ವೆರಿಟೋದ ಪ್ರಮುಖ ಸುದ್ದಿಗಳ ಸಂಗ್ರಹ: ಇಲ್ಲಿದೆ ಇಂದಿನ ರೌಂಡ್ ಅಪ್
ಗ್ರಾಹಕರಿಗೆ ಶಾಕ್: ಬರೋಬ್ಬರಿ 5 ರೂ. ಹೆಚ್ಚಳವಾಗಲಿದೆ ನಂದಿನಿ ಹಾಲಿನ ದರ!
ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ (ಕೆಎಂಎಫ್) ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಮಾಜಿ ಶಾಸಕ ಭೀಮಾ ನಾಯಕ್ ನೇಮಕಗೊಂಡ ಬೆನ್ನಲ್ಲೇ ನಂದಿನಿ ಹಾಲಿನ ದರದಲ್ಲಿ ಏರಿಕೆಯಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲಿನ ದರ 5 ರೂ. ಏರಿಕೆಗೆ ಬೇಡಿಕೆ ಇಡಲಾಗಿದೆ, ಹಾಲಿನ ದರ ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಎಲ್ಲಾ ಹಾಲು ಒಕ್ಕೂಟಗಳು ಲೀಟರ್ ಗೆ 5 ರೂ. ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟಿದ್ದು, ಗುಣಮಟ್ಟದ ಹಾಲು, ಮೊಸರು, ತುಪ್ಪ ಸೇರಿದಂತೆ ಡೈರಿ ಪದಾರ್ಥಗಳನ್ನು ಒದಗಿಸುವ ಬಗ್ಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಯಾವ ಕ್ಯಾಸ್ ವಿದ್ಯಾರ್ಥಿಗೆ ಎಷ್ಟು ತೂಕದ ಬ್ಯಾಗ್? ಶಾಲಾ ಬ್ಯಾಗ್ ಹೊರೆ ಕಡಿಮೆಗೆ ಸರ್ಕಾರ ನಿರ್ಧಾರ!
ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆ ಶಾಲಾ ಮಕ್ಕಳ ಬ್ಯಾಗ್ ಹೊರೆ ಕುರಿತು ಮತ್ತೆ ಚರ್ಚೆಗಳು ಶುರುವಾಗಿವೆ.
ಇನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಕ್ಕಳು ಮತ್ತು ಕಾನೂನಿಗೆ ಸಂಬಂಧಿಸಿದ ಕೇಂದ್ರ ಹಾಗೂ ಡಿಎಸಿಆರ್ ಟಿ ಅಧ್ಯಯನ ನಡೆಸಿದ್ದು, ಈ ವರದಿಯಂತೆ ಇಲಾಖೆ ಶಾಲಾ ಮಕ್ಕಳ ಬ್ಯಾಗ್ ಹೊರೆ ನಿಗದಿಪಡಿಸಿದೆ.
ವಿದ್ಯಾರ್ಥಿಗಳ ದೇಹದ ತೂಕದ ಶೇ. 10 ರಿಂದ ಶೇ.15ರಷ್ಟು ತೂಕದ ಶಾಲಾ ಬ್ಯಾಗ್ ಗಳನ್ನು ಕೊಂಡೊಯ್ಯಬಹುದು ಎಂದು ಮೂಳೆ ತಜ್ಞರು ತಿಳಿಸಿರುವುದಾಗಿ ವರದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ 2020ರಲ್ಲಿ ಸರ್ಕಾರ ಜಾರಿ ಗೊಳಿಸಿದ ಶಾಲಾಬ್ಯಾಗ್ ನೀತಿ ಅನ್ವಯ ಈ ಆದೇಶ ಹೊರಡಿಸಲಾಗಿದೆ.
ರಾಜ್ಯಾದೆಲ್ಲೆಡೆ ಇರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳಿಗೂ ಈ ಸುತ್ತೋಲೆ ಅನ್ವಯವಾಗಲಿದೆ. ಹಾಗಿದ್ದರೆ ಯಾವ ತರಗತಿ ವಿದ್ಯಾರ್ಥಿಗೆ ಬ್ಯಾಗ್ ತೂಕ ಎಷ್ಟಿರಬೇಕು?
1ರಿಂದ 2ನೇ ತರಗತಿ- 1.5 ಕೆಜಿ – 2 ಕೆಜಿ., 3 ರಿಂದ 5ನೇ ತರಗತಿ- 2 ಕೆಜಿ -3 ಕೆಜಿ, 6 ರಿಂದ 8ನೇ ತರಗತಿ- 3ಕೆಜಿ- 4 ಕೆಜಿ, 9 ರಿಂದ 10ನೇ ತರಗತಿ- 4ಕೆಜಿ-5ಕೆಜಿ ಎಂದು ನಿಗದಿ ಪಡಿಸಲಾಗಿದ್ದು, ಮಕ್ಕಳು ಯಾವೆಲ್ಲಾ ವಿಷಯದ ಕಲಿಕೆಯಾಗಬೇಕು ಎಂಬುದರ ಬಗ್ಗೆಯೂ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಐಸಿಸಿ ಟೂರ್ನಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿದ್ದಾರೆ ಇಂಗ್ಲೆಂಡ್ ನ ಜೋ ರೂಟ್
ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿ ಇಂಗ್ಲೆಂಡ್ ನ ಜೋ ರೂಟ್ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ.
