ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದ್ದು, 2011ರಿಂದ 2021ರವರೆಗೆ 812 ಜನರು ಸಿಡಿಲು ಬಡಿದು ಮೃತ ಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಿಳಿಸಿದೆ. ಈ ವರ್ಷದ ಜನವರಿಯಿಂದ ಜೂನ್ ಮೊದಲ ವಾರದವರೆಗೆ 33 ಮಂದಿ ಮೃತಪಟ್ಟಿದ್ದು ವರದಿಯಾಗಿದೆ.
ದೇಶದಲ್ಲಿ ಪ್ರತಿವರ್ಷ ಸರಾಸರಿ 2500 ಮಂದಿ ಸಿಡಿಲು ಬಡಿದು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಗಳಿಗೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಹೇಳಿದ್ದಾರೆ.
ಅಂಕಿ ಅಂಶಗಳನ್ನು ಗಮನಿಸುವುದಾದರೆ 2018, 2019, 2021ರಲ್ಲಿ ಜಾಸ್ತಿ ಸಾವುಗಳಾಗಿರುವುದು ವರದಿಯಾಗಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಸಾವಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಅತಿವೃಷ್ಟಿ ಹಾಗೂ ನೆರೆ ಹೆಚ್ಚಾಗಿರುವ ಮತ್ತು ಸಿಡಿಲು ಹೆಚ್ಚಾಗಿ ಉಂಟಾಗಿರುವ ಎರಡು ಸಾವಿರ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಲಾಗಿದೆ. ಅದರಂತೆ ಕಾರ್ಯನಿರ್ವಹಿವಂತೆ ತಿಳಿಸಲಾಗಿದೆ ಎಂದು ಡಾ. ಮನೋಜ್ ರಾಜನ್ ಹೇಳಿದ್ದಾರೆ.
ಸಿಡಿಲಿ ಬಡಿದು ಸಾಯುವವರಲ್ಲಿ ಹೆಚ್ಚಿನವರು ರೈತರು. ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರು ಸಾವಿಗೀಡಾಗುತ್ತಿರುವುದು ವರಧಿಯಾಗುತ್ತಿದೆ. ಸಿಡಿಲನ್ನು ತಪ್ಪಿಸಲಾಗದು, ಆದರೆ ಅದರಿಂದಾಗುವ ಪ್ರಾಣ ಹಾನಿಯನ್ನು ತಪ್ಪಿಸಬಹುದು. ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತದೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ.
ಹತ್ತು ವರ್ಷದಲ್ಲಿ ಸಿಡಿಲುಬಡಿದು ಸತ್ತವರ ಸಂಖ್ಯೆ :
ಬೆಳಗಾವಿ – 85 ಮಂದಿ
ವಿಜಯಪುರ – 69 ಮಂದಿ
ಗದಗ ಜಿಲ್ಲೆ – 56 ಮಂದಿ
ಚಿತ್ರದುರ್ಗ – 48 ಮಂದಿ
ತುಮಕೂರು – 48 ಮಂದಿ
ಬೀದರ್ – 44 ಮಂದಿ
ಕೊಪ್ಪಳ – 43 ಮಂದಿ
ಹಾವೇರಿ – 43 ಮಂದಿ
ಯಾದಗಿರಿ – 37 ಮಂದಿ
ಧಾರವಾಡ – 37 ಮಂದಿ
ಬಳ್ಳಾರಿ – 35ಮಂದಿ
ಬಾಗಲಕೋಟೆ – 31 ಮಂದಿ
ಸಿಡಿಲಿನಿಂದ ಪಾರಾಗಲು ಮುನ್ನೆಚ್ಚರಿಕೆ ಕ್ರಮಗಳು:
*ಗುಡುಗು ಮಿಂಚು ಬರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಬಯಲಿನಲ್ಲಿದ್ದರೆ ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲಬೇಡಿ.
*ತಗ್ಗು ಪ್ರದೇಶವಿಲ್ಲದೇ ಬಯಲಿನಲ್ಲೇ ಇರಬೇಕಾದರೆ ತಲೆಯನ್ನು ಮೊಣಕಾಲುಗಳ ನಡುವೆ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಮಿಂಚಿನಿಂದ ಮೆದುಳಿಗೆ ಮತ್ತು ಹೃದಯಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.
*ಮರಗಳಿದ್ದ ಪ್ರದೇಶದಲ್ಲಿ ನಿಲ್ಲಬೇಡಿ. ಸಿಡಿಲು ಮರಗಳಂತಹ ಹಸಿ ವಸ್ತುಗಳಿಗೆ ಮೊದಲು ಹೊಡೆಯುವುದು.
*ನೀರಿನಲ್ಲಿ ಇದ್ದರೆ ತಕ್ಷಣ ಹೊರಬನ್ನಿ.
* ಎತ್ತರದ ಪ್ರದೇಶದಲ್ಲಿ ಇದ್ದರೆ ತಕ್ಷಣ ತಗ್ಗು ಪ್ರದೇಶಗಳತ್ತ ಬನ್ನಿ.
*ವಿದ್ಯುತ್ಕಂಬ, ಟವರ್ಗಳು ಹಾಗೂ ಟ್ರಾನ್ಸ್ಫಾರ್ಮರ್ ಮುಂತಾದವುಗಳ ಬಳಿ ನಿಲ್ಲಬೇಡಿ.
*ತಂತಿ ಬೇಲಿಗಳಿಂದ ದೂರವಿರಿ.
*ಗುಡುಗು ಬರುವ ಸಂದರ್ಭ ಪೋನ್ನಲ್ಲಿ ಮಾತನಾಡಬೇಡಿ
*ಗುಡುಗು ಬರುವಾಗ ಮೊಬೈಲ್ ಚಾರ್ಜ್ ಹಾಕಬೇಡಿ.
*ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ
*ಗುಡುಗು ಸಿಡಿಲಿನ ವೇಳೆ ಕಂಪ್ಯೂಟರ್ ಲ್ಯಾಪ್ಟಾಪ್ಗಳಿಂದ ದೂರವಿರಿ.