ಐಪಿಎಲ್ 2023ರ ಲೀಗ್ ಹಂತ ಮುಕ್ತಾಯಗೊಂಡಿದೆ. ಈ ಬಾರಿಯ ಪ್ಲೇ ಆಫ್ಗೆ ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜಯಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತೇರ್ಗಡೆಗೊಂಡಿವೆ. ಕೊನೆ ಪಂದ್ಯದವರೆಗೂ ಪ್ಲೇ ಆಪ್ ಪ್ರವೇಶಿಸುವ ಅವಕಾಶವಿದ್ದ ಆರ್ಸಿಬಿ ತಂಡ, ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತು, ಐಪಿಎಲ್ ಟ್ರೋಫಿ ಗೆಲ್ಲುವ ತನ್ನ ಕನಸನ್ನು ನುಚ್ಚುನೂರುಮಾಡಿಕೊಂಡಿದೆ. ಕಳೆದ ಮೂರು ವರ್ಷಗಳಿಂದಲೂ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ, ಈ ಬಾರಿ ಎಡವಿದ್ದೆಲ್ಲಿ?
• ಸ್ಟಾರ್ ಆಟಗಾರರ ಮೇಲೆಯೇ ಅವಲಂಬನೆ
ಹಿಂದಿನ ಹಲವು ಆವೃತ್ತಿಗಳಿಂದ ಆರ್ಸಿಬಿ ಸ್ಟಾರ್ ಆಟಗಾರರನ್ನೇ ನೆಚ್ಚಿಕೊಂಡಿದೆ. ಕೆಲ ವರ್ಷಗಳ ಹಿಂದೆ ಕ್ರಿಸ್ ಗೇಯ್ಲ್, ಎಬಿಡಿ ವಿಲಿಯರ್ಸ್ ಆರ್ಸಿಬಿಯ ಶಕ್ತಿಯಾಗಿದ್ದರು. ಈಗ ಆ ಸ್ಥಾನಕ್ಕೆ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಬಂದಿದ್ದಾರೆ ಹಾಗೂ ಇವರ ಜೊತೆ ಮೊದಲಿನಿಂದಲೂ ಇರೋದು ವಿರಾಟ್ ಕೊಹ್ಲಿ. ಪ್ರತಿ ಬಾರಿಯೂ 3-4 ಅತ್ಯುತ್ತಮ ಬ್ಯಾಟರ್ಗಳನ್ನು ಬಿಟ್ಟರೆ ಉಳಿದವರಿಂದ ಉತ್ತಮ ಪ್ರದರ್ಶನ ಸಿಗುತ್ತಲೇ ಇಲ್ಲ, ಈ ಬಾರಿಯೂ ಅದು ಮುಂದುವರೆದಿದೆ.
• ಮಿಡಲ್ ಆರ್ಡರ್ ವೈಫಲ್ಯ
ಆರ್ಸಿಬಿ ತಂಡದ ಮತ್ತೊಂದು ಸಮಸ್ಯೆಯೇ ಮಿಡಲ್ ಆರ್ಡರ್. ಈ ಮೊದಲು ಎಬಿಡಿ ವಿಲಿಯರ್ಸ್ ತುಂಬುತ್ತಿದ್ದ ಜಾಗವನ್ನು ಇನ್ನೂ ಯಾರೂ ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಆರಂಭದ 2-3 ವಿಕೆಟ್ಗಳು ಉರುಳಿದರೆ ಬಿಗ್ ಸ್ಕೋರ್ ನಿರೀಕ್ಷೆಯನ್ನೇ ಮಾಡಲಾಗುತ್ತಿರಲಿಲ್ಲ. ಉದಾಹರಣೆಗೆ, ಕೊಹ್ಲಿ, ಫಾಫ್ ಹಾಗೂ ಮ್ಯಾಕ್ಸ್ವೆಲ್ ಸೇರಿ ಮೊದಲ 15 ಓವರ್ ಗಳಲ್ಲಿ 160+ ರನ್ ಕಲೆ ಹಾಕಿ ಕೊಟ್ಟು ವಿಕೆಟ್ ಒಪ್ಪಿಸಿದ್ದರೂ, ಆ ಮೊತ್ತವನ್ನು 200 ದಾಟಿಸಲು ಆರ್ಸಿಬಿ ಬ್ಯಾಟರ್ಗಳು ಪರದಾಡುತ್ತಿದ್ದರು. ಕಳೆದ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ ವಿಫಲಗೊಂಡರು.
