ಎಲ್ಲಾ ಪ್ರಮುಖ ಸುದ್ದಿಗಳ ಹೂರಣವೇ ಈ ರೌಂಡ್ ಅಪ್! ಏನೆಲ್ಲಾ ಸುದ್ದಿಗಳಿವೆ ನೋಡಿ
ರಾಷ್ಟ್ರೀಯ ಸುದ್ದಿಗಳು
ಲೇಹ್- ಲಡಾಖ್ ನಲ್ಲಿ ಮಳೆ ಮತ್ತು ಹಿಮಪಾತ: ರೆಡ್ ಅಲರ್ಟ್ ಘೋಷಣೆ
ಭಾರಿ ಮಳೆಹಾಗೂ ಅಕಾಲಿಕ ಹಿಮಪಾತದಿಂದ ಲಡಾಖ್ ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯ ನಂತರ ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಲ್ಲಿ ರಾತ್ರಿ ಇಡೀ ಹಿಮಪಾತವಾಗಿದೆ. ಕಾರ್ಗಿಲ್ನ ರಂಗ್ಡಮ್ ಗ್ರಾಮದಲ್ಲಿ ಸುಮಾರು ಮೂರು ಇಂಚಿನಷ್ಟು ಹಿಮಪಾತವಾಗಿದ್ದು, ಪೆನ್ಸಿಲಾ, ಝನ್ಸ್ಕರ್ ಮತ್ತು ಕಾರ್ಗಿಲ್ ಸುತ್ತಮುತ್ತಲಿನ ಬೆಟ್ಟಗಳು ಸೇರಿದಂತೆ ಇತರ ಪ್ರದೇಶಗಳು ಸಹ ಹಿಮದಿಂದ ಆವೃತವಾಗಿವೆ.
ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾಗುತ್ತಿದ್ದು, ಪ್ರವಾಹದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಅಕ್ರಮ ಮೀನುಗಾರಿಕೆ ಆರೋಪದಡಿ 15 ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ
ಒಂದು ವಾರದ ವಿರಾಮದ ಬಳಿಕ ರಾಮೇಶ್ವರಂನಿಂದ ಸುಮಾರು 400 ದೋಣಿಗಳಲ್ಲಿ 2500 ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಶ್ರೀಲಂಕಾ ನೌಕಾಪಡೆ ಮೀನುಗಾರರ ದೋಣಿಯನ್ನು ಬೆನ್ನಟ್ಟಿತ್ತು ಎಂದು ವರದಿ ತಿಳಿಸಿದೆ.
ಹವಾಮಾನ ವೈಪರೀತ್ಯದಿಂದ ಒಂದು ವಾರದ ವಿರಾಮದ ನಂತರ, ರಾಮೇಶ್ವರಂನಿಂದ ಸುಮಾರು 400 ದೋಣಿಗಳಲ್ಲಿ ಸುಮಾರು 2,500 ಮೀನುಗಾರರು ಸಮುದ್ರಕ್ಕೆ ಹೋಗಿದ್ದರು. ಈ ವೇಳೆ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ರಾತ್ರಿ ಬೆನ್ನಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ದೋಣಿಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ. ಇದರಲ್ಲಿದ್ದ 15 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಐಎಂಬಿಎಲ್ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು 15 ಮೀನುಗಾರರನ್ನು ಬಂಧಿಸಿದೆ.
ಶ್ರೀಲಂಕಾದ ಡೆಲ್ಫ್ಟ್ ದ್ವೀಪದಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಭಾರತೀಯ ಮೀನುಗಾರರ ಎರಡು ಟ್ರಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯ ಸುದ್ದಿಗಳು
ಒಂದನೇ ತರಗತಿಗೆ ಸೊನ್ನೆ ದಾಖಲಾತಿ ಪಡೆದ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳ ಸರ್ಕಾರಿ ಶಾಲೆಗಳು!
ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಒಬ್ಬನೇ ವಿದ್ಯಾರ್ಥಿಯೂ ದಾಖಲಾಗದ ಪರಿಸ್ಥಿತಿ ಎದುರಿಸುತ್ತಿವೆ.
