ಜೀವನದಲ್ಲಿ ಕೆಲವು ವಿಷಯಗಳು ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಎಷ್ಟೋ ಬಾರಿ, ಅವುಗಳ ಹಿಡಿತಕ್ಕೆ ನಮ್ಮ ಅರಿವಿಗೆ ಬಾರದಂತೆ ಸಿಲುಕಿ ಜೀವನದ ಸೌಂದರ್ಯ ಅನುಭವಿಸಲು ಹಿಂದೆ ಬೀಳುತ್ತೇವೆ. ಇನ್ನೊಬ್ಬರ ಅಭಿಪ್ರಾಯ, ಇಂದಿನ ಸ್ಥಿತಿ, ಹಣ, ನಂಬಿಕೆ ಮುಂತಾದವು ನಮ್ಮ ನಿಯಂತ್ರಿಸದಂತೆ ನೋಡಿಕೊಂಡರೆ ಬದುಕನ್ನು ಆಸ್ವಾದಿಸಲು ಸಾಧ್ಯವಾಗಲಾಗದು.
ಜೀವನ ನಿಯಂತ್ರಣಕ್ಕೇ ಸಿಗದೆ ಎಲ್ಲೆಂದರಲ್ಲಿ ಸಾಗುತ್ತಿದೆ ಎನ್ನುವ ಭಾವನೆ ಕೆಲವು ಬಾರಿ ನಮ್ಮನ್ನು ಕಾಡುತ್ತಿರುತ್ತದೆ . ನಮ್ಮ ಬದುಕನ್ನು ನಾವು ರೂಪಿಸಿಕೊಳ್ಳಲಾಗದೆ ಹೇಗ್ ಹೇಗೋ ನಡೆಯುತ್ತಿದೆಯಲ್ಲ ಎನ್ನುವ ಬೇಸರವೂ ಉಂಟಾಗುತ್ತದೆ. ಆದರೆ, ಇದು ನಿಮಗೆ ಒಬ್ಬರಿಗೇ ಆಗುವ ಭಾವನೆಯಲ್ಲ. ಬಹಳಷ್ಟು ಜನರಿಗೆ ಹೀಗಾಗುವುದು ಸಹಜ. ಬದುಕಿನಲ್ಲಿ ಕೆಲವು ಅಂಶಗಳು ನಮ್ಮ ಮೇಲೆ ಸವಾರಿ ಮಾಡಲು ಆರಂಭಿಸಿದಾಗ ಹೀಗಾಗುತ್ತದೆ. ಅವುಗಳನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಹೋದರೆ ಜೀವನ ಖಂಡಿತವಾಗಿ ಎಲ್ಲೆಂದರಲ್ಲಿ ಸಾಗುತ್ತದೆ. ನಮ್ಮದಲ್ಲದ ಮಾರ್ಗದಲ್ಲಿ ಬಹಳ ಮುಂದೆ ಸಾಗಿದರೆ ಭಾರೀ ಸಮಸ್ಯೆ ಆಗುವುದು. ಹೀಗಾಗಿ, ಈ ಕೆಲವು ಅಂಶಗಳು ನಮ್ಮ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕು.
ನಮ್ಮನ್ನೇ ಬದಲಿಸುವ ಅಂತಹ ಅಂಶಗಳಾವುವು ಎಂದರೆ –
ಇತರರ ಅಭಿಪ್ರಾಯ, ಟೀಕೆಗಳು: ಸಮಾಜದಲ್ಲಿ ನಾವು ಸಾಕಷ್ಟು ಜನರೊಂದಿಗೆ ಬದುಕುವುದು ಅನಿವಾರ್ಯ. ಆಗ, ಇನ್ನೊಬ್ಬರ ಅನಿಸಿಕೆ, ಅಭಿಪ್ರಾಯ, ಟೀಕೆಗಳನ್ನು ಕೇಳಬೇಕಾಗುತ್ತದೆ. ಇತರರ ಅಭಿಪ್ರಾಯಗಳಿಗೆ ಅತಿಯಾಗಿ ಪ್ರಾಮುಖ್ಯತೆ ನೀಡುತ್ತ ಹೋದರೆ ನಮ್ಮ ಬದುಕು ನಮ್ಮದಾಗಿರುವುದಿಲ್ಲ. ಇತರರ ಅಭಿಪ್ರಾಯಗಳು ನಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಅರಿಯಬೇಕು. ಇಂದಿನ ಸೋಷಿಯಲ್ ಮೀಡಿಯಾ ಹಾವಳಿಯಲ್ಲಿ ಇದನ್ನು ಅರಿತುಕೊಳ್ಳುವುದು ಅತಿ ಅಗತ್ಯ.