• ಅನುಭವಿ ಬೌಲರ್ಗಳ ಕೊರತೆ
ಆರ್ಸಿಬಿ ತಂಡ ಬಿಗ್ ಹಿಟ್ಟರ್ಗಳ ತಂಡ ಎಂದೇ ಹೆಸರುವಾಸಿ. ಆದರೆ ಬ್ಯಾಟರ್ಗಳು ಎಷ್ಟೇ ದೊಡ್ಡ ಮೊತ್ತ ಕಲೆ ಹಾಕಿದರೂ, ಅದನ್ನು ಬೌಲರ್ಗಳು ಡಿಫೆಂಡ್ ಮಾಡಬಲ್ಲರು ಎಂಬುವುದನ್ನು ಊಹಿಸುವುದು ಕಷ್ಟಸಾಧ್ಯ. 210+ ರನ್ ಗುರಿ ಇದ್ದರೂ, ಆರ್ಸಿಬಿ ಗೆಲ್ಲುತ್ತೆ ಎಂದು ಹೇಳೋದಿಕ್ಕೇ ಬರಲ್ಲ. ತಂಡದಲ್ಲಿ ಮಹಮ್ಮದ್ ಸಿರಾಜ್ ಒಬ್ಬರನ್ನು ಬಿಟ್ಟರೆ ಉಳಿದ ಯಾವ ಬೌಲರ್ಗಳ ಮೇಲೂ ವಿಶ್ವಾಸ ಇಡುವ ಹಾಗೆಯೇ ಇರಲಿಲ್ಲ. ಅಂತರರಾಷ್ಟ್ರೀಯ ಟಿ20 ರ್ಯಾಂಕಿಂಗ್ನಲ್ಲಿ ಟಾಪ್ 5 ನಲ್ಲಿರುವ ಜೋಶ್ ಹೆಜೆಲ್ವುಡ್, ವನಿಂದು ಹಸರಂಗ ಆರ್ಸಿಬಿ ತಂಡಕ್ಕೆ ಉತ್ತಮ ಕೊಡುಗೆ ನೀಡುವಲ್ಲಿಯೂ ವಿಫಲರಾದರು.
• ಅಸಮತೋಲಿತ ತಂಡ
ಒಂದು ಕ್ರಿಕೆಟ್ ತಂಡ ಎಂದರೆ ಅದರಲ್ಲಿ ಒಳ್ಳೆಯ ಓಪನರ್ಗಳು, ಮಿಡಲ್ ಆರ್ಡರ್ ಬ್ಯಾಟರ್ಗಳು, ಆಲ್ರೌಂಡರ್ಗಳು, ಉತ್ತಮ ವೇಗಿ, ಸ್ಪಿನ್ನರ್ಗಳು ಇರಲೇಬೇಕು. ಆರ್ಸಿಬಿ ತಂಡದಲ್ಲಿ ಈ ಸಮತೋಲನ ಇರಲಿಲ್ಲ. ಓಪನರ್ಗಳು ಇದ್ದರೂ, ಅವರು ಹಾಕಿ ಕೊಟ್ಟ ಬುನಾದಿಯನ್ನು ಮುಂದುವರೆಸಿಕೊಂಡು ಹೋಗಲು ಬ್ಯಾಟರ್ ಇರಲಿಲ್ಲ. ಫಿನಿಶ್ ಮಾಡಿ ಕೊಡಬಲ್ಲ ಫಿನಿಶರ್ಗಳೂ ಇರಲಿಲ್ಲ. ಬೌಲಿಂಗ್ನಲ್ಲಿ ವೇಗಿಗಳು ಇದ್ದರೂ, ನಂಬಿಕೆಯಿಡಬಲ್ಲ ಸ್ಪಿನ್ನರ್ಗಳು ಇರಲಿಲ್ಲ.
