ಬಾಗಲಕೋಟೆ: ನಮ್ಮೂರು ಕಡೆ ಭಾಳ ಬಿಸಿಲು, ಬರಗಾಲರೀ. ಲಿಂಬಿ ಹಣ್ಣು, ದ್ರಾಕ್ಷಿ ಬಿಟ್ಟ ಬೇರೆ ತೋಟಗಾರಿಕೆ ಬೆಳೆ ಬೆಳೆಯುದ ಕಷ್ಟ ಆಗೈತರೀ. ನಮ್ಮ ಜಮೀನದಾ ಹರ್ಯಾರ ಕಷ್ಟಪಟ್ಟ ದುಡಿದ್ರು ಲುಕ್ಸಾನ ತಪ್ಪಿಲ್ಲರೀ. ಹೀಗಾಗಿ ಬ್ಯಾರೇ ಏನರ ಬೆಳೆಯ ಬಹುದು ನಮ್ಮ ಕಡೆ ಅಂತ ಹೊಸ ಪ್ರಯೋಗ ಮಾಡಬೇಕು ಅನ್ನೋವ ಗುರಿಯಿಂದ ತೋಟಗಾರಿಕಾ ಸ್ನಾತಕೋತ್ತರ ಪದವಿ ಪಡೆದೇನ್ರೀ. ಇದರಾಗ ಏನರ ಸಾಧನೆ ಮಾಡುತ್ತೇನೆ..!!
ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 12 ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದ ಅನುಷಾ ಕುರಬರ ಲಿಂಬೆನಾಡು ವಿಜಯಪುರದ ಬೆಡಗಿಯ ಮಾತುಗಳಿವು. ಮೂಲಕ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದರು.
ತಂದೆ ಅಮಯೋಗಿ ಆರ್ ಕುರಬರ ರಾಯಚೂರಿನಲ್ಲಿರುವ ತೋಟಗಾರಿಕಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಾಯಿ ಸುರೇಖಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ. ಮೂಲತಃ ಅಥರ್ಗಾ ಗ್ರಾಮದವರಾದರು ತಂದೆ ನೌಕರಿ ಹಿನ್ನಲೆಯಲ್ಲಿ ರಾಯಚೂರಿನಲ್ಲಿ ಓದಿದ್ದಾರೆ. ಹಣು ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಪದಕ ಪಡೆದು ಸದ್ಯ ಬೆಂಗಳೂರಿನಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದಾರೆ.
ಅಥರ್ಗಾ ಗ್ರಾಮದಲ್ಲಿರುವ ಕುಟುಂಬದ 12 ಎಕರೆ ಜಮೀನಿನಲ್ಲಿ ಬಹು ವರ್ಷಗಳಿಂದ ಕುಟುಂಬಸ್ಥರು ಲಿಂಬೆ ಹಣ್ಣಿನ ಕೃಷಿ ಮಾಡುತ್ತಿದ್ದಾರೆ. ತೋಟಗಾರಿಕೆ ಬೆಳೆಯ ಲಾಭ-ನಷ್ಟ ಅರಿವು ಇರುವ ಅನುಷಾ ಬರದನಾಡಾಗಿರುವ ವಿಜಯಪುರ ಭಾಗದಲ್ಲಿ ಹೊಸ ತೋಟಗಾರಿಕಾ ಬೆಳೆ ಬೆಳೆಗಳನ್ನು ಬೆಳೆಯಲು ಉತ್ಸುಕರಾಗಿದ್ದಾರೆ. ತಮ್ಮ ಪ್ರಯೋಗ ಯಶಸ್ವಿಯಾದ ಬಳಿಕ ರೈತ ಕುಲಕ್ಕೆ ಅವುಗಳನ್ನು ಪ್ರೋತ್ಸಾಹಿಸುವ ತವಕದಲ್ಲಿದ್ದಾರೆ. ಚಿತ್ರಕಲೆ, ನೃತ್ಯದ ಬಗ್ಗೆ ಆಸಕ್ತಿ ಹೊಂದಿರುವ ಅನುಷಾ ತೋಟಗಾರಿಕಾ ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ.
ಪುತ್ರಿಯ ಸಾಧನೆ ಸಂತಸ ಉಂಟು ಮಾಡಿದೆ. ಸ್ನಾತಕೋತ್ತರ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ತೋಟಗಾರಿಕೆ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಮಹದಾಸೆ ಇಟ್ಟುಕೊಂಡಿದ್ದಾಳೆ. ಅವಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎಂದು ಅನುಷಾಳ ಪಾಲಕರಾದ ಅಮಯೋಗಿ ಕುರಬರ, ಸುರೇಖಾ ಕುರಬರ ತಮ್ಮ ಮಗಳನ್ನು ಕುರಿತು ಸಂತಸ ವ್ಯಕ್ತ ಪಡಿಸಿದ್ದಾರೆ.
ಕಡಿಮೆ ನೀರಿನಲ್ಲಿ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳನ್ನು ವಿದೇಶದಲ್ಲಿ ಬೆಳೆಯುತ್ತಾರೆ. ನಮ್ಮ ದೇಶದಲ್ಲಿಯೂ ಸಾಧ್ಯವಿದೆ. ಹೊಸ ಪ್ರಯತ್ನಕ್ಕೆ ಕೈ ಹಾಕಬೇಕು. ಹೀಗಾಗಿ ನಮ್ಮ ವಿಜಯಪುರ, ರಾಯಚೂರ, ಬಾಗಲಕೋಟೆ ಭಾಗದಲ್ಲಿ ಹೊಸ ತೋಟಗಾರಿಕೆ ಬೆಳೆಗಳನ್ನು ಪರಿಚಯಿಸಲು ಆಸಕ್ತಿ ಹೊಂದಿದ್ದೇನೆ. ಪಿಎಚ್ಡಿ ಬಳಿಕ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಂದು ಸ್ನಾತಕೋತ್ತರ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದ ಅನುಷಾ ಕುರಬರ ಹೇಳಿದ್ದಾರೆ.