ಬಿಸಿಲಿನ ಬೇಗೆಯಿಂದ ದಣಿದಿದ್ದ ಭೂಮಿಯನ್ನು ಶಾಂತಗೊಳಿಸಲು ವರ್ಷಾಧಾರೆಯು ಜೂನ್ ತಿಂಗಳಲ್ಲಿ ಆರಂಭವಾಗಿದೆ. ಮಳೆ, ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಇರುವುದರಿಂದ ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿಡಬೇಕು. ಜೊತೆಗೆ ಪ್ರವಾಸಿ ತಾಣಗಳನ್ನು ವೀಕ್ಷಿಸುವಾಗಲೂ ಅದೇ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ಕಾಲದಲ್ಲಿ ಶೀತ, ನೆಗಡಿ, ಜ್ವರ ಸರ್ವೆಸಾಮಾನ್ಯ. ಮಳೆಗಾಲದಲ್ಲಿ ನೀರು ಕಲುಷಿತವಾಗುತ್ತದೆ ಸೋಂಕು ಬಹುಬೇಗ ಬರುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕಲುಷಿತ ನೀರಿನಿಂದ ಸೊಳ್ಳೆ ನೊಣಗಳ ಸಂಖ್ಯೆ ಹೆಚ್ಚಾಗುವುದು ಜೊತೆಗೆ ರೋಗಗಳು ಹರಡುತ್ತದೆ. ಕೆಲವು ಸರಳ ಉಪಾಯಗಳನ್ನು ನಮ್ಮದಾಗಿಸಿಕೊಂಡಲ್ಲಿ ಅನಾರೋಗ್ಯದಿಂದ ದೂರವಿರಬಹುದು.
1.ಸುತ್ತಲಿನ ಪರಿಸರ: ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ನಮ್ಮ ವಾಸ ಸ್ಥಳದ ಸುತ್ತಮುತ್ತ ನೀರು ನಿಂತಿದ್ದರೆ ಸೊಳ್ಳೆ ಮತ್ತು ನೊಣಗಳ ಉತ್ಪತ್ತಿಗೆ ಕಾರಣವಾಗಬಹುದು. ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸಿ. ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡದಂತೆ ನೋಡಿಕೊಳ್ಳಬೇಕು.
2. ಹೊರಗಡೆ ತಿನ್ನದಿರುವುದು: ಮಳೆಗಾಲದಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಕೆನ್ನುವುದು ಸಹಜ ಆದರೆ, ರಸ್ತೆ ಬದಿಯ ತಿಂಡಿಗಳನ್ನು ಈ ಸಮಯದಲ್ಲಿ ಆದಷ್ಟು ತಿನ್ನದಿರುವುದು ಉತ್ತಮ. ರಸ್ತೆ ಬದಿಯ ತಿಂಡಿಗಳಲ್ಲಿ ಬ್ಯಾಕ್ಟೀರಿಯಾ ಸೇರುವುದು ಹೆಚ್ಚು.
3. ನೀರನ್ನು ಹೆಚ್ಚು ಕುಡಿಯಬೇಕು: ಮಳೆಗಾಲದಲ್ಲಿ ಬಾಯಾರಿಕೆಯಾಗದಿರುವುದರಿಂದ ತುಂಬ ಕಡಿಮೆ ನೀರು ಕುಡಿಯುತ್ತಾರೆ. ಆದರೆ, ಯಾವುದೇ ಕಾಲವಾಗಿರಲಿ ಆರೋಗ್ಯಕರವಾಗಿರಲು ಪ್ರತಿದಿನ 3ರಿಂದ 4 ಲೀ. ನೀರು ಕುಡಿಯಬೇಕು. ನೀರನ್ನು ಬಿಸಿ ಮಾಡಿ ಕುಡಿಯೊದು ಒಳ್ಳೆಯದು. ಕಷಾಯ, ಹರ್ಬಲ್ ಟೀ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.
4:ಒದ್ದೆಯಾದರೆ ತಕ್ಷಣ ಸ್ನಾನ ಮಾಡಿ: ವಿಪರೀತ ಮಳೆಯ ಸಂದರ್ಭದಲ್ಲಿ ಒದ್ದೆಯಾಗುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಒದ್ದೆಯಾಗಿದೆ ಎಂದು ಮೈ ಒರಿಸಿ ಸುಮ್ಮನೆ ಕೂರದೆ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.. ಇದರಿಂದ ಶೀತದಂತಹ ಸಾಮಾನ್ಯ ಕಾಯಿಲೆಯಿಂದ ದೂರವಿರಬಹುದು.