ಬೌಲರ್ ಗಳಲ್ಲಿ ಭಾರತದ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ. ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಟಾಪ್ 10 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ.
ಪ್ರಥಮ ಸ್ಥಾನದಲ್ಲಿದ್ದ ಲಬುಶೇನ್ 3ನೇ ಸ್ಥಾನಕ್ಕೆ ಕುಸಿದಿದ್ದು, ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಇದ್ದಾರೆ.
ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 700 ರ್ಯಾಂಕಿಂಗ್ ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ಕುಸಿದಿದ್ದಾರೆ.
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಒಂದೇ ದಿನ ಊಟದ ಜೊತೆಗೆ ಮೊಟ್ಟೆ!
ರಾಜ್ಯದ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪ್ರಧಾನ ಮಂತ್ರಿ ಪೋಷಣ ಅಭಿಯಾನದಡಿ ವಾರದಲ್ಲಿ 2 ದಿನ ನೀಡುತ್ತಿದ್ದ ಮೊಟ್ಟೆ/ಬಾಳೆಹಣ್ಣನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.
ಬಿಸಿಯೂಟ ಯೋಜನೆ ನಿರ್ದೇಶಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು / ಶೇಂಗಾ ಚಿಕ್ಕಿ ವಿತರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ದೆಹಲಿ ಪ್ರವಾಸ: ಕೇಂದ್ರದ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಸೌಹಾರ್ದಯುತ ಮಾತುಕತೆ
ಕರ್ನಾಟಕದಲ್ಲಿ ಅಕ್ಕಿ ಪೈಟ್ ನಡೆಯುತ್ತಿದ್ದು ಇದೀಗ ಈ ವಿಷಯ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆಗಳಿದೆ.
ಭಾರತೀಯ ಆಹಾರ ನಿಗಮವು ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದ್ದು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿ ಪ್ರವಾಸ ಕೈಗೊಂಡು ಈ ವೇಳೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಅಕ್ಕಿ ಪೂರೈಕೆ ಬಗ್ಗೆ ಮಾತುಕತೆ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
ರಾಜ್ಯ ಸರ್ಕಾರವು ಅಕ್ಕಿಗಾಗಿ ಹೊರ ರಾಜ್ಯಗಳಲ್ಲಿ ಪ್ರಯತ್ನಿಸಿದರೂ ದುಬಾರಿ ಬೆಲೆ ಕೇಳುತ್ತಿರುವುದರಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ರಾಜ್ಯಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ರಾಜ್ಯಾದ್ಯಂತ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ವಸುದೈವ ಕುಟಂಬಂ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಗ ವಿನ್ಯಾಸದ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ನಮ್ಮ ಸಂಸ್ಕೃತಿಯಲ್ಲಿ ಯೋಗ ಇದೆ. ಹಳೆಯ ಗ್ರಂಥಗಳಲ್ಲೂ ಉಲ್ಲೇಖ ಇದೆ. ಯೋಗವು ದೇಹ, ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ ಎಂದರು.
ಯೋಗಾ ನಿಮ್ಮ ಬದುಕಿನಲ್ಲಿ ಒಂದು ಅಂಗವಾಗಿ ಉಳಿಯಲಿ. ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ. ಯೋಗಾ ಋಷಿ ಮುನಿಗಳು ದೇಶಕ್ಕೆ ಕೊಟ್ಟ ಕೊಡುಗೆ. ಎಲ್ಲ ರೋಗಕ್ಕೆ ಮದ್ದಿದೆ, ಮಾನಸಿಕ ರೋಗಕ್ಕೆ ಮದ್ದು ಇಲ್ಲ. ಒತ್ತಡದ ಬದುಕಿಗೆ ಯೊಗಾಭ್ಯಾಸ ಅತ್ಯಗತ್ಯ. ದಷ್ಚಟ ಮತ್ತು ರೋಗಕ್ಕೆ ಯೋಗವೇ ಮದ್ದು. ಶಾಲೆಗಳಲ್ಲಿ ಯೋಗ ಅಳವಡಿಸುವುದು ಅಗತ್ಯ.
ಯೋಗಾಕ್ಕೆ ಒಂದು ಸಿಲೆಬಸ್ ಮಾಡಿ ಮಕ್ಕಳಿಗೆ ಅರಿವು ಮೂಡಿಸಬೇಕು. ವೇದಿಕೆ ಮೇಲೆ ಇದ್ದ ಸಚಿವರಿಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮನವಿ ಮಾಡಿದರು.