ಕೊಡಗಿನ ಸಂಸ್ಕ್ರತಿ, ಪ್ರಕೃತಿಯೊಂದಿಗೆ ಬೆರೆತು ಹೋಗಿದ್ದ ಕರಿಮರ ಇಂದು ಅಳಿವಿನ ಅಂಚಿನಲ್ಲಿದೆ. ಒಂದು ಕಾಲದಲ್ಲಿ ಗತ ವೈಭವನ್ನು ಸಾರಿದ್ದ ಕರಿಮರ ಇಂದು ಬೆರಳೆಣಿಕೆಯಷ್ಟು ಕಾಣಸಿಗುತ್ತದೆ. ಬ್ರಿಟಿಷರ ಆಳ್ವಿಕೆಗೂ ಮುನ್ನ ಕೊಡಗಿನಲ್ಲಿ ಹೇರಳವಾಗಿದ್ದ ಕರಿಮರ ವಿನಾಶದಂಚಿನಲ್ಲಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಕೋರ್ ಗೆಜ್ಜೆತಂಡ್, ಒಕ್ಕಕೋರ್ ಕರಿಮರ ( ಮನೆಗೊಂದು ಗೆಜ್ಜೆತಂಡ್, ಕುಟುಂಬಕ್ಕೊಂದು ಕರಿಮರ) ಎಂಬ ಅಭಿಯಾನವೊಂದು ಕೊಡಗಿನಲ್ಲಿ ಪ್ರಾರಂಭವಾಗಿದೆ.
ರಾಜ್ಯದ ಖ್ಯಾತ ಪರ್ತಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಹಾಗೂ ಅವರಂತೆ ಇರುವ ಸಮಾನ ಮನಸ್ಕರು ಸೇರಿ ಕರಿಮರ ನೆಡುವ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಸಂತೋಷ್ ತಮ್ಮಯ್ಯ ತಮ್ಮ ಹುಟ್ಟೂರು ನಡಿಕೇರೆ ಗ್ರಾಮದ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಅವರ ತಂಡದೊಂದಿಗೆ ಸೇರಿ ಈಗಾಗಲೇ ೨೫ ಕರಿಮರಗಳನ್ನು ನಟ್ಟಿದ್ದಾರೆ.
ಪಶ್ಚಿಮ ಘಟ್ಟದ ಹೃದಯಭಾಗದಲ್ಲಿರುವ ಕೊಡಗಿನಲ್ಲಿ ಈ ಮರಗಳು ಹೆಚ್ಚಿನ ಸಂಖ್ಯೆಯಲ್ಲಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಈ ಮರ ರೋಮ್ಗೆ ರಫ್ತಾಗುತ್ತಿತ್ತು. ಬ್ರಿಟಿಷ್ ಆಳ್ವಿಕೆ ಕಾಲಘಟ್ಟದಲ್ಲಿ ಹೇರಳವಾಗಿದ್ದ ಕರಿಮರವನ್ನು ಕಡಿದು ಇಂಗ್ಲೇಂಡ್ಗೆ ಸಾಗಿಸಲಾಯಿತು. ಇದರಿಂದಾಗಿ ಕೊಡಗಿನಲ್ಲಿ ಕರಿಮರ ನಾಶ ಹೊಂದಿತ್ತು. ಬರಪೊಳೆ, ಕಕ್ಕಟ್ ಪೊಳೆ ಭಾಗದಲ್ಲಿ ಹೆಚ್ಚಿದ್ದ ಇವುಗಳನ್ನು ಬ್ರಿಟಿಷರು ಕಡಿದು ಯರೋಪ್ಗೆ ಸಾಗಿಸಿದ್ದರು. ಪ್ರಸ್ತುತ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬರಪೊಳೆ ಕಕ್ಕಟ್ಟುಪೊಳೆ ಭಾಗದಲ್ಲಿ ಮಾತ್ರ ಕರಿಮರ ಕಾಣ ಸಿಗುತ್ತದೆ.