ಇಂದಿನ ಸ್ಥಿತಿ ನಿಯಂತ್ರಿಸದಿರಲಿ: ಪ್ರತಿಯೊಬ್ಬರು ಜೀವನದಲ್ಲಿ ವಿವಿಧ ಹಂತಗಳನ್ನು ದಾಟಿ ಮುಂದೆ ಸಾಗಬೇಕು, ಸಾಗುತ್ತಾರೆ. ಹಾಗೆಯೇ, ನಾವೂ ಸಾಗಬೇಕು. ಇಂದು ಏನು ಅನಿಸುತ್ತಿದೆಯೋ ಅದು ಶಾಶ್ವತವಲ್ಲ. ಇಂದು ನೀವು ಯಾರನ್ನು ಭೇಟಿಯಾಗಿದ್ದೀರೋ, ನಿಮಗೇನು ಭಾವನೆ ಮೂಡಿದೆಯೋ ಅದು ಖಾಯಂ ಆಗಿ ಉಳಿಯುವುದಿಲ್ಲ. ಸದ್ಯದ ಸ್ಥಿತಿಗತಿಯನ್ನೇ ದೊಡ್ಡದು ಎಂದು ಭಾವಿಸಿದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಹೀಗಾಗಿ, ನೀವು ಇಂದು ಯಾವುದೇ ಹಂತದಲ್ಲಿ ಇರಬಹುದು, ಅಲ್ಲಿಯೇ ಸ್ಥಗಿತವಾಗದೆ,
ಮುನ್ನುಗ್ಗುತಲಿರಬೇಕು.
ಕಟ್ಟಿಹಾಕುವ ನಂಬಿಕೆಗಳು:
ಕೆಲವು ನಂಬಿಕೆಗಳು ಬೆಳೆದಿರುವ ಪರಿಸರದಿಂದಲೋ, ಅನುಭವಗಳಿಂದಲೋ ಮೂಡಿರುತ್ತವೆ. ವಿಚಿತ್ರವೆಂದರೆ, ಹೆಚ್ಚಿನ ಇಂತಹ ನಂಬಿಕೆಗಳು ಸಬ್ ಕಾನ್ಸಿಯಸ್ ಮಟ್ಟದಲ್ಲೇ ಇರುತ್ತವೆ. ಇವು ನಿಮ್ಮನ್ನು ಬೆಳೆಯಲು ಬಿಡದೇ ಕಟ್ಟಿಹಾಕುತ್ತವೆ ಅಂದರೆ ನಿಯಂತ್ರಿಸುತ್ತವೆ. ಹಳೆಯ ಯಾವುದೋ ಅನುಭವ, ವಾತಾವರಣ ಅಥವಾ ಭಯದಿಂದ ಉಂಟಾದ ನಂಬಿಕೆಗಳಿಂದ ಹೊರಬರುವ ಪ್ರಯತ್ನ ಮಾಡಬೇಕು ಆಗಲೇ ಜೀವನ ಸ್ಪಷ್ಟವಾಗಿ ಕಾಣಿಸುತ್ತದೆ.
ಹಣ: ಹಣದ ಸುತ್ತ ಜಗತ್ತು ಸುತ್ತುತ್ತದೆ ಎನ್ನುತ್ತಾರೆ. ಇದು ನಿಜವಾಗಿರಬಹುದು. ಆದರೆ, ಕೇವಲ ಹಣ ಗಳಿಸುವುದೊಂದೇ ಜೀವನವಲ್ಲ. ನಿಮ್ಮ ಅಗತ್ಯಕ್ಕೆ ಹಣ ಬೇಕು, ಅದಕ್ಕಾಗಿ ದುಡಿಯಿರಿ. ಒಂದು ಹಂತದ ಆರ್ಥಿಕ ಭದ್ರಪಡಿಸಿಕೊಂಡು ಸುಮ್ಮನಾಗಿ. ಆದರೆ, ಹಣವೊಂದರಿಂದಲೇ ಭವಿಷ್ಯದ ಜೀವನ ಸುಖವಾಗಿ ಇರುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಎಷ್ಟೋ ಜನ ಶ್ರೀಮಂತರು ವೃದ್ಧಾಪ್ಯವನ್ನು ಕಷ್ಟದಲ್ಲಿ ಕಳೆದಿದ್ದಿದೆ. ಹೀಗಾಗಿ, ಹಣ ನಮ್ಮ ಬದುಕನ್ನು ನಿಯಂತ್ರಿಸುವ ಸಾಧನವಾಗದಿರಲಿ. ಹಿಂದಿನ ತಪ್ಪುಗಳು ಎಷ್ಟೋ ಜನ ತಾವು ಹಿಂದೆ ಮಾಡಿದ ತಪ್ಪುಗಳ ನೆನಪಿನಲ್ಲಿ ಜೀವನ ಕಳೆಯುತ್ತಾರೆ. ದೇವರು ಮನುಷ್ಯನಿಗೆ ಮರೆವು ಎನ್ನುವ ಅದ್ಭುತ ವರ ನೀಡಿರುವಾಗ ಅವುಗಳನ್ನು ಮರೆಯುವುದು ಸಾಧ್ಯ. ಕಹಿ ನೆನಪುಗಳನ್ನು ಮರೆಯುವುದರಿಂದ ವರ್ತಮಾನ ಹಾಗೂ ಭವಿಷ್ಯದ ಜೀವನ ಸುಂದರವಾಗುತ್ತದೆ ಎಂಬ ನಂಬಿಕೆಯಿಂದ ನಮ್ಮ ಜೀವನವನ್ನು ಮುಂದೆ ಕೊಂಡ ಹೋಗಬೇಕು.