ವೇಣಿದಾನ ದ ಶಾಸ್ತ್ರ ಆದ ಮೇಲೆ ಅಜ್ಜ ಶ್ರಾದ್ಧ ಕಾರ್ಯ ಮಾಡಿದರು. ಇದನ್ನು ಮಾಡಲೆಂದೇ ಎಲ್ಲೆಲ್ಲಿಂದಲೂ ಜನ ಬರುತ್ತಾರೆ. ಇಲ್ಲಿ ಶ್ರಾದ್ಧ ಮಾಡುವುದರಿಂದ ಸ್ವರ್ಗ ಸಿಗುತ್ತದೆ.
ಕಾಶಿಯಲ್ಲಿ ಮಾಡುವುದರಿಂದ ವೈಕುಂಠ ಪ್ರಾಪ್ತಿಯಾಗುತ್ತದೆ. ಗಯಾದಲ್ಲಿ ಮಾಡುವುದರಿಂದ ಮೋಕ್ಷ ಪ್ರಧಾನವಾಗುತ್ತದೆ….ಎಂದು ಎಲ್ಲರ ನಂಬಿಕೆ..ಈ ಮೂರೂ ಕ್ಷೇತ್ರಗಳನ್ನು ಮನುಷ್ಯನ ಶರೀರಕ್ಕೆ ಹೋಲಿಸುತ್ತಾರೆ.
ಪ್ರಯಾಗ ಅಂದರೆ ತಲೆ- ಸ್ವರ್ಗ…
ಕಾಶಿ ಅಂದರೆ ಉದರ- ವೈಕುಂಠ…
ಗಯಾ ಅಂದರೆ ಪಾದಗಳು – ಮೋಕ್ಷ…
ಕಾಶೀ ಮಠದಲ್ಲಿ ಶ್ರಾದ್ಧದ ಕಾರ್ಯ ಆದಮೇಲೆ ಅದನ್ನು ವಿಸರ್ಜನೆ ಮಾಡಲು ತ್ರಿವೇಣಿ ಸಂಗಮಕ್ಕೆ ಬಂದೆವು. ವೇಣಿದಾನದ ಗಂಟೂ ಇತ್ತು. ನಾವು ಕೆಲವರುಆಟೋದಲ್ಲಿ ಬಂದರೆ ಇನ್ನು ಕೆಲವರು ನಡೆದುಕೊಂಡು ಬಂದರು. ಸಂಗಮದ ಬಳಿ ದಡದ ಮೇಲೆ ನಮ್ಮ ಬಸ್ಸು ನಿಂತಿತ್ತು. ಅಲ್ಲಿ ಹಸಿರು ಬಣ್ಣದ ಯಮುನೆ ಹಾಗೂ ನಸು ಕಂದು ಬಣ್ಣದ ಗಂಗೆಯರ ಸಂಗಮ ಆಗುವ ಕಡೆ ಸ್ಪಷ್ಟವಾಗಿ ಗೆರೆಯೊಂದು ಕಾಣುತ್ತದೆ. ಮತ್ತೆ ಎರಡೂ ಒಂದೇ ಆಗಿ ಸ್ವಲ್ಪ ದೂರದ ವರೆಗೆ ಶೇಡೆಡ್ ಬಣ್ಣ ಕಾಣುತ್ತದೆ.ಮತ್ತೆ ಒಂದೇ ಬಣ್ಣದಲ್ಲಿ ಹರಿಯುತ್ತದೆ..ಬಣ್ಣಗಳು ಕಾಣಲು ಮಾತ್ರ..ನೀರನ್ನು ಬಾಟಲ್ ಅಥವಾ ಪಾತ್ರೆಗಳಲ್ಲಿ ಹಿಡಿದರೆ ಸ್ವಚ್ಛವಾಗಿರುತ್ತದೆ. ನಾವು ದಡದಿಂದ ಬೋಟ್ ಗಳಲ್ಲಿ ಸಂಗಮ ಸ್ಥಳದ ನಡುಭಾಗಕ್ಕೆ ಹೋದೆವು. ಅಲ್ಲಿ ತಲುಪುವ ತುಸು ಮುನ್ನವೇ ವೇಣಿದಾನದ ಗಂಟು ಮತ್ತು ಪಿಂಡ ಕಾರ್ಯ ಮಾಡಿದ ಅವಶೇಷಗಳನ್ನು, ಅಸ್ಥಿತಂದವರು ಅಸ್ಥಿಯನ್ನು ವಿಸರ್ಜನೆ ಮಾಡಿದರು. ಎರಡು ಬೋಟ್ ಗಳನ್ನು ಹತ್ತಿರ ಹತ್ತಿರ ಇಟ್ಟು ಹಲಗೆಯನ್ನು ಕಟ್ಟಿ ಅಟ್ಟಣಿಗೆಯ ತರಹ ಮಾಡಿದ್ದರು. ಅದರ ಮೇಲೆ ಹತ್ತಿ ಹಾಲನ್ನು ಸ್ವಲ್ಪ ತ್ರಿವೇಣಿಯಲ್ಲಿ ಹಾಕಿ ಮುಳುಗಲು ಇಚ್ಛೆಯಿದ್ದವರು,ಧೈರ್ಯ ಇದ್ದವರು ಎರಡೂ ಬೋಟಿನ ದಡಗಳನ್ನು ಹಿಡಿದು ಮುಳುಗಬಹುದು. ಇಲ್ಲದಿದ್ದರೆ ಅವರೇ ಹಿಡಿದು ಮೂರು ಸಲ ಮುಳುಗಿಸುತ್ತಾರೆ. ಅಲ್ಲಿಯೇ ಬಾಟಲು,ಕ್ಯಾನ್ ಗಳಿಗೆ ತೀರ್ಥವನ್ನು ತುಂಬಿಸಿಕೊಳ್ಳಬಹುದು.
ಹೆಚ್ಚಿನ ಯಾತ್ರಿಗಳು ದಡದಲ್ಲಿಯೇ ಅಲ್ಲಲ್ಲಿ ಟೆಂಟ್,ಶಡ್ ಗಳಲ್ಲಿ ಪಿಂಡಪ್ರಧಾನ,ವೇಣಿದಾನ ಎಲ್ಲವನ್ನೂ ಮಾಡುತ್ತಿದ್ದರು. ಕುಂಭ ಮೇಳದ ಸಮಯದಲ್ಲಿ ತುಂಬಾ ಜನದಟ್ಟಣೆ ಇರುತ್ತದೆಯಂತೆ..ನಾವು ಹೋದಾಗ ಜನ ಕಡಿಮೆಯಿತ್ತು.ಅಲ್ಲದೆ ನಾವು ಬೆಳಿಗ್ಯೆ ಬೇಗ ಹೋಗಿದ್ದೆವು..ಹಾಗಾಗಿ ಇನ್ನೂ ತುಂಬಾ ಜನ ಸೇರಿರಲಿಲ್ಲ.
ಅಲ್ಲಿಂದ ದಡದಲ್ಲೇ ಇರುವ ಮಲಗಿದ ಸುಮಾರು ಇಪ್ಪತ್ತು ಅಡಿ ಉದ್ದವಿದ್ದ ಹನುಮಂತನನ್ನು ನೋಡಲು ಹೋದೆವು. ಒಂದು ದೊಡ್ಡ ಗುಂಡಿಯಲ್ಲಿ ಆಂಜನೇಯ ಅಂಗಾತ ಮಲಗಿದ್ದ. ಅವನ ಮೇಲೆ ರಾಶಿರಾಶಿ ಹೂವು ಹಾಕುತ್ತಿದ್ದರು. ಇಬ್ಬರೂ ತೆಗೆಯುತ್ತಾ ಇದ್ದರು. ಆರತಿ ಮಾಡುತ್ತಿದ್ದರು. ಆದರೂ ಅವನು ಕಾಣದಷ್ಟು ಹೂವಿನ ರಾಶಿ ಅವನ ಮೇಲೆ ಭಕ್ತರು ಹಾಕುತ್ತಲೇ ಇದ್ದರು.ಇಲ್ಲಿ ಸಾಕಷ್ಟು ಜನ ತುಂಬಿದ್ದರು.
ರಾಮರಾವಣರ ಯುದ್ಧದ ಬಳಿಕ ಮಾರುತಿಗೆ ತುಂಬಾ ಆಯಾಸವಾಗಿ ಅವನು ವಿಶ್ರಾಂತಿಗಾಗಿ ಸೀತಾ ಮಾತೆಯ ಅಪ್ಪಣೆ ತೆಗೆದುಕೊಂಡು ಅಲ್ಲಿ ನಿದ್ದೆ ಮಾಡತೊಡಗಿದನಂತೆ. ಪಕ್ಕದಲ್ಲೇ ರಾಮಸೀತೆಯರ ದೇವಸ್ಥಾನವೂ ಇದೆ.
