ಇಲ್ಲಿ ಗಂಗಾನದಿ ಎಷ್ಟು ವಿಸ್ತಾರವಾಗಿದೆ.. ಗೊತ್ತಾ..? ಸಮುದ್ರದಂತೆ ಅಗಲ..ಇನ್ನೊಂದು ದಡ ಅಬ್ಬಬ್ಬಾ…ಎಷ್ಟು ದೂರ ಇದೆ..ಕಣೇ..
ನನಗೆ ಮೈ ರೋಮಾಂಚನವಾಯಿತು. ದೇವನದಿ..ಗಂಗಾ ಮಾತೆ ಮನಸ್ಸಿಗೆ ಏನೋ ಒಂಥರಾ ಹೇಳಲಾಗದಷ್ಟು ಸಂತೋಷ..
ಒಂದು ಕಾಲದಲ್ಲಿ ಕಾಶಿಗೆ ಹೋಗಲು ಗಂಗೆಯನ್ನು ದಾಟಲು ಜಂಗಲ್ ಅನ್ನುವ ದೊಡ್ಡ ಬೋಟಗಳಲ್ಲಿ ನಮ್ಮ ವಾಹನ,ಹಾಗೂ ನಮ್ಮನ್ನು ದಾಟಿಸುತ್ತಿದ್ದರಂತೆ..ಈಗ ಕಾಶಿಗೆ ಹೋಗಲು ಕೆಳಗೆ ರೈಲು ಹಳಿಗಳು…ಹಾಗೂ ಮೇಲ್ಗಡೆ ಇತರ ವಾಹನಗಳು ಸಂಚರಿಸುವಂತಹ ದೊಡ್ಡ ಸೇತುವೆ ಮಾಡಿದ್ದರೆ..ಹಳೆ ಕಾಶಿಪಟ್ಟಣದಲ್ಲಿ ಬಸ್ ಸಂಚಾರವಿಲ್ಲ.ಗಂಗೆಯ ತಟದಲ್ಲಿರುವ ಊರುಗಳಿಗೆ ಬಸ್ ವ್ಯವಸ್ಥೆಯೂ ಇಲ್ಲ. ಇಲ್ಲಿಯ ಇಕ್ಕಟ್ಟಾದ ರಸ್ತೆಗಳು ಕಾಲ್ನಡಿಗೆ,ಸೈಕಲ್ ,ದ್ವಿಚಕ್ರ ವಾಹನಗಳು,ಸೈಕಲ್ ರಿಕ್ಷಾ,ರಿಕ್ಷಾಗಳ ಸಂಚಾರಕಷ್ಟೇ ಯೋಗ್ಯವಾಗಿವೆ. ಎದುರು ಬದುರಾಗಿ ಎರಡು ರಿಕ್ಷಾಗಳೂ ಹೋಗುವಂತಿಲ್ಲ. ಇವುಗಳ ನಡುವೆ ದನ,ಎಮ್ಮೆಗಳನ್ನು ಕಟ್ಟುವರು,ಪಾತ್ರೆ ತೊಳೆಯುವುದು,ಸ್ನಾನ ಮಾಡುವುದು ಎಲ್ಲವೂ ಅಲ್ಲೇ..ಮನೆಯ ಅಂಗಳವೂ ಅದೇ..ಅಲ್ಲೇ ಬದಿಯಲ್ಲಿ ಶೌಚ..ಕಾಲಿಡುವದು ಎಲ್ಲಿ ಎಂದೇ ಗೊತ್ತಾಗುವುದಿಲ್ಲ. ಎಲ್ಲಿ ನೋಡಿದರೂ ಓಣಿಗಳೇ…ಓಣಿಗಳು.ಅದೂ ಅಡ್ಡಾದಿಡ್ಡಿ ಓಣಿಗಳು..ಕೆಲವೆಡೆ ಬಾಣದ ಗುರುತು ಹಾಕಿ ರಸ್ತೆಗಳನ್ನು ಸೂಚಿಸಿದ್ದಾರೆ. ಇಲ್ಲಿ ವಾಹನ ಸಂಚಾರದ ಕಲ್ಪನೆಯೇ ಭಯಂಕರವಾಗಿ ಕಾಣಿಸಿತು. ಇಲ್ಲಿ ಗಂಗೆಯ ದಡದಲ್ಲಿ 80 ಘಾಟ್ ಗಳಿವೆಯಂತೆ. ಇವನ್ನು ಅಸ್ಸೀ ಘಾಟ್ ಎನ್ನುತ್ತಾರಂತೆ. ಈ ಒಂದೊಂದು ಘಾಟ್ ಒಂದೊಂದು ಊರಿನಂತಿರಬೇಕೆಂದೆನಿಸಿತು..
ಸಾಲಾಗಿ ಮೆಟ್ಟಲುಗಳಿವೆ. ಪ್ರತಿಯೊಂದು ಘಾಟ್ನಲ್ಲೂ ಮೆಟ್ಟಲಿಳಿದು ಹೋದರೆ ಗಂಗೆಯ ಬುಡ ತಲುಪುತ್ತೇವೆ.ಸಾಲಾಗಿ ಬೋಟ್ ಗಳು ನಿಂತಿರುತ್ತವೆ. ನಾವು ಯಾವ ಘಾಟ್ ಗೆ ಹೋಗಬೇಕು ಎಂದು ಹೇಳಿದರೆ ಕರೆದೊಯ್ಯುತ್ತಾರೆ. ಬಸ್, ಆಟೋಗಳಲ್ಲಿ ಕರೆಯುತ್ತಾರಲ್ಲಾ..ಊರಿನ ಹೆಸರು ಹಿಡಿದು…ಹಾಗೆಯೇ ಈ ಬೋಟ್ ಗಳಲ್ಲೂ ಕರೆಯುತ್ತಾರೆ. ಒಂದಷ್ಟು ಜನ ಆದೊಡನೆ ಕರೆದೊಯ್ಯುತ್ತಾರೆ.ಸಿಟಿ ಬಸ್ಸಿನ ಹಾಗೆ ಎನ್ನಬಹುದು. ಯಾವ ಘಾಟಿಗೆ ಹೋಗಬೇಕೋ ಆ ಘಾಟ್ ಸಿಕ್ಕಿದೊಡನೆ ಇಳಿಸಿ ಮುಂದಿನ ಘಾಟ್ ಗೆ ಹೋಗುತ್ತಾರೆ. ಅಲ್ಲಿಂದ ಮೆಟ್ಟಲು ಹತ್ತಿದರೆ ಮನೆ, ಊರು , ಮಠಮಂದಿರ,ಅಂಗಡಿಗಳು ಸಿಕ್ಕುತ್ತವೆ. ನಮ್ಮಂಥಹ ಪ್ರವಾಸಿಗಳಿಗೆ ಎಲ್ಲಾ ಘಾಟ್ ಗಳಿಗೂ ನದಿಯಲ್ಲೇ ಸಂಚಾರ ಮಾಡಿಸಿ ಎಲ್ಲಾ ಘಾಟ್ ಗಳ ದರ್ಶನ,ಆಯಾ ಘಾಟಿನ ವೈಶಿಷ್ಟ್ಯಗಳನ್ನು ಹೇಳುತ್ತಾ ಅಂಬಿಗರೇ ಮಾರ್ಗದರ್ಶಿಗಳಾಗುತ್ತಾರೆ.
ಪ್ರವಾಸಿ ಕ್ಷೇತ್ರಗಳಲ್ಲಿ ಸೈಟ್ ಸೀಯಿಂಗ್ ಗೆ ಅಂತಾ ಟೂರಿಸ್ಟ್ ಬಸ್ ಗಳ ವ್ಯವಸ್ಥೆ ಇರುತ್ತಲ್ಲಾ ಹಾಗೆಯೇ ಈ ಬೋಟ್ ಮತ್ತು ಅಂಬಿಗರು ಎಂದೆನಿಸಿತು.ಈಗ ಇನ್ನೂ ಹತ್ತು ಹದಿನೈದು ಘಾಟ್ ಗಳು ಹೆಚ್ಚಾಗಿವೆ..ಆಮೇಲೆ ಕಟ್ಟಿದವಂತೆ. ಇಲ್ಲಿ ಘಾಟ್ ಗಳು ಒಂದೇ ತರಹ ಇಲ್ಲ…ಕೆಲವು ಮರಾಠ ಶೈಲಿಯ ವಾಸ್ತು,ಕೆಲವು ರಜಪೂತ ಶೈಲಿಯವು,ಜಯಪುರ ಶೈಲಿ ಹೀಗೆ ಯಾರ ಕಾಲದಲ್ಲಿ ಯಾರು ಕಟ್ಟಿಸಿದರೋ ಆ ವಾಸ್ತು ಶೈಲಿಯಲ್ಲಿವೆ..
ನಮ್ಮನ್ನು ನಮ್ಮ ಯಾತ್ರೆಯ ಸಂಘಟಕರು ಮೊದಲೇ ವ್ಯವಸ್ಥೆ ಮಾಡಿದ್ದರಲ್ಲವೇ..?ನಮ್ಮ ಮಾರ್ಗದರ್ಶಿಗಳು ಎರಡು ಬೋಟಲ್ಲಿ ಕಾಶೀಮಠಕ್ಕೆ ಕರೆದೊಯ್ದರು. ವಾರಣಾಸಿ (ಕಾಶಿ)ಯಲ್ಲಿರುವ ಈ ಕಾಶೀಮಠ ಬ್ರಹ್ಮಘಾಟ್ ಲ್ಲಿ ಇದೆ. ಎಲ್ಲರೂ ಈ ಘಾಟ್ ನಲ್ಲಿ ಇಳಿದೆವು. ನಮ್ಮನ್ನು ಅಲ್ಲಿ ಬಿಟ್ಟು ಗಂಡಸರೆಲ್ಲಾ ಹಲವಾರು ಮೆಟ್ಟಲುಗಳನ್ನು ಹತ್ತಿ ಊರೊಳಗಿರುವ ಒಬ್ಬರು ಭಟ್ಟಮಾಮನ ಮನೆಗೆ ಶ್ರಾದ್ಧ ಮಾಡುವ ಸಲುವಾಗಿ ಹೋದರು. ನಾವು ಹೆಂಗಸರು ಇಪ್ಪತ್ತು ಮೆಟ್ಟಲುಗಳನ್ನು ಹತ್ತುವಾಗ ಕಾಶೀಮಠಕ್ಕೆ ಹೋಗಲು ನಮ್ಮ ಎಡಬದಿಯಿಂದ ಕಡಿದಾದ ಮೆಟ್ಟಲುಗಳು ಸಿಕ್ಕುತ್ತವೆ. ಕೆಲವರು ಆ ಮೆಟ್ಟಲುಗಳನ್ನು ಹತ್ತಿ ಕಾಶೀಮಠಕ್ಕೆ ಹೋದರು. ಉಳಿದ ಕೆಲವರು..ನಾನೂ ಸೇರಿ ಗಂಗೆಯ ದಡದಲ್ಲಿಯೇ ನಮ್ಮ ಗಂಡಂದಿರನ್ನು ಕಾಯುತ್ತಾ ಕುಳಿತೆವು. ಶ್ರಾದ್ಧದ ಕಾರ್ಯ ಆಗದೆ ಗಂಡಸರು ಊಟ ಮಾಡುವಂತಿಲ್ಲ ಅವರ ಊಟ ಆಗದೆ ಅವರ ಹೆಂಡತಿಯರು ಊಟ ಮಾಡುವುದು ಸರಿಯಲ್ಲ…ಎಂದು ಕಾಯುತ್ತಾ ಕುಳಿತೆವು. ಮಠಕ್ಕೆ ಹೋಗಲಿರುವ ಕಡಿದಾದ ಮೆಟ್ಟಲಿನ ಎಡಬದಿಯ ಮೆಟ್ಟಲಿನ ಮೇಲೆ ನಾವು ಕುಳಿತು ಗಂಗೆಯನ್ನೂ,ಅಲ್ಲಿ ಓಡಾಡುತ್ತಿರುವ ಜನರನ್ನೂ, ಮಕ್ಕಳನ್ನೂ,ಪ್ರವಾಸಿಗರನ್ನೂ,ಪ್ರಾಣಿಗಳನ್ನೂ ನೋಡುತ್ತಾ ಕುಳಿತೆವು.
ಗಂಟೆ ಐದಾಗುವಾಗ ಮೇಯಲು ಹೋದ ಎಮ್ಮೆಗಳ ಗುಂಪೊಂದು ಬಂತು.ಒಬ್ಬ 17-18 ವರ್ಷದ ಹುಡುಗ ಅಟ್ಟಿಸಿಕೊಂಡು ಬಂದ. ಅವನು ಹನ್ನೆರಡನೇ ತರಗತಿ ಓದುತ್ತಿದ್ದಾಂತೆ. ಕಾಲೇಜು ಬಿಟ್ಟ ಮೇಲೆ ಇವುಗಳನ್ನು ಕರೆದು ಕೊಂಡು ಬರುತ್ತಾನಂತೆ.
ಚಿನ್ನಕ್ಕಾ…ಆ ಎಮ್ಮೆಗಳು ಎಷ್ಟು ಚಂದ ಗೊತ್ತಾ…ಥಳಥಳ ಅಂತ ಹೊಳೆಯುವ ಕಪ್ಪು ಬಣ್ಣ..ಅದಷ್ಟೇ ಗಂಗೆಯಲ್ಲಿ ಮುಳುಗಿ ಬಂದಿರಬೇಕು..ಹಾಗಾಗಿ ಶುಭ್ರವಾಗಿಯೂ ಇದ್ದವು. ಆಕಾರದಲ್ಲೂ ತುಂಬಾ ದೊಡ್ಡದಾಗಿ…ಒಂದೇ ಒಂದು ಎಲುಬು ಕಾಣುತ್ತಿರಲಿಲ್ಲ. ಅಬ್ಬಾ ಆ ಕೆಚ್ಚಲುಗಳು…ನೂರಿನ್ನೂರು ಲೀಟರ್ ಗಿಂತಲೂ ಹೆಚ್ಚು ಹಾಲು ಕೊಡುವಂತವು. ನಾವು ಕೂತಲ್ಲೇ ಬುಡುಬುಡು ಎಂದು ಮೆಟ್ಟಲು ಹತ್ತಿ ಬಂದವು. ಮತ್ತೆ ನಮ್ಮ ಬಲಕ್ಕೆ ತಿರುಗಿ ಕಾಶೀ ಮಠದ ಆ ಕಡಿದಾದ, ನಮ್ಮ ಕಾಲುಗಳನ್ನೇ ಪೂರ್ತಿ ಊರಲಾಗದಂತಹ ಸಪೂರ ಮೆಟ್ಟಲುಗಳನ್ನು ಹತ್ತುವಾಗ..ಆ ದೊಡ್ಡ ದೇಹ ಎಲ್ಲಿ ಕಾಲು ಜಾರಿ ನಮ್ಮ ಮೇಲೆ ಬೀಳುತ್ತವೋ…ಎಂಬ ಭಯದಿಂದ ಜೀವವನ್ನು ಮುಷ್ಟಿಯಲ್ಲಿ ಹಿಡಿದು,ಕಾಲು ಮರಗಟ್ಟಿದಂತೆ ನಾನು ಮತ್ತು ಲಕ್ಷ್ಮೀ ಮಾಯಿ ಕಣ್ಣುಕಣ್ಣು ಬಿಟ್ಟು ಕುಳಿತೆವು. ಆ ಮೆಟ್ಟಲಿನ ಬುಡದಲ್ಲಿ ನಾವಿಬ್ಬರೇ ಕುಳಿತಿದ್ದೆವು.
ಆ ಎಮ್ಮೆಗಳು ಆ ಕಿರಿದಾದ ಮೆಟ್ಟಲುಗಳ ಮೇಲೆ ಸಲೀಸಾಗಿ ಹೋದವು. ನಾವು ಬಿಟ್ಟ ಕಣ್ಣು ಬಿಟ್ಟು ನೋಡುತ್ತಲೆ ಕುಳಿತೆವು. ಉಳಿದವರೆಲ್ಲಾ ಇನ್ನೂ ಮೇಲಿನ ಮೆಟ್ಟಲ ಮೇಲೆ ತುಂಬಾ ದೂರದಲ್ಲಿ ಕುಳಿತಿದ್ದರು. ಮಠದ ಪಕ್ಕದ ಓಣಿಯಲ್ಲಿ ಹೋದರೆ ಅವುಗಳ ಮಾಲಿಕರ ಮನೆಗಳಿವೆಯಂತೆ..ಮತ್ತೆ ಹಾಗೆಯೇ ಓಣಿಯಲ್ಲಿ ಒಂದು…ಒಂದುವರೆ ಕಿಮೀ ಮುಂದೆ ಹೋದರೆ ಮನೆಗಳೂ, ಕಾಶೀಮಠದ ಮುಂಭಾಗ..ಊರು ಎಲ್ಲವೂ ಸಿಕ್ಕುವುದೆಂದು ಆ ಎಮ್ಮೆಗಳ ಜೊತೆ ಬಂದ ಕಿಶೋರನ ಜೊತೆ ಕೇಳಲು ಹೇಳಿದ. ಅಷ್ಟು ಹೊತ್ತಿಗೆ ಅಜ್ಜನ ಜೊತೆಗೆ ಹೋದವರಲ್ಲಿ ಬಜಗೋಳಿಯ ಅಣ್ಣತಮ್ಮಂದಿರಿಬ್ಬರು ಬಂದರು. ನಾವು ಅವರ ಹತ್ತಿರ ಶ್ರಾದ್ಧ ಮಾಡುವ ಮನೆಗೆ ನಮ್ಮನ್ನೂ ಕರೆದು ಕೊಂಡು ಹೋಗಿ ..ಎಂದೆವು. ಅವರು “ಅಯ್ಯೋ ಅಲ್ಲಿ ಹೋಗಲು ಎಷ್ಟೊಂದು ಓಣಿಗಳಿವೆ.ಅದೂ ಅಡ್ಡಾದಿಡ್ಡಿ… ಓಣಿಗಳು. ಯಾರೋ ತಂದು ಬಿಟ್ಟು ಹೋದರು. ನಮಗೆ ಈಗ ಹೇಗೆ ಹೋಗಬೇಕೆಂದು ಗೊತ್ತಾಗುತ್ತಿಲ್ಲ..ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ. ಎಂದು ಸುಸ್ತಾಗಿ ಅಲ್ಲೇ ಅವರೂ ವಿರಾಜಮಾನರಾದರು.
ಸರಿ…ನಾವೂ ಮತ್ತೆ ಗಂಗೆಯನ್ನು ವೀಕ್ಷಿಸುತ್ತಾ ಕುಳಿತೆವು.