• ಹೋಮ್ ಗ್ರೌಂಡ್ ಲಾಭ ಪಡೆಯಲು ವಿಫಲ
ಐಪಿಎಲ್ ನಲ್ಲಿ ಪ್ರತಿ ತಂಡಕ್ಕೂ 7 ಪಂದ್ಯಗಳು ತನ್ನ ಹೋಮ್ ಗ್ರೌಂಡ್ನಲ್ಲಿ ಆಡಲು ಸಿಗುತ್ತವೆ. ಆರ್ಸಿಬಿ ತಂಡದ ಹೋಮ್ ಗ್ರೌಂಡ್ ಬೆಂಗಳೂರಿನ ಚಿನ್ನಸ್ವಾಮಿ ಅಂಗಣ. ಅಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಆರ್ಸಿಬಿ 4 ರಲ್ಲಿ ಸೋತು ಅಭಿಮಾನಿಗಳಿಗೂ ನಿರಾಶೆ ಮಾಡಿತ್ತು. ತವರು ಮೈದಾನ, ಪಿಚ್ ಜೊತೆಗೆ ಅಭಿಮಾನಿಗಳ ಗರಿಷ್ಠ ಪ್ರೋತ್ಸಾಹದ ಲಾಭವನ್ನು ಪಡೆಯಲು ಆರ್ಸಿಬಿ ಸಂಪೂರ್ಣ ವಿಫಲವಾಗಿದ್ದಂತೂ ಸುಳ್ಳಲ್ಲ.
• ಇಂಪ್ಯಾಕ್ಟ್ ಪ್ಲೇಯರ್ ನಿರ್ಧಾರ
ಈ ಬಾರಿಯ ಐಪಿಎಲ್ನಲ್ಲಿ ಹೊಸದಾಗಿ ಪರಿಚಯಿಸಿದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನೂ ಆರ್ಸಿಬಿ ಸರಿಯಾಗಿ ಬಳಸದೇ ಇದ್ದದ್ದು ಸೋಲಿಗೆ ಕಾರಣವಾಯಿತು. ವಿವಿಧ ಪಂದ್ಯಗಳಲ್ಲಿ ಕೆಲವೊಮ್ಮೆ ಬ್ಯಾಟಿಂಗ್ಗೆ ಹಾಗೂ ಇನ್ನೂ ಕೆಲವೊಮ್ಮೆ ಬೌಲಿಂಗ್ ಸಮಯದಲ್ಲಿ ಆರ್ಸಿಬಿ ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್ ಅನ್ನು ಬಳಸಿತ್ತು. ಆದರೆ ಆ ಆಟಗಾರರು ಪಂದ್ಯದಲ್ಲಿ ದೊಡ್ಡ ಮಟ್ಟಿನ ಇಂಪ್ಯಾಕ್ಟ್ ಮಾಡುವಲ್ಲಿ ವಿಫರರಾಗಿದ್ದರು.
• ತಪ್ಪು ನಿರ್ಧಾರಗಳು
ಆಟಗಾರರ ಆಯ್ಕೆಯಲ್ಲಿ ಆಗಿರಬಹುದು ಅಥವಾ ಕೆಲವೊಮ್ಮೆ ಫೀಲ್ಡ್ ಸೆಟ್ ಮಾಡುವಾಗಲೂ ತೆಗೆದುಕೊಂಡ ನಿರ್ಧಾರಗಳು, ನಿಧಾನಗತಿಯ ಓವರ್ ರೇಟ್ನಿಂದ ಪೆನಾಲ್ಟಿ ಬಿದ್ದದ್ದು ಆರ್ಸಿಬಿಗೆ ಮುಳುವಾದವು.
ಹೀಗೆ ವಿವಿಧ ಕಾರಣಗಳು ಆರ್ಸಿಬಿ ತಂಡದ ಹಾಗೂ ಅಭಿಮಾನಿಗಳ ಕನಸನ್ನು ನುಚ್ಚುನೂರು ಮಾಡಿದೆ. 16 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿಯೂ ಟ್ರೋಫಿ ಗೆಲ್ಲದಿರುವ ಆರ್ಸಿಬಿ, ಮುಂದಿನ ಆವೃತ್ತಿಯಲ್ಲಾದರೂ ಕನಸನ್ನು ನನಸು ಮಾಡಿಕೊಳ್ಳುತ್ತಾ ಎಂದು ಕಾದು ನೋಡಬೇಕಾಗಿದೆ.