ಇಂದಿನ ರೌಂಡ್ ಅಪ್: ಇಲ್ಲಿದೆ ಪ್ರಮುಖ ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ನೂತನ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್!
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ.
ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಡೆಯಲಿದ್ದು, ಬೆಂಗಳೂರು- ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆಯ ವಿಮಾನ ಹಾರಾಟ ಆರಂಭಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸಹ ಆರಂಭವಾಗಲಿದೆ.
ಫೆ.27ರಂದು ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು, ಆದರೆ ಅಂದಿನಿಂದ ಈವರೆಗೆ ಯಾವುದೇ ವಿಮಾನಗಳ ಸಂಚಾರ ನಡೆದಿಲ್ಲ. ಈ ನಡುವೆಯೇ ಚುನಾವಣೆ ಹಾಗೂ ಸರ್ಕಾರ ಬದಲಾವಣೆಯಾಗಿದ್ದು, ವಿಮಾನ ಹಾರಾಟಕ್ಕೆ ಮತ್ತಷ್ಟು ವಿಳಂಬವಾಗಿದೆ ಎನ್ನಲಾಗಿದೆ.
ಪ್ರತಿದಿನ ಬೆಳಗ್ಗೆ 9ಕ್ಕೆ ಬೆಂಗಳೂರಿನಿಂದ ಹೊರಟು 10 30ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12ಕ್ಕೆ ಶಿವಮೊಗ್ಗ ದಿಂದ ಹೊರಟು 1 30ಕ್ಕೆ ಬೆಂಗಳೂರು ತಲುಪಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಸಮಯ ಬದಲಾಯಿಸಲಾಗುತ್ತದೆ. ಸದ್ಯ ಬೆಂಗಳೂರು- ಶಿವಮೊಗ್ಗ ಮಾರ್ಗಕ್ಕೆ ಟಿಕೆಟ್ ದರ 2,500 ರೂ. ಯಿಂದ 3,500ರೂ. ಇರಲಿದೆ.
ಒಂದೇ ದಿನ 5.71 ಲಕ್ಷ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ
ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಚಾಲನೆ ಸಿಕ್ಕ ಮೊದಲ ದಿನವೇ ಬರೋಬ್ಬರಿ 5.71 ಲಕ್ಷ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಬಿಎಂಟಿಸಿ ಬಸ್ ನಲ್ಲಿ ಒಟ್ಟು 2,01,215 ಮಹಿಳೆಯರು, ವಾಯವ್ಯ ಸಾರಿಗೆ ಬಸ್ ನಲ್ಲಿ 1,22,354 ಮಹಿಳೆಯರು ಇನ್ನು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623 ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟು 5.71 ಲಕ್ಷ ಜನರ ಪ್ರಯಾಣದ ಟಿಕೆಟ್ ವೆಚ್ಚ 1,40,22,878 ರೂ. ಆಗಿದೆ.
ಈ ಉಚಿತ ಬಸ್ ಸೇವೆಯ ಮೂಲಕ ಪ್ರತಿದಿನ 41.8 ಲಕ್ಷ ಮಹಿಳೆಯರಿಗೆ ಸಹಕಾರಿಯಾಗಲಿದೆ ಮತ್ತು ರಾಜ್ಯ ಸರ್ಕಾರಕ್ಕೆ ವಾರ್ಷಿಕ 4.051.56 ಕೋಟಿ ರೂ. ವೆಚ್ಚವಾಗಲಿದೆ.
ಊಬರ್, ರ್ಯಾಪಿಡೋ ಸಂಸ್ಥೆಗಳಿಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್!
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರ್ಯಾಪಿಡೋ ಮತ್ತು ಊಬರ್ ನ ಬೈಕ್ – ಟಾಕ್ಸಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಹೈ ಕೋರ್ಟ್ ನ ಆದೇಶದ ವಿರುದ್ದ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ದೆಹಲಿ ಸರ್ಕಾರ ಹೊಸ ನೀತಿ ಜಾರಿಗೆ ತರುವವರೆಗೆ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ಕೋರಿ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳು ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ ದೆಹಲಿ ಸರ್ಕಾರ ವಿರೋಧ ವ್ಯಕ್ತಪಡಿಸಿ, ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ಇದರ ವಿರುದ್ದ ಊಬರ್ ಹಾಗೂ ರ್ಯಾಪಿಡೋ ಹೈಕೋರ್ಟ್ ಮೆಟ್ಟಿಲೇರಿ, ಜೂ.26ರಿಂದ ಬೈಕ್ ಟ್ಯಾಕ್ಸಿಗೆ ಅನುಮತಿ ಪಡೆದಿತ್ತು. ಆದರೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಇದೇ ವೇಳೆ ಜೂನ್ 30ರೊಳಗೆ ದ್ವಿಚಕ್ರ ವಾಹನಗಳ ಟ್ಯಾಕ್ಸಿ ಕಾರ್ಯಾಚರಣೆಗೆ ನೀತಿಯನ್ನು ಮಾಡಲಾಗುವುದು ಎಂದು ದೆಹಲಿ ಸರ್ಕಾರ ತಿಳಿಸಿದೆ.
ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನ
ಇಟಲಿಯ ಮಾಜಿ ಪ್ರಧಾನ ಮಂತ್ರಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಇಂದು ನಿಧನರಾಗಿದ್ದಾರೆ.
ಭ್ರಷ್ಟಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪಗಳಿಂದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದ ಇವರು, ತಮ್ಮ 86ನೇ ವಯಸ್ಸಿನಲ್ಲಿ ಮಿಲನ್ ನ ಸ್ಯಾನ್ ರಾಫೆಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಟಲಿಯ ಮಾಧ್ಯಮಗಳ ವರದಿ ಪ್ರಕಾರ ಸಿಲ್ವಿಯೊ ಬೆರ್ಲುಸ್ಕೋನಿ ಆರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು, ಬಳಿಕ ಡಿಸ್ಚಾರ್ಚ್ ಆದ ಮೂರು ವಾರಗಳಲ್ಲಿ ರಕ್ತ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಸಿಲ್ವಿಯೋ ಬೆರ್ಲುಸ್ಕೋನಿ ಇಟಲಿಯ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿಯಾ ಸಮ್ಮಿಶ್ರ ಸರ್ಕಾರದಲ್ಲಿ ಕಿರಿಯ ಸಚಿವರಾಗಿದ್ದರು. 1994 ಮತ್ತು 2011 ರ ನಡುವೆ 9 ವರ್ಷಗಳ ಕಾಲ ಮೂರು ಬಾರಿ ಪ್ರಧಾನ ಮಂತ್ರಿಯಾಗಿದ್ದರು.