ಬಾಗಲಕೋಟೆ: ಮಳೆಗಾಲ ಆರಂಭವಾಗಿ ಮುಂಗಾರು ಮಳೆ ಕಾಣದೇ ಬರಡಾಗಿದ್ದ ಮುಳಗಡೆ ನಗರಿ ಬಾಗಲಕೋಟೆ ನಗರ ಶನಿವಾರ ಅಕ್ಷರಶಃ ಮಲೆನಾಡಾಗಿ ಪರಿವರ್ತನೆಗೊಂಡಿತು.
ಬೆಳಗ್ಗೆಯಿಂದ ಬಾಗಲಕೋಟೆ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆ ಸುರಿಯಿತು. ಸಂಜೆ ವರೆಗೂ ಬಿಟ್ಟು ಬೀಡದೆ ಮಳೆ ಸುರಿದ ಪರಿಣಾಮ ಶಾಲಾ, ಕಾಲೇಜುಗಳಿಗೆ ತೆರಳಲು ಮಕ್ಕಳು, ಕಚೇರಿಗೆ ತೆರಳಿ ಮನೆಗೆ ವಾಪಾಸ್ ಆಗಲು ನೌಕರರು ಪರದಾಡಿದರು. ಮಾರುಕಟ್ಟೆ ಪ್ರದೇಶ, ತಗ್ಗು ದಿನ್ನಿಗಳಲ್ಲಿ ನೀರು ನಿಂತು ವ್ಯಾಪಾರ , ವಹಿವಾಟಿಗೆ ತೀವ್ರ ಸಮಸ್ಯೆ ಉಂಟಾಯಿತು. ಚರಂಡಿಗಳೆಲ್ಲ ತುಂಬಿ ರಸ್ತೆಗಳಲ್ಲಿ ಹರಿದಾಡಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಎಲ್ಲೆಡೆ ಹಸಿರು ವನಗಳ ಮಧ್ಯ ಮಳೆಯ ತುಂತುರು ಹನಿ ಮಲೆನಾಡಿನಂತೆ ಕಂಗೂಳಿಸುವಂತೆ ಮಾಡಿತು.
ಇನ್ನು ಶನಿವಾರ ಬೀಳಗಿ, ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ, ಬಾದಾಮಿ, ಹುನಗುಂದ, ಗುಳೇದಗುಡ್ಡ, ಇಳಕಲ್ಲ ಹಾಗೂ ಬಾಗಲಕೋಟೆ ತಾಲೂಕಿನ ವಿವಿಧ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿತು. ಅಲ್ಲಲ್ಲಿ ತುಂತುರು ಮಳೆಯಾಗಿರುವುದು ವರದಿಯಾಗಿದೆ.