ಕರಿಮರ ಬಹಳ ಗಟ್ಟಿಮರ. ಇದರ ಅಂತಃಸ್ಸಾರ (ಸೇಗು) ಅತ್ಯಂತ ಗಟ್ಟಿಯಾಗಿದ್ದು, ಶತಮಾನಗಳ ಕಾಲ ಬಾಳಿಕೆ ಬರುತ್ತದೆ. ಸೇಗು ಕಪ್ಪು ಬಣ್ಣದಲ್ಲಿರುವುದರಿಂದ ಇದಕ್ಕೆ ಕರಿಮರ ಎಂಬ ಹೆಸರುಬಂತು. ಕೊಡಗಿನಲ್ಲಿ ಇದನ್ನು ಗೆಜ್ಜೆತಂಡ್ ಮತ್ತು ಕೋವಿಯ ಚಟ್ಟೆ ಮಾಡಲು ಬಳಸುತ್ತಿದ್ದರು. ಕರಿಮರ ಇಂಗ್ಲೇಂಡ್, ಚೀನಾ ಸೇರಿದಂತೆ ಐರೋಪ್ಯ ರಾಷ್ಟ್ರಗಳಲ್ಲಿ ಕರಿಮರವನ್ನು ಅಲಂಕಾರಿಕ ವಸ್ತುಗಳ ತಯಾರಿಕೆ ಬಳಸಲಾಗುತ್ತದೆ. ಆಫ್ರಿಕಾದ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಈ ಮರ ಐರೋಪ್ಯರ ಗಮನ ಸೆಳೆದಿತ್ತು. ಇದನ್ನು ಅಲಂಕಾರಿಕ ವಸ್ತುಗಳು ಮತ್ತು ಅರಮನೆಗಳ ಪ್ಲೋರ್ಗಳಿಗೆ ಬಳಕೆ ಮಾಡುತ್ತಿದ್ದರು. ಕರಿಮರದಿಂದ ಮಾಡಿದ ಗೆಜ್ಜೆತಾಂಡ್, ಅಲಂಕಾರಿಕ ವಸ್ತುಗಳು ಪಾಲಿಶ್ ಇಲ್ಲದೇ ಇದ್ದರೂ ಕೂಡ ಹೊಳಪಿನಿಂದ ಕೂಡಿರುತ್ತವೆ.
ಗೆಜ್ಜೆತಂಡ್ ಪ್ರಮುಖ್ಯತೆ:
ಶತಮಾನಗಳ ಹಿಂದೆ ಕೊಡಗಿನಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬ ಪದ್ದತಿ ಚಾಲ್ತಿಯಲ್ಲಿತ್ತು. ಅವಿಭಕ್ತ ಕುಟುಂಬಗಳು ಐನ್ ಮನೆಗಳಲ್ಲಿ ನೆಲೆಸಿರುತ್ತಿದ್ದರು. ಬಹುತೇಕ ಐನ್ ಮನೆಗಳಲ್ಲಿ ಗೆಜ್ಜೆತಂಡ್ ಇರಿಸಲಾಗುತ್ತಿತ್ತು. ಕೊಡಗಿನ ಪ್ರತಿಯೊಂದು ಮನೆಗಳಲ್ಲೂ ಗೆಜ್ಜೆತಂಡ್ ಇಡುವುದು ಸಂಸ್ಕ್ರತಿ ಆದರೆ ಇಂದು ಡೊಡ್ಡ ಕುಟುಂಬ ಸಣ್ಣ ಸಣ್ಣ ಕುಟುಂಬಗಳಾಗಿ ವಿಭಜನೆಗೊಂಡಿವೆ. ಮನೆಗಳ ಪ್ರಮಾಣ ಹೆಚ್ಚಾಗಿದೆ ಹಾಗೆಯೇ ಗೆಜ್ಜೆತಂಡ್ ತಯಾರಿಸಲು ಕರಿಮರಗಳುಗಳು ದೊರೆಯುತ್ತಿಲ್ಲ. ಆದರಿಂದ ಇಂದು ಹೆಚ್ಚಿನ ಮನೆಗಳಲ್ಲಿ ಗೆಜ್ಜೆತಂಡ್ ಇರಿಸಲಾಗುತ್ತಿಲ್ಲ.
ಪ್ರತಿ ಮನೆಯಲ್ಲೂ ಗೆಜ್ಜೆತಂಡ್ ಇರಬೇಕು ಮತ್ತು ಅದನ್ನು ತಯಾರಿಸುವ ಕರಿಮರ ಮುಂದಕ್ಕೂ ಕೊಡಗಿನಲ್ಲಿ ಇರಬೇಕು ಎಂಬ ಉದ್ದೇಶದಿಂದ ಮನೆಕೋರ್ ಗೆಜ್ಜೆತಂಡ್ ಒಕ್ಕಕೋರ್ ಕರಿಮರ ಅಭಿಯಾನ ಪ್ರಾರಂಭವಾಗಿದೆ. ಒಂದು ಕಟುಂಬಕ್ಕೆ ಒಂದು ಗಿಡ ಕೊಡಲಾಗುತ್ತದೆ. ಅವರೇ ಅದನ್ನು ನೆಟ್ಟು ಮಗುವಿನಂತೆ ಪೋಷಿಸಬೇಕು. ಪ್ರತಿ ಮನೆಗೂ ಒಂದು ಗೆಜ್ಜೆತಾಂಡ್ ಇದ್ದು ನಮ್ಮ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗ ಕೊಂಡ್ಯೊಯ್ಯಬೇಕು ಎಂಬುದು ಮಾಣಿಪಂಡ ಸಂತೋಷ್ ತಮ್ಮಯ್ಯ ಅಭಿಪ್ರಾಯ.