5. ಸೊಪ್ಪು ತರಕಾರಿ ಹೆಚ್ಚು ಸೇವನೆ: ಮಳೆಗಾಲದಲ್ಲಿ ಹಸಿರು ತರಕಾರಿ ಮತ್ತು ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಆರೋಗ್ಯದ ರಕ್ಷಣೆ ಸಾಧ್ಯವಿದೆ. ಮಾಂಸಹಾರ ಸೇವನೆ ಮಾಡುವುದಾದರೆ ತಾಜಾ ಮೀನು ಮಾತ್ರ ಕೊಳ್ಳುವುದು ಉತ್ತಮ. ತೇವಾಂಶದಲ್ಲಿ ಇಟ್ಟ ಮೀನು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
6. ಸಮೀಪದ ಜಲಪಾತಗಳಿಗೆ ಈ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ, ಆದರೆ ಅಲ್ಲಿ ಸಂಯಮದಿಂದ ಇರುವುದು ಅತ್ಯಂತ ಅವಶ್ಯಕ. ಜನಜಂಗುಳಿಯ ಮಧ್ಯದಲ್ಲಿ ಕಾಲು ಜಾರಿ ಬೀಳುವ ಸಾಧ್ಯತೆಯಿರುತ್ತದೆ. ಕಾರಣ ಅಂತಹ ಸಮಯದಲ್ಲಿ ಅತ್ಯಂತ ಕಾಳಜಿಯಿಂದ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುವುದು ಅಗತ್ಯ.
7. ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುವಾಗ ಸರಿಯಾದ ಮಾರ್ಗದರ್ಶನ ಅಗತ್ಯ. ಹೊಸ ಜಲಪಾತ ಅಥವಾ ಇನ್ನಿತರ ಮನೊರಂಜನೆಯನ್ನು ಮಾಡುವಾಗ ಆ ಸ್ಥಳದಲ್ಲಿ ಈ ಪೂರ್ವದಲ್ಲಿ ಭೇಟಿ ನೀಡಿದ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಅತ್ಯಂತ ಅವಶ್ಯವಾಗಿದೆ, ಇಲ್ಲವಾದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು.
8. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಿ ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಆದರೆ ಮೂಕ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ.
9. ರಸ್ತೆಯಲ್ಲಿ ಸಂಚರಿಸುವಾಗ ಆದಷ್ಟು ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಿಯೇ ವಾಹನ ಚಲಾಯಿಸಿ ಕಾರಣ ಗುಂಡಿಯಲ್ಲಿ ನಿಂತಿರುವ ನೀರಿನಿಂದ ಗುಂಡಿಯ ಆಳವನ್ನು ತಿಳಿಯಲು ಸಾಧ್ಯವಿಲ್ಲ ಇದರಿಂದ ವಾಹನಗಳು ಗುಂಡಿಯಲ್ಲಿ ಹಾಕಿದಾಗ ಅಪಘಾತವಾಗುವ ಸಾಧ್ಯತೆ ಹೆಚ್ಚು.
10. ವಾಹನಗಳನ್ನು ನಿಧಾನವಾಗಿ ಚಲಿಸುವುದು ಉತ್ತಮ. ಮಳೆಗಾಲದಲ್ಲಿ ವಾಹನಗಳನ್ನು ನಿಧಾನವಾಗಿ ಚಲಾಯಿಸುವುದು ಉತ್ತಮ. ಕಾರಣ ವಾಹನಗಳು ಸ್ಕಿಡ್ ಆಗುವ ಸಾಧ್ಯತೆ ಹೆಚ್ಚು ಆದ್ದರಿಂದ ಯಾವದೇ ಕಾರ್ಯಕ್ಕೆ ಹೊರಡುವಾಗ ನಿಗದಿತ ಅವಧಿಗಿಂತ ೧೦ ನಿಮಿಷ ಮುಂಚಿತವಾಗಿ ಮನೆಯನ್ನು ಬಿಡುವುದು ಉತ್ತಮ.