ದ.ಕ ಮತ್ತು ಉಡುಪಿಯ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶಕ್ಕೆ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಿಲ್ಲ ಎಂದು ಜೂ.30ರವರೆಗಿನ ಅಂಕಿಅಂಶಗಳು ದೃಢಪಡಿಸಿವೆ ಎಂದು ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ತರಗತಿಗಳು ಪ್ರಾರಂಭವಾಗಿರುವ ಇತರ ಕೆಲವು ಶಾಲೆಗಳಿಗೆ ಕೆಲವು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪುತ್ತೂರು ತಾಲೂಕಿನ ಎರಡು, ಬಂಟ್ವಾಳದ ನಾಲ್ಕು, ಬೆಳ್ತಂಗಡಿಯಲ್ಲಿ ಮೂರು, ಮಂಗಳೂರು ಉತ್ತರದಲ್ಲಿ 2, ಮಂಗಳೂರು ದಕ್ಷಿಣದಲ್ಲಿ 2, ಮೂಡುಬಿದಿರೆಯ ಮೂರು ಮತ್ತು ಸುಳ್ಯ ತಾಲೂಕಿನ ಎಂಟು ಶಾಲೆಗಳು ಸೇರಿದಂತೆ ದ.ಕ.ದ 24 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ದಾಖಲಾಗಿದೆ.
ದಾಖಲಾತಿಗೆ ಇನ್ನೂ ಸಮಯವಿದ್ದು, ಮಕ್ಕಳು ಒಂದನೇ ತರಗತಿಗೆ ಸೇರುವ ಸಾಧ್ಯತೆ ಇದೆ ಎಂದು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ದಯಾನಂದ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ 31 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ದಾಖಲಾಗಿದೆ. ಇದರಲ್ಲಿ ಉಡುಪಿಯ ನಾಲ್ಕು, ಬ್ರಹ್ಮಾವರದ ನಾಲ್ಕು, ಕುಂದಾಪುರದ ಐದು, ಬೈಂದೂರಿನ ಒಂಬತ್ತು ಮತ್ತು ಕಾರ್ಕಳ ತಾಲೂಕಿನ ಒಂಬತ್ತು ಶಾಲೆಗಳು ಸೇರಿವೆ.
ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಪ್ರಬಲವಾಗಿರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಸಿದ್ಧರಿಲ್ಲ, ತಮ್ಮ ಮನೆ ಬಾಗಿಲಿಗೆ ಮಕ್ಕಳಿಗೆ ಬಸ್ ಸೇವೆಗಳನ್ನು ಒದಗಿಸುತ್ತಾರೆ, ಇದು ಪೋಷಕರನ್ನು ಆಕರ್ಷಿಸುತ್ತದೆ ಎಂದು ಕ್ಷೇತ್ರದ ತಜ್ಞರು ಹೇಳುತ್ತಾರೆ.
ದೈವಾರಾಧನೆ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ಬಂಧನ
ತುಳುನಾಡಿನಲ್ಲಿ ದೈವಾರಾಧನೆ ಆಚರಣೆ ಕುರಿತು ಮಹಿಳೆಯರ ಅಶ್ಲೀಲ ಚಿತ್ರಗಳ ಜೊತೆಗೆ ನಕಲಿ ಟ್ವಿಟರ್ ಖಾತೆ ಬಳಸಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯು ಇಲ್ಲಿನ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.
ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153 (ಎ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಎಂ ಧಿಡೀರ್ ಬೆಂಗಳೂರು ರೌಂಡ್ಸ್; ಇಂದಿರಾ ಕ್ಯಾಂಟೀನ್ ಪರಿಶೀಲನೆ
ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ದಿಢೀರ್ ಬೆಂಗಳೂರು ಪ್ರದಕ್ಷಣೆ ಹಮ್ಮಿಕೊಂಡು ಮೊದಲಿಗೆ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಪಾಲಿಕೆಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮುನ್ಸೂಚನೆ ನೀಡಿರಲಿಲ್ಲ. ಮೊದಲು ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39 ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ತಿಂಡಿ ಕೇಳಿದರು.
