ಬಾಗಲಕೋಟೆ: ಕೃಷಿ ಕ್ಷೇತ್ರವು ಅನೇಕ ಬಿಕ್ಕಟ್ಟು-ಇಕ್ಕಟ್ಟು ಎದುರಿಸುತ್ತಿದೆ. ಹೊಸ ಸಂಶೋಧನೆ, ಆವಿಷ್ಕಾರದ ಮೂಲಕ ಶಾಶ್ವತ ಪರಿಹಾರಕೊಂಡು ಕೊಳ್ಳಬೇಕಿದೆ. ಹೀಗಾಗಿ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತೇನೆ..!!
ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಶನಿವಾರ ನಡೆದ 12 ನೇ ಘಟಿಕೋತ್ಸವದಲ್ಲಿ ಪದವಿ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದು 4 ಚಿನ್ನದ ಪದಕ ಪಡೆದುಕೊಂಡ ನಿಶ್ಚಿತಾ ಎನ್. ಅವರ ದಿಟ್ಟ ಮಾತುಗಳು. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ಮುನಿರಾಬಾದ್ ಕಾಲೇಜಿನಲ್ಲಿ ಪದವಿ ಓದಿ ಸಾಧನೆ ಮಾಡಿದ್ದಾರೆ.
ತಂದೆ ನಾರಾಯಣಸ್ವಾಮಿ ಕಿರಾಣಿ ವ್ಯಾಪಾರಸ್ಥರು. ತಾಯಿ ಮಂಜುಳಾ ಗೃಹಿಣಿ. ಸಾಹಿತ್ಯ ಪುಸ್ತಕ, ಸಂಗೀತ ಕೇಳುವುದು, ಚಲನಚಿತ್ರ ನೋಡುವ ಹವ್ಯಾಸವಿರುವ ನಿಶ್ಚಿತಾ ಅವರು ತೋಟಗಾರಿಕಾ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡುವ ತವಕದಲ್ಲಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹೆಜ್ಜೆ ಇಡುವ ದೃಢ ನಿರ್ಧಾರ ಮಾಡಿದ್ದಾರೆ.
ಸಾಮಾನ್ಯ ಕುಟುಂಬದಿAದ ಬಂದಿದ್ದೇನೆ. ತೋಟಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಆಸೆ ಇದೆ. ಮುಖ್ಯವಾಗಿ ಸಂಶೋಧನೆ ಮೂಲಕ ನಾಡಿಗೆ ವಿಶೇಷ ಕೊಡುಗೆ ನೀಡುತ್ತೇನೆ ಎಂದು 4 ಚಿನ್ನ ಪಡೆದ ಸಾಧಕಿ ನಿಶ್ಚಿತಾ ಎನ್. ತಿಳಿಸಿದ್ದಾರೆ.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಶನಿವಾರ ನಡೆದ 12 ನೇ ಘಟಿಕೋತ್ಸವದಲ್ಲಿ ಪದವಿ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದು 4 ಚಿನ್ನದ ಪದಕ ಪಡೆದುಕೊಂಡ ನಿಶ್ಚಿತಾ ಎನ್. ಅವರಿಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕುಲಪತಿ ಕೆ.ಎಂ.ಇಂದಿರೇಶ ಇದ್ದಾರೆ.