. ಮಕ್ಕಳು ಹೇಗೆ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ ಎಂಬುವುದು ಅವರಿಗೆ ಬಿಟ್ಟು ಬಿಡಬೇಕು.ಹೀಗೆ ನಾವು ಮಕ್ಕಳಿಗೆ ಒತ್ತಾಯ ಹಾಕುವುದರಿಂದ ಮಕ್ಕಳಿಗೆ ಓದಲು ಆಸಕ್ತಿ ಕಡಿಮೆಯಾಗುವುದು.
ನಿಮ್ಮ ಮಗ/ಮಗಳಿಗೆ ಏನು ಆಸಕ್ತಿ ಇದೆಯೋ ಅದರತ್ತ ಫೋಕಸ್ ಮಾಡು ಎಂದು ಹೇಳದೆ ಎಂಜಿನಿಯರ್ ಓದು, ಡಾಕ್ಟರ್ ಓದು ಎಂದು ಒತ್ತಡ ಹಾಕಬೇಡಿ. ಅವರಾಗಿ ಆಸಕ್ತಿ ವಹಿಸಿದರೆ ಮಾತ್ರ ಅವರು ಆ ವಿಷಯವನ್ನು ಆಸಕ್ತಿಯಿಂದ ಕಲಿಯುತ್ತಾರೆ. ಇಲ್ಲದಿದ್ದರೆ ಅವರಿಗೆ ಆ ವಿಷಯ ಬೋರಾಗುವುದು, ಓದಲು ಆಸಕ್ತಿ ಕಡಿಮೆಯಾಗುವುದು.
ಎಷ್ಟೇ ಬುದ್ಧವಂತರಾಗಿದ್ದರೂ ಆಸಕ್ತಿ ಇಲ್ಲ ಎಂದಾದರೆ ಬೋರ್ ಅನಿಸುವುದು, ಕಲಿಯುವ ಕಡೆ ಗಮನ ಹರಿಸುವುದಿಲ್ಲ, ಇದರಿಂದ ವಿಷಯವನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು. ಕೆಲವರು ಆಸಕ್ತಿ ಇಲ್ಲದ ವಿಷಯವನ್ನು ಕಲಿಯಲು ಕಷ್ಟಪಟ್ಟು ಅನುತ್ತೀರ್ಣ ಆಗುತ್ತಾರೆ. ಆದ್ದರಿಂದ ನಿಮ್ಮ ಮಗ/ಮಗಳಿಗೆ ಇಷ್ಟವಾಗಿರುವ ವಿಷಯವನ್ನು ಕಲಿಯಲು ಪ್ರೋತ್ಸಾಹಿಸಿ. ಅವರಾಗಿ ಇಷ್ಟಪಟ್ಟು ತಾವೇನು ಓದಬೇಕು ಎಂದು ತೀರ್ಮಾನಿಸಿದರೆ ಅವರಿಗೇ ಒಂದು ಜವಾಬ್ದಾರಿ ಬರುತ್ತದೆ, ಆವಾಗ ಎಷ್ಟೇ ಕಷ್ಟವಾದರೂ ತಾವು ಸಾಧನೆ ಮಾಡಬೇಕು ಎಂದು ಮನಸ್ಸಿಟ್ಟು ಓದುತ್ತಾರೆ.
ಯಾವಾಗ ಪೋಷಕರು ಓದು-ಓದು ಎಂದು ಒತ್ತಡ ಹಾಕುತ್ತಾರೋ ಆಗ ಮಕ್ಕಳ ಆತ್ಮವಿಶ್ವಾಸ ಕಡಿಮೆಯಾಗುವುದು. ನಾನು ನನ್ನ ಪೋಷಕರಿಗೆ ಒಳ್ಳೆಯ ಮಗ /ಮಗಳು ಆಗಿಲ್ಲ ಎಂಬ ಖಿನ್ನತೆ ಕಾಡಲಾರಂಭಿಸಿ ಆತ್ಮವಿಶ್ವಾಸ ಕಡಿಮೆಯಾಗುವುದು, ಹಾಗಾಗದಿರಲು ಮಕ್ಕಳ ಮೇಲೆ ಓದುವ ವಿಷಯದಲ್ಲಿ ಒತ್ತಡ ಹಾಕಬಾರದು. ಹೆಚ್ಚು ಓದಿದವರು ಅಷ್ಟೇ ಜೀವನದಲ್ಲಿ ಮುಂದೆ ಬರುತ್ತಾರೆ ಎಂಬುವುದು ಒಂದು ತಪ್ಪು ಕಲ್ಪನೆ, ತರಗತಿಯಲ್ಲಿಯೇ ಅತಿ ಕಡಿಮೆ ಅಂಕ ಗಳಿಸುತ್ತಿದ್ದ ವ್ಯಕ್ತಿ ಜೀವನದಲ್ಲಿ ಅತೀ ಎತ್ತರಕ್ಕೆ ಬೆಳೆದಿರುವ ಎಷ್ಟೋ ಉದಾಹರಣೆಗಳಿಗೆ. ಆದ್ದರಿಂದ ಮಕ್ಕಳ ಭವಿಷ್ಯವನ್ನು ಅಂಕ ರೂಪಿಸುತ್ತದೆ ಎಂಬುವುದು ಸುಳ್ಳು, ಬದಲಿಗೆ ಆತ್ಮವಿಶ್ವಾಸ ರೂಪಿಸುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿದರೆ ಎಂಥ ಸವಾಲಿನ ಪರಿಸ್ಥಿತಿ ಗೆದ್ದು ಜೀವನದಲ್ಲಿ ನೆಲೆ ಕಂಡು ಕೊಳ್ಳಲು ಸಾಧ್ಯವಾಗುವುದು