ಆದರೆ ಅದಾಗಲೇ ಅಲ್ಲಿ ತಿಂಡಿ ಖಾಲಿ ಆಗಿತ್ತು. ಎಷ್ಟು ಪ್ಲೇಟ್ ಬರುತ್ತದೆ ಎಂದು ಕ್ಯಾಂಟೀನ್ ಮ್ಯಾನೇಜರ್ ಗೆ ಕೇಳಿದಾಗ 208 ಪ್ಲೇಟ್ ಬಂದು ಖಾಲಿ ಆಗಿದೆ ಎಂದರು.
ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ ಎಂದು ನಗೆ ಬೀರಿದರು. ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಕೊಳ್ಳಲು ಸೂಚನೆ ನೀಡಿದರು.
ನಂತರ ದಾಸರಹಳ್ಳಿಯ 15ನೇ ವಾರ್ಡ್ ಕ್ಯಾಂಟೀನ್ ಗೆ ಭೇಟಿ ನೀಡಿ ತಾವು ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ, ಮಾಹಿತಿ ಪಡೆದರು. ಆ ವ್ಯಕ್ತಿಯಿಂದ ಕ್ಯಾಂಟೀನ್ ಸಿಬ್ಬಂದಿ ₹5 ಬದಲು ₹10 ಪಡೆದಿರುವುದು ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಕುಂದುಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಆ ಸಂಪರ್ಕ ದುರಸ್ಥಿಯಲ್ಲಿರುವುದನ್ನು ಗಮನಿಸಿದರು. ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಅಲ್ಲದೆ ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂತಾರಾಷ್ಟ್ರೀಯ ಸುದ್ದಿಗಳು
ಸುಡಾನ್ ನಲ್ಲಿ ನಿಲ್ಲದ ಘರ್ಷಣೆ: ವೈಮಾನಿಕ ದಾಳಿಯಿಂದ ಕನಿಷ್ಠ 22 ಜನ ಸಾವು
ಸುಡಾನ್ ದೇಶದಲ್ಲಿ ನಡೆಯುತ್ತಿರುವ ಮಿಲಿಟರಿ ಬಣಗಳ ಸಂಘರ್ಷದಿಂದ ನಲುತ್ತಿದ್ದು, ದೇಶದಲ್ಲಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವೆ ತೀವ್ರ ಘರ್ಷಣೆ 12 ವಾರಗಳಿಂದ ನಡೆಯುತ್ತಿದೆ. ಇತ್ತೀಚಿಗೆ ನಡೆದ ವೈಮನಾನಿಕ ದಾಳಿಯಿಂದ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಏಪ್ರಿಲ್ ನಲ್ಲಿ ರಾಜಧಾನಿ ಖಾರ್ಟೂಮ್ ನ ಅವಳಿ ನಗರಗಳಾದ ಜಮ್ದುರ್ಮನ್ ಮತ್ತು ಬಹ್ರಿಯಲ್ಲಿನ ಹೋರಾಟದಲ್ಲಿ ಅರೆಸೈನಿಕ ಪಡೆಗಳು ಪ್ರಾಬಲ್ಯ ಪಡೆದುಕೊಂಡಿದ್ದವು.
ಈ ಬಿಕ್ಕಟ್ಟನ್ನು ತಪ್ಪಿಸಲು ಹಲವು ದೇಶಗಳು ಮಧ್ಯ ಪ್ರವೇಶಿಸಿದರು ಕೂಡ ದೇಶದೊಳಗೆ ಆಳವಾದ ಅಂತರ್ಯುದ್ಧ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಈವರೆಗೆ ಕನಿಷ್ಠ 1,133 ಜನರು ಮೃತಪಟ್ಟಿದ್ದಾರೆ.
ಕೊರ್ಡೋಫಾನ್, ಡಾರ್ಫರ್ ಮತ್ತು ರಾಜಧಾನಿಯಲ್ಲಿಯೂ ಕೂಡ ಘರ್ಷಣೆ ಹೆಚ್ಚಾಗಿದ್ದು, ಸುಮಾರು 7 ಲಕ್ಷ ಜನ ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ.