ಗುರುವಿನ ಗುಲಾಮನಾಗವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರ ಜೀವನದಲ್ಲೂ ಗುರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಕತ್ತಲೆಯನ್ನು ತೊಲಗಿಸಿ ಅರಿವಿನಕಡೆ ಕೊಂಡೊಯ್ಯುವ ಗುರುಗಳ ಆಶೀರ್ವಾದ ಪಡೆದು ಧನ್ಯರಾಗುವ ದಿನವೇ ಗುರು ಪೂರ್ಣಿಮೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕೂಡಾ ಕರೆಯುತ್ತಾರೆ. ಇದಕ್ಕೆ ಕಾರಣ ಮಹಾಭಾರತ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವೇದವ್ಯಾಸರು ಈ ದಿನ ಜನಿಸಿದ್ದರು.
ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗುರು ಪೂರ್ಣಿಮಾಯಂದು ಗುರುವನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂಬುದು ನಂಬಿಕೆಯು ಇದೆ. ಹಾಗೆಯೇ ಶಿಷ್ಯರನ್ನು ಜ್ಞಾನದ ಹಾದಿಯಲ್ಲಿ ಮಾರ್ಗದರ್ಶನ ಮಾಡುವ ಎಲ್ಲಾ ಗುರುಗಳು ಮತ್ತು ಶಿಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ.
ಗುರು ಎಂಬ ಪದದಲ್ಲಿನ “ಗು” ಎಂಬ ಅಕ್ಷರಕ್ಕೆ ಅಂಧಕಾರವೆಂದು “ರು” ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತರುವವನೇ ಗುರು. ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯ ಸಮಯದಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಕರೆದೊಯ್ದು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ಆ ಗುರುಗಳ ಆಶ್ರಮದಲ್ಲಿದ್ದುಕೊಂಡು ಗುರುಗಳ ಸೇವೆ ಮಾಡಿ ಅವರ ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ ಶ್ರದ್ದೆಯಿಂದ ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದರು. ತನ್ನನ್ನು ಮೆಚ್ಚಿಸುವ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹಿಂದಿನ ಗುರು ಶಿಷ್ಯ ಸಂಬಂಧ ಈಗ ಉಳಿದಿಲ್ಲ.
ಗುರು ಪೂರ್ಣಿಮೆಯ ಮೂಲ ಕಥೆ:
ಗುರು ಪೂರ್ಣಿಮೆಯು ಹಿಂದೂ ಪುರಾಣಗಳಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರೆನಿಸಿದ ಋಷಿ ವ್ಯಾಸರ ಜನ್ಮಕ್ಕೆ ಸಂಬಂಧಿಸಿದ್ದು. ಪುರಾಣ ಕಥೆಗಳ ಪ್ರಕಾರ ವ್ಯಾಸರು ಈ ದಿನದಂದು ಜನಿಸಿದರು. ಅವರು ಮಹಾಭಾರತವನ್ನು ರಚಿಸಿ ಮಹಾಕವಿ ಎನಿಸಿಕೊಂಡ ಇವರು ವೇದಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಗುರು ಪೂರ್ಣಿಮೆಯು ಬುದ್ಧಿವಂತಿಕೆ, ಆಧ್ಯಾತ್ಮಿಕ, ಸಾಹಿತ್ಯಿಕ ಜ್ಞಾನಕ್ಕೆ ವ್ಯಾಸ ಮಹರ್ಷಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ.
ಗುರು ಪೂರ್ಣಿಮೆ ಆಚರಣೆಯ ಹಿಂದಿನ ಇತರ ಕಥೆಗಳು:
* ಉತ್ತರ ಪ್ರದೇಶದ ಸಾರನಾಥದಲ್ಲಿ ಈ ದಿನ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ನೆನಪಿಗಾಗಿ ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.
*ಜೈನ ಧರ್ಮದ ಅನುಯಾಯಿಗಳು ಮಹಾವೀರನನ್ನು ಈ ದಿನ ಪೂಜಿಸುತ್ತಾರೆ.
* ಯೋಗ ಸಂಪ್ರದಾಯದ ಪ್ರಕಾರ, ಈ ದಿನವು ಶಿವನು ಸುಪ್ತಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದ ಮತ್ತು ಅಧಿಕೃತವಾಗಿ ಮೊದಲ ಗುರುವಾದ ಕ್ಷಣವನ್ನು ಸೂಚಿಸುತ್ತದೆ.
* ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಅಧ್ಯಯನ ಮಾಡುವ ಗುರು ಶಿಷ್ಯ ಪರಂಪರೆಯ ಅನುಯಾಯಿಗಳು ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
* ಈ ದಿನ ಹಿಂದೂ ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ.
* ಜೈನ ಸಂಪ್ರದಾಯದಲ್ಲಿ ಗುರು ಪೂರ್ಣಿಮಾವನ್ನು ಟ್ರಿನೋಕ್ ಗುಹಾ ಪೂರ್ಣಿಮಾ ಎಂದ ಕರೆಯಲಾಗುತ್ತದೆ.