ಮಣಿಪುರದಲ್ಲಿ ಎರಡು ಜನಾಂಗಗಳ ನಡುವೆ ನಡೆಯುತ್ತಿರುವ ಸಂಘರ್ಷ ಕೊಂಚ ಶಾಂತವಾಗಿದ್ದರೂ ಕೂಡ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಾದಂತಿದೆ. ಪರಿಸ್ಥಿಯನ್ನು ತಿಳಿಗೊಳಿಸಲು ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ.
ಮಣಿಪುರದಲ್ಲಿ ಉಂಟಾದ ಜನಾಂಗೀಯ ಸಂಘರ್ಷದಿಂದಾಗಿ 50 ಸಾವಿರಕ್ಕೂ ಹೆಚ್ಚು ಜನರ ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದಾರೆ. ನಿರಾಶ್ರಿತಾಗಿರುವ ಈ ಜನರಿಗೆ ರಾಜ್ಯಾದಾದ್ಯಂತ 349 ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿ ಅಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಈಗಾಗಲೇ ಕೂಂಬಿಂಗ್ ಶುರು ಮಾಡಿದ್ದು, ಒಟ್ಟು 53 ಆಯುಧಗಳು, 39 ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡದಂತೆ ಆದೇಶ ಮಾಡಲಾಗಿದೆ. ಹಾಗೆಯೇ ರಾಜ್ಯದಲ್ಲಿರುವ ಒಟ್ಟು 242 ಬ್ಯಾಂಕ್ ಶಾಖೆಗಳಲ್ಲಿ ಈಗಾಗಲೇ 198 ಶಾಖೆಗಳು ಮರಳಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವ ಡಾ ಆರ್ ಕೆ ರಂಜನ್ ಅವರು ತಿಳಿಸಿದ್ದಾರೆ.
ಬೆಲೆ ಏರಿಕೆ ಮಾಡದಂತೆ ಆದೇಶ:
ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಜ್ಯದಲ್ಲಿ ಬೆಲೆ ನಿಯಂತ್ರಣ ವ್ಯವಸ್ಥೆ ಜಾರಿ ಮಾಡಲಾಗಿದೆ ಮಾಡಲಾಗಿದೆ. ಇದರ ಮೂಲಕ ರಾಷ್ಟ್ರೀಯ ಹೆದ್ದಾರಿ-37 ಮೂಲಕ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ತರಲಾಗುತ್ತಿದೆ. 5,000 ಮೆಟ್ರಿಕ್ ಟನ್ ನಿರ್ಮಾಣ ಸಾಮಗ್ರಿಗಳು, ಇಂಧನ ಮತ್ತು ಅಗತ್ಯ ವಸ್ತುಗಳನ್ನು 2,376 ಟ್ರಕ್ಗಳಲ್ಲಿ ಮಣಿಪುರಕ್ಕೆ ತರಲಾಗಿದೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗಾಗಿ ತೆರೆಯಲಾದ ಪರಿಹಾರ ಶಿಬಿರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಜಿಲ್ಲೆಗಳು ಮತ್ತು ಕ್ಲಸ್ಟರ್ ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ . ರಾಜ್ಯದಲ್ಲಿನ 242 ಬ್ಯಾಂಕ್ ಶಾಖೆಗಳಲ್ಲಿ 198 ಶಾಖೆಗಳು ಪುನರ್ ಕಾರ್ಯಾರಂಭ ಮಾಡಿವೆ. ಇನ್ನುಳಿದ ಬ್ಯಾಂಕುಗಳು ಸಹ ಶೀಘ್ರದಲ್ಲೇ ಕಾರ್ಯಾರಂಭ ಮಾಡುತ್ತವೆ ಎಂದು ಸಚಿವ ಆರ್ ಕೆ ರಂಜನ್ ತಿಳಿಸಿದ್ದಾರೆ.
ಇಂಟರ್ನೆಟ್ ನಿಷೇಧ ಇನ್ನೂ 5 ದಿನಗಳವರೆಗೆ ವಿಸ್ತರಣೆ:
ಶನಿವಾರ ನಡೆದ ಹಿಂಸಾತ್ಮಕ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇಂಟರ್ನೆಟ್ ನಿಷೇಧವನ್ನು ಇನ್ನೂ 5 ದಿನಗಳವರೆಗೆ ವಿಸ್ತರಿಸಿದೆ. ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಜೂನ್ 15ರ ಮಧ್ಯಾಹ್ನ 3 ಗಂಟೆಯವರೆಗೆ ಇಂಟರ್ನೆಟ್ ನಿಷೇಧ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಶಾಂತಿ ಸಮಿತಿ ರಚನೆ:
ಮಣಿಪುರ ಹಿಂಸಾಚಾರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಶಾಂತಿ ಸಮಿತಿಯನ್ನು ರಚನೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ರಚಿಸಿರುವ ಶಾಂತಿ ಸಮಿತಿ ವಿರುದ್ಧ ಕುಕಿ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಸಮಿತಿಯನ್ನು ಬಹಿಷ್ಕರಿಸುವುದಾಗಿ ಕುಕಿ ಸಮುದಾಯದ ಪ್ರತಿನಿಧಿಗಳು ಹೇಳಿದ್ದಾರೆ. ಸಮಿತಿಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಅವರ ಬೆಂಬಲಿಗರು ಇರುವುದಕ್ಕೆ ಕುಕೀ ಸಮುದಾಯದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಸಮಿತಿಗೆ ಸೇರಿಸಲು ತಮ್ಮ ಒಪ್ಪಿಗೆ ಪಡೆದುಕೊಂಡಿಲ್ಲ, ಕೇಂದ್ರ ಸರ್ಕಾರ ಮಾತುಕತೆಗೆ ಅನುಕೂಲವಾಗುವಂತೆ ಸಮಿತಿ ರಚನೆ ಮಾಡಬೇಕು ಎಂದು ಕುಕಿ ಸಮುದಾಯದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
102 ಕೋಟಿ ಪರಿಹಾರ ಪ್ಯಾಕೇಜ್:
ನಿರಾಶ್ರಿತರಾದ ಮಣಿಪುರದ ಜನರಿಗೆ ಸುಮಾರು 102 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ನೀಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆಯನ್ನು ನೀಡಿದೆ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವಾರ ಮಣಿಪುರಕ್ಕೆ ಭೇಟಿ ನೀಡಿದಾಗ, ಹಿಂಸಾಚಾರದಿಂದ ಹಾನಿಗೊಳಗಾದ ಎಲ್ಲಾ ಸಮುದಾಯಗಳ ಜನರಿಗೆ ಪರಿಹಾರ ಪ್ಯಾಕೇಜ್ಗಾಗಿ ಕೇಂದ್ರಕ್ಕೆ ಔಪಚಾರಿಕ ಮನವಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.
ರಾಜ್ಯದಲ್ಲಿ ಹತ್ತು ಸಾವಿರ ಸೈನಿಕರನ್ನು ನಿಯೋಜನೆ:
ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ನ ಸುಮಾರು 10,000 ಯೋಧರನ್ನು ನಿಯೋಜಿಸಲಾಗಿದೆ.
ಶಸ್ತ್ರಾಸ್ತ್ರ ಹಿಂತಿರುಗಿಸುವಂತೆ ಪೋಸ್ಟರ್ ಆಳವಡಿಕೆ:
ಹಿಂಸಾಚಾರದ ವೇಳೆ ಪೊಲೀಸ್ ಶಸ್ತ್ರಾಸ್ತ್ರಗಳಿಂದ 4,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಸ್ತ್ರಾಸ್ತ್ರಗಳನ್ನು ಮರಳಿ ನೀಡುವಂತೆ ಮನವಿ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಒಟ್ಟು 990 ಶಸ್ತ್ರಾಸ್ತ್ರಗಳು ಮತ್ತು 13,526 ಮದ್ದು ಗುಂಡುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ.
ಲೂಟಿಯಾದ ಶಸ್ತ್ರಾಸ್ತ್ರಗಳನ್ನು ಬಹುತೇಕ ವಾಪಸ್ ಪಡೆಯಲಾಗಿದೆ. ಇನ್ನು ಉಳಿದಿರುವ ಶಸ್ತ್ರಾಸ್ತ್ರ ಹಿಂಪಡೆಡಗೆ ಶಾಸಕರುಗಳು ನೂತನ ಪ್ರಯೋಗವನ್ನು ಮಾಡುತ್ತಿದ್ದಾರೆ. ಇಂಫಾಲ್ ಪೂರ್ವದ ಬಿಜೆಪಿ ಶಾಸಕರೊಬ್ಬರು ತಮ್ಮ ಮನೆ ಮುಂದೆ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಡಬ್ಬವನ್ನು ಇರಿಸಿದ್ದಾರೆ. ರೈಫಲ್ಗಳು ಸೇರಿ ಇದುವರೆಗೂ 130 ಶಸ್ತ್ರಾಸ್ತ್ರಗಳನ್ನು ಈ ಡಬ್ಬದಲ್ಲಿ ಇಟ್ಟುಹೋಗಲಾಗಿದೆ. ಇನ್ನೊಬ್ಬ ಸಚಿವರು ಕೂಡ ಇದೇ ರೀತಿ ಮಾಡಿದ್ದು, ತಮ್ಮ ಮನೆಯ ಮುಂದೆ ಪೋಸ್ಟರ್ವೊಂದನ್ನು ಹಾಕಿಕೊಂಡಿದ್ದಾರೆ. ನೀವು ಕದ್ದಿರುವ ಶಸ್ತ್ರಾಸ್ತ್ರಗಳನ್ನು ಇಲ್ಲಿ ಬಿಡಿ’ ಎಂದು ಇಂಗ್ಲಿಷ್ ಮತ್ತು ಮೈತೇಯಿ ಭಾಷೆಯಲ್ಲಿ ಬರೆದು ಪೋಸ್ಟರ್ ಅಂಟಿಸಿದ್ದಾರೆ.