ಈ ಹನುಮಂತನ ಬಗ್ಗೆ ಇನ್ನೊಂದು ವದಂತಿ ಇದೆ. ಲಂಕಾಯುದ್ಧದ ನಂತರ ಹನುಮಂತನ ಭಾರದ್ವಾಜ ಋಷಿಗಳ ಆಶೀರ್ವಾದ ತೆಗೆದುಕೊಳ್ಳಲೆಂದು ಬಂದು ಪ್ರಯಾಗದಲ್ಲಿ ಸ್ನಾನ ಮಾಡಿ ಬರುವಾಗ ದಡದಲ್ಲಿ ಬಿದ್ದು ಮೂರ್ಛೆ ಹೋದನಂತೆ..ಬಿದ್ದವನಿಗೆ ಸೀತಾ ಮಾತೆಯು ಅವನಿಗೆ ಸಿಂಧೂರವನ್ನು ಹಚ್ಚಿ ಚಿರಾಯು ಆಗಲೆಂದು ಆಶೀರ್ವಾದ ನೀಡಿದಳು.ಈಗಲೂ ಬಂದವರೆಲ್ಲಾ ಸಿಂಧೂರವನ್ನು ಹಚ್ಚಿ ತಮ್ಮ ಬೇಡಿಕೆಗಳನ್ನು ಅವನ ಮುಂದಿಡುತ್ತಾರಂತೆ..ಅದರಲ್ಲಿ ಯಶಸ್ಸನ್ನೂ ಪಡೆಯುತ್ತಾರಂತೆ. ಮಳೆಗಾಲದಲ್ಲಿ ಒಂದು ಬಾರಿಯಾದರೂ ಗಂಗೆಯು ಇವನ ಪಾದಗಳನ್ನು ತೊಳೆದು ಹೋಗುತ್ತಾಳಂತೆ.
ಅಕ್ಬರನು ತನ್ನ ರಾಜ್ಯಕ್ಕೆ ಕೋಟೆಯನ್ನು ಕಟ್ಟುವ ಯೋಜನೆ ಹಾಕಿದಾಗ ಈ ಹನುಮಂತನ ಮೇಲೆಯೇ ಕೋಟೆ ಗೋಡೆ ಹೋಗುತ್ತಿತ್ತಂತೆ. ಇವನನ್ನು ಅಲ್ಲಿಂದ ಎಬ್ಬಿಸಲು ಏನು ಮಾಡಿದರೂ ಆಗದೆ ಮತ್ತೆ ಯೋಜನೆಯನ್ನೇ ಅವನು ಕೈ ಬಿಟ್ಟನಂತೆ..ಹೀಗೆ ಈ ಭಜರಂಗಬಲಿಯ ಬಗ್ಗೆ ಹಲವಾರು ಕಥೆ,ಪವಾಡಗಳನ್ನು ಹೇಳುತ್ತಾರೆ…
ನಮ್ಮ ಕಾರ್ಯಕ್ರಮವೇನೋ ಚೆನ್ನಾಗಾಯಿತು…ಊರು ಮಾತ್ರ ಎಲ್ಲಾ ಯಾತ್ರಾ ಸ್ಥಳಗಳಂತೆ ಗಲೀಜಾಗಿತ್ತು.
ಅಲ್ಲೇ ದಡದಲ್ಲಿ ನಿಂತ ನಮ್ಮ ಬಸ್ಸಲ್ಲಿ ಹತ್ತಿ ಕಾಶಿಗೆ ಹೊರಟೆವು. ಸಮಯ 10-00ರಿಂದ 10-30 ಆಗಿರಬಹುದು. ನಡುವೆ ಒಂದೆಡೆ ಬಸ್ ನಿಲ್ಲಿಸಿ ಚಹಾ ತಿಂಡಿ ತಿಂದೆವು. ಸುಮಾರು 2-00 ಗಂಟೆಗೆ ವಾರಣಾಸಿಯನ್ನು ತಲುಪಿದೆವು..