ಮಂಗಳೂರು: ಖ್ಯಾತ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಯವರ 70ನೇ ಹುಟ್ಟುಹಬ್ಬದ ನಿಮಿತ್ತ ಪ. ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿಯವರು ಪ. ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಾರಂಭವನ್ನು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜುಲೈ 8 ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಂಡಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಯಕ್ಷಗಾನ ಭಾಗವಾತಗಾನವನ್ನು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್. ಎನ್. ಜೋಸೆಫ್ ಅವರು ಉದ್ಘಾಟಿಸಲಿದ್ದಾರೆ. ಭಾಗವತಿಕೆಯಲ್ಲಿ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ, ಗಾನಸುರಭಿ ರವೀಂದ್ರ ಕನ್ನಡಿಕಟ್ಟೆ ಹಾಗೂ ಗಿರೀಶ ರೈ ಕಕ್ಯಪದವು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಕೃಷ್ಣ ಪ್ರಸಾದ ಉಳಿತ್ತಾಯ ಹಾಗೂ ಶಿತಿಕಂಠ ಭಟ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಬಿ. ಎನ್. ಗಿರೀಶ್ ಹೆಗ್ಡೆ ನಿರೂಪಿಸಲಿದ್ದಾರೆ.
ಪ. ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ ಕಾರ್ಯಕ್ರಮವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ವಹಿಸಲಿದ್ದಾರೆ. ಪತ್ರಿಕಾ ಲೇಖನವನ್ನು ಉದಯವಾಣಿಯ ನಿವೃತ್ತ ಹಿರಿಯ ಸಂಪಾದಕ ನಿತ್ಯಾನಂದ ಪಡ್ರೆಯವರು ಪ್ರಸ್ತುತಪಡಿಸಲಿದ್ದಾರೆ. ಸಮಗ್ರ ಸಾಹಿತ್ಯವನ್ನು ಸ.ಪ್ರ.ದ ಕಾಲೇಜಿನ ಉಪನ್ಯಾಸಕರಾದ ಡಾ. ಕೃಷಣಾನಂದ ಪಿ. ಎಮ್. ಪ್ರಸ್ತುತ ಪಡಿಸಲಿದ್ದಾರೆ. ಮಕ್ಕಳ ಸಾಹಿತ್ಯವನ್ನು ಸಾಹಿತಿ ದೀಪ ಫಡ್ಕೆ ಪ್ರಸ್ತುತ ಪಡಿಸಲಿದ್ದಾರೆ.
ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಸಂಜೆ 5.00 ಗಂಟೆಗೆ ನಡೆಯಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ.